Advertisement

ಗ್ರಾಮೀಣ ಪ್ರದೇಶಕ್ಕೆ ಕಲಾಸ್ಪರ್ಶ ನೀಡಿದ ಆರ್ಟ್‌ ಗ್ಯಾಲರಿ

06:00 AM Jun 01, 2018 | Team Udayavani |

ಸಾಮಾನ್ಯವಾಗಿ ಪ್ರದರ್ಶನ ಮತ್ತು ಮಾರಾಟದ ದೃಷ್ಟಿಯಿಂದ ಕಲಾಚಟುವಟಿಕೆಗಳ ಇತಿಮಿತಿ ಪಟ್ಟಣ ಪ್ರದೇಶಕ್ಕೆ ಸೀಮಿವಾಗಿರುತ್ತದೆ. ಏಕೆಂದರೆ ಅಲ್ಲಿ ಉತ್ತಮ ಮಟ್ಟದ ಆರ್ಟ್‌ಗ್ಯಾಲರಿಗಳಿರುತ್ತವೆ. ಪ್ರದರ್ಶನದ ವ್ಯವಸ್ಥೆ ಮಾಡಲು, ಕಲಾಕೃತಿಗಳ ಸಾಗಾಟ ನಡೆಸಲು, ಉದ್ಘಾಟನಾ ಸಮಾರಂಭ ನಡೆಸಲು, ಪ್ರಚಾರ ಕೊಡಲು, ಕಲಾಭಿಮಾನಿಗಳನ್ನು ಸೆಳೆಯಲು… ಹೀಗೆ ಎಲ್ಲದಕ್ಕೂ ಅನುಕೂಲ ಎಂಬ ದೃಷ್ಟಿಯಿಂದ ಕಲಾವಿದರೂ ಪಟ್ಟಣ ಪ್ರದೇಶದಲ್ಲಿಯೇ ಕಲಾಪ್ರದರ್ಶನ ನಡೆಸುತ್ತಾರೆ. ಆರ್ಟ್‌ಗ್ಯಾಲರಿಗಳೂ ಪಟ್ಟಣಗಳಲ್ಲಿಯೇ ಸಾಕಷ್ಟಿರುತ್ತವೆ. ಅಲ್ಲೊಂದು ಇಲ್ಲೊಂದು ಎಂಬಂತೆ ಕೆಲವು ಆರ್ಟ್‌ಗ್ಯಾಲರಿಗಳು ಗ್ರಾಮೀಣ ಪ್ರದೇಶದಲ್ಲಿವೆ. ಆರ್ಥಿಕ ಲಾಭದ ದೃಷ್ಟಿಯಿಂದ ಇವು ಪ್ರಯೋಜನಕ್ಕೆ ಬರುವುದಿಲ್ಲ. ಕಲಾಕ್ಷೇತ್ರಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ಹಂಬಲ ಇರುವವರಿಗೆ ಮಾತ್ರ ಇದನ್ನು ನಡೆಸಲು ಸಾಧ್ಯ. ಅಂತಹುದರಲ್ಲಿ ಉಡುಪಿ ಬಂಟಕಲ್ಲಿನಲ್ಲಿರುವ ಪ್ರಣವ್‌ ಆರ್ಟ್‌ಗ್ಯಾಲರಿ ಒಂದಾಗಿದೆ. 


ಉಡುಪಿಯಿಂದ ಮಂಚಕಲ್‌ ದಾರಿಯಾಗಿ ಕಾರ್ಕಳಕ್ಕೆ ಸಾಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಪ್ರಶಾಂತ ವಾತಾವರಣ ಹೊಂದಿರುವ ಪುಟ್ಟ ಪ್ರದೇಶ ಬಂಟಕಲ್‌. ಕೆಲವು ಅಂಗಡಿಗಳನ್ನು ಹೊರತುಪಡಿಸಿದರೆ ಕಲಾತ್ಮಕ ದೃಷ್ಟಿಯಿಂದ ಅಷ್ಟೇನೂ ಬೆಳವಣಿಗೆ ಹೊಂದಿದ ಪ್ರದೇಶವಲ್ಲ. ಇಲ್ಲಿನವರೇ ಆಗಿರುವ ರಮೇಶ್‌ ಬಂಟಕಲ್‌ ತನ್ನೂರಿನಲ್ಲಿ ಒಂದು ಆರ್ಟ್‌ಗ್ಯಾಲರಿಯನ್ನು ತೆರೆದರೆ ಹೇಗೆ ಎಂದು ಚಿಂತಿಸಿ ಪ್ರಣವ್‌ ಆರ್ಟ್‌ಗ್ಯಾಲರಿಯನ್ನು ತೆರೆದರು. ಬೆಳೆಯುತ್ತಿರುವ ಯುವ ಕಲಾವಿದರಿಗೆ ಹಾಗೂ ಸಣ್ಣ ಮಟ್ಟಿನ ಕಲಾಪ್ರದರ್ಶನ ನಡೆಸುವವರಿಗೆ ಈ ಗ್ಯಾಲರಿ ಸೂಕ್ತವಾಗಿದೆ. ಈಗಾಗಲೇ ಅಲ್ಲಿ ರಮೇಶ್‌ ಬಂಟಕಲ್‌ ಮತ್ತಿತರ ಕಲಾವಿದರ ಕಲಾಕೃತಿಗಳು ಇಲ್ಲಿ ರಾರಾಜಿಸುತ್ತಿವೆ.


ಕಲೆ-ಕಲಾವಿದ-ಕಲಾಪ್ರದರ್ಶನ-ಕಲಾಸಂಸ್ಥೆ ಯಾವುದೇ ಇರಲಿ ಅದು ಗ್ರಾಮೀಣ ಪ್ರದೇಶದೆಡೆಗೆ ತನ್ನ ಚಟುವಟಿಕೆಗಳನ್ನು ವಿಸ್ತರಿಸಿದಾಗ ನಾಡಿನ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಗಮನಿಸುವಾಗ ಗ್ರಾಮೀಣ ಪ್ರದೇಶಕ್ಕೆ ತೀರಾ ಆಧುನಿಕ ಕಲ್ಪನೆಯ ಕಲಾಪ್ರದರ್ಶನ ಹಿತವೆನಿಸುವುದಿಲ್ಲ. ಇಲ್ಲಿ ಹಳೆ ಬೇರಿನೊಂದಿಗೆ ಹೊಸ ಚಿಗುರೂ ಬೇಕು. ಪ್ರಕೃತಿ ದೃಶ್ಯ ಚಿತ್ರ, ಸಾಂಪ್ರದಾಯಿಕ, ನೈಜ ಚಿತ್ರ ಕಲಾಕೃತಿಗಳೊಂದಿಗೆ ಒಂದಿಷ್ಟು ನವ್ಯ ದೃಷ್ಟಿಕೋನದ ಕಲಾಕೃತಿಗಳಿದ್ದರೆ ಇಲ್ಲಿ ಕಲಾಪ್ರದರ್ಶನ ಗೆಲ್ಲುತ್ತದೆ. ಈ ಆರ್ಟ್‌ಗ್ಯಾಲರಿಯಲ್ಲಿ ನಿರಂತರ ಕಲಾಪ್ರದರ್ಶನಗಳು ನಡೆದಾಗ ಗ್ರಾಮೀಣ ಜನತೆಯಲ್ಲೂ ಕಲಾಭಿರುಚಿ ಹೆಚ್ಚಬಲ್ಲುದು. 

Advertisement

ಉಪಾಧ್ಯಾಯ ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.

Next