Advertisement

ಶಿವಮೊಗ್ಗೆಯಲ್ಲಿ ನಡೆದಿತ್ತು ಅಟಲ್‌ ಷಷ್ಟ್ಯಾಬ್ದಿ

03:02 PM Aug 17, 2018 | |

ಶಿವಮೊಗ್ಗ: ವಾಜಪೇಯಿ ಅವರಿಗೆ 60 ವರ್ಷ ತುಂಬಿದ ಹಿನ್ನೆಲೆ ಷಷ್ಟ್ಯಾಬ್ದಿ ಕಾರ್ಯಕ್ರಮ 1988ರಲ್ಲಿ ಶಿವಮೊಗ್ಗದಲ್ಲಿ ನಡೆದಿತ್ತು. ಆಗ ಶಿವಮೊಗ್ಗ ಜನತಾ ಪರಿವಾರದ ಘಟಕದಿಂದ 61 ಸಾವಿರ ಹಣ ಸಂಗ್ರಹಿಸಿ ಕೊಡಲಾಗಿತ್ತು. ಅದನ್ನು ಡಿಡಿ ಮಾಡಿ ಕೊಡಲಾಗಿತ್ತು. ಹಿರಿಯರಿಗೆ ಹಣ ಸಂಗ್ರಹ ಮಾಡಿಕೊಡುವ ಪದ್ಧತಿ ಇತ್ತು. ನ್ಯಾಷನಲ್‌ ಕಾಲೇಜಯ ಮೈದಾನದಲ್ಲಿ ಕಾರ್ಯಕ್ರಮ ನಡೆದಿತ್ತು.

Advertisement

ಸಭೆಯ ಬ್ಯಾನರ್‌ನಲ್ಲಿ ನೂರು ವರ್ಷ ಬಾಳಿ ಎಂದು ಸಂಸ್ಕೃತದಲ್ಲಿ ಬರೆಯಲಾಗಿತ್ತು. ಹಿಂದೆ ಕೃಷ್ಣ ಪಾಂಚಜನ್ಯ ಊದುವ ಫೋಟೋ ಹಾಕಲಾಗಿತ್ತು. ಅದೇ ಮೊದಲು ನಾನು ಅವರನ್ನು ನೋಡಿದ್ದು ಎಂದು ಬಿಜೆಪಿ ಹಿರಿಯ ಮುಖಂಡ ಭಾನುಪ್ರಕಾಶ್‌ ನೆನಪು ಮಾಡಿಕೊಂಡರು. ಅದಾದ ಮೇಲೆ 1992ರಲ್ಲಿ ಮತ್ತೂಮ್ಮೆ ಶಿವಮೊಗ್ಗಕ್ಕೆ ಬಂದಿದ್ದರು. ಆಗ ಅವರನ್ನು ಮತ್ತೂರಿಗೆ ಕರೆದುಕೊಂಡು ಹೋಗುವುದು ನಮ್ಮ ಆಸೆಯಾಗಿತ್ತು ಅದಕ್ಕಾಗಿ ಗ್ರಾಮದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಡಿ.ಎಚ್‌. ಶಂಕರ ಮೂರ್ತಿ ಅವರ ಮೂಲಕ ಅವರಿಗೆ ತಿಳಿಸಿದೆ. ಆದರೆ ಅವರು ತಕ್ಷಣ ಏನು ಹೇಳಲಿಲ್ಲ. ಆದರೆ ಅವರು ಬರುತ್ತಾರೋ ಇಲ್ಲವೋ ಎಂದು ಆತಂಕ ಶುರುವಾಗಿತ್ತು. ಸರ್ಕಿಟ್‌ ಹೌಸ್‌ನಲ್ಲಿ ಉಳಿದುಕೊಂಡಿದ್ದ ಅವರು ರಾತ್ರಿ ಮಲಗಲು ತೆರಳಿದರು. ಅಲ್ಲಿವರೆಗೂ ಏನು ಹೇಳಿರಲಿಲ್ಲ. ಬಾಗಿಲ ಬಳಿ ಹೋಗಿ ಬಾಗಿಲು ಹಾಕುವ ಮುನ್ನ ಬೆಳಗ್ಗೆ ಹೋಗೋಣ ಎಂದರು. ಅದೊಂದು ನಮಗೆ ಥ್ರಿಲ್ಲಿಂಗ್‌ ಎಕ್ಸಪೀರಿಯನ್ಸ್‌ ಎಂದರು.

ಬೆಳಗ್ಗೆ ತುಂಗಾ ನದಿ ಪಕ್ಕದ ಗ್ರಾಮದಲ್ಲಿ 500 ಮಂದಿ ಸೇರುವ ಜಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಅವರಿಗೆ 108 ಮಣಿ ಇರುವ ಸ್ಫಟಿಕದ ಹಾರ ಕೊಟ್ಟು ಮುಂದಿನ ಬಾರಿ ಬರುವಾಗ ಪ್ರಧಾನಿಯಾಗಿ ಬನ್ನಿ ಎಂದು ಹಾರೈಸಲಾಗಿತ್ತು. ಇಡೀ ಕಾರ್ಯಕ್ರಮ ಸಂಸ್ಕೃತದಲ್ಲಿ ನಡೆಯಿತು. ಬಾಲ್ಯ ದಿನಗಳಲ್ಲಿ ಸಂಸ್ಕೃತ ಕಲಿಯುವುದು ಎಷ್ಟು ಕಷ್ಟವಾಗಿತ್ತು ಎಂದು ನೆನಪು ಮಾಡಿಕೊಂಡರು.

ಸಂಸ್ಕೃತ ಅಭ್ಯಾಸ ಮಾಡುವಾಗ ತಲೆ ಜುಟ್ಟಿನ ತುದಿಯನ್ನು ದಾರಕ್ಕೆ ಕಟ್ಟಿಕೊಂಡು ಅದನ್ನು ಮೊಳೆಗೆ ಕಟ್ಟುತ್ತಿದ್ದರು. ರಾತ್ರಿಯೆಲ್ಲಾ ಅಭ್ಯಾಸ ಮಾಡುವಾಗ ನಿದ್ದೆಗೆ ಜಾರಿದರೆ ದಾರ ಎಳೆಯುತಿತ್ತು. ಮತ್ತೆ ಎಚ್ಚರವಾಗಿ ಅಭ್ಯಾಸ ಮಾಡುತ್ತಿದ್ದರು ಎಂದು ಸಹ ತಮ್ಮ ನೆನಪು ಹಂಚಿಕೊಂಡಿದ್ದರು ಕಾರ್ಯಕ್ರಮದಲ್ಲಿ ಎಂದು ಭಾನುಪ್ರಕಾಶ್‌ ಅವರು ತಿಳಿಸಿದರು.

Advertisement

ಕಾಂಟೆಸ್ಸಾ ಕಾರಿನಲ್ಲಿ ಊರಿಂದ ಹೊರಟು ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಕಾರು ನಿಂತಿತ್ತು. ಏನಾಯಿತು ಎಂದು ಹೋಗಿ
ನೋಡಿದರೆ ನನ್ನ ಸಂಬಂಧಿಯೊಬ್ಬರು ಕಾರಿಗೆ ಅಡ್ಡ ಹಾಕಿದ್ದರು. ಅವರ ತಂದೆಗೆ ಪ್ಯಾರಾಲಿಸೀಸ್‌ ಆಗಿತ್ತು. ಅವರಿಗೆ ಕಾರ್ಯಕ್ರಮಕ್ಕೆ ಬರಲು ಆಗಿರಲಿಲ್ಲ. ಆದರೆ ಅವರನ್ನು ನೋಡಬೇಕೆಂಬ ಆಸೆಯಿತ್ತು. ಮನವಿ ಮಾಡುತ್ತಿದ್ದಂತೆ ಕಾರಿನಿಂದ ಇಳಿದು ಹಳ್ಳಿ ಮನೆಯ ಕಟ್ಟೆ ಮೇಲೆ ಕೂತಿದ್ದ ಅವರನ್ನು ಭೇಟಿ ಮಾಡಿ ಮಾತನಾಡಿಸಿದರು. ಇದು ವಾಜಪೇಯಿ ಅವರ ಸರಳ ವ್ಯಕ್ತಿತ್ವಕ್ಕೆ ಉದಾಹರಣೆ ಅಂದರು.

1999ರಲ್ಲಿ ನಡೆದ ಬೈಎಲೆಕ್ಷನ್‌ನಲ್ಲಿ ಆಯನೂರು ಮಂಜುನಾಥ್‌ ಅವರು ಲೋಕಸಭೆ ಚುನಾವಣೆಗೆ ನಿಂತಿದ್ದರು. ನೆಹರು ಕ್ರೀಡಾಂಗಣದಲ್ಲಿ ಬೃಹತ್‌ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅವರು ಮಂಗಳೂರಿನಿಂದ ಬರಬೇಕಿತ್ತು. ಆದರೆ ಮಳೆ ಕಾರಣ ಅವರು ಬರಲಾಗಲಿಲ್ಲ. ಅವರು ಬಂದಿದ್ದರೆ ಮಂಜಣ್ಣ ಅವರು ಗೆಲ್ಲುತ್ತಿದ್ದರೇನೋ ಎಂದು ಭಾನುಪ್ರಕಾಶ್‌ ತಿಳಿಸಿದರು

ರಿಪ್ಪನ್‌ಪೇಟೆ: ಮಾಜಿ ಪ್ರಧಾನಿ, ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರಿಗೂ ಹಾಗೂ ರಿಪ್ಪನ್‌ಪೇಟೆಗೂ ಅವಿನಾಭಾವ ಸಂಬಂಧ ಇಂದು ನಿನ್ನೆಯದಲ್ಲ. ಜನಸಂಘದ ಅಧ್ಯಕ್ಷರಾಗಿ ಸಂಘಟನೆಗಾಗಿ 1977 ರ ಸಾಲಿನಲ್ಲಿ ರಾಷ್ಟ್ರಾದ್ಯಂತ ಪ್ರಚಾರ ಕೈಗೊಂಡ ಸಂದರ್ಭ ರಿಪ್ಪನ್‌ಪೇಟೆಯ ಜನರಿಗೂ ಅವರ ದರ್ಶನ ಭಾಗ್ಯ ದೊರೆತಿತ್ತು. 

 ಜಿಲ್ಲೆಗಾಗಮಿಸುವ ಮಾಹಿತಿಯನ್ನರಿತ ಅಂದಿನ ಕೆಲವು ಯುವಕರು ಸಂಘಟನೆಯ ಮುಖಂಡರನ್ನು ಸಂಪರ್ಕಿಸಿ ತಮ್ಮ
ಊರಿಗೂ ಬರುವಂತೆ ಪಟ್ಟು ಹಿಡಿದ ಪರಿಣಾಮ ಮೊದಲೇ ಪ್ರವಾಸ ಸ್ಥಳಗಳನ್ನು ನಿಗ ದಿಪಡಿಸಲಾಗಿದ್ದರೂ ಕೊಂಚ ಸಮಯಾವಕಾಶ ಮಾಡಿಕೊಂಡು ತೀರ್ಥಹಳ್ಳಿ ಮಾರ್ಗವಾಗಿ ರಿಪ್ಪನ್‌ಪೇಟೆಗೆ ಆಗಮಿಸಿದ್ದರು. ಪಟ್ಟಣದಲ್ಲಿ ಸೇರಿದ ಹಲವು ಗ್ರಾಮಸ್ಥರನ್ನುದ್ದೇಶಿಸಿ ಆಕರ್ಷಿತ ಭಾಷಣದಿಂದ ಇಲ್ಲಿನ ಯುವಕರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಈ ಸಂದರ್ಭದಲ್ಲಿ ಸಂಘಟನೆಗಾಗಿ ಗ್ರಾಮಸ್ಥರಿಂದ ಒಂದು ಸಾವಿರದ ಎರಡು ನೂರು ರೂಪಾಯಿಗಳ ದೇಣಿಗೆ ಸಂಗ್ರಹಿಸಿದ್ದಾಗಿ ಸ್ಥಳೀಯ ಘಟಕ ಅಧ್ಯಕ್ಷ ಎಚ್‌.ಎಸ್‌. ಪ್ರಭಾಕರ ತಿಳಿಸಿದರು. ಇಂದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮಾಜಿ ಲೋಕಸಭಾ ಅಧ್ಯಕ್ಷ ಕೆ.ಎಸ್‌. ಹೆಗಡೆ, ಸ್ಥಳೀಯ ಮುಖಂಡ ದಿ| ಕೆ.ಪಿ. ಕೃಷ್ಣಮೂರ್ತಿ ಇದ್ದರು 

Advertisement

Udayavani is now on Telegram. Click here to join our channel and stay updated with the latest news.

Next