Advertisement

ಎಟಿಎಂ ದರೋಡೆ ಶಂಕೆ: ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ

01:04 PM Nov 21, 2021 | Shwetha M |

ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಕಾಲೋನಿಯ ಹೇಮರಡ್ಡಿ ಮಲ್ಲಮ್ಮ ವೃತ್ತದ ಬಳಿ ಮದರಿಯವರ ಕಾಂಪ್ಲೆಕ್ಸ್‍ನಲ್ಲಿರುವ ಪರಿವರ್ತಿತ ಯೂನಿಯನ್ ಬ್ಯಾಂಕ್‍ನ (ಹಿಂದಿನ ಕಾರ್ಪೋರೇಷನ್ ಬ್ಯಾಂಕ್) ಎಟಿಎಂ ದರೋಡೆ ಆಗಿರುವ ಶಂಕೆ ವ್ಯಕ್ತವಾಗಿದ್ದು ಶನಿವಾರ ಸಂಜೆ ಬೆಳಕಿಗೆ ಬಂದಿದೆ.

Advertisement

ಎಟಿಎಂನಲ್ಲಿ ನ.17ರಂದು 21 ಲಕ್ಷ ರೂ ನಗದನ್ನು ಹಾಕಲಾಗಿತ್ತು. ನ.18ರ ಸಂಜೆಯವರೆಗೆ ಗ್ರಾಹಕರು 4-5 ಲಕ್ಷ ನಗದು ಡ್ರಾ ಮಾಡಿಕೊಂಡಿದ್ದಾರೆ. ನ.19ರ ಬೆಳಿಗ್ಗೆ ನೋಡಿದಾಗ ಎಟಿಎಂನಲ್ಲಿ ಇರಬೇಕಿದ್ದ 16.08 ಲಕ್ಷ ನಗದು ಹಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಸ್ಥಳೀಯ ಠಾಣೆಯ ಪಿಎಸೈ ಗಮನಕ್ಕೆ ತಂದಿದ್ದಾರೆ. ಸಂಜೆ ಬಸವನ ಬಾಗೇವಾಡಿ ಡಿವೈಎಸ್ಪಿ ಅರುಣಕುಮಾರ ಕೋಳೂರ, ಮುದ್ದೇಬಿಹಾಳ ಪೊಲೀಸ್ ವೃತ್ತದ ಸಿಪಿಐ ಆನಂದ ವಾಘ್ಮೋಡೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿದ್ದ ಎಲ್ಲ ಸಿಸಿ ಫೂಟೇಜ್ ಪರಿಶೀಲಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ನ.18-19ರ ಮಧ್ಯರಾತ್ರಿ 2-3 ಮುಸುಕುಧಾರಿ ವ್ಯಕ್ತಿಗಳು ಎಟಿಎಂನೊಳಕ್ಕೆ ಪ್ರವೇಶ ಮಾಡಿರುವುದು ಸಿಸಿ ಫೂಟೇಜ್‍ನಲ್ಲಿ ಕಂಡು ಬಂದಿದೆ ಎನ್ನಲಾಗಿದೆ. ಆದರೆ ಎಟಿಎಂ ಇದ್ದ ಕೊಠಡಿಯ ಮುಂದಿನ ಶಟರ್‍ನ ಬೀಗವನ್ನು ಜಖಂಗೊಳಿಸಿದ್ದು ಅಚ್ಚರಿ ಎಂದರೆ ಎಟಿಎಂಗೆ ಯಾವುದೇ ಧಕ್ಕೆ ಆಗಿಲ್ಲ. ಲಾಕ್ ಮಾಡಿದಂತೆಯೇ ಇತ್ತು. ಎಲ್ಲಿಯೂ ಎಟಿಎಂ ಒಡೆದ ಗುರ್ತುಗಳು ಮೇಲ್ನೋಟಕ್ಕೆ ಕಂಡುಬಂದಿಲ್ಲ. ಆದರೂ ಎಟಿಎಂನೊಳಗಿದ್ದ ಹಣ ಮಾಯವಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ:ಇರಸವಾಡಿ ಗ್ರಾಮದ ಕೆರೆಯಲ್ಲಿ ಸಹಸ್ರಾರು ಮೀನುಗಳು ಸಾವು..!

ದರೋಡೆ ಮಾಡಿರುವ ಕಳ್ಳರು ಎಟಿಎಂ ದರೋಡೆ ಮಾಡುವುದರಲ್ಲಿ ಸಾಕಷ್ಟು ಪಳಗಿರುವುದು ಇದರಿಂದ ಗೊತ್ತಾಗುತ್ತದೆ ಎನ್ನುವ ಮಾತುಗಳು ಪೊಲೀಸ್ ಅಧಿಕಾರಿಗಳಿಂದ ಕೇಳಿಬಂದಿವೆ. ಎಟಿಎಂ ಇರುವ ಪ್ರದೇಶದಲ್ಲಿ ಹಗಲು ಸಾಕಷ್ಟು ಜನದಟ್ಟಣೆ ಇರುತ್ತದೆ. ರಾತ್ರಿ ಆಗೊಂದು, ಈಗೊಂದು ವಾಹನಗಳು ಇಲ್ಲಿ ಸಂಚರಿಸುತ್ತವೆ. ಉಳಿದಂತೆ ಸಂಪೂರ್ಣ ನಿರ್ಜನವಾಗಿರುವುದು, ಎಟಿಎಂ ಇರುವ ಕೊಠಡಿ ಕತ್ತಲೆಯಿಂದ ಕೂಡಿದ ಸ್ಥಳದಲ್ಲಿರುವುದು ದರೋಡೆಗೆ ಅವಕಾಶ ಮಾಡಿಕೊಟ್ಟಿರಬಹುದು ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

Advertisement

ಒಟ್ಟಾರೆ ಸಮಗ್ರ ಘಟನೆಯ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದು ತನಿಖೆ ಸಧ್ಯ ಪ್ರಗತಿಯಲ್ಲಿದೆ. ಶೀಘ್ರ ಪ್ರಕರಣ ಭೇದಿಸುವ ವಿಶ್ವಾಸವನ್ನು ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next