Advertisement

ಕೆಪಿಎಸ್‌ಸಿ : 362 ಜನರ ರಕ್ಷಣೆಗೆ ವಿಧೇಯಕ

07:56 PM Feb 18, 2022 | Team Udayavani |

ಬೆಂಗಳೂರು: 2011 ರ ಗೆಜೆಟೆಡ್‌ 362 ಪ್ರೊಬೆಷನರ್ಸ್‌ ಹುದ್ದೆಗಳ ನೇಮಕಾತಿಯನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರ ಕರ್ನಾಟಕ ಸಿವಿಲ್‌ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರಬೇಷನರರ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ವಿಧೇಯಕ 2022 ಅನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಿದೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಕಾಂಗ್ರೆಸ್‌ ಸದಸ್ಯರ ಗದ್ದಲದ ನಡುವೆಯೇ ವಿಧೇಯಕ ಮಂಡಿಸಿದರು.

2011 ನವೆಂಬರ್‌ 3 ರಂದು ಕರ್ನಾಟಕ ಲೋಕಸೇವಾ ಆಯೋಗ 362 ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿತ್ತು. ಆದರೆ, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲವು ಅಭ್ಯರ್ಥಿಗಳು ಕೆಪಿಎಸ್‌ಸಿ ಸದಸ್ಯರಿಗೆ ಲಂಚ ನೀಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ನಡೆಸಲಾಗಿತ್ತು. ಆ ತನಿಖೆಯಲ್ಲಿ ಕೆಲವು ಅಭ್ಯರ್ಥಿಗಳು ಕೆಪಿಎಸ್‌ಸಿಯ ಕೆಲವು ಸದಸ್ಯರ ಜೊತೆ ದೂರವಾಣಿ ಮೂಲಕ ಹಣಕಾಸಿನ ವ್ಯವಹಾರದ ಕುರಿತು ಮಾತನಾಡಿದ್ದಾರೆ ಎಂದು ಆರೋಪಿಸಿ ವರದಿ ಸಲ್ಲಿಸಿತ್ತು. ಆದರೆ, ಆರೋಪಿತರ ಹೆಸರುಗಳನ್ನು ಸಿಐಡಿ ತನಿಖೆಯಲ್ಲಿ ಸ್ಪಷ್ಟಪಡಿಸದೇ ಇರುವುದು ಹಾಗೂ ಹಣಕಾಸಿನ ವ್ಯವಹಾರ ನಡೆದಿರುವ ಬಗ್ಗೆ ಯಾವುದೇ ಪುರಾವೆ ನೀಡದೇ ಇರುವುದರಿಂದ ನ್ಯಾಯಾಲಯದಲ್ಲಿ ಯಾವುದೇ ವ್ಯಕ್ತಿ ಆರೋಪಿ ಎಂದು ಸಾಬೀತು ಮಾಡದೇ ಇರುವುದರಿಂದ ನ್ಯಾಯಸಮ್ಮತವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುವುದನ್ನು ತಡೆಗಟ್ಟಲು ಸರ್ಕಾರ ಈ ವಿಧೇಯಕ ಮಂಡನೆ ಮಾಡಿರುವುದಾಗಿ ತಿಳಿಸಿದೆ.

2011ರ ಗೆಜೆಟ್‌ ಪ್ರೊಬೆಷನರರ ಹುದ್ದೆಗಳ ನೇಮಕಾತಿ ಅಕ್ರಮವಾಗಿದೆ ಎಂದು ರಾಜ್ಯ ಹೈಕೋರ್ಟ್‌ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್‌ ಕೂಡ ಮಾನ್ಯ ಮಾಡಿ, ಇವರ ಆಯ್ಕೆಯನ್ನು ರದ್ದುಪಡಿಸುವಂತೆ ನಿರ್ದೇಶನ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಈ ವಿಧೇಯಕದ ಮೂಲಕ ಯಾವುದೇ ನ್ಯಾಯಾಲಯ, ಯಾವುದೇ ನ್ಯಾಯಮಂಡಳಿ ಅಥವಾ ಪ್ರಾಧಿಕಾರ ಯಾವುದೇ ತೀರ್ಪು, ಡಿಕ್ರಿ ಅಥವಾ ಆದೇಶದಲ್ಲಿ ಇದರ ವಿರುದ್ಧವಾಗಿ ಏನೇ ಆದೇಶ ನೀಡಿದ್ದರೂ ಹಾಗೂ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳಿಗೆ ಅವರ ಯಾವುದೇ ಲೋಪಗಳಿಲ್ಲದಿರುವುದರಿಂದ ನ್ಯಾಯ ಒದಗಿಸಲು ಈ ವಿಧೇಯಕ ಮಂಡನೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಈ ನೇಮಕಾತಿಯು ಕೆಪಿಎಸ್ಸಿ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರುಗಳ ಆಯ್ಕೆ ಕಾನೂನಿನ ಪ್ರಕಾರ ಸಿಂಧುವಾಗಿರತಕ್ಕದ್ದು, ರಾಜ್ಯ ಸರ್ಕಾರ ಕೆಪಿಎಸ್‌ಸಿ ಅಯ್ಕೆ ಪಟ್ಟಿ ಅನುಸಾರ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರುಗಳಿಗೆ ನೇಮಕಾತಿ ಆದೇಶವನ್ನು ಹೊರಡಿಸಲು ಕೂಡಲೆ ಕ್ರಮ ಕೈಗೊಳ್ಳಬೇಕು.

Advertisement

ಈ ಎಲ್ಲ ನೇಮಕಾತಿಗಳು ಕರ್ನಾಟಕ ಸಿವಿಲ್‌ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮ 1977ರ 18ನೇ ನಿಯಮದ ಉಪ ಬಂಧಗಳ ವ್ಯಾಪ್ತಿಗೆ ಹಾಗೂ ಅವುಗಳ ಅನುಸಾರವಾಗಿರಬೇಕು. ಈ ಹುದ್ದೆಗೆ ವರದಿ ಮಾಡಿಕೊಂಡ ದಿನಾಂಕದಿಂದ ಅವರ ಜೇಷ್ಠತೆ ಜಾರಿಗೆ ಬರಲಿದ್ದು, 2011ರ ಪ್ರೊಬೇಷನರರು ಯಾವುದೇ ಪೂರ್ವಾನ್ವಯ ಜೇಷ್ಠತೆಗೆ ಅರ್ಹರಾಗಿರುವುದಿಲ್ಲ. ಅಲ್ಲದೇ ತಮ್ಮ ನೇಮಕಾತಿ ಪೂರ್ವಾನ್ವಯವಾಗುವಂತೆ ಹಕ್ಕಿಗಾಗಿ ಎಲ್ಲಿಯೂ ಕ್ಷೇಮು ಮಾಡುವಂತಿಲ್ಲ. ಈ ನೇಮಕಾತಿಯನ್ನು ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಪ್ರಾಧಿಕಾರದ ಮುಂದೆ ಪ್ರಕರಣ ದಾಖಲಿಸಲು ಅವಕಾಶ ಇಲ್ಲ. ಅಲ್ಲದೇ ಈ ವಿಧೇಯಕದ ವಿರುದ್ಧ ಯಾವುದೇ ಪ್ರಕರಣವನ್ನು ಪುನರ್‌ ಪರಿಶೀಲಿಸುವಂತೆ ಯಾವುದೇ ನ್ಯಾಯಾಲಯ ಆದೇಶ ಹೊರಡಿಸುವಂತಿಲ್ಲ ಎಂದು ವಿಧೇಯಕದಲ್ಲಿ ಪ್ರಸ್ತಾವಿಸಲಾಗಿದೆ. ಅಲ್ಲದೇ ಈ ಕಾನೂನು ಜಾರಿಗೆ ತರಲು ಏನಾದರೂ ತೊಂದರೆಗಳು ಎದುರಾದಲ್ಲಿ ಸರ್ಕಾರ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ತೊಂದರೆಗಳನ್ನು ನಿವಾರಿಸಲು ನಿಯಮಗಳನ್ನು ರೂಪಿಸಲು ಅಧಿಕಾರ ಹೊಂದಿದೆ ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next