Advertisement

ಶಾಸಕ ರೇಣುಕಾಚಾರ್ಯ ಬಂಧಿಸಿ ಗಡಿಪಾರು ಮಾಡಿ

12:47 PM Apr 03, 2022 | Team Udayavani |

ದಾವಣಗೆರೆ: ಬೇಡ ಜಂಗಮ ಹೆಸರಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವ, ದಲಿತ ಹೋರಾಟಗಾರರ ವಿರುದ್ಧ ಸುಳ್ಳು ಮೊಕದ್ದಮೆ ಹೂಡಿರುವ ಡಾ| ಎಂ.ಪಿ. ದಾರಕೇಶ್ವರಯ್ಯ ಮತ್ತು ಅವರಿಗೆ ಕುಮ್ಮಕ್ಕು ನೀಡಿರುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರನ್ನ ಕೂಡಲೇ ಬಂಧಿಸಬೇಕು ಎಂದು ದಲಿತ ಪರ ಸಂಘಟನೆಗಳ ಮುಖಂಡ, ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಡಾ| ವೈ. ರಾಮಪ್ಪ ಒತ್ತಾಯಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವುದಾಗಿ ಸದನದಲ್ಲೇ ಒಪ್ಪಿಕೊಂಡಿದ್ದಾರೆ. ಹಾಗಾಗಿ ಕೂಡಲೇ ಅವರನ್ನು ಬಂಧನಕ್ಕೆ ಒಳಪಡಿಸಬೇಕು ಮಾತ್ರವಲ್ಲ ರಾಜ್ಯದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಾಯ್ದೆ ಅಧಿನಿಯಮ 7ರ ಪ್ರಕಾರ ಸುಳ್ಳು ಮಾಹಿತಿ ಸಲ್ಲಿಸಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುವುದು ಶಿಕ್ಷಾರ್ಹ ಮತ್ತು ಅಕ್ಷಮ್ಯ ಅಪರಾಧ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು. ಶಾಸಕ ಸ್ಥಾನದಿಂದ ಕಿತ್ತೂಗೆಯಬೇಕು. ರೇಣುಕಾಚಾರ್ಯ ಮತ್ತು ದಾರಕೇಶ್ವರಯ್ಯ ಅವರನ್ನು ಒಂದರೆಡು ದಿನಗಳಲ್ಲಿ ಬಂಧಿಸಬೇಕು ಎಂದು ಕೋರಿ ಜಿಲ್ಲಾ ರಕ್ಷಣಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವುದು. ಬಂಧನಕ್ಕೆ ಒಳಪಡಿಸಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜಿಲ್ಲೆ, ರಾಜ್ಯಮಟ್ಟದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬೆಂಗಳೂರು ಉತ್ತರ ತಾಲೂಕಿನಲ್ಲೇ 600ಕ್ಕೂ ಹೆಚ್ಚು ಜನರು ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವುದು ಯಕ್ಷ ಮತ್ತು ಅಚ್ಚರಿಯ ಪ್ರಶ್ನೆಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆ ಅಧಿನಿಯಮ 4ರ ಪ್ರಕಾರ ಸ್ಥಳ ಮಹಜರು, ಪೂರ್ವಜರ ಪೂರ್ವಾಪರ ಮಾಹಿತಿ ಪಡೆದ ನಂತರವೇ ಜಾತಿ ಪ್ರಮಾಣಪತ್ರ ನೀಡಬೇಕು. ಆದರೆ, ಯಾವುದೇ ನಿಯಮ ಅನುಸರಿಸದೆ ಜಾತಿ ಪ್ರಮಾಣಪತ್ರ ನೀಡಲಾಗಿದೆ. ಸಂಬಂಧಿತರ ವಿರುದ್ಧವೂ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಎಂ.ಪಿ. ದಾರಕೇಶ್ವರಯ್ಯ ದಾವಣಗೆರೆಯ 13 ಜನ ದಲಿತ ಮುಖಂಡರ ವಿರುದ್ಧ ಸುಳ್ಳು ಕೇಸ್‌ ದಾಖಲಿಸಿದ್ದಾರೆ. ದಲಿತರ ಮೀಸಲಾತಿ ಸೌಲಭ್ಯ ಕಿತ್ತುಕೊಂಡಿರುವ ದಾರಕೇಶ್ವರಯ್ಯ ಅವರನ್ನು ಪೊಲೀಸರು ರಾಜಾತೀಥ್ಯ ನೀಡಿರುವುದು ಅಶ್ಚರ್ಯಕರ. ಶಾಸಕರ ವಿರುದ್ಧವೇ ಮಾತನಾಡಿರುವ ಅವರ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ, ಹಾಗೆ ಮಾಡದೆ ದಲಿತ ಮುಖಂಡರ ವಿರುದ್ದ ಕೇಸ್‌ ದಾಖಲಿಸಿಕೊಂಡಿದ್ದಾರೆ. ದಲಿತ ಪರ ಹೋರಾಟಗಾರರ ಪರವಾಗಿ ಪರಿಶಿಷ್ಟ ಜಾತಿ, ಪಂಗಡಗಳ ಮುಖಂಡರು ಧ್ವನಿ ಎತ್ತಬೇಕು. ಹೋರಾಟಗಾರರಿಗೆ ಕಿಂಚಿತ್ತೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ಒಕ್ಕೂಟದ ಮುಖಂಡರಾದ ಕೆ. ರಾಘವೇಂದ್ರನಾಯ್ಕ, ಚಿನ್ನಸಮುದ್ರ ಶೇಖರನಾಯ್ಕ, ಹೂವಿನಮಡು ಚನ್ನಬಸಪ್ಪ, ಹೆಗ್ಗೆರೆ ರಂಗಪ್ಪ, ಕುಂದುವಾಡ ಮಂಜುನಾಥ್‌, ಬಿ. ದುಗ್ಗಪ್ಪ, ಎಸ್‌. ಶೇಖರಪ್ಪ, ಎಸ್‌.ಜಿ. ಸೋಮಶೇಖರ್‌, ಮಾರಪ್ಪ, ಸಂತೋಷ್‌, ಎಸ್‌. ಶ್ರೀನಿವಾಸ್‌, ಕಬ್ಬಳ್ಳಿ ಮೈಲಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next