Advertisement

ಮಳೆಗಾಲಲ್ಲಿ ಸಾಂಕ್ರಾಮಿಕ ರೋಗಗಳ ಹೆಚ್ಚಳ ಆತಂಕ

09:21 AM Jun 13, 2020 | Suhan S |

ಧಾರವಾಡ: ಬೇಸಿಗೆಯಲ್ಲಿ ಕಡಿಮೆ ಇದ್ದ ಸಾಂಕ್ರಾಮಿಕ ರೋಗಗಳ ಹಾವಳಿ ಮಳೆಗಾಲದಲ್ಲಿ ಉಲ್ಬಣವಾಗುವ ಆತಂಕ ಹೆಚ್ಚಿದೆ. ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಸಾಂಕ್ರಾಮಿಕ ಹಾವಳಿ ಜೋರಾಗಿತ್ತು. ಕಳೆದ ವರ್ಷದ ಬೇಸಿಗೆಯಲ್ಲೂ ಜನ ತತ್ತರಿಸುವಂತಾಗಿತ್ತು. ಆದರೆ ಈ ಸಲ ಕೋವಿಡ್ ವೈರಾಣು ಹೊಡೆತದಿಂದ ಏಪ್ರಿಲ್‌, ಮೇ ತಿಂಗಳು ಲಾಕ್‌ಡೌನ್‌ ಜಾರಿಯಾದ ಪರಿಣಾಮ ಜಿಲ್ಲೆಯಲ್ಲಿ ಡೆಂಘೀ, ಚಿಕುನ್‌ಗುನ್ಯಾ ಸೇರಿದಂತೆ ಇನ್ನಿತರೆ ಸಾಂಕ್ರಾಮಿಕ ರೋಗಗಳ ಹಾವಳಿ ತಗ್ಗಿತ್ತು. ಲಾಕ್‌ಡೌನ್‌ ಪರಿಣಾಮ ಜನರ ತಿರುಗಾಟಕ್ಕೆ ಕಡಿವಾಣ ಬಿದ್ದಿತ್ತು. ಹೊಟೇಲ್‌, ಬೀದಿ ಬದಿಯ ಅಂಗಡಿಗಳು ಬಂದ್‌ ಆಗಿದ್ದವು. ಜನ ಮನೆಯಲ್ಲೇ ಇದ್ದು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿದ್ದರಿಂದ ಸಾಂಕ್ರಾಮಿಕ ಹಾವಳಿ ತಡೆಗಟ್ಟಲು ಸಹಕಾರಿಯಾಯಿತು.

Advertisement

ಸದ್ಯ ಮಳೆಗಾಲ ಆರಂಭವಾಗಿದ್ದು ಸಾಂಕ್ರಾಮಿಕ ರೋಗಗಳ ಇನ್ನೂ ಜಾಸ್ತಿಯಾಗುವ ಆತಂಕ ಮನೆಮಾಡಿದೆ. ಕಳೆದ ವರ್ಷ 2019ರಲ್ಲಿ 250 ಜನರಲ್ಲಿ ಡೆಂಘೀ, 121 ಜನರಲ್ಲಿ ಚಿಕೂನ್‌ಗುನ್ಯಾ ದೃಢಪಟ್ಟು ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು. ಈ ವರ್ಷ ಜನವರಿಯಿಂದ ಮೇವರೆಗೆ ಈ ಐದು ತಿಂಗಳಲ್ಲಿ 18 ಜನರಲ್ಲಿ ಡೆಂಘೀ, 9 ಜನರಲ್ಲಿ ಚಿಕೂನ್‌ಗುನ್ಯಾ ಖಚಿತವಾಗಿದೆ.4 ಜನರಲ್ಲಿ ಮಲೇರಿಯಾ ಕಂಡು ಬಂದಿದೆ. ಮಿದುಳು ಜ್ವರ ಖಚಿತವಾಗಿಲ್ಲ. ತಣ್ಣಗಾದ ಡೆಂಘೀ: 2015ರಲ್ಲಿ 46, 2016ರಲ್ಲಿ 97, 2017ರಲ್ಲಿ 172, 2018ರಲ್ಲಿ 112, 2019ರಲ್ಲಿ 250 ಜನರಲ್ಲಿ ಡೆಂಘೀ ರೋಗ ದೃಢಪಟ್ಟಿತ್ತು. ಈ ವರ್ಷದ ಜನವರಿಯಿಂದ ಮೇ ಅಂತ್ಯದವರೆಗೆ 192 ಜನರನ್ನು ಪರೀಕ್ಷೆಗೊಳಪಡಿಸಿದಾಗ 18 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಈ ಪೈಕಿ ಹುಬ್ಬಳ್ಳಿ ಗ್ರಾಮೀಣ-1, ಕಲಘಟಗಿ-1, ಕುಂದಗೋಳ- 2, ನವಲಗುಂದ-4, ಧಾರವಾಡದ ಶಹರ1, ಹುಬ್ಬಳ್ಳಿಯ ಶಹರದ 9 ಜನರಲ್ಲಿ ಡೆಂಘೀ ಖಚಿತವಾಗಿದೆ. ಈ ಪೈಕಿ ಮೇ ತಿಂಗಳಲ್ಲಿಯೇ ರೋಗ ಲಕ್ಷಣ ಕಂಡು ಬಂದ 26 ಜನರನ್ನು ತಪಾಸಣೆಗೊಳಪಡಿಸಿದಾಗ ಅವರಲ್ಲಿ ಐದು ಜನರಿಗೆ ರೋಗ ದೃಢಪಟ್ಟಿದೆ. ಇದರಲ್ಲಿ ಹುಬ್ಬಳ್ಳಿ ಗ್ರಾಮೀಣ, ಕುಂದಗೋಳ, ನವಲಗುಂದ ತಲಾ 1ಪ್ರಕರಣವಿದ್ದರೆ, ಹುಬ್ಬಳ್ಳಿ ಶಹರದಲ್ಲಿಯೇ 2 ಪ್ರಕರಣಗಳಿವೆ.

ಗುನ್ನ ನೀಡದ ಚಿಕೂನ್‌ಗುನ್ಯಾ: 2015ರಲ್ಲಿ 17, 2016ರಲ್ಲಿ 6, 2017ರಲ್ಲಿ 11, 2018ರಲ್ಲಿ 85, 2019ರಲ್ಲಿ 121 ಜನರಲ್ಲಿ ಚಿಕೂನ್‌ಗುನ್ಯಾ ಕಾಣಿಸಿಕೊಂಡು ತೊಂದರೆ ಉಂಟು ಮಾಡಿತ್ತು. ಈಗ ಈ ಐದು ತಿಂಗಳಲ್ಲಿ 63 ಜನರನ್ನು ಪರೀಕ್ಷೆಗೊಳಪಡಿಸಿದಾಗ 9ಜನರಲ್ಲಿ ರೋಗ ದೃಢಪಟ್ಟಿದೆ.ಈ ಪೈಕಿ ಧಾರವಾಡ ಗ್ರಾಮೀಣದಲ್ಲಿ 2, ಕಲಘಟಗಿ-1, ಕುಂದಗೋಳ-5, ನವಲಗುಂದ-1ಜನರಲ್ಲಿ ರೋಗ ದೃಢಪಟ್ಟಿದೆ. ಮಲೇರಿಯಾ ಪ್ರಭಾವ ಕಡಿಮೆ: 2015ರಲ್ಲಿ 96, 2016ರಲ್ಲಿ 78, 2017ರಲ್ಲಿ 76, 2018ರಲ್ಲಿ 25, 2019ರಲ್ಲಿ 17ಜನರಲ್ಲಿ ಕಾಣಿಸಿಕೊಂಡಿದ್ದ ಮಲೇರಿಯಾ ಈಗ ಈ ಐದು ತಿಂಗಳಲ್ಲಿ 4 ಜನರಲ್ಲಿ ದೃಢಪಟ್ಟಿದೆ. ಜಿಲ್ಲೆಯ ನವಲಗುಂದ ತಾಲೂಕಿನ 3ಜನರಿಗೆ, ಮೇ ತಿಂಗಳಲ್ಲಿ ಧಾರವಾಡ ಶಹರದ ಒಬ್ಬರಲ್ಲಿ ರೋಗ ದೃಢಪಟ್ಟಿದೆ. ವರ್ಷದಿಂದ ವರ್ಷಕ್ಕೆ ಇದರ ಪ್ರಭಾವ ಕಡಿಮೆ ಆಗುತ್ತಲಿದ್ದು, ಸದ್ಯಕ್ಕಂತೂ ಆತಂಕವಿಲ್ಲ.

ಇದರ ಜತೆಗೆ ಮೆದುಳ ಜ್ವರವು 2016, 2017, 2019ರಲ್ಲಿ ಕಂಡು ಬಂದಿಲ್ಲ. ಆದರೆ 2018ರಲ್ಲಿ ಈ ಜ್ವರಕ್ಕೆ ಜಿಲ್ಲೆಯಲ್ಲಿ ಓರ್ವ ಮೃತಪಟ್ಟಿದ್ದು ಬಿಟ್ಟರೆ ಈವರೆಗೆ ಮತ್ತೆ ಅದರಿಂದ ಯಾರೂ ಮೃತಪಟ್ಟಿಲ್ಲ. ಆದರೆ ಈ ವರ್ಷ ಮೆದುಳು ಜ್ವರ ಲಕ್ಷಣಗಳು ಕಂಡು ಬಂದ 4 ಜನರನ್ನು ಪರೀಕ್ಷೆಗೊಳಪಡಿಸಿದಾಗ ಅವರಲ್ಲಿ ಮೆದುಳು ಜ್ವರ ದೃಢಪಟ್ಟಿಲ್ಲ

ಶಹರ ವ್ಯಾಪ್ತಿಯಲ್ಲೇ ಡೆಂಘೀ ಹೆಚ್ಚು : 2020ರ ಜನವರಿ 1ರಿಂದ ಮೇ 31ರವರೆಗೆ ಆರೋಗ್ಯ ಇಲಾಖೆ ನೀಡಿರುವ ಅಂಕಿ-ಅಂಶ ಗಮನಿಸಿದಾಗ ಹುಬ್ಬಳ್ಳಿ ಶಹರದಲ್ಲಿ 9ಜನರಲ್ಲಿ ಡೆಂಘೀ ದೃಢಪಟ್ಟಿದ್ದು, ಗ್ರಾಮೀಣ ಪ್ರದೇಶಕ್ಕಿಂತ ಶಹರ ವ್ಯಾಪ್ತಿಯಲ್ಲೇ ಡೆಂಘೀ ಹೆಚ್ಚಿದೆ. ಕಳೆದ ವರ್ಷ ಹು-ಧಾ ಅವಳಿನಗರ ವ್ಯಾಪ್ತಿಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ವಿಳಂಬ ಮಾಡಿದ್ದರಿಂದ ಡೆಂಘೀ ಹೆಚ್ಚು ತೊಂದರೆ ಉಂಟು ಮಾಡಿತ್ತು. ಕೊರೊನಾ ಹೊಡೆತದಿಂದ ಸ್ವತ್ಛತಾ ಕಾರ್ಯ ನಡೆದ ಕಾರಣ ಸಾಂಕ್ರಾಮಿಕ ರೋಗಗಳ ಹಾವಳಿ ಬೇಸಿಗೆ ಕಾಲದಲ್ಲಿ ತಗ್ಗಿದ್ದರೂ ಮಳೆಗಾಲದಲ್ಲಿ ಉಲ್ಬಣ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ.

Advertisement

ರೋಗಗಳ ತಡೆಗೆ ಬೇಕು ಮುನ್ನೆಚ್ಚರಿಕೆ : ಡೆಂಘೀ, ಚಿಕೂನ್‌ಗುನ್ಯಾ ಸೊಳ್ಳೆಗಳಿಂದ ಬರುವ ಕಾರಣ ಸೊಳ್ಳೆಯ ಕಡಿವಾಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲೇಬೇಕು. ಅದಕ್ಕಾಗಿ ನೀರಿನ ತೊಟ್ಟಿಗಳು, ಡ್ರಮ್‌, ಬ್ಯಾರಲ್‌, ಟ್ಯಾಂಕ್‌ಗಳನ್ನು ಭದ್ರವಾಗಿ ಮುಚ್ಚಬೇಕು. ಮನೆ ಮೇಲೆ ಸುತ್ತಮುತ್ತಲಿನ ಮಳೆ ನೀರು ಸಂಗ್ರಹವಾಗುವಂಥ ಪ್ಲಾಸ್ಟಿಕ್‌ ವಸ್ತುಗಳು, ಟೈಯರ್‌ಗಳು, ಒಡೆದ ತೆಂಗಿನ ಚಿಪ್ಪುಗಳನ್ನು ವಿಲೇವಾರಿ ಮಾಡಬೇಕು. ಏರ್‌ಕೂಲರ್‌, ಹೂವಿನಕುಂಡ, ಫೈರ್‌ ಬಕೆಟ್‌ ಇತ್ಯಾದಿಗಳ ನೀರನ್ನು ಪ್ರತಿ ವಾರ ಖಾಲಿ ಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಬೇಕು. ಹಗಲಿನಲ್ಲಿ ನಿದ್ದೆ ಮಾಡುವ ಅಥವಾ ವಿಶ್ರಾಂತಿ ಪಡೆಯುವವರು ಸೊಳ್ಳೆ ನಿರೋಧಕ ಹಾಗೂ ಸೊಳ್ಳೆ ಪರದೆಯನ್ನು ತಪ್ಪದೇ ಬಳಸಬೇಕು. ಈಗ ಹೆಚ್ಚು ಭಯ ಹುಟ್ಟಿಸಿರುವ ಕೊರೊನಾದಿಂದ ಪಾರಾಗಲು ಸಾಧ್ಯವಾದಷ್ಟು ಮನೆಯಲ್ಲೇ ಸುರಕ್ಷಿತವಾಗಿರುವುದೇ ಒಳ್ಳೆಯದು.

ಬೇಸಿಗೆಯಲ್ಲಿ ಈ ಸಲ ಸಾಂಕ್ರಾಮಿಕ ಹಾವಳಿ ಕಮ್ಮಿಯಾಗಿದ್ದರೂ ಸಹ ಮಳೆಗಾಲದಲ್ಲಿ ಉಲ್ಬಣಗೊಳ್ಳುವ ಸಾಧ್ಯತೆ ಜಾಸ್ತಿ ಇದೆ. ಹೀಗಾಗಿ ಅದಕ್ಕಾಗಿ ಅಗತ್ಯ ಔಷಧೋಪಚಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಆರೋಗ್ಯ ಕಡೆ ಹೆಚ್ಚು ಗಮನ ನೀಡಬೇಕು. ಮಳೆಗಾಲದಲ್ಲಿ ಕಲುಷಿತ ನೀರಿನ ಸೇವನೆಯಿಂದ ಹೆಚ್ಚಾಗಿ ಅನಾರೋಗ್ಯಕ್ಕೊಳಗಾಗುವ ಪ್ರಮಾಣವೇ ಜಾಸ್ತಿ ಆಗುವ ಕಾರಣ ಅಗತ್ಯ ಸುರಕ್ಷತಾ ಕ್ರಮಗಳನ್ನು ಸಾರ್ವಜನಿಕರು ರೂಢಿಸಿಕೊಳ್ಳುವುದು ಒಳಿತು. –ಡಾ|ಯಶವಂತ ಮದೀನಕರ,  ಜಿಲ್ಲಾ ಆರೋಗ್ಯಾಧಿಕಾರಿ, ಧಾರವಾಡ

 

-ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next