Advertisement

Assembly By Election: ಗೆದ್ದು ಬನ್ನಿ; ಕಾಂಗ್ರೆಸ್‌ ಸಚಿವರಿಗೆ ರಣದೀಪ್‌ ಸುರ್ಜೇವಾಲ ಹುಕುಂ

12:02 AM Oct 28, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣಾ ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿದ್ದು, ಗೆಲುವಿಗಾಗಿ ರಣತಂತ್ರಗಳನ್ನು ರೂಪಿಸುತ್ತಿವೆ. ಏತನ್ಮಧ್ಯೆ ಆಡಳಿತಾರೂಢ ಕಾಂಗ್ರೆಸ್‌ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಸಚಿವರು ಸೇರಿದಂತೆ ಪ್ರಮುಖರಿಗೆ ಜವಾಬ್ದಾರಿ ವಹಿಸಿದೆ.

Advertisement

ಅಲ್ಲದೆ, ನ.11ರವರೆಗೆ ಕ್ಷೇತ್ರಗಳಲ್ಲೇ ಠಿಕಾಣಿ ಹೂಡಲು ಫ‌ರ್ಮಾನು ಹೊರಡಿಸಲಾಗಿದೆ. ಈಗ ಈ ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಐದೇ ಸಚಿವರು ಭಾಗಿಯಾಗಿದ್ದರು. ಇದರಿಂದ ಗರಂ ಆದ ಸುರ್ಜೇವಾಲ ಸಚಿವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಉಪಚುನಾವಣೆಯನ್ನು ಸಚಿವರು ಗಂಭೀರವಾಗಿ ತೆಗೆದುಕೊಂಡಿಲ್ಲವೇ? ಉಳಿದ ಸಚಿವರು ಎಲ್ಲಿ? ಅವರಿಗೆ ಮಾಹಿತಿ ಇರಲಿಲ್ಲವೇ? ಈ ನಿರ್ಲಕ್ಷ್ಯ ಧೋರಣೆ ಸರಿ ಅಲ್ಲ ಎಂದು ಸುರ್ಜೇವಾಲ ಗುಡುಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಗೃಹ ಕಚೇರಿ ಕೃಷ್ಣಾ’ದಲ್ಲಿ ಸಚಿವರು, ಪಕ್ಷದ ಶಾಸಕರು, ಸಂಸದರು, ವಿಧಾನ ಪರಿಷತ್ತಿನ ಸದಸ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ರಣದೀಪ್‌ ಸಿಂಗ್‌ ಸುರ್ಜೇವಾಲ ವಿಡಿಯೋ ಸಂವಾದ ನಡೆಸಿದ್ದಾರೆ. ಈ ವೇಳೆ ಬೆರಳೆಣಿಕೆಯಷ್ಟು ಸಚಿವರು ಪಾಲ್ಗೊಂಡಿದ್ದರ ಬಗ್ಗೆ ಸುರ್ಜೇವಾಲ ಗರಂ ಆಗಿದ್ದರು.

ನ.11ರವರೆಗೆ ಕ್ಷೇತ್ರಗಳಲ್ಲೇ ಠಿಕಾಣಿ 
ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಉಪ ಸಮರದ ರಣತಂತ್ರ ರೂಪಿಸುತ್ತಿರುವ ಆಡಳಿತಾರೂಢ ಕಾಂಗ್ರೆಸ್‌, ಚುನಾವಣೆ ಮುಗಿಯುವವರೆಗೆ ಜವಾಬ್ದಾರಿ ವಹಿಸಿಕೊಂಡ ಮುಖಂಡರು ಆಯಾ ಕ್ಷೇತ್ರ ಬಿಟ್ಟು ಕದಲದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಲಾಯಿತು. ಯಾವುದೇ ರೀತಿಯ ಭಿನ್ನರಾಗಗಳನ್ನು ಬದಿಗೊತ್ತಿ, ಪಕ್ಷ ಟಿಕೆಟ್‌ ನೀಡಿದ ಅಭ್ಯಥಿಯ ಗೆಲುವಿಗೆ ಶ್ರಮಿಸಬೇಕು.

ಶೀಘ್ರ ಬೂತ್‌, ಪಂಚಾಯ್ತಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುವುದು. ಸಚಿವರು, ಶಾಸಕರೂ ಇರುವ ಆ ಸಮಿತಿಗಳಲ್ಲಿ ಜವಾಬ್ದಾರಿಗಳನ್ನು ವಹಿಸಲಾಗುವುದು. ಅದನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ನ. 11ರವರೆಗೆ (ನ. 13ಕ್ಕೆ ಮತದಾನ ಇದ್ದು, ಅದಕ್ಕೆ 2 ದಿನ ಮುಂಚಿತವಾಗಿ ಕ್ಷೇತ್ರ ತೊರೆಯಬೇಕಾಗುತ್ತದೆ) ಕ್ಷೇತ್ರ ಬಿಟ್ಟು ಕದಲಬಾರದು ಎಂದು ಸೂಚನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

Advertisement

ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಆಡಳಿತ ಪಕ್ಷವು ನುಡಿದಂತೆ ನಡೆದಿದೆ. ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿವೆ. ಇದನ್ನು ಜನರ ಮನೆಗಳಿಗೆ ತಲುಪಿಸಿ, ಅವರ ಮನಸ್ಸು ಗೆಲ್ಲಬೇಕು. ಮೂರೂ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲು ಪೂರಕ ವಾತಾವರಣವೂ ಇದೆ. ಒಂದೆರಡು ದಿನಗಳಲ್ಲಿ ವಿವಿಧ ತಂಡಗಳನ್ನು ರಚಿಸಿ, ಜವಾಬ್ದಾರಿಗಳನ್ನು ವಹಿಸಲಾಗುವುದು. ಅದರಂತೆ ಎಲ್ಲರೂ ಗೆಲುವಿಗೆ ಶ್ರಮಿಸಬೇಕು ಎಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಡಿಕೆಶಿ ನಿರ್ದೇಶನ ನೀಡಿದರು ಎನ್ನಲಾಗಿದೆ.

ಅಭ್ಯರ್ಥಿಗಳ ಆಯ್ಕೆ ಪಕ್ಷದ ತೀರ್ಮಾನ. ಈ ಬಗ್ಗೆ ಅಪಸ್ವರಗಳು ಸಲ್ಲದು ಎಂದ ಉಭಯ ನಾಯಕರು, ಸಭೆಗೆ ಹಾಜರಾಗದ ಸಚಿವರಿಗೂ ಈ ಮಾಹಿತಿ ನೀಡಲಾಗುವುದು. ಶತಾಯಗತಾಯ ಉಪ ಚುನಾವಣೆ ಕ್ಲೀನ್‌ಸ್ವೀಪ್‌’ ಆಗಬೇಕು ಎಂದು ಹೇಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಕೆಲವರು ಬಂದಿಲ್ಲಷ್ಟೇ
“13 ಜನ ಸಚಿವರು ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದರು. ಸರಣಿ ರಜೆ ಮತ್ತು ದೀಪಾವಳಿ ಹೊಸ್ತಿಲಲ್ಲಿದೆ. ಅದಕ್ಕೆ ಕೆಲವರು ಬಂದಿರಲಿಲ್ಲ ಅಷ್ಟೇ.”
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next