Advertisement

ಜಿಲ್ಲೆಯ ಅಕ್ರಮ ಮರಳು ದಾಸ್ತಾನು ಅಡ್ಡೆ ಮೇಲೆ ಶೀಘ್ರ ದಾಳಿ?

09:29 AM Jun 12, 2021 | Team Udayavani |

ಕಲಬುರಗಿ: ಕೋವಿಡ್ ಎರಡನೇ ಅಲೆ ನಡುವೆ ಜಿಲ್ಲೆಯ ಭೀಮಾ ನದಿ ಸೇರಿದಂತೆ ಇತರೆಡೆ ಅಕ್ರಮ ಮರಳುಗಾರಿಕೆ ಸದ್ದಿಲ್ಲದೇ ನಡೆದಿದೆ. ಲಾಕ್‌ಡೌನ್‌ ಇದ್ದರೂ ನದಿಯ ಎರಡೂ ಬದಿಯಿಂದ ಮರಳು ಎತ್ತುವಳಿ ನಡೆದಿದ್ದು, ಅಲ್ಲಲ್ಲಿ ರಾಶಿಗಟ್ಟಲೇ ದಾಸ್ತಾನು ಮಾಡಲಾಗಿದೆ.

Advertisement

ಕೋವಿಡ್ ನಿಂದ ಜನ ಆತಂಕಗೊಂಡು ಮನೆಯಲ್ಲಿದ್ದರೆ ಮರಳು ಲೂಟಿಕೋರರು ಇದೇ ಶುಕ್ರದೆಸೆ ಎಂದು ತಿಳಿದುಕೊಂಡು ಅಕ್ರಮ ಮರಳುಗಾರಿಕೆ ನಡೆಸಿದ್ದು, ಈಗ ನದಿ ಎರಡೂ ಕಡೆಯಲ್ಲದೇ ನದಿ ದಡದ ಹಳ್ಳಿಗಳ ಸುತ್ತಮುತ್ತ ಅಷ್ಟೇ ನಗರಕ್ಕೆ ಸಮೀಪದ ಜಮೀನುಗಳಲ್ಲಿ ಮರಳು ಸಂಗ್ರಹಿಸಿಡಲಾಗಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಟ್ಟಡ ಸಾಮಗ್ರಿಗಳು ಸರಳವಾಗಿ ಸಿಗದಿರುವ ಜತೆಗೆ ಕಟ್ಟಡ ಕಾರ್ಮಿಕರು ಸ್ವಗ್ರಾಮಗಳಿಗೆ ತೆರಳಿದ್ದರಿಂದ ಕಟ್ಟಡ ಕಾಮಗಾರಿಗಳುಬಹುತೇಕ ಸ್ಥಗಿತಗೊಂಡಿವೆ. ಹೀಗಾಗಿ ಮರಳು ಬೇಡಿಕೆ ಸ್ವಲ್ಪ ತಗ್ಗಿದೆ. ಇದೇ ಕಾರಣಕ್ಕೆ ಈ ಮುಂಚೆ ಒಂದು ಲಾರಿ ಮರಳಿಗೆ 60 ಸಾವಿರ ರೂ. ಇದ್ದದ್ದು ಈಗ 40ರಿಂದ 45 ಸಾವಿರ ರೂ. ಇಳಿದಿದೆ. ಹೀಗಾಗಿ ನದಿಯಿಂದ ಅಕ್ರಮವಾಗಿ ಬಗೆದ ಮರಳನ್ನು ಯಥೇಚ್ಚವಾಗಿ ಅಲ್ಲಲ್ಲಿ ದಾಸ್ತಾನು ಮಾಡಲಾಗಿದೆ.

ದಾಳಿ ಏಕೆ?: ಅಕ್ರಮ ಮರಳು ದಾಸ್ತಾನು ಅಡ್ಡೆ ಮೇಲೆ ಕಂದಾಯ, ಪೊಲೀಸರು ಹಾಗೂ ಇತರೆ ಅಧಿಕಾರಿಗಳು ಒಗ್ಗೂಡಿ ದಾಳಿ ನಡೆಸುತ್ತಾರೆ. 15 ಕಡೆ ಸಿಕ್ಕರೆ ನಾಲ್ಕೈದು ಕಡೆ ತೋರಿಸಲಾಗಿ, 100 ಟನ್‌ ಮರಳಿದ್ದರೆ 10 ಟನ್‌ ಎಂಬುದಾಗಿ ತೋರಿಸಿ ದಂಡ ಹಾಕಲಾಗುತ್ತದೆ. ತದನಂತರ ಮರಳನ್ನುರಾಯಲ್ಟಿ ವಿಧಿಸಿ ಬಿಡುಗಡೆ ಮಾಡಲಾಗುತ್ತದೆ.ಅಂದರೆ ದಾಳಿಗಳು ಅನಧಿಕೃತ ಇದ್ದದ್ದನ್ನು ಅಧಿಕೃತ ಮಾಡಲಾಗುತ್ತದೆ. ಇದೇ ಕಾರಣಕ್ಕೆ ದಾಳಿ ನಡೆಯುತ್ತಿರುತ್ತವೆ. ಈನಿಟ್ಟಿನಲ್ಲಿ ಶೀಘ್ರದಲ್ಲಿ ಅಕ್ರಮ ಮರಳು ಅಡ್ಡೆ ದಾಳಿ ನಡೆಯುವ ಸಾಧ್ಯತೆಗಳೇ ಹೆಚ್ಚು. ದಾಸ್ತಾನು ಸಂಬಂಧ ಕೆಲವೆಡೆ ಎಫ್ಐಆರ್‌ ದಾಖಲಿಸಿದರೂ ಅಂತಹ ಕಠಿಣ ಕ್ರಮದ ಅಂಶಗಳಿರುವುದಿಲ್ಲ.

ಎರಡು ದಿನಗಳ ಹಿಂದೆ ಭೀಮಾ ನದಿ ದಡದ ಉಡಚಣ ಬಳಿ 15 ಕಡೆ ಅಕ್ರಮ ಮರಳು ದಾಸ್ತಾನು ಮೇಲೆ ದಾಳಿ ನಡೆಸಲಾಗಿದ್ದು, 30 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಮೂಲಕ ಮರಳು ಸಾಗಾಣಿಕೆಗೆ ಸುಲಭಕ್ರಮ ಕೈಗೊಳ್ಳಲಾಯಿತು. ನದಿಯಿಂದ ಕ್ರಮ ಬದ್ದವಾಗಿ ಮರಳು ಎತ್ತುವಾಗ ಕಟ್ಟ ಬೇಕಿದ್ದ ರಾಯಲ್ಟಿಯನ್ನೇ ದಂಡದ ರೂಪದಲ್ಲಿ ಕಟ್ಟಬಹುದಾಗಿದೆ. ಒಟ್ಟಾರೆ ದಾಳಿ ಹಾಗೂದಂಡ ನಿಗದಿ ಹಾಗೂ ಪ್ರಕರಣ ದಾಖಲಾತಿಎಲ್ಲವೂ ಒಳ ಒಪ್ಪಂದಂತೆ ನಡೆಯುತ್ತಿರುವುದು ಬಹಳ ಗುಟ್ಟೇನು ಇಲ್ಲ.

Advertisement

ಅಕ್ರಮ ಮರಳುಗಾರಿಕೆಗಿಲ್ಲ ಮುಖ: ಅಕ್ರಮ ಮರಳುಗಾರಿಕೆಯಲ್ಲಿ ಇಂತಹ ಪಕ್ಷದವರು  ಹಾಗೂ ಇಂತಹ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಂಬುದಿಲ್ಲ. ಅಲಿಖೀತ ನಿಯಮ ಎನ್ನುವಂತೆ ಎಲ್ಲರೂ ಒಗ್ಗೂಡಿದ ಪರಿಣಾಮವೇ ಮರಳುಗಾರಿಕೆ ಎಗ್ಗಿಲ್ಲದೇ ಸಾಗಿ ಬರುತ್ತಿದೆ.

ಯಾರದೇ ಸರ್ಕಾರವಿದ್ದರೂ ಇದಕ್ಕಿಲ್ಲ ಕಡಿವಾಣ. ವಿರೋಧ ಪಕ್ಷದವರು ಆಡಳಿತದ ಮೇಲೆ ಗೂಬೆ ಕೂರಿಸುತ್ತಾರೆ. ಆಡಳಿತದವರೇ ವಿರೋಧ ಪಕ್ಷದಲ್ಲಿ ಕುಳಿತ ಸಂದರ್ಭದಲ್ಲಿ ಇವರ ಮೇಲೆ ಅವರೂ ಆರೋಪಿಸುತ್ತಾರೆ. ಆದರೆ ವಾಸ್ತವವಾಗಿ ನೋಡಿದರೆ ಮರಳು ಸಾಗಾಣಿಕೆ ಸ್ಥಳವನ್ನು ಎಲ್ಲರೂ ಹಂಚಿಕೊಂಡಿರುತ್ತಾರೆ. ಈಚೆಗೆ ಕೆಲ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಳ್ಳುತ್ತಿರುವುದು ಅಕ್ರಮ ಮರಳುಗಾರಿಕೆಹೆಚ್ಚಳಕ್ಕೆ ಕಾರಣ ಎನ್ನಬಹುದು. ಅಕ್ರಮ ಮರಳುಗಾರಿಕೆ ಶುರುವಾದ ಆರಂಭದಲ್ಲಿ ಕೆಲ ಸಂಘಟನೆಗಳು ಸ್ಥಳಕ್ಕೆ ಹೋಗಿ ಪ್ರತಿಭಟನೆ ನಡೆಸಲಾಗಿದ್ದರೆ, ನಂತರ ಬೇರೆಯದ್ದೇ ಕಥೆ ಕೇಳಿ ಬರುತ್ತದೆ.

ಸ್ಟಾಕ್‌ ಯಾರ್ಡ್‌ನಲ್ಲಿ ಸಂಗ್ರಹಿಸಿಡಬೇಕು :

ಅಕ್ರಮ ದಾಳಿಯಲ್ಲಿ ದೊರೆತ ಮರಳನ್ನು ಸರ್ಕಾರಿ ಸ್ಟಾಕ್‌ ಯಾರ್ಡಿನಲ್ಲಿ ತಂದು ದಾಸ್ತಾನು ಮಾಡಿ, ತದನಂತರ ರಾಯಲ್ಟಿ ನಿಗದಿ ಮಾಡಿ ಗುತ್ತಿಗೆದಾರರಿಗೆ ಹಾಗೂ ಸಾರ್ವಜನಿಕರಿಗೆ ಮರಳು ಸರಬರಾಜು ಮಾಡಬೇಕೆಂಬ ನಿಯಮವಿದೆ. ಈ ನಿಯಮ ಎಲ್ಲೂ ಪಾಲನೆಯೇಯಾಗುವುದಿಲ್ಲ. ಒಂದು ವೇಳೆ ದಾಳಿಯಲ್ಲಿ ಪತ್ತೆಯಾಗುವ ಮರಳು ಸ್ಟಾಕ್‌ ಯಾರ್ಡಿನಲ್ಲಿಟ್ಟರೆ ಅಕ್ರಮ ಮರಳು ದಾಸ್ತಾನುವಾಗುವುದೇ ಇಲ್ಲ. ಸ್ವಲ್ಪ ನಿಟ್ಟಿನಲ್ಲಾದರೂ ಅಕ್ರಮ ಮರಳುಗಾರಿಕೆ ತಡೆಗಟ್ಟಬಹುದು. ದಾಳಿ ನಡೆಸಲಾಗಿ ಅಕ್ರಮ ಮರಳು ಅಡ್ಡೆ ಪತ್ತೆ ಮಾಡಿದ ಮೇಲೆ ಅಲ್ಲಿ ಕಾವಲಿಗೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಬೇಕೆಂಬ ನಿಯಮ ಸಹ ಇದೆ. ಆದರೆ ಇದು ಸಹ ಎಲ್ಲೂ ಇಲ್ಲ. ಒಟ್ಟಾರೆ ಇದಕ್ಕೆಲ್ಲ ಇತಿಶ್ರೀ ಹಾಡಬೇಕೆಂದರೆ ಹೊಸ ಮರಳು ನೀತಿಯೇ ಪರಿಹಾರವಾಗಿದೆ.

ಕಂದಾಯ, ಪೊಲೀಸ್‌, ಗಣಿ ಮತ್ತು ಭೂ ವಿಜಾÒನ ಸೇರಿ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರಿಂದ ಅಕ್ರಮ ಮರಳುಗಾರಿಕೆ ಕಡೆ ಲಕ್ಷ್ಯ ವಹಿಸಲಿಕ್ಕಾಗಿಲ್ಲ. ಹೀಗಾಗಿ ಇದನ್ನೇ ದುರುಪಯೋಗಪಡಿಸಿಕೊಂಡು ಅಕ್ರಮ ದಂಧೆಯಲ್ಲಿ ತೊಡಗಿರಬಹುದು. ಅಕ್ರಮ ನಡೆದಿರುವ ಕುರಿತಾಗಿ ಅನೇಕ ದೂರುಗಳು ಬಂದಿವೆ. ತಹಶೀಲ್ದಾರರಿಂದ ಮಾಹಿತಿ ಪಡೆದು ಪರಿಶೀಲಿಸಿ ಕಡಿವಾಣಕ್ಕೆ ಮುಂದಾಗಲಾಗುವುದು.ವಿ.ವಿ. ಜೋತ್ಸ್ನಾ ಜಿಲ್ಲಾಧಿಕಾರಿ, ಕಲಬುರಗಿ

 

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next