Advertisement

ಔರಾದ್ಕರ್‌ ವರದಿ ಜಾರಿಗೆ ಬದ್ಧ

11:41 PM Sep 18, 2019 | Lakshmi GovindaRaju |

ಬೆಂಗಳೂರು: “ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ವೇತನ ಪರಿಷ್ಕರಣೆ ಕುರಿತು ಹಿರಿಯ ಐಪಿಎಸ್‌ ಅಧಿಕಾರಿ ರಾಘವೇಂದ್ರ ಔರಾದ್ಕರ್‌ ವರದಿಯನ್ನು ಜಾರಿ ಮಾಡುವ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಸದ್ಯದಲ್ಲೇ ಜಾರಿಗೆ ತರಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಎಂಜಿನಿಯರ್ ಡೇ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಕೆಲ ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸ ಉಂಟಾಗಿದ್ದರಿಂದ ತಾತ್ಕಾಲಿಕವಾಗಿ ಇದನ್ನು ತಡೆ ಹಿಡಿಯಲಾಗಿತ್ತು. ಎಲ್ಲ ಗೊಂದಲಗಳನ್ನು ಸರಿಪಡಿಸಿ ಸದ್ಯದಲ್ಲೇ ಹೊಸ ಆದೇಶ ಹೊರಡಿಸಲಾಗುವುದು. ಈ ಹಿಂದಿನ ಆದೇಶದಲ್ಲಿ ಬಿಟ್ಟು ಹೋಗಿದ್ದ ಡಿವೈಎಸ್ಪಿ, ಅನುಯಾಯಿಗಳು (ಆರ್ಡರ್ಲಿ), ಅಗ್ನಿಶಾಮಕ ದಳ ಮತ್ತು ಕಾರಾಗೃಹ ಇಲಾಖೆಯ ಸಿಬ್ಬಂದಿಯ ವೇತನದ ಬಗ್ಗೆಯೂ ಕ್ರಮ ಕೈಗೊಳ್ಳುವ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಇತರರಿಗೆ ಮಾದರಿ: ಇದಕ್ಕೂ ಮೊದಲು, ಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ ಪೊಲೀಸ್‌ ಪ್ರಧಾನ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಎಂಜಿನಿ ಯರ್ ಡೇ ಕಾರ್ಯಕ್ರಮ ಉದ್ಘಾಟಿಸಿ ಸಚಿವರು ಮಾತನಾಡಿದರು. ಪೊಲೀಸ್‌ ಇಲಾಖೆಯ ಸಮಗ್ರ ಅಭಿವೃದ್ಧಿಗಾಗಿ ಮುಂದಿನ ಮೂರು ವರ್ಷ ಗಳಲ್ಲಿ 15 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳನ್ನು ಕೈಗೆತ್ತಿಕೊಳ್ಳ ಲಾಗುವುದು ಎಂದು ಹೇಳಿದರು.

ಸರ್ಕಾರದ ಬಹುತೇತ ನಿಗಮಗಳು ನಷ್ಟದಲ್ಲಿವೆ. ಆದರೆ, ಪೊಲೀಸ್‌ ವಸತಿ ನಿಗಮ 2017 ರಿಂದೀಚೆಗೆ ವಾಣಿಜ್ಯ ಉದ್ದೇಶಗಳನ್ನು ಕೈಗೆತ್ತಿಕೊಂಡು 13 ಕೋಟಿ ರೂ.ಲಾಭದಲ್ಲಿ ನಡೆಯುತ್ತಿದೆ. ಅದರ ಕಾರ್ಯ ನಿರ್ವಹಣೆ ಇತರ ನಿಗಮಗಳಿಗೆ ಮಾದರಿಯಾಗಿದೆ. ಮಂದೆಯೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಕೊಂಡು ತನ್ನ ಜವಾಬ್ದಾರಿಯನ್ನು ನಿಭಾಯಿಸಲಿದೆ ಎಂಬ ವಿಶ್ವಾಸವಿದೆ. ನಿಗಮದಲ್ಲಿ ಹೊಸ ಎಂಜಿನಿಯರ್‌ಗಳ ಹುದ್ದೆಗಳನ್ನು ಸೃಷ್ಟಿಸಬೇಕಿದೆ. ಕೇಡರ್‌ ವ್ಯವಸ್ಥೆ ಜಾರಿಗೆ ತರುವ ಅವಶ್ಯಕತೆ ಇದೆ. ಸರ್ಕಾರ ಈ ಎಲ್ಲ ಕೆಲಸಗಳಿಗೂ ಅಗತ್ಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ವಿಶ್ವೇಶ್ವರಯ್ಯ ಯುಗಪುರುಷ: ಪೊಲೀಸ್‌ ಇಲಾಖೆ ಎಂದರೆ ಕೈದಿಗಳು, ಆರೋಪಿಗಳು, ಪೊಲೀಸ್‌ ಅಧಿಕಾರಿಗಳು ಮಾತ್ರ ಇರುತ್ತಾರೆ ಎಂದು ಭಾವಿಸಿದ್ದೆ. ಆದರೆ, ಇಲ್ಲಿಯೂ ಎಂಜಿನಿಯರ್‌ಗಳಿದ್ದಾರೆ ಎಂದ ಅವರು, ಸರ್‌ ಎಂ.ವಿಶ್ವೇಶ್ವರಯ್ಯ ಯುಗ ಪುರುಷ. ಅವರ ನಂತರ ಬಹಳಷ್ಟು ಎಂಜಿನಿಯರ್‌ಗಳು ಬಂದಿದ್ದಾರೆ. ಆದರೆ, ಅವರಷ್ಟು ಕೆಲಸವನ್ನು ಯಾರೂ ಮಾಡಲಿಲ್ಲ. ಅವರ ಸಾಧನೆಗಳೇ ಮುಂದಿನ ಪೀಳಿಗೆಗೆ ಕೊಡುಗೆ ಇದ್ದಂತೆ ಎಂದು ಸ್ಮರಿಸಿದರು.

Advertisement

ನೇಷನ್‌ ಬಿಲ್ಡರ್‌: ಪ್ರಧಾನಿ ನರೇಂದ್ರ ಮೋದಿ ಅವರೂ ಒಳ್ಳೆಯ ಎಂಜಿನಿಯರ್‌. ದೇಶವನ್ನು ಸದೃಢವಾಗಿ ನಿರ್ಮಾಣ ಮಾಡುತ್ತಿದ್ದು, “ನೇಷನ್‌ ಬಿಲ್ಡರ್‌’ ಇದ್ದಂತೆ. ಅವರ ಬದ್ಧತೆ, ಕಾರ್ಯವೈಖರಿ ಇಡೀ ದೇಶವನ್ನು ಪ್ರಗತಿಯ ಪಥದ ಕಡೆ ಕೊಂಡೊಯ್ಯುತ್ತಿದೆ. ಅದು ನಮಗೆ ಹೆಮ್ಮೆ ತರುವ ವಿಷಯ ಎಂದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾದ ನೀಲಮಣಿ ಎನ್‌.ರಾಜು ಮಾತನಾಡಿ, ಈಗಾಗಲೇ ಪೊಲೀಸ್‌ ವಸತಿ ನಿಗಮದಿಂದ 11 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಹೀಗಾಗಿ 2020-25ರ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ತಿಳಿಸಿದರು.

ಇದೇ ವೇಳೆ ನಿಗಮದ ಎಂಜಿನಿಯರ್‌ಗಳನ್ನು ಸನ್ಮಾನಿಸಲಾಯಿತು. ಕಾರ್ಯ ಕ್ರಮದಲ್ಲಿ ನಿಗಮದ ಅಧ್ಯಕ್ಷರಾದ ರಾಘವೇಂದ್ರ ಔರಾದ್ಕರ್‌, ಸಿಐಡಿ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ಮಹಾನಿರ್ದೇಶಕ ಎ.ಎಂ.ಪ್ರಸಾದ್‌, ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌, ಎಡಿಜಿಪಿ ಸುನೀಲ್‌ ಕುಮಾರ್‌, ಚರಣ್‌ ರೆಡ್ಡಿ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next