Advertisement

ಅಸ್ಸಾಂ-ಮಿಜೋರಾಂ ಗಡಿ ವಿವಾದ: ಹಿಂಸಾಚಾರದಲ್ಲಿ ಎಂಟು ಪೊಲೀಸರು ಹುತಾತ್ಮ

09:50 AM Jul 27, 2021 | Team Udayavani |

ದಿಸ್‌ಪುರ (ಅಸ್ಸಾಂ): ಅಸ್ಸಾಂ ಹಾಗೂ ಮಿಜೋರಾಂ ನಡುವಿನ ವಿವಾದಿತ ಗಡಿ ಪ್ರದೇಶದಲ್ಲಿ ಸೋಮವಾರ ಇದ್ದಕ್ಕಿದ್ದಂತೆ ಹಿಂಸಾಚಾರ ಭುಗಿಲೆದ್ದಿದೆ. ಘಟನೆಯಲ್ಲಿ ಎರಡೂ ರಾಜ್ಯಗಳ ಗಡಿಭಾಗದ ಹಳ್ಳಿಗಳ ಜನರು ಹೊಡೆದಾಡಿಕೊಂಡಿದ್ದು ಭದ್ರತೆಗಾಗಿ ಹೋದ ಅಸ್ಸಾಂ ಪೊಲೀಸ್‌ ನ ಎಂಟು ಸಿಬ್ಬಂದಿ ಹುತಾತ್ಮರಾಗಿದ್ದಾರೆ.

Advertisement

ಹಲವಾರು ಪೊಲೀಸರು ಹಾಗೂ ನಾಗರಿಕರು ಗಾಯಗೊಂಡಿದ್ದಾರೆ. ಅಸ್ಸಾಂನ ಕಚಾರ್‌ ಹಾಗೂ ಮಿಜೋರಾಂನ ಕೊಲಾಸಿಬ್‌ ಜಿಲ್ಲೆಗಳ ಗಡಿಯಲ್ಲಿನ ಎಂಟು ರೈತರ ಗುಡಿಸಲುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದೇ ಈ ಗಲಭೆಗೆ ಕಾರಣ ಎನ್ನಲಾಗಿದೆ.

ಭದ್ರತೆಗಾಗಿ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ಮಿಜೋರಾಂ ‌ಗುಂಪೊಂದು ದೊಣ್ಣೆ,ಕಬ್ಬಿಣದ ಸರಳುಗಳಿಂದ ದಾಳಿ ನಡೆಸಿತ್ತೆಂಬ ಆರೋಪವಿದೆ.

ಸ್ಥಳದಲ್ಲಿ ಸಿಆರ್ ಪಿಎಫ್ ನ ಎರಡು ತುಕಡಿಗಳನ್ನು ನಿಯೋಜಿಸಲಾಗಿದೆ. ಅಸ್ಸಾಂ ಮತ್ತು ಮಿಜೋರಾಂ ಪೊಲೀಸ್ ಪಡೆಗಳನ್ನು ವಿವಾದಿತ ಪ್ರದೇಶದಿಂದ ಹಿಂದೆ ಸರಿಯುವಂತೆ ಧ್ವನಿವರ್ಧಕಗಳ ಮೇಲೆ ಪ್ರಕಟಣೆಗಳನ್ನು ಸಹ ಮಾಡಲಾಗಿದೆ.

ಇದನ್ನೂ ಓದಿ:ಕರಾವಳಿಯ ರಾಜಕೀಯದಂಗಳದಲ್ಲಿ ಸಿಎಂ- ಸಚಿವ ಸ್ಥಾನದತ್ತ ಕುತೂಹಲ!

Advertisement

ಸೋಮವಾರ ಬೆಳಿಗ್ಗೆ 11.30 ರ ಸುಮಾರಿಗೆ ವೈರೆಂಗ್ಟೆ ಆಟೋರಿಕ್ಷಾ ಸ್ಟ್ಯಾಂಡ್ ಬಳಿ ಮಿಜೋರಾಂ ಪೊಲೀಸರು ಮತ್ತು ಸಿಆರ್‌ಪಿಎಫ್ ನಿರ್ವಹಿಸುತ್ತಿದ್ದ ಪೋಸ್ಟ್ ನ್ನು ಸುಮಾರು 200 ಅಸ್ಸಾಂ ಪೊಲೀಸ್ ಸಿಬ್ಬಂದಿ ಅತಿಕ್ರಮಿಸಿದ್ದಾರೆ ಎಂದು ಮಿಜೋರಾಂ ಗೃಹ ಸಚಿವ ಲಾಲ್‌ ಚಮ್ಲಿಯಾನಾ ಹೇಳಿದ್ದಾರೆ.

ವೈರೆಂಗ್ಟೆ ಪಟ್ಟಣದ ಸ್ಥಳೀಯರು ಪರಿಸ್ಥಿತಿಯ ಬಗ್ಗೆ ವಿಚಾರಿಸಿದಾಗ ಲಾಠಿ ಚಾರ್ಜ್ ಮಾಡಲಾಗಿತ್ತು ಎಂದು ಮಿಜೋರಾಂ ಸರ್ಕಾರ ತಿಳಿಸಿದೆ. ಮಿಜೋರಾಂ ಪೊಲೀಸರ ಮೇಲೆ ಅಶ್ರುವಾಯು ಮತ್ತು ಗ್ರೆನೇಡ್‌ಗಳನ್ನು ಸಿಡಿಸಲಾಗಿದೆ, ನಂತರ ಸಂಜೆ 4.50 ರ ಸುಮಾರಿಗೆ ಅಸ್ಸಾಂ ಕಡೆಯಿಂದ ಗುಂಡು ಹಾರಿಸಲಾಯಿತು ಎಂದು ಮಿಜೋ ಸರ್ಕಾರ ಹೇಳಿದೆ.

ಘರ್ಷಣೆಯನ್ನು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅಸ್ಸಾಂ ಸಚಿವ ಪರಿಮಲ್ ಸುಕ್ಲಾಬೈದ್ಯ, ಸುಮಾರು 80 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು. ಅಂತಾರಾಜ್ಯ ಗಡಿಯ ಅಸ್ಸಾಂ ಕಡೆಯಿಂದ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next