Advertisement

ವರ್ಷದಲ್ಲಿ ಅರಸು ಭವನ ಪೂರ್ಣ:ಖೂಬಾ

11:39 AM Aug 21, 2017 | |

ಬಸವಕಲ್ಯಾಣ: ನಗರದಲ್ಲಿ ಡಿ.ದೇವರಾಜ ಅರಸು ಭವನ ನಿರ್ಮಾಣಕ್ಕಾಗಿ 1 ಕೋಟಿ ರೂ. ಮಂಜೂರಾಗಿದ್ದು, ಒಂದು
ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು. ನಗರದ ಸರ್ಕಾರಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 102ನೇ ಜನ್ಮದಿನಾಚಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ವರ್ಷ ನಡೆಯಲಿರುವ ಅರಸು ಅವರ ಜನ್ಮದಿನಾಚರಣೆ ನೂತನ ಭವನದಲ್ಲಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಡಳಿತದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಡಿ.ದೇವರಾಜ ಅರಸು ಇತಿಹಾಸ ನಿರ್ಮಿಸಿದವರು. ಭೂ ಸುಧಾರಣೆಯಂತಹ ಕಾಯ್ದೆ ಜಾರಿಗೆ ತಂದ ಅವರು, ಬಡವರ ಬಗ್ಗೆ ಕಾಳಜಿ ಹೊಂದಿದ್ದ ಹಿರಿಯ ರಾಜಕೀಯ ಮುತ್ಸದಿ. ಅವರು ತೋರಿಸಿದ ದಾರಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಡೆದಿದ್ದಾರೆ. ರಾಜ್ಯದಲ್ಲಿ ಹಿಂದುಳಿದ, ಬಡವರ ಪರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು. ಮೊಳಕೇರಾ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕ್ಷೇಮಲಿಂಗ ಬೆಳಂಬಗೆ ವಿಶೇಷ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಉಪಾಧ್ಯಕ್ಷ ಸಂಗಮೇಶ ಬಿರಾದಾರ, ತಹಶೀಲ್ದಾರ ಕೀರ್ತಿ, ತಾಪಂ ಇಒ ವಿಜಯಕುಮಾರ ಮಡ್ಡೆ, ನಗರಸಭೆ ಪೌರಾಯುಕ್ತ ಮಹ್ಮದ ಯುಸೂಫ್‌, ಗ್ರೇಡ್‌-2 ತಹಶೀಲ್ದಾರ ಸಂಗಯ್ಯ ಸ್ವಾಮಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಅಂಬಾರಾಯ ಉಪಸ್ಥಿತರಿದ್ದರು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮತ್ತು ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಅಸಮಾಧಾನ: ಅನಗತ್ಯ ವ್ಯಕ್ತಿಗಳು ವೇ ದಿಕೆ ಮೇಲಿದ್ದಿದ್ದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ಶಾಸಕ ಖೂಬಾ, ಕಾರ್ಯಕ್ರಮವನ್ನು ಕಾಟಾಚಾರಕ್ಕೆ ಮಾಡದೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಶಿಸ್ತು ಮತ್ತು ಸಂಪ್ರದಾಯ ಕಾಪಾಡಿಕೊಳ್ಳಬೇಕು. ಅಗತ್ಯಕ್ಕಿಂತ ಹೆಚ್ಚು ಖುರ್ಚಿಯಾಕೆ ಹಾಕಲಾಗಿದೆ. ವಿಶೇಷ ಉಪನ್ಯಾಸ ನೀಡಲು ಬಂದವರಿಗೆ ಸ್ಥಳ ಇಲ್ಲದಾದರೆ ಹೇಗೆ ಎಂದು ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ಹೀಗಾಗಿ ವೇದಿಕೆ ಹತ್ತಿರ ಕುಳಿತಿದ್ದ ಜಿಪಂ ಸದಸ್ಯೆ ನಿರ್ಮಲ ಮಾನೆಗೊಪಾಳೆ ಸೇರಿದಂತೆ ಇತರರು ಖುರ್ಚಿ ಖಾಲಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next