Advertisement

ಡಾ. ಅಂಬೇಡ್ಕರ್ ಭೇಟಿ ಕೊಟ್ಟ 6 ಸ್ಥಳಗಳ ಅಭಿವೃದ್ಧಿಗೆ ಮನವಿ

03:38 PM Feb 14, 2022 | Vishnudas Patil |

ಬೆಂಗಳೂರು: ಡಾ. ಅಂಬೇಡ್ಕರ್ ಅವರು ಕೋಲಾರದ ಕೆಜಿಎಫ್, ಬೆಂಗಳೂರು, ಹಾಸನ, ಧಾರವಾಡ, ಬೆಳಗಾವಿ ಮತ್ತು ಗುಲ್ಬರ್ಗಕ್ಕೆ ಭೇಟಿ ಕೊಟ್ಟಿದ್ದರು. ಹಾಸನದ ಜಾಗದ ಅಭಿವೃದ್ಧಿ ನಡೆಯುತ್ತಿದೆ. ಎಲ್ಲ 6 ಸ್ಥಳಗಳ ಅಭಿವೃದ್ಧಿಗೆ ರಾಜ್ಯ ಬಜೆಟ್‍ನಲ್ಲಿ ಹಣ ಮೀಸಲಿಡಬೇಕು ಎಂದು ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ಮನವಿ ಮಾಡಿದ್ದಾರೆ.

Advertisement

ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾದ ವತಿಯಿಂದ ಬೆಂಗಳೂರಿನ “ಶಾಸಕರ ಭವನ ಬ್ಲಾಕ್ 2 ಸಭಾಂಗಣ”ದಲ್ಲಿ ನಡೆದ ರಾಜ್ಯ ಬಜೆಟ್ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಡಾ. ಅಂಬೇಡ್ಕರ್ ಅವರ ಪಂಚಕ್ಷೇತ್ರಗಳನ್ನು ಇಡೀ ರಾಷ್ಟ್ರದಲ್ಲಿ ಮತ್ತು ವಿದೇಶದಲ್ಲಿ ಅಭಿವೃದ್ಧಿಪಡಿಸಿದ್ದಾರೆ ಎಂದರು.

ಕೈಗಾರಿಕೆ ಸ್ಥಾಪನೆಗೆ ನಿವೇಶನವನ್ನು ಹಿಂದೆ ಶೇ 50 ದರದಲ್ಲಿ ನಿವೇಶನ ಕೊಡಲಾಗುತ್ತಿತ್ತು. ಅದನ್ನು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಶೇ 75 ರಿಯಾಯಿತಿ ಎಂದು ಪ್ರಕಟಿಸಲಾಯಿತು. ಆದರೆ, ಸುಮಾರು 800ರಿಂದ ಒಂದು ಸಾವಿರ ಅರ್ಜಿಗಳು ಮಂಜೂರಾಗದೆ ಉಳಿದಿವೆ. ಕೆಲವು ಅಧಿಕಾರಿಗಳ ಕಾರಣದಿಂದ ನಿವೇಶನ ಮಂಜೂರಾಗುತ್ತಿಲ್ಲ. ಅರ್ಜಿದಾರರೆಲ್ಲರಿಗೂ 2 ಎಕರೆ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು. ಯೋಜನೆಗೆ ಪೂರಕ ನಿವೇಶನ ನೀಡಬೇಕೆಂದು ಮನವಿ ಮಾಡಿದರು.

ರಾಜ್ಯದಲ್ಲಿ ಒಂದು ಕೋಟಿ ರೂಪಾಯಿಯ ಕಾಮಗಾರಿಯನ್ನು ಟೆಂಡರ್ ಇಲ್ಲದೆ ಪರಿಶಿಷ್ಟ ಜಾತಿ – ವರ್ಗದ ಗುತ್ತಿಗೆದಾರರಿಗೆ ಕೊಡಬೇಕು ಎಂದು ಒತ್ತಾಯಿಸಿದರು. ಹಲವು ಕಾಮಗಾರಿಗಳನ್ನು ಪ್ಯಾಕೇಜ್ ಮಾಡಿ ಪರಿಶಿಷ್ಟರಿಗೆ ಸಿಗದಂತೆ ಅಧಿಕಾರಿಗಳು ಮಾಡುತ್ತಿದ್ದು, ಇದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.

ಕೆಎಸ್‍ಎಫ್‍ಸಿಯಿಂದ ಶೇ 4ರ ಬಡ್ಡಿದರದಲ್ಲಿ ಸಾಲ ಕೊಡಬೇಕೆಂದು ಆದೇಶ ಇದ್ದರೂ ಅಲ್ಲಿ ಮೀನಮೇóಷ ಎಣಿಸುತ್ತಿದ್ದಾರೆ. ಈ ಸಮಸ್ಯೆಯನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

Advertisement

ಹರ್ಯಾನಾದಲ್ಲಿ ನಿರುದ್ಯೋಗಿ ಪದವೀಧರರಿಗೆ ಸ್ಟೈಫಂಡ್ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸ್ಟೈಫಂಡ್ ನಿಗದಿಪಡಿಸಿ ನೀಡಬೇಕೆಂದು ಮನವಿ ಮಾಡಿದರು. ಪೌರಕಾರ್ಮಿಕರ ಮಕ್ಕಳಿಗೆ ಮತ್ತು ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ವಸತಿ ಶಿಕ್ಷಣಾವಕಾಶ ನೀಡಬೇಕೆಂದು ಕೋರಿದರು.

4 ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು. ತರಬೇತಿ ಇಲ್ಲದ ಕಾರಣಕ್ಕೆ ಕೆಲಸ ಸಿಗುತ್ತಿಲ್ಲ ಎಂದ ಅವರು, ಟ್ಯಾಕ್ಸಿ ಖರೀದಿಗೆ ವಿವಿಧ ಅಭಿವೃದ್ಧಿ ನಿಗಮಗಳಲ್ಲಿ 5 ಲಕ್ಷ ರೂಪಾಯಿ ಸಬ್ಸಿಡಿ ಕೊಡಲಾಗುತ್ತಿತ್ತು. ಅದನ್ನು ಸ್ಥಗಿತಗೊಳಿಸಿದ್ದು, ಹಿಂದಿನ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಕೋವಿಡ್‍ನಿಂದ ಅನೇಕ ಜನರು ಕೆಲಸ ಕಳೆದುಕೊಂಡಿದ್ದಾರೆ. ಆದ್ದರಿಂದ, 2014ರಿಂದ 2021ರಿಂದ ಪಡೆದ ಸಾಲವನ್ನು ಮನ್ನಾ ಮಾಡಬೇಕು ಎಂಬ ಬೇಡಿಕೆಯನ್ನು ಮುಖ್ಯಮಂತ್ರಿಗಳ ಮುಂದಿಡುವುದಾಗಿ ತಿಳಿಸಿದರು.

ಇಂದು ಅನೇಕರು ಶುಲ್ಕ ಕೊಡಲಾಗದೆ ಶಿಕ್ಷಣ ವಂಚಿತರಾಗುತ್ತಿದ್ದಾರೆ. ಊಟಕ್ಕೆ ಕೊಡುವ ಸ್ಕಾಲರ್ ಶಿಪ್ ಮೊತ್ತವನ್ನು ಎಲ್ಲರಿಗೂ ಸಮಾನವಾಗಿ ಕೊಡಿ ಎಂದರು. ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ದಲಿತ ಸಮುದಾಯದವರಿಗೆ ಭೂಮಿ ಕೊಡಬೇಕು ಎಂದು ಮನವಿ ಮಾಡಿದರು.

ದಲಿತರಿಗೆ ಮನೆ ಇಲ್ಲ ಎಂಬ ಅಳಲನ್ನು ದೂರ ಮಾಡಬೇಕು ಎಂದು ಬೇಡಿಕೆ ಮುಂದಿಡುವುದಾಗಿ ತಿಳಿಸಿದರು. ಮೂಗಿಗೆ ತುಪ್ಪ ಸವರುವ ಯೋಜನೆಗಳನುವಿನ್ನು ಮುಂದೆ ದಲಿತರಿಗೆ ಕೊಡಬೇಡಿ ಎಂದೂ ಅವರು ನುಡಿದರು.

ಬಿಜೆಪಿ ರಾಷ್ಟ್ರೀಯ ಎಸ್.ಸಿ. ಮೋರ್ಚಾ ಕಾರ್ಯದರ್ಶಿಗಳಾದ ಜಯಕುಮಾರ್ ಕಾಂಗೆ, ಮಾಜಿ ಶಾಸಕರು ಹಾಗೂ ಎಸ್.ಸಿ. ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ನಂಜುಂಡಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಬೆಟ್ಟಹಳ್ಳಿ, ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next