Advertisement

ಆಟೋರಿಕ್ಷಾ ವಲಯವಾರು ವಿಂಗಡಣೆ ಗೊಂದಲ

12:36 PM May 23, 2022 | Team Udayavani |

ಉಡುಪಿ: ಆಟೋ ರಿಕ್ಷಾ ವಲಯ ವಾರು ವಿಂಗಡಣೆ ಹಲವಾರು ಚಾಲಕರನ್ನು ಗೊಂದಲಕ್ಕೆ ಎಡೆಮಾಡುತ್ತಿದೆ. ಈ ಬಗ್ಗೆ ಒಂದು ಸಂಘಟನೆ ಈಗಾಗಲೇ ಹೈಕೋರ್ಟ್‌ ಮೆಟ್ಟಿಲೇರಿದೆ.

Advertisement

1990ರಲ್ಲಿ ಉಡುಪಿ ಪುರಸಭೆ ಆಗಿದ್ದಾಗ ಅವಿಭಜಿತ ದ.ಕ. ಜಿಲ್ಲಾ ಪರವಾನಿಗೆಯನ್ನು ಉಡುಪಿ, ಕಾರ್ಕಳ, ಕುಂದಾಪುರ ತಾಲೂಕು ಹಾಗೂ ಸಾಲಿಗ್ರಾಮ ಪ.ಪಂ.ಗೆ 2012ರಲ್ಲಿ ಪರಿಷ್ಕರಿಸಲಾಯಿತು. ಹೊಸದಾಗಿ ನಗರ ಪ್ರವೇಶ ಪರವಾನಿಗೆ 2012ರ ಜ.31ರ ವರೆಗಿನ ಎಲ್ಲ ಪರವಾನಿಗೆಯನ್ನು ನಗರ ಪ್ರವೇಶಕ್ಕೆ ಮಾರ್ಪಾಡು ಮಾಡಲಾಯಿತು. 2012ರ ಜ.31ರ ಅನಂತರ ನಗರ ಪರವಾನಿಗೆಯನ್ನು ನೀಡಿಲ್ಲ. 2012ಕ್ಕೆ ಹೊಸ ಪರವಾನಿಗೆಯನ್ನು ವಲಯ 1 ಹಾಗೂ ವಲಯ 2 ಎಂದು ವಿಂಗಡಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿತು.

ಗೊಂದಲ ಹೇಗೆ?

ತಾಲೂಕು ಗಡಿ ಪ್ರದೇಶದ 2012ರ ಪರವಾನಿಗೆ ಚಾಲಕರು ಉಡುಪಿಯ ವಲಯ 1ರ ಪರವಾನಿಗೆ ಹೊಂದಿದ್ದು, ಇಲ್ಲಿ,ನಿಲ್ದಾಣದಲ್ಲಿ ಘರ್ಷಣೆಗೆ ಕಾರಣವಾಗುತ್ತಿದೆ. 1990ರ ಅನಂತರ ಯಾವುದೇ ನಿಲ್ದಾಣ ನೋಂದಣಿ ಆಗಿಲ್ಲ. 2012ರಲ್ಲಿ ಮಣಿಪಾಲದಲ್ಲಿ 17 ನಿಲ್ದಾಣಗಳು ನೋಂದಣಿ ಆಗಿದ್ದು ಉಡುಪಿಗೆ ಇನ್ನೂ ಆಗಿಲ್ಲ.

ಈ ಹಿಂದೆ ಉಡುಪಿ ಜಿಲ್ಲೆ ಅವಿಭಜಿತ ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿದ್ದಾಗ ದ.ಕ. ಜಿಲ್ಲಾಧಿಕಾರಿಗಳು 1997ರಲ್ಲಿ ಆದೇಶ ಹೊರಡಿಸಿದ್ದರು. ಅನಂತರ ಆಟೋಗಳ ಸಂಖ್ಯೆ ಹೆಚ್ಚಿದಂತೆ ಮತ್ತು ರಸ್ತೆಗಳು ಇಕ್ಕಟ್ಟಾದಂತೆ ಇದನ್ನು ಪರಿಷ್ಕರಿಸಲಾಯಿತು.

Advertisement

ಈ ಅಧಿಸೂಚನೆ ಉಡುಪಿ ಜಿಲ್ಲೆಯಾದ ಮೇಲೂ ಜಾರಿಯಲ್ಲಿರುವುದರಿಂದ ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪ.ಪಂ. ವ್ಯಾಪ್ತಿಯಲ್ಲಿ ಸಂಚರಿಸಲು ಹೊಸ ಆಟೋ ರಿಕ್ಷಾಗಳಿಗೆ ಪರವಾನಿಗೆ ನೀಡುವುದನ್ನು ನಿರ್ಬಂಧಿಸಲಾಗಿದೆ. ಆದರೆ ಮೇಲೆ ಸೂಚಿಸಿರುವ ಅಧಿಸೂಚನೆ ಹೊರಡಿಸಿ ಈಗಾಗಲೇ ಸುಮಾರು 15 ವರ್ಷಗಳಾಗಿವೆ. ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪ.ಪಂ. ಪ್ರದೇಶಗಳ ವ್ಯಾಪ್ತಿಯು ಬಹಳಷ್ಟು ಅಭಿವೃದ್ಧಿ ಹೊಂದಿದ್ದ ರಸ್ತೆಗಳು ಸಾಕಷ್ಟು ವಿಸ್ತರಣೆಯಾಗಿದೆ. ಈ ನಗರದಲ್ಲಿ ಹೊಸದಾಗಿ ಬಡಾವಣೆಗಳು ನಿರ್ಮಾಣಗೊಂಡಿದ್ದು, ನಗರ ವ್ಯಾಪ್ತಿಯು ಹೆಚ್ಚಿದ್ದು, ಹಾಗೂ ವಿದ್ಯಾಕೇಂದ್ರಗಳು ಹೆಚ್ಚು ಸ್ಥಾಪನೆಯಾಗಿವೆ. ಪ್ರವಾಸಿಗರ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳ ವಾಗಿರುವುದರಿಂದ ಈ ನಾಲ್ಕೂ ನಗರಗಳ ಜನಸಂಖ್ಯೆಯಲ್ಲಿ 15 ವರ್ಷಗಳಿಂದ ಬಹಳಷ್ಟು ಹೆಚ್ಚಳವಾಗಿದೆ. ನಿರ್ಬಂಧಿತ ಪ್ರದೇಶ ಹೊರತುಪಡಿಸಿ ಒಳಪ್ರದೇಶಗಳಲ್ಲಿ ಓಡಾಡಲು ಸಾಕಷ್ಟು ಪರವಾನಿಗೆ ಪಡೆದ ಆಟೋರಿಕ್ಷಾಗಳು ಇಲ್ಲದಿರುವುದರಿಂದ ನಗರ ವ್ಯಾಪ್ತಿಯೊಳಗೆ ಪರವಾನಿಗೆ ಪಡೆ ಯದ ಹೊರಗಿನ ಆಟೋರಿಕ್ಷಾದವರು ಪರವಾನಿಗೆ ಷರತ್ತು ಉಲ್ಲಂಘಿಸಿ ಅಧಿಸೂಚನೆ ನಿರ್ಬಂಧಿತ ಪ್ರದೇಶದ ವ್ಯಾಪ್ತಿಯನ್ನು ಅತಿಕ್ರಮಿಸಿದ್ದರಿಂದ ನಗರ ಪ್ರದೇಶ ಗಳ ಜನಸಂದಣಿಗೆ ಅನುಗುಣವಾಗಿ ಅಟೋರಿಕ್ಷಾಗಳ ಸಂಖ್ಯೆ ಹೆಚ್ಚಿಸುವುದು ಸಾರ್ವಜನಿಕರ ಹಿತದೃಷ್ಟಿಯಿಂದ ತೀರಾ ಅಗತ್ಯವಿರುವುದರಿಂದ ಉಡುಪಿ ಜಿಲ್ಲೆಯ ಉಡುಪಿ ನಗರಸಭೆ, ಪುರಸಭೆ ಕುಂದಾಪುರ, ಕಾರ್ಕಳ, ಸಾಲಿಗ್ರಾಮ ಪ.ಪಂ.ಪ್ರದೇಶಗಳಲ್ಲಿ ಪ್ರಸ್ತುತ ಜಾರಿಯಲ್ಲಿ ರುವ ದ.ಕ. ಜಿಲ್ಲಾಧಿಕಾರಿಗಳ 1997ರ ಅಧಿಸೂಚನೆಯಂತೆ ಕೆಲವೊಂದು ಮಾರ್ಪಾಡು ಮಾಡುವಂತೆ ಉಡುಪಿ ಜಿಲ್ಲಾ ಸಾರಿಗೆ ಪ್ರಾಧಿಕಾರ 2012ರ ನಡಾವಳಿಯಲ್ಲಿ ನಿರ್ಣಯ ಕೈಗೊಂಡಿದೆ.

ಗ್ರಾಮಾಂತರಕ್ಕೆ ಮಾತ್ರ ಪರ್ಮಿಟ್‌

2012ರ ಬಳಿಕ ನಗರ ವ್ಯಾಪ್ತಿಗೆ ಯಾವ ಆಟೋರಿಕ್ಷಾಗಳಿಗೂ ಹೊಸದಾಗಿ ಪರ್ಮಿಟ್‌ ನೀಡಲಾಗುತ್ತಿಲ್ಲ. ನಗರ ಭಾಗದವರು ಅರ್ಜಿ ಸಲ್ಲಿಸಿದರೂ ಗ್ರಾಮಾಂತರ ಪರವಾನಿಗೆ ಮಾತ್ರ ಸಿಗುತ್ತಿದೆ. ಪ್ರಸ್ತುತ ಮಣಿಪಾಲ ವ್ಯಾಪ್ತಿಯಲ್ಲಿ 22 ಆಟೋರಿಕ್ಷಾ ತಂಗುದಾಣಗಳು ಹಾಗೂ ಉಡುಪಿ ವ್ಯಾಪ್ತಿಯಲ್ಲಿ 36 ಆಟೋರಿಕ್ಷಾ ತಂಗುದಾಣಗಳಿವೆ. ಒಟ್ಟು 30ಕ್ಕಿಂತಲೂ ಅಧಿಕ ಅನಧಿಕೃತ ರಿಕ್ಷಾ ನಿಲ್ದಾಣ ಗಳಿದ್ದು, ಇದನ್ನೂ ಅಧಿಕೃತಗೊಳಿಸಬೇಕು ಎನ್ನುವುದು ಆಟೋರಿಕ್ಷಾ ಚಾಲಕರ ಬೇಡಿಕೆಯಾಗಿದೆ.

ಪರಿಷ್ಕರಣೆ ಅಗತ್ಯ

ಆಟೋರಿಕ್ಷಾಗಳ ವಲಯವಾರು ಗೊಂದಲ ಗಳಿಂದಾಗಿ ನಿಲ್ದಾಣಗಳಲ್ಲಿ ದಿನನಿತ್ಯ ಆಟೋ ಚಾಲಕರ ನಡುವೆ ಘರ್ಷಣೆಗಳಾಗುತ್ತಿವೆ. ಈ ಬಗ್ಗೆ ಪ್ರತಿಭಟನೆಯನ್ನೂ ನಡೆಸಲು ಉದ್ದೇಶಿಸ ಲಾಗಿದೆ. ಗ್ರಾಮಾಂತರ ಹಾಗೂ ನಗರ ವಲಯದ ವಿಂಗಡನೆಯನ್ನು ಪರಿಷ್ಕರಿಸುವ ಅಗತ್ಯವಿದೆ. -ಸುರೇಶ್‌ ಅಮೀನ್‌, ಮಾಜಿ ಕಾರ್ಯಾಧ್ಯಕ್ಷರು, ಜಿಲ್ಲಾ ಆಟೋರಿಕ್ಷಾ ಸಂಘಗಳ ಒಕ್ಕೂಟ

ಸ್ಟಿಕ್ಕರ್‌ ಅಳವಡಿಕೆ ಕಡ್ಡಾಯ

ವಲಯವಾರು ಪರಿಷ್ಕರಣೆ ಮಾಡುವ ಅಧಿಕಾರ ನಮಗಿಲ್ಲ. ಹೈಕೋರ್ಟ್‌ ಆದೇಶದಂತೆ ಆಟೋರಿಕ್ಷಾಗಳು ಕಡ್ಡಾಯವಾಗಿ ವಲಯವಾರು ಸ್ಟಿಕ್ಕರ್‌ಗಳನ್ನು ಲಗತ್ತಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು. -ಗಂಗಾಧರ್‌, ಜಿಲ್ಲಾ ಪ್ರಾದೇಶಿಕ ಸಾರಿಗೆ

Advertisement

Udayavani is now on Telegram. Click here to join our channel and stay updated with the latest news.

Next