Advertisement

ಬಣ್ಣದ ಪೂರ್ಣಿಮೆ

12:57 PM May 05, 2018 | |

ಗೋಡೆ ಎಂದರೆ ಗಲೀಜು ಮಾಡುವ ಜಾಗ. ಗೋಡೆ ಎಂದರೆ ಹೊರಗಿನದ್ದು ಕಾಣದಂತೆ ನಮಗೆ ನಾವೇ ಹಾಕಿಕೊಳ್ಳುವ ಬೇಲಿ. ಗೋಡೆ ಎಂದರೆ ಸಮಾಜದಲ್ಲಿ ಕಂದಕಗಳನ್ನು ಸೃಷ್ಟಿಸಿರುವ ಉಪಮೆ. ಅದೇ ಗೋಡೆಯನ್ನು ಕ್ಯಾನ್‌ವಾಸ್‌ ಆಗಿಸಿ ಓಕುಳಿಯಾಡುತ್ತಾ ಹೃದಯಗಳನ್ನು ಬೆಸೆಯಲು ಹೊರಟವರು ಪೂರ್ಣಿಮಾ ಸುಕುಮಾರ್‌. ಅವರು ಬೆಂಗಳೂರಿನಲ್ಲಿ ಹುಟ್ಟು ಹಾಕಿದ “ಅರವನಿ ಪ್ರಾಜೆಕ್ಟ್’ ಇಂದು ಮುಂಬೈ, ಜೈಪುರ, ಚೆನ್ನೈ, ಕಾಶ್ಮೀರ, ದೆಹಲಿ, ಶ್ರೀಲಂಕಾವರೆಗೂ ಪ್ರಯಾಣಿಸಿದೆ. ಹಿಜಡಾಗಳ ಬಗೆಗಿನ ಸಮಾಜದ ದೃಷ್ಟಿಕೋನವನ್ನು ಬದಲಾಯಿಸಲು ಹೊರಟಾಕೆಯ ಕತೆ ಇದು…

Advertisement

ಪ್ರಪಂಚ ತುಂಬಾ ವಿಶಾಲವಾಗಿದೆ. ನಾವು ನಮಗೆ ಮನಸ್ಸು ಬಂದಾಗ, ಬೇಕೆನಿಸಿದ ಕಡೆ ಹೋಗುತ್ತೇವೆ. ಸ್ವೇಚ್ಛೆಯನ್ನು ಅನುಭವಿಸುತ್ತೇವೆ. ಬೋರಾದರೆ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡುತ್ತೇವೆ, ಉದ್ಯಾನವನಕ್ಕೆ ತೆರಳುತ್ತೇವೆ. ಗ್ರಂಥಾಲಯದಲ್ಲಿ ಪುಸ್ತಕ ಓದುತ್ತೇವೆ. ದೇವಾಲಯದಲ್ಲಿ ದೇವರ ಆಶೀರ್ವಾದಕ್ಕೆ ಪಾತ್ರರಾಗುತ್ತೇವೆ. ಸಾಹಿತ್ಯ- ನಾಟಕ- ನೃತ್ಯ ಮನರಂಜನಾ ಕಾರ್ಯಕ್ರಮಗಳಿಗೆ ವಿಸಿಟ್‌ ಕೊಡುತ್ತೇವೆ. ಸ್ನೇಹಿತರೊಂದಿಗೆ ರೆಸ್ಟೋರೆಂಟಿನಲ್ಲಿ ಹರಟುತ್ತೇವೆ, ಬಿಗ್‌ಬಜಾರ್‌ನಲ್ಲಿ ಮನೆಗೆ ಅಗತ್ಯವಾದ ಸಾಮಾನುಗಳನ್ನು ಸರದಿ ಸಾಲಿನಲ್ಲಿ ನಿಂತು ಖರೀದಿಸಿ ತರುತ್ತೇವೆ. ಬೆಂಗಳೂರಿನಲ್ಲಿ ವಾಸಿಸುವ ಮಂದಿಯ ನಾರ್ಮಲ್‌ ಬದುಕು ಇವಿಷ್ಟೂ ಸ್ಥಳಗಳನ್ನು ಒಳಗೊಂಡಿದೆ. 

  ನಾವು ನೀವು ಆನಂದಿಸುವ ಈ ಸಿಂಪಲ್‌ ಸವಲತ್ತುಗಳ ಸ್ಥಳದಲ್ಲಿ ನೀವೆಂದಾದರೂ ಹಿಜಡಾಗಳನ್ನು ನೋಡಿದ್ದೀರಾ? ಅವರು ಕಾಣಿಸಿಕೊಳ್ಳುವ ಸ್ಥಳಗಳೇ ಬೇರೆ, ಸಮಯವೂ ಬೇರೆ. ನಮಗೆ ಸ್ವಾತಂತ್ರ್ಯ ಸಿಕ್ಕರೂ ಸಮಾಜ ಹಿಜಡಾಗಳನ್ನು ಕತ್ತಲಕೂಪದ ಬಂಧೀಖಾನೆಯಲ್ಲೇ ಇಟ್ಟಿದೆ. ಅವರ ಬಗೆಗಿನ ಕಾಳಜಿ ನಮ್ಮಲ್ಲಿ ಯಾರಿಗೂ ಬರುವುದಿಲ್ಲವೆಂದಲ್ಲ. ಆದರೆ, ಆ ನಿಟ್ಟಿನಲ್ಲಿ ಯಾರೂ ಕಾರ್ಯಪ್ರವೃತ್ತರಾಗುವುದಿಲ್ಲ ಅಷ್ಟೆ. ಅದೇ ನಮಗೂ ಪೂರ್ಣಿಮಾ ಸುಕುಮಾರ್‌ ಎಂಬ ಹೆಣ್ಮಗಳಿಗೂ ಇರುವ ವ್ಯತ್ಯಾಸ.


ಪ್ರಾಜೆಕ್ಟ್ ಹುಟ್ಟಿದ ಕತೆ

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಪೂರ್ಣಿಮಾ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಓದಿದವರು. ಕಾಲೇಜು ಮುಗಿದ ನಂತರ ಬ್ರಿಟಿಷ್‌ ಮಹಿಳೆಯೋರ್ವಳ ಜೊತೆ ಬೆಂಗಳೂರಿನ ಹಿಜಡಾಗಳ ಕುರಿತು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡರು. ಅವರ ವಿಶಿಷ್ಟ ಲೋಕಕ್ಕೆ ಪೂರ್ಣಿಮಾ ಕಾಲಿಟ್ಟಿದ್ದೇ ಆವಾಗ. ಸಾಕ್ಷ್ಯಚಿತ್ರ ಮುಗಿದ ನಂತರ ಆ ಬ್ರಿಟಿಷ್‌ ಮಹಿಳೆಯೇನೋ ತನ್ನೂರಿಗೆ ಹೋಗಿಬಿಟ್ಟಳು. ಆದರೆ, ಪೂರ್ಣಿಮಾ ಮಾತ್ರ ನಂತರವೂ ಹಿಜಡಾಗಳ ಸಂಪರ್ಕದಲ್ಲಿದ್ದರು. ಅವರ ಸಮುದಾಯಕ್ಕೆ ಏನಾದರೂ ಸಹಾಯ ಮಾಡಬೇಕೆಂಬ ವಿಚಾರ ಮೊಳೆತಿದ್ದೇ ಆ ಸಮಯದಲ್ಲಿ. ಆವಾಗ ಹೊಳೆದ ಐಡಿಯಾ ಹಿಜಡಾಗಳ ಕೈಯಲ್ಲಿ ಚಿತ್ರ ಬರೆಯಬೇಕು ಎಂಬುದು. ಅದಕ್ಕೆ ಕ್ಯಾನ್‌ವಾಸ್‌ ಆಗಿದ್ದು ಬೆಂಗಳೂರಿನ ಗೋಡೆಗಳು! ಅದಕ್ಕಾಗಿ ಹಿಜಡಾಗಳ ಒಪ್ಪಿಸುವುದು ಸುಲಭವೇನೂ ಆಗಿರಲಿಲ್ಲ. 

Advertisement

ಕ್ಯಾನ್‌ವಾಸ್‌ ಆದ ಬೆಂಗಳೂರಿನ ಗೋಡೆಗಳು

ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ನಲ್ಲಿ ಮೊದಲ ಪೇಂಟಿಂಗ್‌ ಸಿದ್ಧವಾಯಿತು. ನಂತರ ಮೆಜೆಸ್ಟಿಕ್‌ ಹತ್ತಿರದ ಧನ್ವಂತರಿ ಬ್ರಿಜ್‌, ಫ್ರೀಡಂ ಪಾರ್ಕ್‌ನ ಮುಂಭಾಗದ ಗೋಡೆ ಹಿಜಡಾ ಸಮುದಾಯದ ಸ್ಫೂರ್ತಿಗೆ ಸಾಕ್ಷಿಯಾಗಿದೆ. ಒಂದೊಂದು ಗೋಡೆಯ ಮೇಲೆ ಚಿತ್ರ ರಚಿಸಲು ವಾರಗಳಷ್ಟು ಸಮಯ ತಗುಲುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವಾರು ಅವಿಸ್ಮರಣೀಯ ಘಟನೆಗಳು ಜರುಗಿವೆ ಎಂದು ಪೂರ್ಣಿಮಾ ಅವರು ನೆನಪಿಸಿಕೊಳ್ಳುತ್ತಾರೆ. ಚಿತ್ರ ರಚಿಸುವಾಗ ಸಾರ್ವಜನಿಕರು ಕುತೂಹಲದಿಂದ ನಿಂತು ಹಿಜಡಾಗಳೊಂದಿಗೆ ಸಂವಹನದಲ್ಲಿ ತೊಡಗಿದ್ದು ಅವುಗಳಲ್ಲೊಂದು. ಅಂದಹಾಗೆ, ಅರವನಿ ಪ್ರಾಜೆಕ್ಟ್‌ನಲ್ಲಿ ಸ್ವಯಂಸೇವಕರಾಗಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು.

ಅರವನಿ ಎಂದರೆ ಯಾರು ಗೊತ್ತಾ?
ಉಪಕಥೆಯೊಂದರ ಪ್ರಕಾರ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಗೆಲ್ಲಬೇಕೆಂದರೆ ಅವರಲ್ಲೊಬ್ಬ ಪುರುಷಕುಮಾರ ಒಂದು ರಾತ್ರಿಯ ಮಟ್ಟಿಗೆ ಶೀಲವನ್ನು ಕಳೆದುಕೊಳ್ಳಬೇಕು ಎಂದು ನಿಶ್ಚಯವಾಗುತ್ತದೆ. ಆ ಸಮಯದಲ್ಲಿ ತನ್ನವರ ಗೆಲುವಿಗಾಗಿ ಇಂಥ ಒಂದು ತ್ಯಾಗಕ್ಕೆ ಮುಂದಾದವನು ಅರವನ್‌. ಆ ರಾತ್ರಿಯನ್ನು ಅವನ ಜೊತೆಯಲ್ಲಿ ಕಳೆದಿದ್ದು ಮೋಹಿನಿ ರೂಪದಲ್ಲಿದ್ದ ಶ್ರೀಕೃಷ್ಣ.. ಅರವನ್‌, ಮೋಹಿನಿ ಜೊತೆ ಕಳೆದ ಆ ಒಂದು ರಾತ್ರಿಯನ್ನು ತಮಿಳುನಾಡಿನಲ್ಲಿ ಕೂವಗಂ ಹಬ್ಬವಾಗಿ ಆಚರಿಸುತ್ತಾರೆ. ದೇಶದ ಅಸಂಖ್ಯ ಹಿಜಡಾಗಳು ಅಂದು ಅಲ್ಲಿ ಸೇರುತ್ತಾರೆ. ಮದುವೆ ಒಂದು ರಾತ್ರಿಯ ಮಟ್ಟಿಗಾದುದರಿಂದ ಮರುದಿನ ಬೆಳಗ್ಗೆ ಹಿಜಡಾಗಳು ಬಿಳಿ ಸೀರೆಯುಟ್ಟುಕೊಂಡು, ಬಳೆಗಳನ್ನು ಒಡೆದುಕೊಂಡು ಸಂಜೆವರೆಗೆ ಶೋಕ ಆಚರಿಸುವರು. ಇವರನ್ನು ದೇವ ಅರವನ್‌ನ ವಿಧವೆಯರು, ಅಂದರೆ ಅರವನಿಗಳೆಂದು ಕರೆಯಲಾಗುತ್ತದೆ. ಇಷ್ಟಕ್ಕೂ ಪಾಂಡವ ಸೈನ್ಯದಲ್ಲಿದ್ದ ಅರವನ್‌ ಬೇರೆ ಯಾರೂ ಅಲ್ಲ, ಅರ್ಜುನನ ಮಗ. 

ಯಾರಾದರೂ ನಮಗೆ ಸಹಾಯ ಮಾಡಿದರೆ ನಾವು ಖುಷಿ ಪಡುತ್ತೇವೆ. ಆದರೆ, ಹಿಜಡಾಗಳು ಖುಷಿ ಪಡುವುದಿಲ್ಲ, ಸಹಾಯ ಮಾಡಿದವರನ್ನು ಅನುಮಾನದ ದೃಷ್ಟಿಯಲ್ಲಿ ನೋಡುತ್ತಾರೆ. ಅವರ ಜೀವನದಲ್ಲಿ ಒಳ್ಳೆಯದೇನೂ ನಡೆಯುವುದಿಲ್ಲ. ನಡೆದರೂ ಅದನ್ನು ನಂಬದ ಸ್ಥಿತಿಯಲ್ಲಿರುತ್ತಾರೆ. ಅದು ಅವರು ಬೆಳೆದು ಬಂದ ಪರಿಸರದ ಪ್ರಭಾವ. ಹೀಗಾಗಿ ನಾನು ಅವರ ವಿಶ್ವಾಸ ಗಳಿಸಲು ಹರಸಾಹಸ ಪಡಬೇಕಾಯ್ತು. ಅದಕ್ಕೆ ಅನೇಕ ವರ್ಷಗಳೇ ಹಿಡಿದವು.
– ಪೂರ್ಣಿಮಾ ಸುಕುಮಾರ್‌

ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next