Advertisement

ಭಾರತದ ಕೀರ್ತಿ ಪತಾಕೆ ಹಾರಿಸಿದ ಹೆಮ್ಮೆಯ ಹಿಮಾದಾಸ್‌

08:43 PM Apr 18, 2021 | Team Udayavani |

ಮಹಿಳೆ ಕೇವಲ ನಾಲ್ಕು ಗೋಡೆಯ ಒಳಗೆ ಮಾತ್ರ ಸೀಮಿತವಾಗಿರಬೇಕು ಎನ್ನುವ ದಿನಗಳು ಕಳೆದು ಹೋದವು. ಆ ಗೋಡೆಗಳನ್ನು ಭೇದಿಸಿ ಹೊರ ಬಂದ ಸ್ತ್ರೀ ಇಂದು ತಾನು ಅಬಲೆಯಲ್ಲ ಸಬಲೆ ಎಂಬುದನ್ನು ನಿರೂಪಿಸುತ್ತಿದ್ದಾಳೆ.

Advertisement

ಮಹಿಳೆಯರು ಕಲೆ, ಸಾಹಿತ್ಯ, ರಾಜಕೀಯ, ಆರ್ಥಿಕ, ಕ್ರೀಡೆ ಇತ್ಯಾದಿ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ತಮ್ಮ ಅಭಿಪ್ರಾಯ, ಅಭಿವ್ಯಕ್ತಿಗಳನ್ನು ಹಲವು ಮಾಧ್ಯಮಗಳ ಮೂಲಕ ವ್ಯಕ್ತಪಡಿಸಿದ್ದಾರೆ.  ಈ ಮಹಿಳಾ ಸಾಧಕರ ಪಟ್ಟಿಯಲ್ಲಿ ಗುರುತಿಸಿಕೊಂಡ ಹಲವರಲ್ಲಿ “ಭಾರತದ ಹೆಮ್ಮೆಯ ಪುತ್ರಿ’ ಹಿಮಾ ದಾಸ್‌ ಕೂಡ ಒಬ್ಬರು…2021ನೇ ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಧಾನಿ ಮೋದಿ ಭಾರತದ ಪ್ರಮುಖ 10 ಮಹಿಳಾ ಸಾಧಕರನ್ನು ಅಭಿನಂದಿಸಿದರು. ಈ ಹತ್ತು ಮಂದಿಯಲ್ಲಿ ಹಿಮಾ ದಾಸ್‌ ಕೂಡಾ ಸೇರಿದ್ದರು ಎಂಬುದು ಉಲ್ಲೇಖನೀಯ.

ಧಿಂಗ್‌ ಎಕ್ಸ್‌ಪ್ರೆಸ್‌ ಎಂದು ಖ್ಯಾತಿ ಪಡೆದ ಹಿಮಾ ವಿಶ್ವ ಜೂನಿಯರ್‌ಆ್ಯತ್ಲೆೆಟಿಕ್‌ ಕ್ರೀಡಾ ಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಪಡೆದ ಕ್ರೀಡಾಪಟು. ತನ್ನ 18ನೇ ವಯಸ್ಸಿನಲ್ಲಿ ಅಂಡರ್‌ 20 ಮಹಿಳೆಯರ 400 ಮೀಟರ್‌ ಓಟವನ್ನು 51.46 ಸೆಕೆಂಡ್‌ನ‌ಲ್ಲಿ ಕ್ರಮಿಸಿದ್ದರು.

ಮೂಲತಃ ಇವರು ಅಸ್ಸಾಂ ರಾಜ್ಯದ ನಾಗೋನ್‌ ಜಿಲ್ಲೆಯವರು. ಜನವರಿ 9, 2000ದಲ್ಲಿ ರೈತ ಕುಟುಂಬದಲ್ಲಿ ಜನಿಸಿದರು. ಈಕೆ ತನ್ನ ಪ್ರಯತ್ನ ಹಾಗೂ ಹೆತ್ತವರ ಪ್ರೋತ್ಸಾಹದಿಂದ ವಿಶ್ವವೇ ಗುರುತಿಸಿಕೊಂಡ ಆ್ಯತ್ಲೆಟಿಕ್‌ ಆಗಿದ್ದಾರೆ. ಕೃಷಿಕನಾದ ಅಪ್ಪನ ಗದ್ದೆಯ ಹಾದಿಗಳು ಈಕೆಯ ಓಟದ ಮೊದಲ ಟ್ರ್ಯಾಕ್‌ಗಳಾಗಿದ್ದವು. ಕೃಷಿ ಕೆಲಸ ಅಥವಾ ಬಡತನ ಈಕೆಯ ಬಾಳಿಗೆ ಕತ್ತಲಾಗಲಿಲ್ಲ. ಸತತ ಪ್ರಯತ್ನ, ಹಾಗೂ ಆತ್ಮವಿಶ್ವಾಸವ ಈಕೆಯ ಕೈ ಬಿಡಲಿಲ್ಲ. ಅವುಗಳೇ ಮುಂದೆ ಆಕೆಯ ಬದುಕಿನ ಬೆಳಕಿನ ಹಾದಿಗಳಾದವು.

Advertisement

ನ್ಪೋರ್ಟ್ಸ್ ಶೂಗೆ ಹಾತೊರೆಯುತ್ತಿದ್ದ ಹುಡುಗಿ ಬ್ರ್ಯಾಂಡ್‌ ಅಂಬಾಸಿಡರ್‌ ಆದ ಕಥೆ
ಓಟಗಾರನಿಗೆ ನ್ಪೋರ್ಟ್ಸ್ ಶೂ ಅತೀ ಅಗತ್ಯ. ಆದರೆ ಕಾಲಿಗೆ ಶೂ ಇಲ್ಲದೆ ಹಿಮಾ ದಾಸ್‌ ಅನೇಕ ಬಾರಿ ಟ್ರ್ಯಾಕ್‌ನಲ್ಲಿ ಓಡಿದ್ದಾರೆ. ಆ ಬಡತನದ ಓಟ ಅವರನ್ನು ತಂದು ನಿಲ್ಲಿಸಿದ್ದು ಅಡಿದಾಸ್‌ ಕಂಪೆನಿಯ ಭಾರತದ ಬ್ರ್ಯಾಂಡ್‌ ಅಂಬಾಸಿಡರ್‌ ಆಗುವಲ್ಲಿಯವರೆಗೆ. ಜೂನಿಯರ್‌ ಆ್ಯತ್ಲೆಟಿಕ್‌ ಕ್ರೀಡಾ ಕೂಟದಲ್ಲಿ ಚಿನ್ನ ಪಡೆದಾಗ ಅವರ ಕಥೆ ಕೇಳಿದ ಅಡಿದಾಸ್‌ ಕಂಪೆನಿ ಅವರನ್ನು ಭಾರತದ ತನ್ನ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಘೋಷಿಸಿತು.

ಅಂತರ್‌ ಜಿಲ್ಲಾ ಕ್ರೀಡಾ ಮತ್ತು ಯುವಜನ ಕಲ್ಯಾಣ ನಿರ್ದೇಶನಾಲಯದ ಕ್ರೀಡಾಪಟು ನಿಪಾನ್‌ ದಾಸ್‌ ಈಕೆಯ ಆರಂಭದ ತರಬೇತುದಾರರಾಗಿದ್ದಾರೆ. ಫ‌ುಟ್ಬಾಲ್‌ ಮೂಲಕ ಕ್ರೀಡಾ ರಂಗಕ್ಕೆ ಪಾದಾರ್ಪಣೆ ಮಾಡಿದ ಹಿಮಾದಾಸ್‌ ಇಂದು ದೇಶ ವಿದೇಶ ಅಭಿನಂದಿಸುವ ಆ್ಯತ್ಲೆಟಿಕ್‌. ಏಷ್ಯಾ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತೆ ಕೂಡ ಆಗಿದ್ದಾರೆ. 2018 ರಲ್ಲಿ ಕಾಮನ್‌ವೆಲ್ತ್.

ಕ್ರೀಡಾಕೂಟದಲ್ಲಿ 400 ಮೀಟರ್‌ ಮತ್ತು 4×400 ಮೀಟರ್‌ ರಿಲೇಯಲ್ಲಿ 51.32 ಸೆಕಂಡ್‌ಗಳಲ್ಲಿ 6 ನೇ ಸ್ಥಾನ ಪಡೆದಿದ್ದಾರೆ. ರಾಜ್ಯ ಅಕಾಡೆಮಿಗೆ ಸೇರಿದ ಬಳಿಕ ಬಾಕ್ಸಿಂಗ್‌ನಲ್ಲಿ ಈಕೆ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ ತನ್ನ ಪರಿಣತಿಯನ್ನು ತೋರಿಸಿದ್ದಾಳೆ. ಇವರ ಕ್ರೀಡಾ ಸಾಧನೆಯನ್ನು ಗುರುತಿಸಿದ ಅಸ್ಸಾಂ ಸರಕಾರ ವು ಈಕೆಯನ್ನು ಪೊಲೀಸ್‌ ಇಲಾಖೆಯ ಉಪ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನೇಮಿಸಿದೆ. ಹಿಮಾ ದಾಸ್‌ ಅವರ ಸಾಧನೆಯು ಎಲ್ಲರಿಗೂ ಸ್ಫೂರ್ತಿದಾಯಕ.

ಹೆಣ್ಣಿನ ಸಾಧನೆಯನ್ನು ಮಹಿಳಾ ದಿನಾಚರಣೆಯ ಸಂದರ್ಭಗಳಲ್ಲಿ ನೆನಪಿಸಿಕೊಳ್ಳುವುದು ಸಮಂಜಸ. ಆದರೆ ಇದು ಈ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ನಿರಂತರ ಪ್ರೋತ್ಸಾಹದಿಂದ ಉನ್ನತ ಪ್ರತಿಭೆಗಳು ಬೆಳಗುತ್ತವೆ ಎನ್ನುವುದಕ್ಕೆ ಹಿಮಾದಾಸ್‌ ಉದಾರಣೆ.

ಛಲ, ಆತ್ಮವಿಶ್ವಾಸ, ಪ್ರಯತ್ನ ಇವುಗಳು ತಮ್ಮ ಬದುಕಿನಲ್ಲಿದ್ದರೆ ಗೆಲುವು ಕಟ್ಟಿಟ್ಟ ಬುತ್ತಿ. ನನ್ನಿಂದ ಆಗದು ಎಂಬುದು ಅನಿಸಿಕೆ ಅಷ್ಟೆ. ಮಾಡುವ ಕೆಲಸದಲ್ಲಿ ಪ್ರೀತಿ, ಶ್ರದ್ಧೆ ಮುಖ್ಯವಾಗಬೇಕು. ಇವು ಇದ್ದರೆ ಛಲ ಪ್ರಯತ್ನ ತಾವಾಗಿಯೇ ಬಂದು ಬಿಡುತ್ತವೆ. ಅಬ್ದುಲ್‌ ಕಲಾಂ ಅವರ ಸ್ಫೂರ್ತಿ ಸಂದೇಶದ ಮಾತುಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. “ನಮಗೆಲ್ಲರಿಗೂ ಸಮಾನ ಪ್ರತಿಭೆಗಳು ಇಲ್ಲ. ಆದರೆ ನಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ನಮಗೆಲ್ಲರಿಗೂ ಸಮಾನ ಅವಕಾಶವಿದೆ. ನಮಗೆ ದೊರೆತ ಅವಕಾಶವನ್ನು ಬಳಸಿಕೊಂಡರೆ ಮುಂದಿನ ದಿನಗಳಲ್ಲಿ ನಮ್ಮಲ್ಲೂ ಹಲವರು ಭಾರತದ ಹೆಮ್ಮೆಯ ಪ್ರಜೆಗಳು ಆಗಲು ಸಾಧ್ಯ. ಹಾಗೂ ಕೀರ್ತಿ ಪತಾಕೆಯನ್ನು ಆಕಾಶದೆತ್ತರದಲಿ ಹಾರಿಸಲು ಖಂಡಿತ ಸಾಧ್ಯ’.


-ಅನುರಾಧಾ ಕಲ್ಲಂಗೋಡ್ಲು, ಕೆಯುಟಿಇಸಿ, ಚಾಲ, ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next