Advertisement

Sandalwood: ‘ನಿಂಬಿಯಾ ಬನಾದ ಮ್ಯಾಗ’ ಮೂಲಕ ನಿರೀಕ್ಷೆ ಹೆಚ್ಚಿಸಿದ ಅಶೋಕ್ ಕಡಬ!

04:46 PM Aug 29, 2023 | Team Udayavani |

‘ನಿಂಬಿಯಾ ಬನಾದ ಮ್ಯಾಗ’ ಶೀರ್ಷಿಕೆಯಿಂದಲೇ ಚಂದನವನದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ. ಅಶೋಕ್ ಕಡಬ ನಿರ್ದೇಶನದ ಈ ಚಿತ್ರ, ಸದ್ಯ ಟೀಸರ್ ನಿಂದ ಸಿನಿಮಾಪ್ರೇಮಿಗಳ ಗಮನ ಸೆಳೆಯುತ್ತಿದೆ. ವರಮಹಾಲಕ್ಷ್ಮಿ ಹಬ್ಬದಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿರುವ ಟೀಸರ್ ಇದೀಗ ಲಕ್ಷ ವೀವ್ಸ್ ಪಡೆದಿದೆ. ಚಿತ್ರದೊಳಗೆ ಅಡಗಿರುವ ಮನಮಿಡಿಯುವ ಕಥೆ ಮತ್ತು ಮನಮೋಹಕ ದೃಶ್ಯಗಳು ಅಭಿಮಾನಿಗಳು ನಿರೀಕ್ಷೆಯಿಂದ ಕಾಯುವಂತೆ ಮಾಡಿದೆ.

Advertisement

ವಿಶೇಷ ಅಂದರೆ ಈ ಸಿನಿಮಾಗೆ ಅಣ್ಣಾವ್ರ ಹಿರಿಯ ಪುತ್ರಿ ಲಕ್ಷ್ಮಿಯವರ ಮಗ ಷಣ್ಮುಕ ಗೋವಿಂದರಾಜ್ ಹೀರೋ. ಬಾಲ್ಯದಲ್ಲೇ ನಟನಾಗುವ ಕನಸು ಕಂಡಿದ್ದರು. ಕೊನೆಗೂ ಅವರ ಬಯಕೆ `ನಿಂಬಿಯಾ ಬನಾದ ಮ್ಯಾಗ’ ಚಿತ್ರದಿಂದ ಈಡೇರುತ್ತಿದೆ. ನಿರ್ದೇಶಕ ಅಶೋಕ್ ಕಡಬ ಅವರ ಚಿತ್ರದೊಂದಿಗೆ ಷಣ್ಮುಕ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿರುವ ಷಣ್ಮುಕ ಗೋವಿಂದರಾಜ್, ನಾಯಕನಟನಾಗಿ ಮಿಂಚಲು ಕಾತುರರಾಗಿದ್ದಾರೆ.

ಈಗಾಗಲೇ ದೊಡ್ಮನೆಯಿಂದ ವಿನಯ್ ರಾಜ್‍ಕುಮಾರ್, ಯುವರಾಜ್‍ಕುಮಾರ್, ಧೀರನ್ ರಾಮ್‍ಕುಮಾರ್, ಧನ್ಯಾ ಸೇರಿದಂತೆ ಹಲವರ ಆಗಮನವಾಗಿದೆ. ಈಗ ಷಣ್ಮುಕ ಗೋವಿಂದರಾಜ್ ಎಂಟ್ರಿಯಾಗ್ತಿದ್ದು, ಪಾತ್ರಕ್ಕಾಗಿ ಸಂಪೂರ್ಣ ತಯಾರಿ ಮಾಡಿಕೊಂಡೇ ಅಖಾಡಕ್ಕಿಳಿದಿದ್ದಾರೆ. ಅಪ್ಪು ಗಂಧದಗುಡಿಯಲ್ಲಿ ತಿಳಿಸಿದಂತೆ ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಥೆಯನ್ನು ಮೊದಲ ಚಿತ್ರದಲ್ಲೇ ಆಯ್ಕೆ ಮಾಡಿಕೊಂಡಿದ್ದಾರೆ.

‘ನಿಂಬಿಯಾ ಬನಾದ ಮ್ಯಾಗ’ ತಂದೆ ಮತ್ತು ಮಗನ ಬಾಂಧವ್ಯ ಕುರಿತಾದ ಕಥೆ ಇರಬಹುದಾ? ಹೀಗೊಂದು ಕುತೂಹಲ ಟೀಸರ್ ನೋಡುಗರಲ್ಲಿ ಹುಟ್ಟಿಕೊಂಡಿದೆ. ಬರೋಬ್ಬರಿ 25 ವರ್ಷಗಳ ನಂತರ ಹುಟ್ಟೂರು ಬೆಂಗಾಡಿಗೆ ಮರಳುವ ತಂದೆ-ಮಗನ ದೃಶ್ಯಗಳನ್ನ ಹರವಿಟ್ಟಿರುವ ನಿರ್ದೇಶಕ ಅಶೋಕ್ ಕಡಬ ಕುತೂಹಲ ಕೆರಳಿಸಿದ್ದಾರೆ. ಸುಂದರ ಮಲೆನಾಡಿನ ಸೊಬಗನ್ನು, ಪ್ರಕೃತಿಯ ಸೌಂದರ್ಯವನ್ನು ಅದ್ಭುತವಾಗಿ ತೆರೆಮೇಲೆ ಕಟ್ಟಿಕೊಡುವ ಭರವಸೆ ಮೂಡಿಸಿದ್ದಾರೆ. ಇಲ್ಲಿವರೆಗೂ ಸದಭಿರುಚಿಯ ಸಿನಿಮಾಗಳನ್ನೇ ಪ್ರೇಕ್ಷಕರಿಗೆ ಉಣಬಡಿಸುತ್ತಾ ಬಂದಿರೋ ನಿರ್ದೇಶಕ ಅಶೋಕ್ ಕಡಬ, ಈಗಲೂ ಅಂತಹದ್ದೇ ಅದ್ಭುತ ಕಥೆಯ ಮೂಲಕ ಕನ್ನಡ ಕಲಾಭಿಮಾನಿಗಳನ್ನು ಎದುರುಗೊಳ್ಳಲು ತಯ್ಯಾರಾಗುತ್ತಿದ್ದಾರೆ. ಸದ್ಯ ಟೀಸರ್ ನಿಂದಲೇ ಸಿನಿಮಾ ಪ್ರೇಮಿಗಳಿಂದ ಸೈ ಎನಿಸಿಕೊಂಡಿದ್ದಾರೆ. ದೊಡ್ಮನೆಯ ಕಲಾವಿದರು ಅಶೋಕ್ ಕಡಬ ಕೈಚಳಕ ಮೆಚ್ಚಿಕೊಂಡಿದ್ದಾರೆ.

Advertisement

ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಶೇಕಡಾ ನಲವತ್ತರಷ್ಟು ಪೂರ್ಣಗೊಂಡಿದೆ. ಹೆಚ್ಚಿನ ಭಾಗ ಮಲೆನಾಡಿನಲ್ಲಿಯೇ ಚಿತ್ರೀಕರಿಸಿರುವ ಚಿತ್ರತಂಡ ಶೃಂಗೇರಿ, ಹೊರನಾಡಿನ ಸುತ್ತಮುತ್ತ ಶೂಟಿಂಗ್ ಮಾಡಲು ತಯಾರಾಗುತ್ತಿದ್ದಾರೆ. ಸದ್ಯ, ಅಶೋಕ್ ಅವರು `ಸತ್ಯಂ’ ಎಂಬ ಅಪ್ಪಟ ಕಮರ್ಶಿಯಲ್ ಧಾಟಿಯ ಸಿನಿಮಾವೊಂದನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರೂಪುಗೊಂಡಿರುವ ಈ ಬಿಗ್ ಬಜೆಟ್ಟಿನ ಚಿತ್ರ ಬಿಡುಗಡೆಗೆ ತಯಾರಾಗಿ ನಿಂತಿದೆ. ಅದು ತೆರೆಗಂಡ ಬಳಿಕ `ನಿಂಬಿಯಾ ಬನಾದ ಮ್ಯಾಗ’ ಮೂರನೇ ಹಂತದ ಚಿತ್ರೀಕರಣ ಶುರುವಾಗಲಿದೆ.

ಎಮ್.ಜಿ.ಪಿ.ಎಕ್ಸ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ವಿ. ಮಾದೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇಲ್ಲಿ ಘಟಾನುಘಟಿ ಕಲಾವಿದರ ದಂಡು ಶಣ್ಮುಖರಿಗೆ ಸಾಥ್ ಕೊಟ್ಟಿದೆ. ಹಿರಿಯ ನಟ ರಾಮಕೃಷ್ಣ, ಉಮೇಶ್, ಶಶಿಧರ್ ಕೋಟೆ, ನಟಿ ಭವ್ಯಾ, ಹಿರಿಯ ನಿರ್ದೇಶಕ ಎಸ್.ನಾರಾಯಣ್ ಪುತ್ರ ಪಂಕಜ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಟರೊಬ್ಬರು ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅವರ್ಯಾರೆಂಬುದೂ ಇಷ್ಟರಲ್ಲಿಯೇ ಬಯಲಾಗಲಿದೆ. ಆರನ್ ಕಾರ್ತಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದರ ಆಡಿಯೋವನ್ನು ಎ2 ಮ್ಯೂಸಿಕ್ ಸಂಸ್ಥೆ ಈಗಾಗಲೇ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಅಶಿ, ಕೇಶವ್ ಮತ್ತು ಸಿದ್ದು ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next