Advertisement

ನೀರಿನ ಬಳಕೆ ಬಗ್ಗೆ ಜಾಗೃತಿ ಮೂಡಿಸಿ

04:44 PM Mar 26, 2017 | |

ದೇವನಹಳ್ಳಿ: ಬರ ಪರಿಸ್ಥಿತಿಯಿಂದಾಗಿ ಜಿಲ್ಲೆಯಲ್ಲಿ ಉಲ್ಬಣಿಸಬಹುದಾದ ಕುಡಿ ಯುವ ನೀರಿನ ಸಮಸ್ಯೆ ನಿಯಂತ್ರಿಸಲು ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ನೀರಿನ ಮಿತ ಬಳಕೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬರ ನಿರ್ವಹಣೆ ಮತ್ತು 2016-17ನೇ ಸಾಲಿನ ಗುರಿ ಸಾಧನೆ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಸರ್ಕಾರವು ಎಷ್ಟೇ ಅನುದಾನ ಬಿಡುಗಡೆ ಮಾಡಿದರೂ ಮತ್ತು ಅಧಿಕಾರಿಗಳು ಯಾವುದೇ ಕಾರ್ಯಕ್ರಮಗಳನ್ನು ಕೈಗೊಂಡರೂ, ಜನರಿಗೆ ಅದರ ಮಹತ್ವ ತಿಳಿಯದ ಹೊರತು ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ.

ಅದಕ್ಕಾಗಿ ಗ್ರಾಪಂ ಮತ್ತು ವಾರ್ಡ್‌ ಮಟ್ಟದಲಿ, ಸ್ಥಳೀಯ ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಮಿತಿ ರಚಿಸಿ ಆ ಮೂಲಕ ನೀರಿನ ಉಳಿತಾಯ, ಸಂಗ್ರಹ, ಬಳಕೆ ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ತಿಳಿಸಿದರು.

ಜಿಲ್ಲೆಯಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಮತ್ತು ಪರಿಹಾರ ಕ್ರಮಗಳ ಕುರಿತಂತೆ ಮಾಹಿತಿ ನೀಡಿದ ಜಿಪಂ ಕಾರ್ಯಪಾಲಕ ಎಂಜಿನಿಯರ್‌, ವಿಜಯಪುರದಲ್ಲಿ ಉಂಟಾ ಗಿದ್ದ ಕುಡಿಯುವ ನೀರಿನ ಸಮಸ್ಯೆ ಸದ್ಯ ಹತೋಟಿಗೆ ಬಂದಿದೆ, ನೆಲಮಂಗಲ ಪಟ್ಟಣದಲ್ಲಿ ಸಮಸ್ಯೆ ಕಂಡು ಬಂದಿದೆ ಎಂದು ಮಾಹಿತಿ ನೀಡಿದಾಗ ಅವಶ್ಯವಿರುವ ಕಡೆ ತುರ್ತಾಗಿ ಬೋರ್‌ವೆಲ್‌ ಕೊರೆಯಿಸಿ, ಇಲ್ಲವೇ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಕಾರ್ಯದರ್ಶಿಗಳು ಸೂಚಿಸಿದರು.

ಅಗತ್ಯವಿರುವವರಿಗೆ ಮಾತ್ರ ಮೇವು ವಿತರಿಸಿ: ಜಿಲ್ಲೆಯಲ್ಲಿ ಸಂಗ್ರಹಿಸಲಾಗಿದ್ದ 775 ಟನ್‌ ಮೇವಿನ ಪೈಕಿ ಈವರೆಗೆ 325 ಟನ್‌ ಮೇವು ಮಾರಾಟವಾಗಿದ್ದು, 450 ಟನ್‌ ಮೇವಿನ ಸಂಗ್ರಹವಿದೆ. ಬೇಡಿಕೆಯನ್ನರಿತು ದಾವಣಗೆರೆಯಿಂದ ಮೇವನ್ನು ತರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಪಶುಪಾಲನೆ ಇಲಾಖೆ ಅಧಿಕಾರಿ ಮಾಹಿತಿ ನೀಡಿದಾಗ, ಪ್ರತಿಕ್ರಿಯಿಸಿದ ಕಾರ್ಯದರ್ಶಿಗಳು ಅವಶ್ಯವಿರುವ ರೈತರಿಗೆ ಮಾತ್ರ ಮೇವನ್ನು ವಿತರಿಸಬೇಕು.

Advertisement

ಅನಗತ್ಯವಾಗಿ ಮೇವನ್ನು ಶೇಖರಣೆ ಮಾಡುವ ರೈತರ ಬಗ್ಗೆ ನಿಗಾವಹಿಸಬೇಕೆಂದರು. ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳ ಕುರಿತು ಮಾತನಾಡಿದ ಕಾರ್ಯದರ್ಶಿಗಳು, ನರೇಗಾ ಯೋಜನೆಯಡಿ ಕೆರೆಗಳಲ್ಲಿ ಹೂಳೆತ್ತುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.

ಕೆರೆ ಪುನಶ್ಚೇತನಕ್ಕೆ ಆದ್ಯತೆ: ಸಿಇಒ ಎನ್‌. ಮಂಜುಶ್ರೀ ಮಾತನಾಡಿ, ಜಿಲ್ಲೆಯಲ್ಲಿ 605 ಕೆರೆಗಳಿದ್ದು, ಬಹುತೇಕ ಕೆರೆಗಳು ಬತ್ತಿ ಹೋಗಿವೆ. ಕಳೆದ ಸಾಲಿನಲ್ಲಿ ಕೆರೆ ಸಂಜೀವಿನಿ ಯೋಜನೆಯಡಿ 9 ಕೆರೆಗಳಿಗೆ ಬಿಡುಗಡೆಯಾಗಿದ್ದ 75 ಲಕ್ಷ ರೂ. ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೆರೆ ಪುನಶ್ಚೇತನಗೊಳಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದೆಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಬತ್ತಿ ಹೋಗಿರುವ ಕೆರೆಗಳ ವಿವರ ಹಾಗೂ ಅವುಗಳ ಪುನಶ್ಚೇತನಕ್ಕಾಗಿ ಅಗತ್ಯವಿರುವ ಅನುದಾನದ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಅಂದಾಜು ಪಟ್ಟಿ ತಯಾರಿಸಿ ಮೂರು ದಿನಗಳಲ್ಲಿ ನೀಡಿದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಾರ್ಯದರ್ಶಿಗಳು ತಿಳಿಸಿದರು.

ಜಿಲ್ಲೆಯ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಗಂಗಾ ಕಲ್ಯಾಣ ಯೋಜನೆಯಡಿ ನಿಗದಿಪಡಿಸಲಾದ ಗುರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು, ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ನಿಗದಿಪಡಿಸಲಾದ ಅನುದಾನವನ್ನು ಎಲ್ಲಾ ಇಲಾಖೆಗಳು ಆಯಾ ಆರ್ಥಿಕ ವರ್ಷದಲ್ಲೇ ಖರ್ಚು ಮಾಡಬೇಕು ಎಂದರಲ್ಲದೆ ಇಲಾಖೆಗಳಿಗೆ ನಿಗದಿಗೊಳಿಸುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡಬೇಕೆಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಪಾಲಯ್ಯ, ಅಪರ ಜಿಲ್ಲಾಧಿಕಾರಿ ಎ.ಎಂ.ಯೋಗೀಶ್‌, ಉಪಕಾರ್ಯದರ್ಶಿ ಎಂ.ಜಿ.ಶಿವಲಿಂಗಯ್ಯ, ಮುಖ್ಯ ಯೋಜನಾಧಿಕಾರಿ ವಿನುತಾರಾಣಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next