Advertisement

ಹಿರಿಯರ ಸದನಕ್ಕೆ ನಿವೃತ್ತ ನ್ಯಾಯಾಧೀಶರು ವರ್ಜಿತರೇ ?

10:10 AM Mar 21, 2020 | mahesh |

ಸುಪ್ರೀಂಕೋರ್ಟಿನ ಅಥವಾ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರುಗಳನ್ನು ಸ್ವಾಯತ್ತತೆಯ ಸಂಸ್ಥೆಗಳಾದ ಮಾನವಹಕ್ಕು ಆಯೋಗ, ಕಾನೂನು ಆಯೋಗ, ತನಿಖಾ ಆಯೋಗಗಳಿಗೆ ನೇಮಿಸುವುದು ಪರಿಪಾಠ. ಇಲ್ಲಿ ಯಾರ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿಲ್ಲ. ಹಾಗಾಗಿ ಹೆಚ್ಚಿನ ಸಂದರ್ಭದಲ್ಲಿ ಇಂತಹ ಸ್ವತಂತ್ರ ಆಯೋಗಗಳ ಅಧ್ಯಕ್ಷರಾಗಿ ನೇಮಕ ಮಾಡುವುದು ಹೆಚ್ಚು ಅರ್ಥಪೂರ್ಣ.

Advertisement

ಸಂಸತ್ತಿನ ದ್ವಿತೀಯ ಸದನವೆನ್ನಿಸಿಕೊಂಡ ರಾಜ್ಯಸಭೆಗೆ ವಿಶೇಷವಾದ ಸ್ಥಾನಮಾನವಿದೆ. ಕೆಳಮನೆ ಅರ್ಥಾತ್‌ ಜನ ಪ್ರತಿನಿಧಿ ಸದನವೆಂದೇ ಕರೆಯಲ್ಪಡುವ ಲೋಕಸಭೆಯ ಕೆಲವೊಂದು ನ್ಯೂನತೆಗಳನ್ನು ತೊಡೆದು ಹಾಕುವ ದೃಷ್ಟಿಯಿಂದ, ಸಂಸತ್ತಿನಲ್ಲಿ ರಾಜ್ಯಸಭೆಯನ್ನು ರಚಿಸಿಕೊಂಡು ಬರಲಾಗಿದೆ. ಈ ಸದನದ ಪ್ರಮುಖ ಉದ್ದೇಶ, ಇದೊಂದು ಪಕ್ಷಾತೀತವಾದ ಹಿರಿಯರ ಸದನವಾಗಿ ಕಾರ್ಯ ನಿರ್ವಹಿಸಬೇಕೆನ್ನುವುದು, ಮಾತ್ರವಲ್ಲ ಲೋಕಸಭೆಯಲ್ಲಿ ನಡೆಯುವ ಚರ್ಚೆಗಳು ಪಕ್ಷಾಧರಿತವಾಗಿರಬಹುದು; ಹೆಚ್ಚೇನು ಪರಿಣತಿ ಹೊಂದಿರದವರು ಕೂಡಾ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗುವ ಸಾಧ್ಯತೆಗಳಿರುವುದರಿಂದಾಗಿ, ರಾಜ್ಯಸಭೆಯಲ್ಲಿ ನಡೆಯುವ ಚರ್ಚೆ ಅತ್ಯಂತ ಮೌಲ್ಯಾಧರಿತವಾಗಿ, ವಿಷಯಾಧಾರಿತವಾಗಿ ಸರಕಾರಕ್ಕೆ ಉತ್ತಮ ಮಾರ್ಗದರ್ಶನ ಮಾಡಬಹುದಾದ ಸದನವಾಗಬೇಕೆಂಬ ದೂರದೃಷ್ಟಿಯಿಂದಲೇ ಹುಟ್ಟಿಕೊಂಡ ಸದನವೇ ರಾಜ್ಯಸಭೆ.

ಆದರೆ ಕಾಲ ಕಳೆದಂತೆ ರಾಜ್ಯಸಭೆಯೂ ಕೂಡಾ ಪಕ್ಷಾಧರಿತವಾದ ಸದನವಾಗಿ; ಲೋಕಸಭೆಗೆ ಕಡಿಮೆ ಇಲ್ಲದ ತರದಲ್ಲಿ ಪಕ್ಷ ರಾಜಕೀಯ ಬಿಂಬಿಸುವ ಒಣ ಚರ್ಚೆಗಳಿಗೆ ವೇದಿಕೆಯಾಗಿ ಮಾರ್ಪಾಡಾಗುವ ಸನ್ನಿವೇಶ ಸೃಷ್ಟಿಯಾಗಿರುವುದು ದುರದೃಷ್ಟಕರ ಸಂಗತಿ. ರಾಜ್ಯಸಭೆಯ 250 ಸದಸ್ಯರಲ್ಲಿ 238 ಮಂದಿ ಸದಸ್ಯರು ಆಯಾಯ ರಾಜ್ಯಗಳ ವಿಧಾನಸಭಾ ಸದಸ್ಯರಿಂದ ಆಯ್ಕೆಗೊಂಡರೆ; ಉಳಿದ 12 ಮಂದಿ ಸದಸ್ಯರನ್ನು ವಿವಿಧ ಕ್ಷೇತ್ರಗಳಲ್ಲಿ ಅಂದರೆ ಶಿಕ್ಷಣ, ಸಾಮಾಜಿಕ ಸೇವೆ, ಸಾಹಿತ್ಯ ಮುಂತಾದ ವಲಯಗಳಲ್ಲಿ ವಿಶಿಷ್ಟ ಸಾಧನೆಗೈದ ಪರಿಣಿತರನ್ನು ರಾಷ್ಟ್ರಪತಿಗಳು ನೇಮಕಗೊಳಿಸಲು ಅವಕಾಶ ರೂಪಿಸಲಾಯಿತು. ಆದರೆ ಈ ಪರಿಣಿತರ ಆಯ್ಕೆಯಲ್ಲೂ ಕೂಡ ಆಡಳಿತರೂಢ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಸರಕಾರವನ್ನು ಬೆಂಬಲಿಸುವ ವ್ಯಕ್ತಿಗಳನ್ನೇ ನೇಮಿಸುವ ಮಾನದಂಡ ಮುಂದುವರಿಸಿಕೊಂಡು ಬರಲಾಗಿದೆ. ಹಿರಿಯರ ಸದನ ಬರೇ ಹಿರಿಯರ ಸದನವೇ ಆಗಿದೆ ಹೊರತು ಚರ್ಚೆಯಲ್ಲಾಗಲಿ; ಗಂಭೀರತೆಯಲ್ಲಾಗಲಿ ಹಿರಿಯರ ಸದನ ಮುತ್ಸದ್ದಿತನ ತೋರದ ಸ್ಥಿತಿ ರಾಜ್ಯಸಭೆಗೆ ಪ್ರಾಪ್ತವಾಗಿದೆ.

ಈಗ ಮತ್ತೆ ರಾಜ್ಯಸಭೆಯಲ್ಲಿ ಸದಸ್ಯರ ನೇಮಕಾತಿ ವಿಷಯ ಚರ್ಚೆಗೆ ಗ್ರಾಸವಾಗಿರುವುದು ಇತ್ತೀಚೆಗೆ ಸುಪ್ರೀಂ ಕೋರ್ಟಿನ ವಿಶ್ರಾಂತ ಮುಖ್ಯ ನ್ಯಾಯಾಧೀಶ ರಂಜನ್‌ ಗೊಗೊಯ್‌ರವರನ್ನು ರಾಜ್ಯಸಭೆಯ ಸದಸ್ಯರಾಗಿ ರಾಷ್ಟ್ರಪತಿಗಳು ನೇಮಿಸಿರುವ ವಿಷಯ. ಇಲ್ಲಿ ರಾಷ್ಟ್ರಪತಿಗಳ ಅಂಕಿತ ಮುದ್ರೆ ಮಾತ್ರವೇ ಹೊರತು ಇದರ ನಿರ್ಧಾರವನ್ನು ಆಡಳಿತರೂಢ ಪಕ್ಷವೇ ತೆಗೆದುಕೊಂಡಿರುತ್ತದೆ ಅನ್ನುವುದು ವಾಸ್ತವಿಕ ಅಂಶ. ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರೊಬ್ಬರು ರಾಜ್ಯಸಭೆಗೆ ನೇಮಕಗೊಂಡಿರುವುದು ಹೊಸ ಬೆಳವಣಿಗೆಯೇನು ಅಲ್ಲ. 1998-2004ರ ತನಕ ರಾಜ್ಯಸಭೆಯ ಸದಸ್ಯರಾಗಿ ಅಂದಿನ ನಿವೃತ್ತ ಮುಖ್ಯನ್ಯಾಯಾಧೀಶರಾದ ನ್ಯಾ| ರಂಗನಾಥ ಮಿಶ್ರಾರವರನ್ನು ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಯಾಗಿ ನಿಲ್ಲಿಸಿ ಆಯ್ಕೆ ಮಾಡಿದ ಪ್ರಸಂಗ ನಮ್ಮ ಮುಂದಿದೆ.

ಇಲ್ಲಿ ಮೂಡಿಬರುವ ಪ್ರಮುಖ ಪ್ರಶ್ನೆ ಅಂದರೆ ರಾಜ್ಯಸಭೆಯನ್ನುವುದು ಪಕ್ಷ ರಾಜಕೀಯಕ್ಕೆ ಮೀರಿ ವರ್ತಿಸಬೇಕಾದ ಸದನ; ಹಿರಿಯರ ಸದನ; ವಿಷಯ ಪರಿಣಿತರಿರಬೇಕಾದ ಸದನ; ಇಂತಹ ಸದನಕ್ಕೆ ನ್ಯಾಯಾಂಗ ತಜ್ಞರು; ಕಾನೂನು ಪರಿಣಿತರಾದ ನ್ಯಾಯಾಧೀಶರನ್ನು ನೇಮಿಸುವುದರಲ್ಲಿ ತಪ್ಪೇನುಂಟು ಅನ್ನುವುದು. ಆದರೆ ಇಲ್ಲಿ ಪ್ರಶ್ನೆ ಮತ್ತು ಸಮಸ್ಯೆ ಹುಟ್ಟಿಕೊಳ್ಳುವುದು ರಾಜ್ಯಸಭೆಯ ಭವಿಷ್ಯದ ದೃಷ್ಟಿಯಿಂದಲ್ಲ; ಬದಲಾಗಿ ಪ್ರಾಮಾಣಿಕ ನಿಷ್ಪಕ್ಷಪಾತ; ಸಮಗ್ರತೆಯ ಮೌಲ್ಯ ಪ್ರತಿಪಾದಿಸಬೇಕಾದ ಸುಪ್ರೀಂ ಕೋರ್ಟಿನ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಚರ್ಚೆಗೆ ಒಳಪಡಿಸಬೇಕಾಗುತ್ತದೆ. ಸುಪ್ರೀಂ ಕೋರ್ಟಿನ ನ್ಯಾಯಾಧೀಶರೊಬ್ಬರು ತಮ್ಮ 65ನೇ ವರ್ಷಕ್ಕೆ ನಿವೃತ್ತಿ ಪಡೆಯುತ್ತಾರೆ ಅಂದಾಗ ನಿವೃತ್ತಿಯ ಅನಂತರದ ತಮ್ಮ ಸ್ಥಾನಮಾನ ಹುದ್ದೆಗಾಗಿ; ತಮ್ಮ ಅಧಿಕಾರ ಅವಧಿಯಲ್ಲಿ ಯಾವುದೋ ಪ್ರಭಾವವೋ; ವಶೀಲಿಗೋ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗುವ ಸನ್ನಿವೇಶ ಸೃಷ್ಟಿಸಿದಂತೆ ಆಗುವುದಿಲ್ಲವೇ? ಈ ರೀತಿಯಲ್ಲಿ ರಾಜಕೀಯ ಪ್ರೇರಿತ ಹುದ್ದೆಗಳಿಗೆ ನಿವೃತ್ತ ನ್ಯಾಯಾಧೀಶರು ನೇಮಕಗೊಂಡಾಗ ಅವರು ನ್ಯಾಯಾಂಗದ ಪೀಠದಲ್ಲಿ ಕೂತು ನೀಡಿದ ನ್ಯಾಯದಾನವೆಲ್ಲವೂ ಸಂಶಯಗಳಿಗೆ ಎಡೆಮಾಡಿ ಕೊಡುವುದಿಲ್ಲವೆ? ಅಂದರೆ ಜನರಿಗೆ ನ್ಯಾಯಾಂಗದ ಮೇಲಿದ್ದ ನಂಬಿಕೆ, ವಿಶ್ವಾಸ , ಗೌರವ ಕಡಿಮೆಯಾಗುವ ಸಂದರ್ಭ ಸೃಷ್ಟಿಯಾಗುವುದಿಲ್ಲವೇ? ಇದು ನ್ಯಾಯಾಂಗದ ನ್ಯಾಯಾಂಗದ ಪ್ರತಿಷ್ಠೆ, ಪಾವಿತ್ರ್ಯಕ್ಕೆ ಚ್ಯುತಿ ತರುವುದಿಲ್ಲವೆ? ಈ ಎಲ್ಲ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಹೊಣೆಗಾರಿಕೆ ಸರಕಾರಕ್ಕಿದೆ.

Advertisement

ಇಂತಹ ನೇಮಕಾತಿ ಕುರಿತು ಸಂವಿಧಾನದಲ್ಲಿ ಏನೂ ಚಕಾರವಿಲ್ಲದೆ ಇರಬಹುದು. ಆದರೆ ಸಂವಿಧಾನ ದಲ್ಲಿ ಕಂಡುಕೊಂಡ ಆಶಯ ಹಾಗೂ ಸಂಪ್ರದಾ ಯದಂತೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರುಗಳಾಗಿದ್ದವರು, ಇಂತಹ ರಾಜಕೀಯ ಪ್ರೇರಿತ ಹುದ್ದೆಗಳನ್ನು ಸ್ವೀಕರಿಸುವುದು ಸ್ವಾಗತಾರ್ಹವಲ್ಲ ಅನ್ನುವುದನ್ನು ನ್ಯಾಯಾಂಗದ ಉತ್ತಮ ನಡವಳಿಕೆಯಲ್ಲಿಯೇ ಪ್ರತಿಬಿಂಬಿಸಿದೆ, ಮಾತ್ರವಲ್ಲ ಮುಖ್ಯ ನ್ಯಾಯಾಧೀಶರುಗಳು ತಮ್ಮ ನಿವೃತ್ತಿಯ ಅನಂತರ ನ್ಯಾಯಾಲಯಗಳಲ್ಲಿ ವಕಾಲತ್ತು ಕೂಡಾ ಮಾಡಬಾರದು ಎಂಬ ಕಾನೂನು ಸಂಹಿತೆಯನ್ನು ಪಾಲಿಸಿಕೊಂಡು ಬರಲಾ ಗಿದೆ. ಇಲ್ಲಿ ಉದ್ಭವಿಸುವ ಇನ್ನೊಂದು ಪ್ರಮುಖ ವಿಷಯವೆಂದರೆ ಗೌರವ, ಮರ್ಯಾದೆ, ಸ್ಥಾನಮಾನದ ದೃಷ್ಟಿಯಿಂದ ವ್ಯಕ್ತಿಗಿಂತ ಹುದ್ದೆಯೇ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತದೆ ಎಂಬ ಸತ್ಯವನ್ನು ನಾವು ಮರೆಯಬಾರದು. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರುಗಳ ಸ್ಥಾನಮಾನ ದೇಶದ ರಾಷ್ಟ್ರಪತಿಗಳಿಗೆ ಸರಿಸಮಾನವಾದ ಹುದ್ದೆ. ಈ ಗೌರವ, ಮರ್ಯಾದೆ ಈ ಹುದ್ದೆಗೂ ಪ್ರಾಪ್ತವಾಗಿದೆ. ಹಾಗೆನ್ನುವಾಗ ಒಬ್ಬ ಸಾಮಾನ್ಯ ರಾಜ್ಯಸಭಾ ಸದಸ್ಯರಾಗಿ ಸದನದಲ್ಲಿ ಕುಳಿತುಕೊಂಡು, ಸದನ ನಡೆಯುವ ಸಂದರ್ಭದಲ್ಲಿ ಅಧಿವೇಶನದ ಸಭಾಧ್ಯಕ್ಷರಿಗೆ “ಸ್ಪೀಕರ್‌ ಸರ್‌…, ಮಾನ್ಯರೆ’ ಎಂದು ಸಂಭೋಧಿಸಬೇಕಾದ ಪರಿಸ್ಥಿತಿ ಒಬ್ಬ ನಿವೃತ್ತ ಮುಖ್ಯ ನ್ಯಾಯಾಧೀಶರಿಗೆ ಮುಜುಗರ ತರುವುದಿಲ್ಲವೇ? ಇದು ತಾನು ಹಿಂದೆ ಸ್ವೀಕರಿಸಿದ ಹುದ್ದೆಯ ಗೌರವದ ಪ್ರಶ್ನೆ ಅನ್ನಿಸುವುದಿಲ್ಲವೆ?

ಸುಪ್ರೀಂಕೋರ್ಟಿನ ಅಥವಾ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರುಗಳನ್ನು ಸ್ವಾಯತ್ತತೆಯ ಸಂಸ್ಥೆಗಳಾದ ಮಾನವಹಕ್ಕು ಆಯೋಗ, ಕಾನೂನು ಆಯೋಗ, ತನಿಖಾ ಆಯೋಗಗಳಿಗೆ ನೇಮಿಸುವುದು ಪರಿಪಾಠ. ಇಲ್ಲಿ ಯಾರ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿಲ್ಲ. ಹಾಗಾಗಿ ಹೆಚ್ಚಿನ ಸಂದರ್ಭದಲ್ಲಿ ಇಂತಹ ಸ್ವತಂತ್ರ ಆಯೋಗಳ ಅಧ್ಯಕ್ಷರಾಗಿ ನೇಮಕ ಮಾಡುವುದು ಹೆಚ್ಚು ಅರ್ಥಪೂರ್ಣ. ಸರಕಾರದ ಮೂರು ಅಂಗಗಳಲ್ಲಿ ನ್ಯಾಯಾಂಗ ಹೆಚ್ಚು ಪ್ರಾಮಾಣಿಕವಾಗಿ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕೆನ್ನುವುದು ಎಲ್ಲರ ಆಶಯವೂ ಹೌದು. ಆದುದರಿಂದ ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರುಗಳು ಹುದ್ದೆಯಲ್ಲಿರುವಾಗ ಮತ್ತು ನಿವೃತ್ತಿಯ ಅನಂತರ ಕೂಡಾ ಅದೇ ಘನತೆ ಗೌರವ ಉಳಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳ ವಕ್ತಾರರಾಗಿ ಕಾರ್ಯನಿರ್ವಹಿಸುವುದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಹಿತವಲ್ಲ ಅನ್ನುವುದು ಸಂವಿಧಾನ ಬಯಸುವ ತತ್ವ ಸಿದ್ಧಾಂತವೂ ಆಗಿರುತ್ತದೆ.

ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next