ಬಾಗಲಕೋಟೆ: ಕೋವಿಡ್ ಸೋಂಕು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಿಗೂ ಸೋಂಕು ತಗುಲಿದ್ದು, ಜನರ ಆರೋಗ್ಯ ರಕ್ಷಣೆಗಾಗಿ ಕಾಂಗ್ರೆಸ್ ಹಸ್ತ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್ ಸೋಂಕು ನಗರ ಪ್ರದೇಶ ಅಷ್ಟೇ ಅಲ್ಲದೇ, ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ಜನರು ಮಾಸ್ಕ, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಜಾಗೃತಿ ವಹಿಸಬೇಕಿದೆ.ಕೋವಿಡ್ ನಿಯಂತ್ರಣಕ್ಕೆ ಪ್ರತಿಯೊಬ್ಬರು ಪಣ ತೊಡಬೇಕು ಎಂದು ಮನವಿ ಮಾಡಿದರು. ವಿಶ್ವದ 223 ದೇಶಗಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ದೇಶದಲ್ಲಿಯೂ ಸಹ ಎಲ್ಲ ರಾಜ್ಯಗಳಲ್ಲಿ ರೋಗ ಹರಡಿದೆ. ಪ್ರತಿದಿನ ಸಾವಿರಾರುಜನ ಈ ಸೋಂಕಿನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ನಮ್ಮ ಆರೋಗ್ಯ ನಾವೇ ರಕ್ಷಿಸಿಕೊಳ್ಳಲು ಮುಂದಾಗಬೇಕಿದೆ. ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಜನರ ಆರೋಗ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಆರೋಗ್ಯ ಹಸ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪ್ರತಿಯೊಂದು ಗ್ರಾ.ಪಂ, ನಗರ ಪ್ರದೇಶದ ಪ್ರತಿ ವಾರ್ಡನಲ್ಲೂ, ವಾರಿಯರ್ಗಳಾಗಿ ನೇಮಕ ಮಾಡಲಾಗಿದೆ. ಅವರಿಗೆಲ್ಲ ಮಾಸ್ಕ್, ಸ್ಕ್ರೀನಿಂಗ್ ಯಂತ್ರ, ಪಿಪಿಇ ಕಿಟ್, ಸ್ಯಾನಿಟೈಸರ್ ಒಳಗೊಂಡ ಕಿಟ್ ಕೊಟ್ಟು ವೈದ್ಯರಿಂದ ತರಬೇತಿ ನೀಡಲಾಗಿದೆ. ಕಾಂಗ್ರೆಸ್ ವಾರಿಯರ್ಗಳು ತಮ್ಮ ಭಾಗದ ಜನರ ಆರೋಗ್ಯ ತಪಾಸಣೆ ಮಾಡಲಿದ್ದು, ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ಈ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಮಾತನಾಡಿ, ದೇಶದಲ್ಲಿ ಕೋವಿಡ್ ನಿಯಂತ್ರಣ ಮೀರಿದೆ. ಕೇಂದ್ರ, ರಾಜ್ಯ ಸರ್ಕಾರಗಳು, ಸೋಂಕು ನಿಯಂತ್ರಣದಲ್ಲಿ ಸಂಪೂರ್ಣ ವಿಫಲಗೊಂಡಿವೆ. ಜನರು ತಮ್ಮ ಆರೋಗ್ಯವನ್ನು ತಾವೇ ರಕ್ಷಿಸಿಕೊಳ್ಳಬೇಕು. ಕೊರೊನಾ ನಿಯಂತ್ರಣಕ್ಕೆ ದಿಟ್ಟ ಕ್ರಮ ಕೈಗೊಳ್ಳುವ ಬದಲು, ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸುವುದೇ ಸರ್ಕಾರದ ಗುರಿಯಾಗಿದೆ ಎಂದು ಆರೋಪಿಸಿದರು. ಮಾಜಿ ಸಚಿವ ಎಚ್.ವೈ. ಮೇಟಿ ಮಾತನಾಡಿ ಕೋವಿಡ್ ಬಂದ ಬಳಿಕ ಜನರು ಭಯದ ನೆರಳಿನಲ್ಲಿ ಬದುಕುತ್ತಿದ್ದಾರೆ. ಜನರು ಮಾನಸಿಕವಾಗಿ ಖನ್ನತೆಗೊಳಗಾಗದೇ ಧೈರ್ಯದಿಂದ ಸೋಂಕು ಹೊಡೆದೊಡಿಸಲು ಮುಂದಾಗಬೇಕು. ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ಪರೀಕ್ಷೆಗೊಳಪಡಬೇಕು. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ವಾರಿಯರ್ಗಸ್ ಗಳಾಗಿ ನೇಮಕವಾಗಿರುವ ಕಾರ್ಯಕರ್ತರು ಜನರ ಸೇವೆ ಮಾಡಲು ಇದೊಂದು ಸುವರ್ಣ ಅವಕಾಶ ಎಂದು ಭಾವಿಸಬೇಕು ಎಂದರು.
ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮದ ಉತ್ತರ ಕರ್ನಾಟಕದ ಉಸ್ತುವಾರಿ ಸದಾನಂದ ಡಂಗನ್ನವರ, ಕೆಪಿಸಿಸಿ ವೈದ್ಯ ವಿಭಾಗದ ಉಪಾಧ್ಯಕ್ಷ ಡಾ|ಸಂಗಮೇಶಕೊಳ್ಳಿ, ಸಂಚಾಲಕ ಡಾ|ಬಸವರಾಜ ಬಿ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ
ಈಟಿ, ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ಹದ್ಲಿ, ಎಸ್.ಸಿ ಘಟಕದ ಜಿಲ್ಲಾ ಅಧ್ಯಕ್ಷ ರಾಜು ಮನ್ನಿಕೇರಿ, ಮುತ್ತಪ್ಪ ಹುಗ್ಗಿ, ಉಮೇಶ ಮೇಟಿ, ಆನಂದ ಶಿಲ್ಪಿ, ಮಹೇಶ ಜಲವಾದಿ, ಎನ್.ಬಿ. ಗಸ್ತಿ, ವಿಜಯ ಮುಳ್ಳೂರ, ಜಯರಾಜ ಹಾದಿಕರ, ನಗರಸಭೆ ಸದಸ್ಯರಾದ ಹಾಸಿಸಾಬ ದಂಡಿನ ಹಾಜರಿದ್ದರು.