Advertisement

ನೋಟು ಅಮಾನ್ಯದ ಪ್ರಮಾದ ಪುನರಪಿ ಎಸಗದಿರಿ: ಮೋದಿಗೆ ಸಿಂಗ್‌ ಪಾಠ

03:18 PM Dec 07, 2017 | Team Udayavani |

ರಾಜ್‌ಕೋಟ್‌, ಗುಜರಾತ್‌ : “ಮೋದಿಜೀ, ನೋಟು ಅಪನಗದೀಕರಣದಂತಹ ಮಹಾ ಪ್ರಮಾದವನ್ನು ಇನ್ನು ಮುಂದೆ ಎಂದೂ ಪುನರಪಿ ಎಸಗದಿರಿ’ ಎಂದು ಮಾಜಿ ಪ್ರಧಾನಿ, ಹಿರಿಯ ಕಾಂಗ್ರೆಸ್‌ ನಾಯಕ, ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿಗೆ ನೀಡಿದ್ದಾರೆ.

Advertisement

ಇಂದಿಲ್ಲಿ ಸಂವಹನ ಕಾರ್ಯಕ್ರಮವೊಂದರಲ್ಲಿ  ಮಾತನಾಡುತ್ತಿದ್ದ ಮನಮೋಹನ್‌ ಸಿಂಗ್‌, “ನೋಟು ಅಪನಗದೀಕರಣ ಒಂದು ಮಹಾ ಪ್ರಮಾದ. ಇದರಿಂದಾಗಿ ಬೃಹತ್‌ ಪ್ರಮಾಣದ ಕಪ್ಪು ಹಣ ಬಿಳಿಯಾಗುವುದಕ್ಕೆ ಉತ್ತಮ ಅವಕಾಶ ಕಲ್ಪಿಸಲಾಯಿತು. ದುರದೃಷ್ಟವಶಾತ್‌ ಅದೇ ವೇಳೆ ಲಕ್ಷಾಂತರ ಜನರ ಜೀವನಾಧಾರ ಉದ್ಯೋಗಗಳನ್ನು ಅದು ಕಸಿದು ಕೊಂಡು ಅಸಂಖ್ಯರನ್ನು ಬೀದಿಪಾಲು ಮಾಡಿತು; ನೋಟು ಅಪನಗದೀಕರಣದಿಂದ ಭ್ರಷ್ಟಾಚಾರ ನಿಲ್ಲಲಿಲ್ಲ; ಕಪ್ಪು ಹಣಕ್ಕೆ ಕಡಿವಾಣ ಬೀಳಲಿಲ್ಲ; ಮೇಲಾಗಿ ಅದು ಯುವ ಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ಕೂಡ ಸೃಷ್ಟಿಸಲಿಲ್ಲ’  ಎಂದು ಟೀಕಿಸಿದರು. 

ನೋಟು ಅಪನಗದೀಕರಣದ ಮೋದಿ ಸರಕಾರದ ಕ್ರಮ ದೇಶದ ಆರ್ಥಿಕತೆಗೆ, ಜನರಿಗೆ, ಬಡವರಿಗೆ ವಿನಾಶಕಾರಿಯಾಯಿತು; ನಮ್ಮ ಆಡಳಿತೆಯ ಸಂದರ್ಭದಲ್ಲಿ ನಾವೆಂದೂ ಈ ರೀತಿಯ ಪ್ರಮಾದಕರ ನಿರ್ಧಾರಗಳನ್ನು, ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ’ ಎಂದು ಸಿಂಗ್‌ ಹೇಳಿದರು. 

ಶಿಕ್ಷಕರು, ಪ್ರೊಫೆಸರ್‌ಗಳು ಮತ್ತು ವೃತ್ತಿಪರರೊಂದಿಗೆ ಸಂವಾದ ನಡೆಸುವುದಕ್ಕಾಗಿ ಸಿಂಗ್‌ ಅವರು ರಾಜ್‌ಕೋಟ್‌ಗೆ ಭೇಟಿ ನೀಡುತ್ತಿರುವುದಾಗಿ ಕಾಂಗ್ರೆಸ್‌ ಹೇಳಿದೆ.

ಈ ತಿಂಗಳ ಆದಿಯಲ್ಲಿ ಸಿಂಗ್‌ ಅವರು ಪ್ರಧಾನಿ ಮೋದಿ ಅವರ ಮೇಲೆ ವಾಕ್‌ದಾಳಿ ನಡೆಸಿ ನೋಟು ಅಪನಗದೀಕರಣದ ಸಂದರ್ಭದಲ್ಲಿ ಜನರು ಪಟ್ಟ ಪಾಡನ್ನು ಉಲ್ಲೇಖೀಸಿ ಸರಕಾರಿ ಯೋಜನೆಗಳನ್ನು ಟೀಕಿಸಿದ್ದರು. ನೋಟು ಅಮಾನ್ಯಗೊಂಡಾಗ ಜನರು ಹಣಕ್ಕಾಗಿ ಕ್ಯೂನಲ್ಲಿ ನಿಂತದ್ದನ್ನು ಮತ್ತು ನೂರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡದ್ದನ್ನು ತಾನು ಇಂದಿಗೂ ಮರೆತಿಲ್ಲ ಎಂದು ಮನಮೋಹನ್‌ ಸಿಂಗ್‌ ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next