Advertisement

ಘಟಾನುಘಟಿಗಳಿಗೆ ವಾಯ್ಸ್ ಕೊಡುತ್ತಿದ್ದ “ಆರ್ಮುಗಂ”ಬದುಕಿಗೆ ತಿರುವು ಕೊಟ್ಟಿದ್ದು ತಾಯಿ ಡೈರಿ!

06:19 PM May 30, 2020 | Nagendra Trasi |

ಕನ್ನಡ ಚಿತ್ರರಂಗದಲ್ಲಿ ವಿಲನ್ ಆಗಿ ವಜ್ರಮುನಿ, ತೂಗುದೀಪ್ ಶ್ರೀನಿವಾಸ್, ಟೈಗರ್ ಪ್ರಭಾಕರ್, ಸುಧೀರ್, ದೇವರಾಜ್ ಹೀಗೆ ಹಲವು ನಟರು ತಮ್ಮ ಅದ್ಭುತ ಛಾಪು ಮೂಡಿಸಿದ್ದರು. ಇವರೆಲ್ಲಾ 1970-80ರ ದಶಕದಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದರೆ, ನಂತರ 2000ನೇ ಇಸವಿ ಹೊತ್ತಿಗೆ ಸ್ಯಾಂಡಲ್ ವುಡ್ ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ವಿಲನ್ ಪುಡಿಪೆಡ್ಡಿ ರವಿ ಶಂಕರ್…ಇದು ಆರ್ಮುಗಂ ಕೋಟೆ ಕಣೋ ಎಂದು ಗುಡುಗುವ ಮೂಲಕ ಕನ್ನಡಿಗರ ಮನ ಮಾತಾಗಿದ್ದ ಈಗ ಇತಿಹಾಸವಾಗಿದೆ!

Advertisement

ಪುಡಿಪೆಡ್ಡಿ ರವಿಶಂಕರ್ ನಮಗೆ ಕೇವಲ ವಿಲನ್ ಪಾತ್ರಧಾರಿಯಾಗಿ ಮಾತ್ರ ಮಿಂಚಿದ್ದಲ್ಲ ಅವರೊಬ್ಬ ಡಬ್ಬಿಂಗ್ ಆರ್ಟಿಸ್ಟ್, ನಿರ್ದೇಶಕ, ಬರಹಗಾರ. ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಖಳನಟ ಯಾರು ಅಂದ್ರೆ ಅದು ರವಿಶಂಕರ್.

2500ಕ್ಕೂ ಹೆಚ್ಚು ಸಿನಿಮಾಗಳಿಗೆ ಡಬ್ಬಿಂಗ್!
ನಟನಾಗುವ ಮೊದಲು ರವಿಶಂಕರ್ ಬದುಕು ಸಾಗಿಸಿದ್ದು ತಮ್ಮ ಧ್ವನಿಯಿಂದ…ಹೌದು ತೆಲುಗು, ತಮಿಳು ಸೇರಿದಂತೆ 2,600ಕ್ಕೂ ಸಿನಿಮಾಗಳಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು. ಕನ್ನಡದಲ್ಲಿಯೂ 150ಕ್ಕೂ ಹೆಚ್ಚು ಚಿತ್ರಗಳಿಗೆ ಡಬ್ಬಿಂಗ್ ಕಲಾವಿದರಾಗಿ ರವಿಶಂಕರ್ ದುಡಿದಿದ್ದರು. ಘಟಾನುಘಟಿ ಎನ್ನಿಸಿಕೊಂಡಿದ್ದ ರಘುವರನ್, ಮೋಹನ್ ರಾಜ್, ದೇವರಾಜ್, ಚರಣ್ ರಾಜ್, ಕ್ಯಾಪ್ಟನ್ ರಾಜು, ನಾಸರ್, ಆಶಿಸ್ ವಿದ್ಯಾರ್ಥಿ, ಪ್ರಕಾಶ್ ರೈ, ಅಶುತೋಷ್ ರಾಣಾ, ಸೋನು ಸೂದ್, ಉಪೇಂದ್ರ, ಪ್ರದೀಪ್ ರಾವತ್ ಸೇರಿದಂತೆ ಹಲವು ನಟರಿಗೆ ವಾಯ್ಸ್ ನೀಡಿದ್ದ ಹೆಮ್ಮೆ ರವಿಶಂಕರ್ ಅವರದ್ದು. ಸಾವಿರಾರು ಚಿತ್ರಗಳಿಗೆ ಧ್ವನಿ ನೀಡುತ್ತಿದ್ದ ರವಿಶಂಕರ್ ಗೆ ನಾನೂ ಕೂಡಾ ಯಾಕೆ ಹೀರೋ ಆಗಬಾರದು ಎಂದು ಹಲವು ಬಾರಿ ಆಲೋಚಿಸಿದ್ದರಂತೆ. ಆದರೆ ಟಾಲಿವುಡ್ ನಲ್ಲಿ ಯಾವ
ನಿರ್ದೇಶಕರೂ ರವಿಗೆ ಅವಕಾಶವನ್ನೇ ಕೊಟ್ಟಿಲ್ಲ ಎಂಬ ಅಸಮಾಧಾನವೂ ಇದೆಯಂತೆ! ಅಂತೂ ಕೊನೆಗೆ 1986ರಲ್ಲಿ ಆರ್.ನಾರಾಯಣ ಮೂರ್ತಿ ಅವರ ಆಲೋಚಿಂಚಂದಿ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದ್ದರು.

ತಾಯಿ ರಾಜ್ ಚಿತ್ರಗಳಲ್ಲಿ ನಟಿಸಿದ್ದರು…
ತಮಿಳುನಾಡಿನ ಚೆನ್ನೈನಲ್ಲಿ ಪುಡಿಪೆಡ್ಡಿ ರವಿ ಜನಿಸಿದ್ದರು ಕೂಡಾ ರವಿ ಅವರ ತಾಯಿ ಕೃಷ್ಣಾ ಜ್ಯೋತಿ ಪುಡಿಪೆಡ್ಡಿ ಅವರು ಕನ್ನಡ ಚಿತ್ರದಲ್ಲಿ ಅದು ಡಾ.ರಾಜ್ ಕುಮಾರ್ ಜತೆ ಅಭಿನಯಿಸಿದ್ದರು. ಶ್ರೀಕೃಷ್ಣ ಗಾರುಡಿ, ಮಕ್ಕಳ ರಾಜ್ಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಸ್ವತಃ ಕೃಷ್ಣಾ ಜ್ಯೋತಿ ಅವರು 50 ಸಿನಿಮಾಗಳಿಗೆ ಧ್ವನಿ ನೀಡಿದ್ದರು. ರವಿಶಂಕರ್ ತಂದೆ ಜೋಗೇಶ್ವರ ಶರ್ಮಾ ಕೂಡಾ ನಟ ಹಾಗೂ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದರು. ಅಣ್ಣ ಸಾಯಿ ಕುಮಾರ್ ಕೂಡಾ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದು ನಂತರ ಹೀರೋ ಆಗಿ ಮಿಂಚಿದ್ದರು. ಅಯ್ಯಪ್ಪ ಶರ್ಮಾ ಕೂಡಾ ರವಿಶಂಕರ್ ಸಹೋದರ.

ತನ್ನ ಮಗ ಗಂಭೀರವಾಗಬೇಕು ಎಂದು ಡೈರಿಯಲ್ಲಿ ಬರೆದಿಟ್ಟಿದ್ದ ತಾಯಿ:
ರವಿಶಂಕರ್ ಡಬ್ಬಿಂಗ್ ಕಲಾವಿದರಾಗಿದ್ದರು. ನಿರ್ದೇಶಕ, ಕೂಚುಪುಡಿ, ಭರತ ನಾಟ್ಯ ಎಲ್ಲವನ್ನೂ ಕಲಿತಿದ್ದರು. ಯಾಕೆಂದರೆ ಚಿತ್ರರಂಗದಲ್ಲಿ ತಂದೆ, ತಾಯಿ ಸಾಕಷ್ಟು ನೋವು ಅನುಭವಿಸಿದ್ದರು. ತಮ್ಮ ಮಕ್ಕಳು ಹಾಗಾಗಬಾರದು ಎಂದು ಅಭಿನಯ ಎಂದ ಮೇಲೆ ಎಲ್ಲಾ ಕಲಿತಿರಬೇಕು ಎಂಬ ದೃಷ್ಟಿಕೋನ ಅವರದ್ದಾಗಿತ್ತು. ಹಣೆಬರಹಕ್ಕೆ ಹೊಣೆ ಯಾರು ಎಂಬಂತೆ ರವಿಶಂಕರ್ ಗೆ ಅದೃಷ್ಟ ಕೈ ಹಿಡಿದಿರಲಿಲ್ಲವಾಗಿತ್ತು. “ರವಿ ಒಂದು ರೀತಿಯಲ್ಲಿ ಡಿಫರೆಂಟ್
ಕ್ಯಾರೆಕ್ಟರ್, ಚೈಲ್ಡಿಶ್, ಎಲ್ಲಕ್ಕಿಂತ ಹೆಚ್ಚಾಗಿ ಆತ ನೆಗ್ಲೆಟ್ ಮಾಡುತ್ತಿದ್ದಾನೆ. ತನ್ನ ವೃತ್ತಿಯಲ್ಲಿ ಗಂಭೀರವಾಗಿ ತೊಡಗಿಕೊಂಡರೆ ಸಾಧನೆ ಮಾಡುತ್ತಾನೆ ಎಂದು” ಅಮ್ಮ ಡೈರಿಯಲ್ಲಿ ಬರೆದಿಟ್ಟಿದ್ದರಂತೆ!

Advertisement

ಆರುಂಧತಿ ಸಿನಿಮಾದ ನಂತರ ಬದುಕಿನ ದಿಕ್ಕು ಬದಲಿಸಿದ್ದು ಕೆಂಪೇಗೌಡ:
ರವಿ ಕುಮಾರ್ ಟಾಲಿವುಡ್ ನಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು ಕೂಡಾ ದೊಡ್ಡ ಮಟ್ಟದ ಬ್ರೇಕ್ ಸಿಕ್ಕಿರಲಿಲ್ಲವಾಗಿತ್ತು. 2009ರಲ್ಲಿ ಆರುಂಧತಿ ಸಿನಿಮಾಕ್ಕೆ ಡಬ್ಬಿಂಗ್ ಕಾರ್ಯ ನಿರ್ವಹಿಸಿದ್ದು ರವಿಶಂಕರ್. ಸೂನು ಸೂದ್ ಕ್ಯಾರೆಕ್ಟರ್ ಗೆ ವಾಯ್ಸ್ ಕೊಟ್ಟಿದ್ದು ರವಿ. ಮಾಧ್ಯಮಗಳು ಅದ್ಭುತ ವಾಯ್ಸ್ ಗಾಗಿ ಬೊಮ್ಮಾಲಿ ರವಿಶಂಕರ್ ಎಂದು ಹೊಗಳಿದ್ದವು. ಆದರೂ ಈ ಸಿನಿಮಾದ ನಂತರವೂ ರವಿಗೆ ಹೆಚ್ಚಿನ ಅವಕಾಶ ಒಲಿದು ಬರಲಿಲ್ಲ. 2011ರಲ್ಲಿ ಸುದೀಪ್ ನಿರ್ದೇಶನ, ನಟನೆಯ ಕೆಂಪೇಗೌಡ ಸಿನಿಮಾ ರವಿಶಂಕರ್ ಬದುಕಿಗೆ ಹೊಸ ಭಾಷ್ಯ ಬರೆಯಿತು. ಕೆಂಪೇಗೌಡ ರವಿಶಂಕರ್, ಆರ್ಮುಗಂ ರವಿಶಂಕರ್ ಕನ್ನಡ ನಾಡಿನಲ್ಲಿ ಮನೆ ಮಾತಾಗಿ ಬಿಟ್ಟಿದ್ದರು. ಆದರೆ ಮಗನ ಯಶಸ್ಸು ನೋಡಲು ತಾಯಿ ಇಲ್ಲದಿರುವುದು ಅಪಾರ ನೋವು ತಂದಿದೆ ಎಂದು ರವಿ ವೀಕೆಂಡ್ ವಿತ್ ರಮೇಶ್ ನಲ್ಲಿ ಮನದಾಳ ಬಿಚ್ಚಿಟ್ಟಿದ್ದರು. ಕೆಂಪೇಗೌಡ ಸಿನಿಮಾದ ನಂತರ ಕೇವಲ 5 ವರ್ಷಗಳಲ್ಲಿ ರವಿಶಂಕರ್ 120 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅತ್ಯುತ್ತಮ ಡಬ್ಬಿಂಗ್ ಕಲಾವಿದ ಎಂದು 9 ಬಾರಿ ನಂದಿ ಪ್ರಶಸ್ತಿ, 2 ಬಾರಿ ತಮಿಳುನಾಡು ರಾಜ್ಯ ಪ್ರಶಸ್ತಿ ಪಡೆದ ಕೀರ್ತಿ ರವಿಶಂಕರ್ ಅವರದ್ದಾಗಿದೆ…

Advertisement

Udayavani is now on Telegram. Click here to join our channel and stay updated with the latest news.

Next