Advertisement

ಮಾ. 29ರ ವರೆಗೆ ಸೇನಾ ನೇಮಕಾತಿ ರ‍್ಯಾಲಿ : ಸೈನಿಕರಾಗುವ ಉತ್ಸಾಹದಲ್ಲಿ ಯುವಕರು

10:07 PM Mar 17, 2021 | Team Udayavani |

ಉಡುಪಿ: ಕೋವಿಡ್‌ನಿಂದ ಒಂದು ವರ್ಷಗಳ ಕಾಲ ಮುಂದೂಡಲ್ಪಟ್ಟ ಭಾರತೀಯ ಸೇನಾ “ಜನರಲ್‌ ಡ್ನೂಟಿ’ ಹುದ್ದೆ ನೇಮಕಾತಿಯ ಮೊದಲ ದಿನವಾದ ಬುಧವಾರ ಸಹಸ್ರ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿ, ಉತ್ಸಾಹ ತೋರಿಸಿದರು.
ಉಡುಪಿ, ಚಿಕ್ಕಮಗಳೂರು, ದ.ಕ., ಶಿವಮೊಗ್ಗ ಜಿಲ್ಲೆಯಿಂದ ಸುಮಾರು 3,000 ಅಭ್ಯರ್ಥಿಗಳು ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಮೊದಲ ದಿನದಲ್ಲಿ ಪರೀಕ್ಷೆಗೆ ಭಾಗವಹಿಸಿದರು. ಮಾ. 29ರ ವರೆಗೆ ನಡೆಯುವ ರ್ಯಾಲಿಯಲ್ಲಿ ಒಟ್ಟು ಎಂಟು ಜಿಲ್ಲೆಗಳ 38,000 ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಮುಂಜಾನೆ 2ರ ಹೊತ್ತಿಗೆ ಆಗಮಿಸಿದ ಅಭ್ಯರ್ಥಿಗಳು ಕ್ರೀಡಾಂಗಣದಲ್ಲಿ ಅಸುಪಾಸಿನಲ್ಲಿ ಆಶ್ರಯ ಪಡೆದರು, ಇನ್ನು ಕೆಲವರು ಹೊಟೇಲ್‌ ಹಾಗೂ ವಸತಿ ಗೃಹದಲ್ಲಿ ಉಳಿದುಕೊಂಡರು. ದೈಹಿಕ ಪರೀಕ್ಷೆ ಪ್ರಾರಂಭವಾಗುವ ಮುನ್ನ ಎಲ್ಲ ಅಭ್ಯರ್ಥಿಗಳ ಕೋವಿಡ್‌ ವರದಿಯನ್ನು ಪರಿಶೀಲಿಸಿ, ವರದಿಯ ಅವಧಿ ಮುಗಿದ ಸುಮಾರು 150 ಮಂದಿಗೆ ರ್ಯಾಪಿಡ್‌ ಕೋವಿಡ್‌ ಟೆಸ್ಟ್‌ ಮಾಡಲಾಯಿತು.

Advertisement

ಕಠಿನವಾದ ದೈಹಿಕ ಪರೀಕ್ಷೆ
ದೈಹಿಕ ಪರೀಕ್ಷೆ 2ನೇ ಸುತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಝಿಗ್‌-ಝಾಗ್‌, ಪುಲ್‌ಅಪ್ಸ್‌, ಲಾಂಗ್‌ ಜಂಪ್‌ ಸ್ಪರ್ಧೆಗೆ ಕಳುಹಿಸಲಾಯಿತು. ಅಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ನೇರವಾಗಿ ದೇಹದ ಅಳತೆ ಪರೀಕ್ಷೆಗೆ ಕಳುಹಿಸಲಾಯಿತು. ನಿಯಮಾನುಸಾರ ಅಭ್ಯರ್ಥಿಯ ಕನಿಷ್ಠ ತೂಕವು 50 ಕೆ.ಜಿ., ಎತ್ತರವು 166 ಸೆ.ಮೀ., 77 ಸೆ.ಮೀ.ಎದೆ ಸುತ್ತಳತೆ ಇರಬೇಕು. ಈ ಪ್ರಕ್ರಿಯೆಯಲ್ಲಿ ನೂರಾರು ಮಂದಿಗೆ ಅಳತೆಯಿದ್ದರೆ ತೂಕವಿಲ್ಲ, ತೂಕವಿದ್ದರೂ ಎತ್ತರವಿಲ್ಲದೆ ಆಯ್ಕೆಯಾಗದೆ ಹಿಂದಿರುಗಬೇಕಾಯಿತು.

ಅಂಕಪಟ್ಟಿ ಪರಿಶೀಲನೆ
ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಅಂಕ ಪಟ್ಟಿಯನ್ನು ಶಿಕ್ಷಣ ಇಲಾಖೆಯ 6 ಮಂದಿ ಸಿಬಂದಿ ಪರಿಶೀಲನೆ ನಡೆಸಿದರು. ಅನಂತರ ಲಿಖೀತ ಪರೀಕ್ಷೆ ಪೂರ್ವವಾಗಿ ಅಭ್ಯರ್ಥಿ ಗಳ ಹಸ್ತಾಕ್ಷರವನ್ನು ತೆಗೆದುಕೊಳ್ಳಲಾಯಿತು. ಬುಧ ವಾರ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ಮಾ. 18ರಂದು ನಡೆಯಲಿದೆ. ಜತೆಗೆ ಬಿಗು ಪೊಲೀಸ್‌ ಭದ್ರತೆ ನೀಡಲಾಯಿತು.

ಉಚಿತ ಉಪಹಾರ- ಊಟ
ನಗರಸಭೆ ವತಿಯಿಂದ ಅಭ್ಯರ್ಥಿಗಳಿಗಾಗಿ ಸುಮಾರು 30 ಕಡೆಗಳಲ್ಲಿ ಸಂಚಾರಿ ಶೌಚಾ ಲಯವನ್ನು ನಿರ್ಮಿಸಲಾಗಿದೆ. ಅಭ್ಯರ್ಥಿಗಳಿಗೆ ಉಚಿತ ಉಪಹಾರ ವ್ಯವಸ್ಥೆಯನ್ನು ಉಡುಪಿ ಸಹೃದಯ ಬಂಧುಗಳು ಹಾಗೂ ಊಟದ ವ್ಯವಸ್ಥೆಯನ್ನು ಶ್ರೀ ಕೃಷ್ಣ ಮಠದ ಪರ್ಯಾಯ ಅದಮಾರು ಮಠದಿಂದ ಮಾಡಲಾಯಿತು. ಭೂಸೇನಾ ಅಧಿಕಾರಿಗಳು ತಿಳಿಸಿರುವಂತೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸೇನಾ ನೇಮಕಾತಿಗೆ ಬರುವ ಅಭ್ಯರ್ಥಿಗಳಿಗೆ ಉಚಿತ ಊಟೋಪಚಾರ ವ್ಯವಸ್ಥೆ ಉಡುಪಿಯಲ್ಲಿ ಕಲ್ಪಿಸಲಾಗಿದೆ. ಇದು ಇತರ ಜಿಲ್ಲೆಗೆ ಮಾದರಿಯಾಗಲಿ ಎಂದು ಸೇನಾಧಿಕಾರಿಗಳು ಹೇಳಿದರು.

Advertisement

ಆಯ್ಕೆಗಾಗಿ ಹರಸಾಹಸ
ಸೇನಾ ನೇಮಕಾತಿ ಮೊದಲ ಹಂತದಲ್ಲಿ 1.5 ಕಿ.ಮೀ. ಓಟ ಆಯೋಜಿಸಲಾಗಿತ್ತು. 3,000 ಅಭ್ಯರ್ಥಿಗಳನ್ನು ತಲಾ 200 ಮಂದಿಯಂತೆ 15 ಗುಂಪುಗಳನ್ನಾಗಿ ವಿಂಗಡಿಸಿ, ಸಾಮೂಹಿಕ ರೇಸ್‌ ಏರ್ಪಡಿಸಲಾಗಿತ್ತು. ಕೊನೆಯ ಸುತ್ತಿನಲ್ಲಿ 5.30 ನಿಮಿಷದೊಳಗೆ ಆಗಮಿಸಿದ 20 ಮಂದಿ ಅತ್ಯುತ್ತಮ, 5.45 ನಿಮಿಷದೊಳಗೆ ಆಗಮಿಸಿದ 20 ಮಂದಿಯನ್ನು ಉತ್ತಮ ಎನ್ನುವುದಾಗಿ ವಿಂಗಡಿಸಲಾಯಿತು. ಕೊನೆಯ ಕ್ಷಣದಲ್ಲಿ ಅವಕಾಶ ವಂಚಿತ ಅಭ್ಯರ್ಥಿಗಳು ಗೋಳಾಡಿದ ದೃಶ್ಯಗಳು ನೋಡುಗರ ಮನ ಕಲುಕುವಂತಿತ್ತು.

ದೇಶ ಸೇವೆಯ ಹಂಬಲ
ಬಿಕಾಂನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದೇನೆ. ಕಳೆದ ಬಾರಿ ಗದಗದಲ್ಲಿ ನಡೆದ ಸೇನಾ ನೇಮಕಾತಿಗೆ ಹೋಗಿದ್ದೆ. ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದೆ. ಈ ಬಾರಿ ಶೃಂಗೇರಿ ಶ್ರೀ ಶಾರದಾ ಸಂಸ್ಥೆಯಲ್ಲಿ ಮಾಜಿ ಸೈನಿಕರ ಮೂಲಕ ತರಬೇತಿ ಪಡೆದುಕೊಂಡು ನೇಮಕಾತಿ ಹಾಜರಾಗಿದ್ದೇನೆ. ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸೇನೆ ನೇಮಕವಾಗುತ್ತೇನೆ ಎನ್ನುವ ವಿಶ್ವಾಸವಿದೆ. ಮನೆಯಲ್ಲಿ ಅಪ್ಪ, ಅಮ್ಮ, ತಂಗಿ ಇದ್ದಾರೆ. ಮೊದಲಿಗೆ ಬೇಡವೆಂದರೂ ಈಗ ಸೈನ್ಯಕ್ಕೆ ಸೇರುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
 -ನಾಗಾರ್ಜುನ್‌ ಶೃಂಗೇರಿ, ಅಭ್ಯರ್ಥಿ


ಸೇನೆಯಲ್ಲಿ ಸೇರಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ ಎರಡನೇ ಬಾರಿಗೆ ಸೇನಾ ನೇಮಕಾತಿಗೆ ಬಂದಿದ್ದೇನೆ. ಭದ್ರಾವತಿಯಲ್ಲಿ ಮಾಜಿ ಸೈನಿಕ ಗಿರೀಶ್‌ ಅವರು ಸುಮಾರು 30 ಮಂದಿಗೆ ಉಚಿತ ತರಬೇತಿ ನೀಡಿದ್ದಾರೆ. ಅವರಲ್ಲಿ ದೈಹಿಕ ಪರೀಕ್ಷೆಯನ್ನು 21 ಮಂದಿ ತೇರ್ಗಡೆಯಾಗಿದ್ದಾರೆ. ನಮಗೆ ಹೋಗಿ ಬರಲು ಅಗತ್ಯವಿರುವ ಮೊತ್ತವನ್ನು ಅವರೇ ಪಾವತಿ ಮಾಡಿದ್ದಾರೆ. ಮನೆಯಲ್ಲಿ ನಾಲ್ಕು ಅಕ್ಕಂದಿರು ಇದ್ದಾರೆ. ಜೀವನದಲ್ಲಿ ನಾನು ಏನಾದರೂ ಸಾಧನೆ ಮಾಡಲಿ ಎನ್ನುವ ಉದ್ದೇಶದಿಂದ ಮನೆಯವರು ಸೇನಾ ನೇಮಕಾತಿಗೆ ಕಳುಹಿಸಿದ್ದಾರೆ.
-ಕಿರಣ್‌, ಅಭ್ಯರ್ಥಿ, ಶಿವಮೊಗ್ಗ ಜಿಲ್ಲೆ

ಬುಧವಾರ 3,000 ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ಅವರೆಲ್ಲರಿಗೆ ಉಚಿತ ಊಟ ಹಾಗೂ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ನೇಮಕಾತಿ ಪ್ರಕ್ರಿಯೆ ಮಾ. 29ರ ವರೆಗೆ ನಡೆಯಲಿದೆ. ಕ್ರೀಡಾಂಗಣದಲ್ಲಿ ನಿರಂತರ ವಿದ್ಯುತ್‌ ವ್ಯವಸ್ಥೆ ಮತ್ತು ವೇಗದ ಇಂಟರ್‌ನೆಟ್‌ ವ್ಯವಸ್ಥೆ ಕಲ್ಪಿಸಲಾಗಿದೆ.
– ಡಾ| ರೋಶನ್‌ ಕುಮಾರ್‌ ಶೆಟ್ಟಿ, ಸಹಾಯಕ ನಿರ್ದೇಶಕರು, ಯುವ ಸಶಕ್ತೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next