Advertisement

ದಲಿತರ ಮೇಲೆ ಹಲ್ಲೆ; ದುಷ್ಕರ್ಮಿಗಳ ಸೆರೆಗೆ ಆಗ್ರಹ

03:40 PM Mar 26, 2022 | Team Udayavani |

ಸುರಪುರ: ತಾಲೂಕಿನ ಹೇಮನೂರ, ಶಹಾಪುರದ ಬೆನಕನಳ್ಳಿ, ಯಾದಗಿರಿಯ ಮೈಲಾಪುರ ಗ್ರಾಮಗಳಲ್ಲಿ ದಲಿತರ ಮೇಲೆ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಆಯಾ ಗ್ರಾಮಗಳ ಮೇಲ್ವರ್ಗದವರ ಮೇಲೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಲಿತ ಸಮಿತಿ (ಕ್ರಾಂತಿಕಾರಿ) ಮುಖಂಡರು ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಹೇಮನೂರ ಗ್ರಾಮದಲ್ಲಿ ದಲಿತ ಪತಿ-ಪತ್ನಿ ಮೇಲೆ ಗ್ರಾಮದ ಸವರ್ಣಿಯರು ಹಲ್ಲೆ ಮಾಡಿದ್ದಾರೆ. ಶಹಾಪುರ ತಾಲೂಕಿನ ಬೆನಕನಳ್ಳಿ ಗ್ರಾಮದಲ್ಲಿ ಹೋಳಿ ಹಬ್ಬದ ದಿನ ದಲಿತ ಮಹಿಳೆ ಮೇಲೆ ಬಣ್ಣ ಎರ ಚುವುದನ್ನು ವಿರೋಧಿಸಿದ ಮಾತ್ರಕ್ಕೆ ಮೇಲ್ವರ್ಗದವರು ಹಲ್ಲೆ ಮಾಡಿದ್ದಾರೆ. ಮೈಲಾಪುರ ಗ್ರಾಮದಲ್ಲಿಯೂ ದಲಿತ ಜನಾಂಗದ ಮೂವರ ಮೇಲೆ ಅಲ್ಲಿನ ಮೇಲ್ವರ್ಗದ ಜನರು ದೌರ್ಜನ್ಯ ಎಸಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಬೆನಕನಳ್ಳಿ ಗ್ರಾಮದಲ್ಲಿ ವರ್ಷದ ಹಿಂದೆ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ದೂರು ನೀಡಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಪುನಃ ಹೋಳಿ ಹಬ್ಬದ ದಿನ ಘಟನೆ ಮರುಕಳಿಸಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಈ ಮೂರು ಘಟನೆಗಳಿಗೆ ಸಂಬಂಧಿಸದಂತೆ ಆಯಾ ಗ್ರಾಮದ ಮೇಲ್ವರ್ಗದವರ ಮೇಲೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದರು.

ನಿರ್ಲಕ್ಷ್ಯ ವಹಿಸಿದ್ದಲ್ಲಿ ಹತ್ತಿಗೂಡೂರ ಗ್ರಾಮದ ಡಾ| ಅಂಬೇಡ್ಕರ್‌ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಈ ವೇಳೆ ಮಾನಪ್ಪ ಬಿಜಾಸ್ಪೂರ, ಖಾಜಾ ಹುಸೇನ ಗುಡುಗುಂಟಿ, ಜಟ್ಟೆಪ್ಪ ನಾಗರಾಳ, ಮಹೇಶ ಯಾದಗಿರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next