Advertisement

ಏಶ್ಯ ಕಪ್‌ ಹಾಕಿ ಸೂಪರ್‌ ಫೋರ್‌ ಪಾಕ್‌ ವಿರುದ್ಧ ಭಾರತ 4-0 ಪರಾಕ್ರಮ

06:55 AM Oct 22, 2017 | Team Udayavani |

ಢಾಕಾ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು ಸೂಪರ್‌-4 ಹಂತದ ಮುಖಾಮುಖೀಯಲ್ಲೂ ಬಗ್ಗುಬಡಿದ ಭಾರತ ಏಶ್ಯ ಕಪ್‌ ಹಾಕಿ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ಅಜೇಯವಾಗಿ ಲಗ್ಗೆ ಇರಿಸಿದೆ.  ಅಂತಿಮ ಕ್ವಾರ್ಟರ್‌ನಲ್ಲಿ ಮಿಂಚಿನ ಆಟವಾಡಿದ ಭಾರತ 4-0 ಅಂತರದಿಂದ ಪಾಕಿಸ್ಥಾನದ ಕತೆ ಮುಗಿಸಿತು. ಲೀಗ್‌ ಹಂತದಲ್ಲಿ ಭಾರತ 3-1 ಗೋಲುಗಳಿಂದ ಪಾಕಿಗೆ ಆಘಾತವಿಕ್ಕಿತ್ತು.

Advertisement

ರವಿವಾರ ಸಂಜೆ 5.30ಕ್ಕೆ ಪ್ರಶಸ್ತಿ ಸಮರ ಆರಂಭವಾಗಲಿದೆ. ಸೂಪರ್‌-4 ಹಂತದ ಅಗ್ರಸ್ಥಾನಿಯಾದ ಭಾರತ, ಇಲ್ಲಿ ದ್ವಿತೀಯ ಸ್ಥಾನ ಪಡೆದ ತಂಡವನ್ನು ಫೈನಲ್‌ನಲ್ಲಿ ಎದುರಿಸಲಿದೆ. ದಕ್ಷಿಣ ಕೊರಿಯಾ ಅಥವಾ ಮಲೇಶ್ಯಕ್ಕೆ ಈ ಅವಕಾಶ ಲಭಿಸಲಿದೆ.

ಶನಿವಾರದ ಪ್ರತಿಕೂಲ ಹವಾಮಾನದಿಂದಾಗಿ ಭಾರತ-ಪಾಕಿಸ್ಥಾನ ಪಂದ್ಯ ಒಂದೂವರೆ ಗಂಟೆ ವಿಳಂಬವಾಗಿ ಮೊದಲ್ಗೊಂಡಿತು. ಇದಕ್ಕೂ ಮೊದಲೇ ಮುಗಿಯಬೇಕಿದ್ದ ದಕ್ಷಿಣ ಕೊರಿಯಾ-ಮಲೇಶ್ಯ ಪಂದ್ಯ ಭಾರತ-ಪಾಕ್‌ ಮುಖಾಮುಖೀಯ ಬಳಿಕ ಆರಂಭಗೊಂಡಿತು.

ಅರ್ಧ ಹಾದಿ ಕ್ರಮಿಸುವ ತನಕ ಎರಡೂ ತಂಡಗಳಿಗೆ ಗೋಲು ಮರೀಚಿಕೆಯೇ ಆಯಿತು. 3ನೇ ಕ್ವಾರ್ಟರ್‌ನಲ್ಲಿ ಭಾರತ ಗೋಲಿನ ಖಾತೆ ತೆರೆದು, ಕೊನೆಯ ಕ್ವಾರ್ಟರ್‌ನಲ್ಲಿ ಮತ್ತೆ 3 ಗೋಲು ಸಿಡಿಸಿ ಪಾರಮ್ಯ ಮೆರೆಯಿತು. ಸತಿºàರ್‌ ಸಿಂಗ್‌ (39ನೇ ನಿಮಿಷ), ಹರ್ಮನ್‌ಪ್ರೀತ್‌ ಸಿಂಗ್‌ (51ನೇ ನಿಮಿಷ), ಲಲಿತ್‌ ಉಪಾಧ್ಯಾಯ (52ನೇ ನಿಮಿಷ) ಮತ್ತು ಗುರ್ಜಂತ್‌ ಸಿಂಗ್‌ (57ನೇ ನಿಮಿಷ) ಭಾರತದ ಗೋಲುವೀರರು.

ಗೋಲಿಗಾಗಿ ಹೋರಾಟ
ಲೀಗ್‌ ಹಂತಕ್ಕಿಂತಲೂ ತೀವ್ರ ಪೈಪೋಟಿಯಿಂದ ಕೂಡಿದ ಈ ಪಂದ್ಯದಲ್ಲಿ ಎರಡೂ ತಂಡಗಳು ಗೋಲಿಗಾಗಿ ಹೋರಾಡುತ್ತಲೇ ಇದನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಯಶಸ್ವಿ ಹೋರಾಟ ಪ್ರದರ್ಶಿಸುತ್ತ ಬಂದವು. ಭಾರತಕ್ಕೆ ಪಂದ್ಯದ 2ನೇ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿತಾದರೂ ಇದಕ್ಕೆ ಪಾಕ್‌ ಮೇಲ್ಮನವಿ ಸಲ್ಲಿಸಿತು. ಇದು ಪಾಕ್‌ ಪರವಾಗಿಯೇ ಬಂತು. 7ನೇ ನಿಮಿಷದಲ್ಲಿ ಪಾಕಿಗೆ ಪೆನಾಲ್ಟಿ ಕಾರ್ನರ್‌ ಒಂದು ಲಭಿಸಿತಾದರೂ ಗೋಲಿ ಚಿಕ್ತೆ ಇದನ್ನು ತಡೆಯುವಲ್ಲಿ ಯಶಸ್ವಿಯಾದರು.

Advertisement

ಹೀಗೆ ಅರ್ಧ ಹಾದಿಯ ತನಕ ಎರಡೂ ತಂಡಗಳ ಆಟಗಾರರು ತೀವ್ರ ಪೈಪೋಟಿಯ ಆಟವನ್ನು ಪ್ರದರ್ಶಿಸುತ್ತ ತಮಗೆ ಲಭಿಸಿದ ಎಲ್ಲ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಕೈಚೆಲ್ಲುತ್ತ ಹೋದರು. 28ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಸ್ವಲ್ಪದರಲ್ಲೇ ಖಾತೆ ತೆರೆಯುವುದರಿಂದ ವಂಚಿತರಾದರು. ಹೀಗಾಗಿ 2ನೇ ಕ್ವಾರ್ಟರ್‌ ಮುಗಿದರೂ ಗೋಲಿನ ದರ್ಶನವಾಗಲೇ ಇಲ್ಲ.

ತೃತೀಯ ಕ್ವಾರ್ಟರ್‌ನಲ್ಲಿ ಭಾರತ ಗೋಲಿನ ಖಾತೆ ತೆರೆಯುವ ಮೂಲಕ ತನ್ನ ಹಿಡಿತವನ್ನು ಬಿಗಿಗೊಳಿಸಿತು. 39ನೇ ನಿಮಿಷದಲ್ಲಿ ಸತಿºàರ್‌ ಸಿಂಗ್‌ ಬಲ ಭಾಗದಿಂದ ಬಾರಿಸಿದ ಚೆಂಡು ಗೋಲುಪಟ್ಟಿಯ ಬಾಯಿಯ ತನಕ ಬಂತು. ಅಲ್ಲಿಯೇ ಇದ್ದ ಗುರ್ಜಂತ್‌ ಸಿಂಗ್‌ ಚೆಂಡನ್ನು ಪಡೆದು ಗೋಲುಪಟ್ಟಿಗೆ ತಳ್ಳಿದಂತೆ ಕಂಡುಬಂತು. ಆದರೆ ಸತಿºàರ್‌ ಹೊಡೆತಕ್ಕೇ ಚೆಂಡು ಪಾಕ್‌ ಗೋಲಿಯನ್ನು ವಂಚಿಸಿತು. ಚೆಂಡು ನೆಟ್‌ ಸೇರುವ ಮುನ್ನ ಕೊನೆಯ ಸಲ ಸ್ಟಿಕ್‌ ತಗುಲಿಸಿದ ಸತಿºàರ್‌ಗೆ ಗೋಲಿನ ಶ್ರೇಯಸ್ಸು ಸಂದಾಯವಾಯಿತು.

41ನೇ ನಿಮಿಷದಲ್ಲಿ ಭಾರತಕ್ಕೆ ಮತ್ತೂಂದು ಪೆನಾಲ್ಟಿ ಕಾರ್ನರ್‌ ಹಾದಿ ತೆರೆಯಲ್ಪಟ್ಟಿತು. ಆದರೆ ಹರ್ಮನ್‌ಪ್ರೀತ್‌ ಸಿಂಗ್‌ ಎಡವಿದರು. 3ನೇ ಕ್ವಾರ್ಟರ್‌ ತನಕ ಭಾರತ ಈ ಏಕೈಕ ಗೋಲಿನ ಮುನ್ನಡೆಯನ್ನು ಕಾಯ್ದುಕೊಂಡಿತು.

ಭಾರತದ ಮಿಂಚಿನ ಆಟ
4ನೇ ಕ್ವಾರ್ಟರ್‌ನಲ್ಲಿ ಭಾರತ ಮಿಂಚಿನ ಗತಿಯ ಆಟವಾಡಿತು. ಆರಂಭದಲ್ಲೇ ವರುಣ್‌ ಗೋಲು ಗಳಿಕೆಯ ಉತ್ತಮ ಅವಕಾಶವೊಂದನ್ನು ಕಳೆದುಕೊಂಡರೂ, 48ನೇ ಹಾಗೂ 49ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ಗಳು ವ್ಯರ್ಥವಾದರೂ ಮುಂದಿನ ಹಂತದಲ್ಲಿ ಭಾರತ ಎದುರಾಳಿ ಮೇಲಿನ ಹಿಡಿತವನ್ನು ಬಿಗಿಗೊಳಿಸಿತು. 6 ನಿಮಿಷಗಳ ಅಂತರದಲ್ಲಿ 3 ಗೋಲು ಬಾರಿಸಿ ವಿಜೃಂಭಿಸಿತು.

Advertisement

Udayavani is now on Telegram. Click here to join our channel and stay updated with the latest news.

Next