Advertisement

ಶೋಷಿತ ರೈತನ ಗ್ರಾಹಕ ಸೇವೆಗಳ ಸುತ್ತಾ…

01:01 PM Jan 22, 2018 | |

ರೈತರಿಗೆ ನೆರವಾಗಬೇಕು. ಅವರಿಗೆ ಅಗತ್ಯವಿರುವ ಮಾಹಿತಿಯನ್ನು ನಯಪೈಸೆ ಪಡೆಯದೇ ಒದಗಿಸಬೇಕು ಎಂಬ ಸದಾಶಯದಿಂದ ಹಲವು ಯೋಚನೆಗಳನ್ನು ರೂಪಿಸಲಾಗಿದೆ. ಅವುಗಳ ಒಂದಷ್ಟು ಕೈಪಿಡಿ ನೋಡಿ ಹೀಗಿವೆ…

Advertisement

ರೈತ, ಕಾಲದೊಂದಿಗೆ ಸ್ಪರ್ಧಿಸಲೇಬೇಕು. ಕೃಷಿಗೆ ಮತ್ತು ಬದುಕಿಗೆ ಅಗತ್ಯವಾದ ಸೌಲಭ್ಯಗಳನ್ನು ಆತ ಅಳವಡಿಸಿಕೊಳ್ಳುವುದು ಸೂಕ್ತ. ಜೊತೆಜೊತೆಗೆ ಆ ಪ್ರಕ್ರಿಯೆಗೆ ಪೂರಕವಾದ ಜಾಣ್ಮೆಯನ್ನೂ ತುಂಬಿಕೊಳ್ಳಬೇಕು. ಬಹುಪಾಲು ಸಂದರ್ಭಗಳಲ್ಲಿ ಕೃಷಿ ಕೆಲಸಕ್ಕಿಂತ ರೈತ, ತಾಲ್ಲೂಕು ಕಚೇರಿ, ಉಪಭಾಗಾಧಿಕಾರಿಗಳ ಕಚೇರಿ, ಎಪಿಎಂಸಿ, ಕೃಷಿ, ತೋಟಗಾರಿಕಾ ಇಲಾಖೆ, ಆರ್‌ಟಿಸಿ, ಮ್ಯುಟೇಶನ್‌….. ಈ ರೀತಿಯ ಓಡಾಟ, ಸರದಿಯಲ್ಲಿ ನಿಲ್ಲುವ ಕೆಲಸಕ್ಕೆ ವ್ಯಯವಾಗಿಬಿಡುತ್ತಾನೆ. 

ರೈತ ಪರ ಸಂಘಟನೆಗಳಿಗೆ ಕೆಲಸವಿದೆ!: ಹಲವು ಸಣ್ಣ ಪುಟ್ಟ ವಿಷಯಗಳು, ಮಾಹಿತಿಗಳು- ಬಹುಶಃ ಈ ಕ್ಷಣಕ್ಕೆ ಅವು ಸಹಾಯಕ ಎನ್ನಿಸದಿರಬಹುದು. ಆದರೆ ಒಂದಲ್ಲಾ ಒಂದು ಘಳಿಗೆಯಲ್ಲಿ ಇವು ಬೇಕಾಗುವುದು ಖಚಿತ. ಕೃಷಿ ಮಾಹಿತಿಯನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ಒಂದು ಉಚಿತ ದೂರವಾಣಿ ಸೌಲಭ್ಯವನ್ನು ಆರಂಭಿಸಿದೆ. ಪ್ರತಿದಿನ ಬೆಳಿಗ್ಗೆ ಏಳರಿಂದ ರಾತ್ರಿ ಒಂಭತ್ತರವರೆಗೆ ನಾವು 1800 425 3553 ಎಂಬ ಸಂಖ್ಯೆಗೆ ಕರೆ ಮಾಡಬಹುದು.

ರಾಜ್ಯ ಮಟ್ಟದಲ್ಲಿ ರೈತರ ದೂರು, ಸಲಹೆಗಳನ್ನು ಸ್ವೀಕರಿಸಲು ಹಾಗೂ ಸೂಕ್ತವಾದ ಪರಿಹಾರೋಪಾಯ ನೀಡಲು ಸ್ಥಾಪಿಸಲಾಗಿರುವ ರೈತ ಸಹಾಯವಾಣಿಯಿದು ಎಂದು ರಾಜ್ಯ ಕೃಷಿ ಇಲಾಖೆ ಹೇಳಿಕೊಂಡಿದೆ. ಕೃಷಿ ಪರಿಕರಗಳ ಲಭ್ಯತೆ, ಇಲಾಖಾ ಕಾರ್ಯಕ್ರಮಗಳು, ಸಸ್ಯ ಸಂರಕ್ಷಣಾ ಉಪಕರಣಗಳು ಮತ್ತು ಕ್ರಮಗಳು, ಮಣ್ಣು ಹಾಗೂ ನೀರಿನ ವಿಶ್ಲೇಷಣೆ, ಬೆಳೆ ವಿಮೆ, ಸಾವಯವ ಕೃಷಿ, ಕೃಷಿ ಸಂಬಂಧಿತ ಇತರ ವಿಚಾರಗಳನ್ನು ಈ ದೂರವಾಣಿ ಸಹಾಯದಿಂದ ಕೇಳಬಹುದು.

ಈ ಸಂಖ್ಯೆಗೆ ಯಾವುದೇ ಸ್ಥಿರ ದೂರವಾಣಿ ಅಥವಾ ಮೊಬೈಲ್‌ನಿಂದ ಕರೆ ಮಾಡಬಹುದು. ಇಷ್ಟು ಕೃಷಿ ಇಲಾಖೆಯ ಪ್ರಚಾರ. ಕೃಷಿಕ ಮಾಹಿತಿಗಾಗಿ ಈ ಮುನ್ನ 1551ಕ್ಕೆ ಕರೆ ಮಾಡಬಹುದು ಎಂಬ ಜಾಗೃತಿ ಮೂಡಿಸಲಾಗಿತ್ತು. ಇದು ಕೇಂದ್ರ ಸರ್ಕಾರದಿಂದ ರೂಪಿತವಾಗಿದ್ದು, ಇದರ ಸಮಯ ಬೆಳಗ್ಗೆ ಆರರಿಂದ ರಾತ್ರಿ ಹತ್ತು. ಇಲ್ಲಿ ಕೇವಲ ಬೇಸಾಯ, ಕೃಷಿ ತಂತ್ರ ಕುರಿತ ಮಾಹಿತಿ ಲಭ್ಯವಾದರೆ ರಾಜ್ಯ ಸರ್ಕಾರ ಆರಂಭಿಸಿದ ರೈತ ಸಹಾಯವಾಣಿಯಲ್ಲಿ ಕೃಷಿ ಇಲಾಖೆಯ ಕಾರ್ಯಕ್ರಮಗಳು,

Advertisement

ಯೋಜನೆಗಳ ಮಾಹಿತಿಯೂ ಗಿಟ್ಟುವುದರಿಂದ ರೈತರು ನೇರವಾಗಿ ಸ್ಥಳೀಯ ಕೃಷಿ ಇಲಾಖೆಯ ಕಚೇರಿಗೆ ಹೋಗಿ ಮಾಹಿತಿ ತಿಳಿಯಬೇಕಾದುದಿಲ್ಲ. ಒಂದು ಫೋನ್‌ ಕರೆ ಸಾಕು. ಆದರೆ ಈ ದೂರವಾಣಿಗೆ ಕರೆ ಮಾಡಿದರೆ ಈ ನಂಬರ್‌ ಅಸ್ತಿತ್ವದಲ್ಲಿಲ್ಲ ಎಂಬ ಮಾಹಿತಿ ಸಿಗುತ್ತದೆ. ಕೃಷಿಕರಿಗೆ ಅನುಕೂಲವಾಗುವ ಇಂತಹ ಸೌಲಭ್ಯಗಳ ಕುರಿತು, ಅದರ ವ್ಯವಸ್ಥಿತ ಚಾಲನೆಗೆ ರೈತ ಪರ ಸಂಘಟನೆಗಳು ಗಟ್ಟಿದನಿಯಲ್ಲಿ ಒತ್ತಾಯಿಸಬೇಕು. ಹತ್ತು ಹಲವು ಓಡಾಟ ಒಂದು ಫೋನ್‌ ಕರೆಯಿಂದ ತಪ್ಪುವುದಾದರೆ ಅಷ್ಟರಮಟ್ಟಿಗೆ ರೈತ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದಲ್ಲವೇ?

ಪ್ರತಿಯೊಂದು ಬೆಳೆಯನ್ನು ಕೃಷಿ ವ್ಯಾಪಾರ ಮಾರುಕಟ್ಟೆ – ಎಪಿಎಂಸಿಗೆ ತಂದು ಮಾರುವುದು ಸೂಕ್ತ. ಆದರೆ ಹೀಗೆ ಮಾಡಲು ರೈತರಿಗೆ ಹತ್ತಾರು ಸಮಸ್ಯೆ ಎಂದು ಮಾರುಕಟ್ಟೆಗೆ ಬೆಳೆಯನ್ನು ವಿಕ್ರಯಿಸಲು ತೆಗೆದುಕೊಂಡು ಹೋಗುವುದು? ಕೈ ಸಾಲ ಮಾಡಿದರಂತೂ ಮನೆಬಾಗಿಲಿನಲ್ಲಿ ಮಾರಲೇಬೇಕಾದ ಅನಿವಾರ್ಯತೆ. ಅಲ್ಲೂ ಆ ದಿನದ ಮಾರುಕಟ್ಟೆ ದರದ ಅರಿವಿರದೆ ಮಧ್ಯವರ್ತಿ ಹೇಳಿದ ಬೆಲೆಗೆ  ಬೆಲೆ ಮಾರಿ ಕೈ ಸುಟ್ಟುಕೊಳ್ಳುವುದಿದೆ.

ಖುದ್ದು ಮಾರುಕಟ್ಟೆಗೇ ಹೋಗಿ ಪೇಟೆಧಾರಣೆಯ ಮಾಹಿತಿ ಸಂಗ್ರಹಿಸುವುದು ಕಷ್ಟವಾದುದರಿಂದ ಇನ್ನೊಂದು ಫೋನ್‌ ಸೌಲಭ್ಯ ರೈತರ ನೆರವಿಗೆ ನಿಲ್ಲುತ್ತದೆ. 1800 425 1552ಕ್ಕೆ ಕರೆ ಮಾಡಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ಪಡೆದುಕೊಳ್ಳಬಹುದು. ಇದೂ ಉಚಿತ ವ್ಯವಸ್ಥೆ.  ಕರೆ ಮಾಡಿದಾತನಿಗೆ ನಯಾ ಪೈಸೆಯ ವೆಚ್ಚ ತಗಲುವುದಿಲ್ಲ. ನಿಮಗೆ ಗೊತ್ತಿರಲಿ, 1800ರಿಂದ ಆರಂಭವಾಗುವ ಎಲ್ಲ 11 ಅಂಕಿಗಳ ದೂರವಾಣಿ ಕರೆದಾತರಿಗೆ ಉಚಿತ.

ಕರೆ ಸ್ವೀಕರಿಸುವಾತ ಆ ವೆಚ್ಚವನ್ನು ಭರಿಸುತ್ತಾನೆ. ಇಂದು ಎಪಿಎಂಸಿಯ ಕೃಷಿ ಮಾರಾಟ ವಾಹಿನಿ ವೆಬ್‌ಸೈಟ್‌ ಇಡೀ ರಾಜ್ಯದ ಬೆಳೆ ಧಾರಣೆ ಕೊಡುವುದಲ್ಲದೆ ಬೆಳೆಗಳ ದರದ ವಾರ್ಷಿಕ ವಿಶ್ಲೇಷಣೆ, ಮಾರುಕಟ್ಟೆಯ ಆವಕ ಜಾವಕಗಳ ಮಾಹಿತಿ ನೀಡುತ್ತದೆ. ವೆಬ್‌ ಲಿಂಕ್‌; www.krishimaratavahini.kar.nic.in ಲೋಪದೋಷಗಳಿದ್ದರೆ, ಕಡಿಮೆ ಪ್ರಮಾಣದಲ್ಲಿ ಪಡಿತರ ನೀಡುತ್ತಿದ್ದರೆ ಅಥವಾ ಹೆಚ್ಚು ಬೆಲೆ ವಸೂಲಿ ಮಾಡುತ್ತಿದ್ದರೆ,

ತೂಕದಲ್ಲಿ ವಂಚನೆ, ಪ್ರತಿ ತಿಂಗಳು ಸರಿಯಾದ ಸಮಯದಲ್ಲಿ ತರಿಸದಿದ್ದರೆ, ದಾಸ್ತಾನು ಮುಗಿದಿದೆ ಎಂದು ಒಂದು ವಾರದ ನಂತರ ಬಂದವರಿಗೆ ಪಡಿತರ ಪದಾರ್ಥ ಕೊಡದಿದ್ದರೆ ಈ ಸಂಖ್ಯೆಗೆ ಕರೆ ಮಾಡಿ ದೂರಬಹುದು. ದೂರು ನೀಡುವವರು ತಮ್ಮ ಹೆಸರು, ದೂರವಾಣಿ ಸಂಖ್ಯೆ, ವಾಸಸ್ಥಳ, ಯಾವ ನ್ಯಾಯಬೆಲೆ ಅಂಗಡಿಯ ವಿರುದ್ಧ ದೂರು ಎಂಬ ವಿವರವನ್ನು ಕರೆ ಮಾಡಿದಾಗ ನೀಡಬೇಕಾಗುತ್ತದೆ. ದೂರುದಾರ ಇಚ್ಛಿಸಿದಲ್ಲಿ ಅವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ.

ದೂರು ಸ್ವೀಕರಿಸಿದವರು ದೂರು ಸಂಖ್ಯೆಯನ್ನು ನೀಡಿರುತ್ತಾರೆ. ದೂರು ಕೊಟ್ಟ ಎರಡು ದಿನದ ನಂತರ ಅದೇ ನಂಬರ್‌ಗೆ ಕರೆ ಮಾಡಿ ಈ ದೂರುಸಂಖ್ಯೆಯನ್ನು ತಿಳಿಸಿದರೆ ತನಿಖೆ, ಕೈಗೊಂಡ ಕ್ರಮದ ಮಾಹಿತಿಯನ್ನು ಒದಗಿಸುತ್ತಾರೆ.  ಇದಕ್ಕೂ ತೃಪ್ತಿ ಸಿಗದಿದ್ದರೆ-ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಾರ್ಕೆಟಿಂಗ್‌ ಫೆಡರೇಶನ್‌ ಕಟ್ಟಡ, ಕನ್ನಿಂಗ್‌ ಹ್ಯಾಂ ರಸ್ತೆ, ಬೆಂಗಳೂರು 560052ಕ್ಕೆ ಲಿಖೀತ ದೂರು ಸಲ್ಲಿಸಬಹುದು.

ಆರ್‌ಟಿಸಿಗೂ ಕ್ಯೂ ಬೇಡ!: ದಾಖಲೆಗಳ ಕಾಲದಲ್ಲಿ ಒಂದು ಆರ್‌ಟಿಸಿ ಪಡೆಯಲು ದಿನವೊಪ್ಪತ್ತು ಕಾಯಬೇಕಾಗುತ್ತದೆ. ಅದಕ್ಕೆ ರಾಜ್ಯ ಸರ್ಕಾರ  landrecords.karnataka.gov.in ಎಂಬ ವೆಬ್‌ ಪುಟದಲ್ಲಿ ಆರ್‌ಟಿಸಿ ದೊರೆಯುವಂತೆ ಮಾಡಿದೆ. ಇಲ್ಲಿನ ಭೂಮಿ ತಂತ್ರಾಂಶದಲ್ಲಿ ನೋಂದಾವಣೆ ಅಥವಾ ಅತಿಥಿಯಾಗಿ ಪ್ರವೇಶಿಸಿ ನಮಗೆ ಬೇಕಾದ ಆರ್‌ಟಿಸಿ ಪಡೆಯಬಹುದು.

10 ರೂ.ಅನ್ನು ಆನ್‌ಲೈನ್‌ನಲ್ಲಿ ಪಾವತಿಸಿ ಪಹಣಿಯ ಅಧಿಕೃತ ಮುದ್ರಣವನ್ನೂ ಮಾಡಿಕೊಳ್ಳಬಹುದು. ಜನವರಿ ಒಂದರಿಂದ ಜಾರಿಯಾಗಿದೆ ಎನ್ನಲಾಗುತ್ತಿದ್ದರೂ ಇಡೀ ವ್ಯವಸ್ಥೆ ಇನ್ನೂ ಪರಿಪಕ್ವವಾಗಿಲ್ಲ. ತಾಂತ್ರಿಕ ಅಡಚಣೆಗಳು ಹೇರಳವಾಗಿವೆ. ಆದರೆ ಮುಂದೆ ಸರಿಹೋದೀತು ಎಂಬ ಆಶಯವನ್ನಂತೂ ಇಟ್ಟುಕೊಳ್ಳಬಹುದು.

* ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next