Advertisement

ಇಂದು ಉತ್ತಮ ಆಡಳಿತ ದಿನ: ದೇಶದ ಭವಿಷ್ಯಕ್ಕೆ ಭಾಷ್ಯ ಬರೆದ ಅಟಲ್‌

01:45 AM Dec 25, 2020 | sudhir |

ಭಾರತದ ರಾಜಕೀಯ ರಂಗದಲ್ಲಿ ಪರಿಶುದ್ಧತೆಯ ಸ್ವರ್ಣರೇಖೆಯನ್ನು ಎಳೆದವರು ಅಟಲ್‌ ಬಿಹಾರಿ ವಾಜಪೇಯಿ ಅವರು. 1924ನೇ ಡಿ. 25ರಂದು ಕೃಷ್ಣ ಬಿಹಾರಿ ಹಾಗೂ ಕೃಷ್ಣಾ ದೇವಿ (ಸುಮಾದೇವಿ) ದಂಪತಿಯ ಏಳು ಮಕ್ಕಳ ಪೈಕಿ ಇವರೋರ್ವರು. ಬರಹ ಹಾಗೂ ಪತ್ರಿಕೋದ್ಯಮದಲ್ಲಿ ಕೈಯಾಡಿಸುತ್ತಾ ತಾರುಣ್ಯದಲ್ಲೇ ರಾಜಕೀಯಕ್ಕೆ ಕಾಲಿರಿಸಿದವರು ಇವರು. 1957ರಲ್ಲಿ ಅಂದಿನ ಭಾರತೀಯ ಜನಸಂಘದ ಲೋಕಸಭಾ ಸದಸ್ಯನಾಗಿ ಬಲರಾಮ್‌ಪುರದಿಂದ ಆರಿಸಿ ಬಂದರು. ಪಂಡಿತ್‌ ನೆಹರೂ ಅವರಿಂದ ಶಹಭಾಸ್‌ಗಿರಿ ಪಡೆದ ತರುಣ ವಾಜಪೇಯಿ ಮುಂದೆ ಭಾರತದ ರಾಜಕೀಯ ದಿಗಂತದಲ್ಲಿ ಮೇರು ವ್ಯಕ್ತಿಯಾಗಿ ಬೆಳೆದು ನಿಂತವರು. ಮೊರಾರ್ಜಿ ದೇಸಾಯಿ ಅವರ 1979ರ ಜನತಾ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿ ಇವರು ಜಗದಗಲ ಮಿಂಚಿದರು. ನಡೆದಂತೆ ನುಡಿಯುವ, ನುಡಿದಂತೆ ನಡೆಯುವ ನೇರ, ಸ್ಪಷ್ಟ ವಾಕು³ಟುತ್ವ ಇವರಿಗೆ 1994ರಲ್ಲಿ “ಶ್ರೇಷ್ಠ ಸಂಸದೀಯ ಪಟು’ ಗೌರವವನ್ನು ತಂದುಕೊಟ್ಟಿತು.

Advertisement

ದಿಟ್ಟತನದ ಉನ್ನತ ರಾಜಕೀಯ ಮೇಲ್ಪಂಕ್ತಿಯನ್ನು ಇತಿಹಾಸದ ಪುಟಗಳಲ್ಲಿ ಬರೆದುದುಕ್ಕೆ ಲೋಕಸಭೆಯ 1996ರ ಮೇ 27ರ ನಿರ್ಗಮನದ ಇವರ ಭಾಷಣವೇ ಸಾಕ್ಷಿ. “ನೀವು, ನಮ್ಮ ಏಕತೆ, ಅನುಶಾಸನ ಮತ್ತು ಆತ್ಮವಿಶ್ವಾಸದ ಬಲದಿಂದ ಲೋಕತಂತ್ರವನ್ನು ಯಶಸ್ವಿ ಗೊಳಿಸಿ ತೋರಿಸಬೇಕಾಗಿದೆ. ನಾವೆಲ್ಲರೂ ಇಂತಹ ಮಹಾನ್‌ ಉದ್ದೇಶಕ್ಕಾಗಿ ಸಮರ್ಪಿಸಿಕೊಂಡರೆ ಭಾರತ ಸಶಕ್ತಗೊಳ್ಳುವುದು. ನನಗೆ ನೆನಪಿದೆ, ಸ್ವರ್ಗೀಯ ರಾಜೀವ್‌ ಗಾಂಧಿ ಅವರು ತಮ್ಮ ಭಾಷಣದಲ್ಲೊಮ್ಮೆ ಹೇಳಿದ್ದರು. “ದಿಲ್ಲಿಯಿಂದ ಒಂದು ರೂಪಾಯಿ ಕಳುಹಿಸಿದರೆ, ಅದು ಎಲ್ಲಿ ತಲುಪಬೇಕೋ, ಅಲ್ಲಿಗೆ ಹೋಗುವಷ್ಟರಲ್ಲಿ 19 ಪೈಸೆಯಾಗಿರುತ್ತದೆ’.

ನಾನು ಅವರನ್ನು ಕೇಳಿದೆ – ಈ ಚಮತ್ಕಾರ ಹೇಗೆ ಸಾಧ್ಯ? ಅವರು ನಗುತ್ತಾ ಉತ್ತರಿಸಿದರು “ರೂಪಾಯಿ ಚಲಿಸತೊಡಗಿದಂತೆ ಸವೆಯ ತೊಡಗುತ್ತದೆ’ ಎಂದು. ನಾವು 10 ದಿನಗಳ ಕಾಲ ನಡೆಸಿದ ಆಡಳಿತದಲ್ಲಿ ಯಾರೂ ನಮ್ಮೆಡೆಗೆ ಬೆರಳು ಮಾಡಿ ತೋರಿಸುವಂತಹ ಕೆಲಸ ಮಾಡಲಿಲ್ಲ. ನಮಗೆ ಐದು ವರ್ಷಗಳ ಕಾಲ ಆಡಳಿತ ನಡೆಸುವ ಅವಕಾಶ ದೊರೆತರೂ ಯಾರೂ ನಮ್ಮೆಡೆಗೆ ಬೆಟ್ಟು ಮಾಡದಂತಹ ಆಡಳಿತ ನೀಡುತ್ತೇವೆ… ನಾನು ಸಂಸತ್ತಿನಲ್ಲಿ 40 ವರ್ಷಗಳನ್ನು ಕಳೆದಿದ್ದೇನೆ. ಇಂತಹ ಕ್ಷಣಗಳು ಪದೇಪದೆ ಬಂದಿವೆ. ಆದರೆ ಪ್ರತಿಯೊಂದು ಕಠಿನ ಪರಿಸ್ಥಿತಿಯಲ್ಲಿಯೂ ಭಾರತದ ಪ್ರಜಾತಂತ್ರ ಶಕ್ತಿಯುತವಾಗುತ್ತಾ ಬಂದಿದೆ… ಅಧ್ಯಕ್ಷರೇ ನನ್ನ ಮೇಲೆ ಆರೋಪ ಬಂದಿದೆ. ಆ ಆರೋಪ ನನ್ನ ಹೃದಯಕ್ಕೆ ಗಾಯವುಂಟು ಮಾಡಿದೆ. ಕಳೆದ ಹತ್ತು ದಿನಗಳಿಂದ ನಾನು ಏನೇನು ಮಾಡಿದೆನೋ ಅದೆಲ್ಲ ಅಧಿಕಾರದ ಆಸೆಯಿಂದ ಎನ್ನುವುದು ನನ್ನ ಮೇಲಿನ ಆರೋಪ. ಈ ಚರ್ಚೆಯಲ್ಲಿ ಪದೇಪದೆ ಕೇಳಿ ಬಂದ ಒಂದು ಮಾತೆಂದರೆ, ವಾಜಪೇಯಿ ಒಳ್ಳೆಯವರು ಆದರೆ ಅವರ ಪಕ್ಷ ಒಳ್ಳೆಯದಲ್ಲ. ಅಧ್ಯಕ್ಷರೇ, ಅಧಿಕಾರಕ್ಕಾಗಿ ಹೊಸ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಕೈಗೆ ಬರುವುದಾದರೆ ನಾನು ಅಂತಹ ಅಧಿಕಾರವನ್ನು ಇಕ್ಕುಳದಿಂದ ಸಹ ಮುಟ್ಟಲು ಇಷ್ಟ ಪಡುವುದಿಲ್ಲ’.

ಹೀಗೆ ಅದ್ಭುತ ವಾಕ್‌ಶಕ್ತಿಯೊಂದಿಗೆ ನಿರರ್ಗಳವಾಗಿ, ಹೃದಯದ ಭಾಷೆಯಲ್ಲಿ ಪಾರದರ್ಶಕತೆಯ ತಿಳಿ ಬೆಳಕಿನಲ್ಲಿ ಕಾವ್ಯಮಯ ಶೈಲಿಯಲ್ಲಿ ಪಡಿಮೂಡಿಸಿದ ಮಹಾನ್‌ ಚೇತನ ಅಟಲ್‌ಜೀ ಅವರು. ಇವರ ಜನ್ಮದಿನವನ್ನು ದೇಶದಲ್ಲಿ “ಉತ್ತಮ ಆಡಳಿತಾತ್ಮಕ ದಿನ’ (Good Governance Day) ಆಗಿ ಆಚರಿಸಲ್ಪಡುತ್ತಿರುವುದು ಭಾರತ ಮಾತ್ರವಲ್ಲ ವಿಶ್ವ ರಾಜಕೀಯಕ್ಕೆ ಒಂದು ಮೇಲ್ಪಂಕ್ತಿ.

ಮುಂದೆ 1998ರಿಂದ 2004ರ ಅವಧಿಯ ಪೂರ್ಣಕಾಲಿಕ ಪ್ರಧಾನಿತ್ವದ ಆಡಳಿತದಲ್ಲಿ 1998ರ ಬುದ್ಧನ ನಗೆ ಬೀರಿ ಶಾಂತಿಗಾಗಿ ಅಣುಶಸ್ತ್ರಧಾರಿಯಾದ ಭಾರತದ ಬಗೆ, 1999ರ ಕಾರ್ಗಿಲ್‌ ಕದನದ ಜಯಭೇರಿ, ಇಸ್ರೇಲನ್ನು ದೂರವಿರಿಸದೆಯೇ ಇಸ್ಲಾಮಿಕ್‌ ರಾಷ್ಟ್ರಗಳ ಸ್ನೇಹ ಗಳಿಕೆ, ರಾಜಧರ್ಮದ ನೇರ ರೇಖೆಯೊಳಗೇ ಭಾಷಾವಾರು, ಮತೀಯ ವಿಚಾರಗಳನ್ನು ಸರಿದೂಗಿಸಿದ ಪರಿ, ಸಡಕ್‌ ಯೋಜನೆಯಂತಹ ಹತ್ತಾರು ಯೋಜನೆಗಳ ಮೂಲಕ, ಹಳ್ಳಿಗಳ ಜನಜೀವನಕ್ಕೆ ಪುಷ್ಟಿ ನೀಡಿದ ಪರಿ, ವಿಪಕ್ಷಗಳನ್ನು ವಿಷಯಾಧಾರಿತವಾಗಿ ಎದುರಿಸಿದ “ಅಜಾತ ಶತ್ರುತ್ವ’-ಇವೆಲ್ಲವೂ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರನ್ನು ಭಾರತದ ಭವಿಷ್ಯದ ಇತಿಹಾಸದಲ್ಲಿ ಅ”ಕ್ಷರ’ವಾಗಿ ಅಂದರೆ ಅವಿನಾಶಿಯಾಗಿ ಮೂಡಿಸಿದೆ. ಅಸಾಧಾರಣ ರಾಜಕಾರಣಿಯ ಹೃದಯದಲ್ಲಿ ಸಾಹಿತಿಯ ಲೇಖನವಿತ್ತು. ಆ ಲೇಖನಿಯೊಳಗೇ ಭಾರತದ ಭವಿಷ್ಯಕ್ಕೆ ಭಾಷ್ಯ ಬರೆಯುವ ಅಧಿಕಾರವಿತ್ತು. ಮನದ ಬಯಕೆಯನ್ನು ಮಾತೃಭೂಮಿಗೆ ಕಾಯಕವಾಗಿ ಅರ್ಪಿಸುವ ಕಸು ಇತ್ತು. ಇಂತಹ ಅತೀ ವಿರಳ, ಸರಳ ಬದುಕಿನ ಮಹಾನ್‌ ಚೇತನ ಜನಿಸಿದ ಈ ದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಣೆ ಮಾಡುತ್ತಿರುವುದು ಭಾರತದ ಭಾಗ್ಯೋದಯಕ್ಕೆ ತೋರಣ ಕಟ್ಟಿದಂತೆಯೇ ಸರಿ. ಅವರ ಬಾಳಿನ ಪುಟಗಳಲ್ಲಿ ಮಿಂಚಿದ ಮಹಾನ್‌ ಸತ್ಯಕಿರಣಗಳನ್ನು ಅನುಸಂಧಾನಗೊಳಿಸಿದಲ್ಲಿ ನಮ್ಮ ರಾಜಕೀಯ ಹಾಗೂ ಆಡಳಿತ ರಂಗಕ್ಕೆ ಪೂರಕ ಹಾಗೂ ಪ್ರೇರಕ ಶಕ್ತಿ ಒದಗಿ ಬರುವಲ್ಲಿ ಸಂಶಯವಿಲ್ಲ.

Advertisement

– ಡಾ| ಪಿ. ಅನಂತಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next