Advertisement

ಬೆಂಗಳೂರು ಸೇರಿ ಎಲ್ಲೆಡೆ ಕಟ್ಟೆಚ್ಚರ

12:30 AM Feb 28, 2019 | |

ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳ ಮೇಲೆ ದಾಳಿ ನಡೆದ ಕಾರಣ ನೆರೆಯ ರಾಷ್ಟ್ರ ಮರು ದಾಳಿ ನಡೆಸುವ ನಿರೀಕ್ಷೆ ಹೆಚ್ಚಿರುವುದರಿಂದ ದೆಹಲಿ, ಬೆಂಗಳೂರು, ಮುಂಬೈ ಸೇರಿದಂತೆ ಇತರ ಐದು ಮಹಾನಗರಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಇಂಥ ದಾಳಿಗಳು ಪಾಕಿಸ್ತಾನ ಸೇನೆಯಿಂದ ಮಾತ್ರವಲ್ಲ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ವ್ಯಸ್ತವಾಗಿರಬಹುದಾದ ಪಾಕಿಸ್ತಾನ ಬೆಂಬಲಿತ ಯಾವುದೇ ಉಗ್ರ ಸಂಘಟನೆಯ ಸದಸ್ಯರಿಂದಲೂ ಆಗಬಹುದಾದ್ದರಿಂದ ಎಲ್ಲೆಡೆಯೂ ಕಟ್ಟೆಚ್ಚರ ಕೈಗೊಳ್ಳುವಂತೆ ಸೂಚಿಸಲಾಗಿದೆ.  

Advertisement

ಈ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌,  ಹಿರಿಯ ಅಧಿಕಾರಿಗಳೊಡನೆ ಕೈಗೊಳ್ಳಬಹುದಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.  ದೇಶದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿರುವ ಪರಮಾಣು ಕೇಂದ್ರಗಳು, ವಿಮಾನ ನಿಲ್ದಾಣಗಳು, ವಾಯು, ನೌಕೆ ಮತ್ತು ಸೇನಾ ನೆಲೆಗಳು, ವಿವಿಧ ಪಟ್ಟಗಳಲ್ಲಿರುವ ದಂಡು ಪ್ರದೇಶಗಳಲ್ಲಿ ಬಿಗಿಭದ್ರತೆ ಹೆಚ್ಚಿಸಲು ಸೂಚಿಸಲಾಗಿದೆ. ಪಂಬಾಜ್‌ನ ಐದು ಜಿಲ್ಲೆಗಳಾದ ಗುರುದಾಸ್ಪುರ, ತಾರ್ನ್ ತರಣ್‌, ಅಮೃತಸರ, ಫಿರೋಝೆಪುರ್‌ ಹಾಗೂ ಫಾಝಿಲ್ಕಾ ಜಿಲ್ಲೆಗಳ 553 ಕಿ.ಮೀ. ದೂರದ ಪಾರ್ಶ್ವವು ಪಾಕಿಸ್ತಾನ ಗಡಿಯೊಂದಿಗೆ ಹೊಂದಿಕೊಂಡಿರುವುದರಿಂದ ಆ ಜಿಲ್ಲೆಗಳ ಭದ್ರತೆಗೆ ವಿಶೇಷ ಗಮನ ನೀಡುವಂತೆ ಸೂಚಿಸಲಾಗಿದೆ. 

ರಾಜಸ್ಥಾನ ಸಹ 1,048 ಕಿ.ಮೀ. ದೂರದ ಭೂಭಾಗವನ್ನು ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯೊಂದಿಗೆ ಹಂಚಿಕೊಂಡಿ ರುವುದರಿಂದ ಆ ಭಾಗದಲ್ಲಿ ಸಂಜೆ 6ರಿಂದ 7ರವರೆಗೆ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಏಪ್ರಿಲ್‌ ಮೊದಲ ವಾರದವರೆಗೆ ಈ ನಿಷೇಧ ಮುಂದುವರಿಯಲಿದೆ. 

ಶಟ್‌ಡೌನ್‌ ಆದೇಶ ಹಿಂಪಡೆತ    
ಪಾಕಿಸ್ತಾನದ ಗಡಿಗೆ ಸಮೀಪವಿರುವ ರಾಜ್ಯಗಳಾದ ಜಮ್ಮು ಕಾಶ್ಮೀರ, ಪಂಜಾಬ್‌ ಮತ್ತು ಹಿಮಾಚಲ ಪ್ರದೇಶಗಳಲ್ಲಿರುವ ಒಂಭತ್ತು ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಕೇಂದ್ರ ಸರ್ಕಾರ, ಬುಧವಾರ ಬೆಳಗ್ಗೆ ಆದೇಶ ಹೊರಡಿಸಿತ್ತು. ಇದರಿಂದಾಗಿ, ಅಮೃತಸರ, ಜಮ್ಮು, ಶ್ರೀನಗರ ಹಾಗೂ ಲೇಹ್‌ ಮುಂತಾದೆಡೆ ಪ್ರಯಾಣಿಕರು ಪರದಾಡಿದರು. ಆದರೆ, ಮಧ್ಯಾಹ್ನದ ಹೊತ್ತಿಗೆ ಆದೇಶವನ್ನು ಹಿಂಪಡೆಯಲಾಯಿತು. ಇದರಿಂದಾಗಿ, ಆ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟ ಎಂದಿನಂತೆ ಆರಂಭವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next