Advertisement

ಕಲೆಗಿದೆ ಬದುಕು ಬದಲಿಸುವ ಶಕ್ತಿ: ಬೀಳಗಿ

02:15 PM Apr 18, 2022 | Team Udayavani |

ದಾವಣಗೆರೆ: ಕಲೆಗೆ ಆತ್ಮವಿಶ್ವಾಸ ಮೂಡಿಸುವ, ಬದುಕಿನ ದಿಕ್ಕನ್ನೇ ಆಮೂಲಾಗ್ರವಾಗಿ ಬದಲಾಯಿಸುವ ಶಕ್ತಿ ಇದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಹೇಳಿದರು.

Advertisement

ಚಿತ್ರಕಲಾ ಪರಿಷತ್‌ನಿಂದ ಭಾನುವಾರ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ರಸ್ತೆಯಲ್ಲಿ ಏರ್ಪಡಿಸಿದ್ದ ಚಿತ್ರಸಂತೆ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಕಲೆ ಅನೇಕರ ಬದುಕು ಬದಲಾವಣೆ ಮಾಡಿರುವ ಉದಾಹರಣೆ ನಮ್ಮ ಮುಂದೆ ಇವೆ ಎಂದರು.

ಜನಸಾಮಾನ್ಯರ ಗಮನಕ್ಕೆ ಬರದೇ ಇರುವಂತಹ ಅನೇಕ ವಿಷಯಗಳು ಕಲಾವಿದರ ಗಮನಕ್ಕೆ ಬರುತ್ತವೆ. ಕಲೆಯ ಮೂಲಕ ಆ ವಿಷಯವನ್ನು ಸಮಾಜಕ್ಕೆ ತೋರಿಸಿಕೊಡುತ್ತಾರೆ. ಲಲಿತ ಕಲಾ ವಿಭಾಗದಲ್ಲಿ ಚಿತ್ರಕಲೆ ಅತಿ ವಿಶೇಷವಾದುದು. ಅಂತಹ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಉದ್ದೇಶದಿಂದ ದಾವಣಗೆರೆಯಲ್ಲಿ ಚಿತ್ರಕಲಾ ಪರಿಷತ್ತು ಚಿತ್ರಸಂತೆ ಹಮ್ಮಿಕೊಂಡಿರುವುದು ಒಳ್ಳೆಯ ಕಾರ್ಯ. ಜಿಲ್ಲೆ, ಹೊರ ಜಿಲ್ಲೆ, ರಾಜ್ಯಗಳ ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿದ್ದಾರೆ. 150ಕ್ಕೂ ಹೆಚ್ಚು ಕಲಾವಿದರ ಸುಂದರ ಚಿತ್ರಗಳ ಪ್ರದರ್ಶನ ಇದೆ. ಸಾರ್ವಜನಿಕರು ಚಿತ್ರಗಳನ್ನು ವೀಕ್ಷಿಸುವ ಜೊತೆಗೆ ಖರೀದಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ದೆಹಲಿ, ಮುಂಬಯಿ ಇತರೆ ಮೆಟ್ರೋಪಾಲಿಟಿನ್‌ ನಗರಗಳಲ್ಲಿ ಮಾತ್ರ ನಡೆಯುವ ಚಿತ್ರಸಂತೆಯನ್ನು ನಾವು ದಾವಣಗೆರೆಯವರು ಸಹ ಮಾಡಬಲ್ಲೆವು ಎಂದು ಮಾಡಿ ತೋರಿಸಿದ್ದಾರೆ. ಈ ಚಿತ್ರಸಂತೆ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗದೆ ಮುಂದೆ ಎಲ್ಲ ವರ್ಷವೂ ಅತ್ಯಂತ ಯಶಸ್ವಿಯಾಗಿ ನಡೆಸಬೇಕು ಎಂದರು.

ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್‌ ಮಾತನಾಡಿ, ರಾಜ್ಯದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಪ್ರಪ್ರಥಮ ಬಾರಿಗೆ ಚಿತ್ರಸಂತೆ ನಡೆಸುತ್ತಿರುವುದು ನಿಜಕ್ಕೂ ಅದ್ಬುತ ಪರಿಕಲ್ಪನೆ. ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆ ದಾವಣಗೆರೆಯಲ್ಲಿ ನಡೆಸುವುದಕ್ಕೆ ಚಿತ್ರಕಲಾ ಪರಿಷತ್‌ನವರು ಬಹಳ ಮುತುವರ್ಜಿಯಿಂದ ಆಯೋಜಿಸಿದ್ದಾರೆ. ಬೇರೆಡೆಯ ಅನೇಕ ಕಲಾವಿದರು ದಾವಣಗೆರೆಗೆ ಬಂದು ಭಾಗವಹಿಸಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಕೆ ನೀಡಲು ಚಿತ್ರಸಂತೆ ಚಿತ್ರಗಳನ್ನು ಖರೀದಿಸಬೇಕು ಎಂದು ಮನವಿ ಮಾಡಿದರು.

Advertisement

ಜಿ.ಎಂ.ಐ.ಟಿ ತಾಂತ್ರಿಕ ಮಹಾವಿದ್ಯಾಲಯದ ಜಿ.ಎಂ. ಲಿಂಗರಾಜ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚಿತ್ರಕಲೆಗೆ ಹೆಚ್ಚಿನ ಪ್ರೋತ್ಸಾಹ ಕಂಡು ಬರುತ್ತಿಲ್ಲ. ಮೊಬೈಲ್‌, ಟಿವಿ, ವಾಟ್ಸ್‌ಆ್ಯಪ್‌ ಹಾವಳಿಯಲ್ಲಿ ಚಿತ್ರಕಲೆ ಮತ್ತು ಕಲಾವಿದರು ಪ್ರೋತ್ಸಾಹದಿಂದ ದೂರವೇ ಉಳಿದಿದ್ದಾರೆ. ದಾವಣಗೆರೆಯಲ್ಲಿ ಚಿತ್ರಸಂತೆ ನಡೆಸುತ್ತಿರುವುದು ಸಂತೋಷದ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ತೇಜಸ್ವಿ ಪಟೇಲ್‌ ಮಾತನಾಡಿ, ಚಿತ್ರಕಲೆ, ಶಾಸ್ತ್ರೀಯ ಸಂಗೀತ, ಕಲಾವಿದರು ಸದಾ ವಿಭಿನ್ನ, ವಿಶಿಷ್ಟ ಆಲೋಚನೆ ಹೊಂದಿದವರು. ದಾವಣಗೆರೆ ಜಿಲ್ಲೆ ಅಸ್ತಿತ್ವಕ್ಕೆ ಬರಲು ಕಾರಣವಾಗಿರುವ ರಾಜ್ಯ ಕಂಡ ಮುತ್ಸದಿ ಜೆ.ಎಚ್. ಪಟೇಲ್‌ ಹೆಸರಿನ ವೇದಿಕೆಯಲ್ಲಿ ಚಿತ್ರಸಂತೆ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ. ಜೆ.ಎಚ್. ಪಟೇಲ್‌ ಹೆಸರಿನಿಂದ ಲಾಭ ಇರದಿದ್ದರೂ ಅವರ ಹೆಸರಿನಲ್ಲಿ ಚಿತ್ರಕಲೆಗೆ ಪ್ರೋತ್ಸಾಹ ನೀಡುವ ಚಿತ್ರಸಂತೆ ಇನ್ನೂ ಹೆಚ್ಚಿನ ಯಶ ಕಾಣಲಿ ಎಂದು ಸಂತಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಚಿತ್ರಕಲಾ ಪರಿಷತ್‌ನ ಬಿ.ಜಿ. ಅಜಯ್‌ ಕುಮಾರ್‌, ನಾನು ಕಲಾವಿದನಲ್ಲ. ಅನೇಕರು ಚಿತ್ರಕಲೆ ಮತ್ತು ಕಲಾವಿದರ ಬಗ್ಗೆ ತಿಳಿಸಿದಾಗ ದಾವಣಗೆರೆಯಲ್ಲೂ ಬೆಂಗಳೂರು ಮಾದರಿಯಲ್ಲಿ ಚಿತ್ರಸಂತೆ ನಡೆಸಬೇಕು ಎಂದು ತೀರ್ಮಾನಿಸಿ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಚಿತ್ರಸಂತೆ ಆಯೋಜಿಸಿದ್ದೇವೆ. ಸಸ್ತಾಮಾಲ್‌ ಬಡಾಪನ್‌… ಎಂಬ ಮಾತಿನಂತೆ ಒಳ್ಳೆಯ ಚಿತ್ರ, ಕಲಾಕೃತಿಗಳಿವೆ. ಕೊಳ್ಳುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಯಾವುದೇ ಕಾರಣಕ್ಕೂ ದಾವಣಗೆರೆಯ ಚಿತ್ರಸಂತೆ ನಿಲ್ಲುವುದೇ ಇಲ್ಲ ಎಂದರು.

ಮೇಯರ್‌ ಜಯಮ್ಮ ಗೋಪಿನಾಯ್ಕ, ಚಿತ್ರಕಲಾ ಪರಿಷತ್‌ ಕಾರ್ಯದರ್ಶಿ ಡಿ. ಶೇಷಾಚಲ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯಕುಮಾರ್‌, ರವಿ ಹುದ್ದಾರ್‌, ಕಿರಣ್‌ ಕುಮಾರ್‌, ಭರತ್‌, ಅಶೋಕ್‌ ಗೋಪನಹಳ್ಳಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next