Advertisement

ವಿಕ್ರಾಂತ್‌ ಬೆನ್ನಲ್ಲೇ ಬರಲಿದೆಯೇ ಮತ್ತೊಂದು “ವಿಶಾಲ’ನೌಕೆ?

12:33 AM Aug 29, 2022 | Team Udayavani |

ಮೊದಲ ವಿಮಾನವಾಹಕ ನೌಕೆ ನಿರ್ಮಿಸುವಲ್ಲಿ ಯಶಸ್ವಿಯಾದ ಬೆನ್ನಲ್ಲೇ ಭಾರತೀಯ ನೌಕಾಪಡೆ ಅದಕ್ಕಿಂತ ದೊಡ್ಡದಾದ ಮತ್ತೊಂದು ವಿಮಾನವಾಹಕ ನೌಕೆ ಅಭಿವೃದ್ಧಿಪಡಿಸಲು ಚಿಂತನೆ ನಡೆಸಿದ್ದು, ಅದರ ಫ್ಲೈಯಿಂಗ್‌ ಡೆಕ್‌ನಲ್ಲಿ ದೇಶೀಯ ಲಘು ಯುದ್ಧವಿಮಾನ “ತೇಜಸ್‌’ ಕಾರ್ಯಾಚರಣೆ ಗೊಳಿಸುವ ಗುರಿ ಹೊಂದಿದೆ.

Advertisement

ಈಗಾಗಲೇ “ವಿರಾಟ’ ಮತ್ತು ನೂತನವಾಗಿ ನಿರ್ಮಿಸಲಾದ “ಐಎನ್‌ಎಸ್‌ ವಿಕ್ರಾಂತ್‌’ ವಿಮಾನ ವಾಹಕ ನೌಕೆಗಳು ಇವೆ. ಇದಲ್ಲದೆ, ಸಮುದ್ರದ ಮೇಲೆ ಹೆಚ್ಚುತ್ತಿರುವ ವಿವಿಧ ದೇಶಗಳ ಪ್ರಾಬಲ್ಯ, ಹಿಂದೂಮಹಾಸಾಗರ ಪ್ರದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳು, ಆರ್ಥಿಕ ವೃದ್ಧಿ, ಹೆಚ್ಚುತ್ತಿರುವ ನಿರೀಕ್ಷೆಗಳಿಗೆ ತಕ್ಕಂತೆ ಮತ್ತೂಂದು ಅತಿದೊಡ್ಡ ನೌಕೆಯ ಆವಶ್ಯಕತೆ ಇದೆ ಎಂಬುದನ್ನು ಮನಗಂಡು ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ.

“ಐಎನ್‌ಎಸ್‌ ವಿಕ್ರಾಂತ್‌’ ನೌಕೆ ಸುಮಾರು 262 ಮೀಟರ್‌ ಉದ್ದವಿದ್ದು, 40 ಸಾವಿರ ಟನ್‌ ತೂಕ ಇದೆ. ಭವಿಷ್ಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಮಾನವಾಹಕ ನೌಕೆಯ ಉದ್ದ 301 ಮೀಟರ್‌ ಇರಲಿದ್ದು, 80 ಸಾವಿರ ಟನ್‌ ತೂಗಲಿದೆ ಎನ್ನಲಾಗಿದೆ. ಈಗಲೇ ಇದಕ್ಕೆ ಅನುಮತಿ ದೊರೆತರೂ ಮುಂದಿನ ಏಳೆಂಟು ವರ್ಷಗಳಲ್ಲಿ ಇದು ನಿರ್ಮಾಣಗೊಳ್ಳುವ ನಿರೀಕ್ಷೆ ಇದೆ. ಅಮೆರಿಕದ ಮೊದಲ ನೌಕೆ ನಿರ್ಮಾಣಕ್ಕೆ 12 ವರ್ಷ ಹಿಡಿದಿತ್ತು. ಅದೇ ರೀತಿ, ಎರಡನೇ ವಿಮಾನವಾಹಕ ನೌಕೆಗೆ ಆರು ವರ್ಷ ತೆಗೆದುಕೊಂಡಿತ್ತು. ಎರಡನೇ ನೌಕೆಯ ತೂಕ ಒಂದು ಲಕ್ಷ ಟನ್‌ ಆಗಿದೆ’ ಎಂದು ಕೊಚ್ಚಿ ಶಿಪ್‌ಯಾರ್ಡ್‌ ಲಿ., (ಸಿಎಸ್‌ಎಲ್‌) ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದರು.

ಅಂದುಕೊಂಡಂತೆ ಎಲ್ಲವೂ ನಡೆದರೆ, ಮುಂಬರುವ ದಿನಗಳಲ್ಲಿ ಮತ್ತಷ್ಟು “ವಿಶಾಲ’ವಾದ ಇನ್ನೊಂದು ನೌಕೆಯು ತಲೆಯೆತ್ತಲಿದೆ. ಭಾರತೀಯ ನೌಕಾಪಡೆಯು ಇನ್ನೂ ಮುಂದೆ ಹೋಗಿ ಅದರ ರನ್‌ವೇನಲ್ಲಿ ಬಹುನಿರೀಕ್ಷಿತ ತೇಜಸ್‌ ಯುದ್ಧವಿಮಾನವನ್ನು ಕಾರ್ಯಾಚರಣೆಗೊಳಿಸುವ ಕನಸು ಹೊಂದಿದೆ. ಈಗಾಗಲೇ “ವಿರಾಟ’ ನೌಕೆಯಲ್ಲಿ ತೇಜಸ್‌ ಅನ್ನು ಯಶಸ್ವಿಯಾಗಿ ಕಾರ್ಯಾಚರಣೆ ಮಾಡಲಾಗಿದೆ. ಆದರೂ, ಅದರಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳ ಜತೆಗೆ ಅದಕ್ಕೆ ತಕ್ಕಂತೆ ನಮ್ಮಲ್ಲೂ (ನೌಕೆಯಲ್ಲಿ) ಕೆಲವು ಮಾರ್ಪಾಡು ಮಾಡಿಕೊಳ್ಳಬೇಕಿದೆ. ಆದರೆ, ಭವಿಷ್ಯದಲ್ಲಿ ಬರಲಿರುವ ನೌಕೆಯು ತೇಜಸ್‌ಗೆ ತಕ್ಕಂತೆ ಸಿದ್ಧಗೊಳ್ಳಲಿದೆ ಎಂದು ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

“ಒಂದು ವೇಳೆ ಇದು ಸಾಕಾರಗೊಂಡರೆ, ಅದು ದೇಶದ ಹೆಮ್ಮೆ. ವಾಯು ಮತ್ತು ನೌಕಾ ಎರಡರಲ್ಲೂ ನಾವು ಪ್ರಾಬಲ್ಯ ಮೆರೆಯುವಂತಾಗಲಿದೆ. ಅಷ್ಟೇ ಅಲ್ಲ, ಪ್ರಪಂಚಕ್ಕೆ ನಮ್ಮ ಸಾಮರ್ಥ್ಯದ ಬಗ್ಗೆ ಮತ್ತಷ್ಟು ಮನದಟ್ಟಾಗಲಿದೆ. ಜತೆಗೆ ಎರಡೂ (ಯುದ್ಧವಿಮಾನ ಮತ್ತು ನೌಕೆ) ದೇಶೀಯವಾಗಿರುವುದರಿಂದ ಅವುಗಳ ನಿರ್ವಹಣೆ, ದುರಸ್ತಿ, ಬಿಡಿಭಾಗಗಳ ತಯಾರಿಕೆ ವೆಚ್ಚ ಕಡಿಮೆ ಆಗಲಿದೆ. ಸಮಯವೂ ಉಳಿತಾಯ ಆಗಲಿದೆ. ಆದರೆ, ಯೋಜನೆ ಇನ್ನೂ ಚಿಂತನೆ ಹಂತದಲ್ಲಿರುವುದರಿಂದ ಎಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಹೇಳುವುದು ಕಷ್ಟ’ ಎಂದೂ ಅಧಿಕಾರಿಗಳು ತಿಳಿಸಿದರು.

Advertisement

ವಿಕ್ರಾಂತ್‌ಗೆ “ವಿಶಾಲ್‌’ ಹೆಸರಿತ್ತು!
ಸಿಎಸ್‌ಎಲ್‌ ಒಂದು ಸಾರ್ವಜನಿಕ ಉದ್ದಿಮೆಯಾಗಿದ್ದು, ಈಗಾಗಲೇ ವಿಕ್ರಾಂತ್‌ ನಿರ್ಮಿಸಿದ ಅನುಭವ ಅದಕ್ಕಿದೆ. ಹೀಗಾಗಿ, ಎರಡನೇ ನೌಕೆಯನ್ನೂ ಅದೇ ಸಂಸ್ಥೆ ನಿರ್ಮಿಸಲೂಬಹುದು. ಆದರೆ, ಇದು ಸರಕಾರದ ಹಂತದಲ್ಲಿ ತೀರ್ಮಾನ ಆಗಬೇಕಿದೆ. ಸದ್ಯಕ್ಕೆ ಈ ಭವಿಷ್ಯದ ನೌಕೆಗೆ “ವಿಶಾಲ್‌’ ಎಂದು ನಾಮಕರಣ ಮಾಡುವ ಚಿಂತನೆ ನಡೆದಿದೆ. ಆದರೆ, ಮುಂಬರುವ ದಿನಗಳಲ್ಲಿ ಅದು ಬದಲಾಗಲೂಬಹುದು. ಯಾಕೆಂದರೆ, ಈಗ ನೌಕಾಪಡೆಗೆ ಹಸ್ತಾಂತರಗೊಳ್ಳುತ್ತಿರುವ “ಐಎನ್‌ಎಸ್‌ ವಿಕ್ರಾಂತ್‌’ ನೌಕೆಗೆ ಆರಂಭದಲ್ಲಿ “ವಿಶಾಲ್‌’ ಎಂಬ ಹೆಸರಿಡಲಾಗಿತ್ತು. ಅನಂತರದಲ್ಲಿ ಅದನ್ನು 1971ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕ್ರಾಂತ್‌ ಎಂದು ಹೆಸರಿಡಲಾಯಿತು.

ಗಾಳಿಪಟದಿಂದ ವಿಮಾನದವರೆಗೆ…!
ನೌಕೆಯ ಮೂಲಕ ವಾಯುಗಾಮಿ ಕಾರ್ಯಾಚರಣೆಗೆ ದೊಡ್ಡ ಇತಿಹಾಸ ಇದ್ದು, ಸ್ವಾರಸ್ಯಕರ ಸಂಗತಿಗಳಿಂದ ಕೂಡಿದೆ. ನೌಕೆಯ ಮೂಲಕ ವಾಯುಗಾಮಿ ಮೊದಲ ಬಾರಿ ಶುರುವಾಗಿದ್ದು 1806ರಲ್ಲಿ ಅದೂ ಗಾಳಿಪಟವನ್ನು ಹಾರಿಬಿಡುವ ಮೂಲಕ ಎನ್ನುವುದು ವಿಶೇಷ. ದಾಖಲೆಗಳ ಪ್ರಕಾರ ಬ್ರಿಟಿಷ್‌ ರಾಯಲ್‌ ನೌಕಾಪಡೆ ತನ್ನ ಎಚ್‌ಎಂಎಸ್‌ ಪಲ್ಲಾಸ್‌ (32) ಯುದ್ಧನೌಕೆ ಮೂಲಕ ನೆಪೋಲಿಯನ್‌ ಮಿಲಿಟರಿ ನಾಯಕನ ವಿರುದ್ಧ ಕರಪತ್ರವನ್ನು ಗಾಳಿಪಟದ ಮೂಲಕ ಫ್ರೆಂಚ್‌ ನೆಲಕ್ಕೆ ಕಳುಹಿಸಿಕೊಡಲಾಯಿತು. ಇದಾಗಿ ಹಲವು ದಶಕಗಳ ಅನಂತರ ಅಂದರೆ 1849ರಲ್ಲಿ ಸುಲಭವಾಗಿ ದಹಿಸುವ ಬಲೂನುಗಳನ್ನು ಆಸ್ಟ್ರಿಯನ್‌ ನೌಕೆ ಎಸ್‌ಎಂಎಸ್‌ ವಲ್ಕಾನೊ ಮೂಲಕ ಹಾರಿಸಲಾಯಿತು. ಆದರೆ, ವಿರುದ್ಧವಾಗಿ ಬೀಸಿದ ಗಾಳಿಯಿಂದ ವಿಫ‌ಲಗೊಂಡು ಬಲೂನುಗಳು ನೌಕೆಯ ಮೇಲೆಯೇ ಬಂದು ಬಿದ್ದವು! ಇದಾದ ಅನಂತರ 1905ರಲ್ಲಿ ರಷ್ಯಾ- ಜಪಾನ್‌ ಯುದ್ಧದಲ್ಲಿ ಗೆದ್ದ ಜಪಾನ್‌, ರಷ್ಯಾ ನೌಕಾಪಡೆಯಿಂದ ನೌಕೆಯೊಂದನ್ನು ವಶಪಡಿಸಿಕೊಂಡಿತು. ಇದನ್ನು “ಸೀಪ್ಲೇನ್‌’ ಆಗಿ ಪರಿವರ್ತಿಸಲಾಯಿತು. ಇದರ ಮೂಲಕ ಮೊದಲ ವಿಶ್ವ ಮಹಾಯುದ್ಧದಲ್ಲಿ ಮೊದಲ ವಾಯುದಾಳಿ ಮಾಡಲಾಯಿತು. ತದನಂತರದಲ್ಲಿ ಇದನ್ನು 1920ರಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ವಿಮಾನವಾಹಕ ನೌಕೆಯನ್ನಾಗಿ ರೂಪಿಸಲಾಯಿತು. ಆ ನೌಕೆಯ ಹೆಸರು ವಾಕಾಮಿಯಾ. 1932ರಲ್ಲಿ ಇದು ಗುಜರಿಗೆ ಹೋಯಿತು.

ಸ್ಟೀಲ್‌ ಸ್ಟೋರಿ!
ವಿಕ್ರಾಂತ್‌ಗೆ ಸುಮಾರು 28 ಸಾವಿರ ಟನ್‌ ಸ್ಟೀಲ್‌ ಬಳಸಲಾಗಿದೆ. ಇದು ರಷ್ಯಾದಿಂದ ಪೂರೈಕೆ ಆಗಬೇಕಿತ್ತು. ಆದರೆ, ಸಕಾಲದಲ್ಲಿ ಪೂರೈಕೆ ಆಗದಿರುವುದರಿಂದ ದೇಶೀಯವಾಗಿಯೇ ಅದನ್ನು ಅಭಿವೃದ್ಧಿಪಡಿಸಿ, ಸರಬರಾಜು ಮಾಡಲಾಯಿತು. ಈಗ ಅದೇ ಗುಣಮಟ್ಟದ ಉಕ್ಕು ಭಾರತೀಯ ನೌಕಾಪಡೆಯ ವಿವಿಧ ನಿರ್ಮಾಣ ಕಾರ್ಯಗಳಿಗೆ ಬಳಸಲಾಗುತ್ತಿದೆ.

ಕೋವಿಡ್‌ ಹಾವಳಿಯಲ್ಲಿ ಕ್ಲಿಷ್ಟಕರ ಹಂತ
ಶೇ. 76ರಷ್ಟು ದೇಶೀಯವಾಗಿದ್ದು, ಶೇ. 24ರಷ್ಟು ಕಾರ್ಯಗಳಿಗೆ ಇಟಲಿ, ಜರ್ಮನಿ, ರಷ್ಯಾ ಸೇರಿದಂತೆ ವಿವಿಧ ದೇಶಗಳನ್ನು ಅವಲಂಬಿಸಲಾಗಿತ್ತು. ಕೋವಿಡ್‌ ಹಾವಳಿಯಲ್ಲಿ ಅವರೆಲ್ಲ ತಮ್ಮ ದೇಶಗಳಿಗೆ ಹಿಂದಿರುಗಿದರು. ಇದೇ ಸಂದರ್ಭದಲ್ಲಿ ನೌಕೆಯ ವಿವಿಧ ಹಂತಗಳ ಸಮುದ್ರ ಪರೀಕ್ಷೆ ಕೂಡ ನಡೆಸಬೇಕಿತ್ತು. ಅದರಲ್ಲೂ ಸೀ ಟ್ರಯಲ್‌ ಅತ್ಯಂತ ಕ್ಲಿಷ್ಟಕರ ಹಂತವಾಗಿತ್ತು. ಅದನ್ನು ಭಾರತೀಯ ನೌಕಾಪಡೆ ಮತ್ತು ಸಿಎಸ್‌ಎಲ್‌ ಸಂಯುಕ್ತವಾಗಿ ಯಶಸ್ವಿಗೊಳಿಸಿದೆ.

ಕೇಬಲ್‌ ಉದ್ದ ಕೊಚ್ಚಿಯಿಂದ ದಿಲ್ಲಿ!
ಐಎನ್‌ಎಸ್‌ ವಿಕ್ರಾಂತ್‌ ಅಕ್ಷರಶಃ ಒಂದು ನರಮಂಡಲ. ಅದರಲ್ಲಿ ನಾನಾ ಪ್ರಕಾರದ ಕೇಬಲ್‌ಗ‌ಳು ಹಾದು
ಹೋಗಿದ್ದು, ಅದರ ತುದಿಯನ್ನು ಹಿಡಿದುಕೊಂಡು ಹೊರಟರೆ, ಕೊಚ್ಚಿ ಬಂದರಿನಿಂದ ರಾಜಧಾನಿ ದಿಲ್ಲಿವರೆಗೆ ಆಗು
ತ್ತದೆ! ಹೌದು, ನೌಕೆಯಲ್ಲಿ ಸುಮಾರು 2,300 ಕಿ.ಮೀ. ಉದ್ದದ ಕೇಬಲ್‌ ವೈರ್‌ಗಳಿವೆ. ಕಮಾಂಡಿಂಗ್‌, ಕಂಟ್ರೋ ಲಿಂಗ್‌, ವಿದ್ಯುತ್‌, ನೀರು, ನೆಟ್‌ವರ್ಕ್‌, ಮೆಡಿಕಲ್‌ ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಅಧಿಕ ವಿಭಾಗಗಳಿಗೆ ಸಂಬಂಧಿಸಿದ ಕೇಬಲ್‌ಗ‌ಳು ಇವಾಗಿವೆ.

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next