Advertisement

Karnataka: ರಾಜ್ಯದ 1.20 ಕೋಟಿ ಮನೆಗಳಿಗೆ ಸೇರಿತು ಅಯೋಧ್ಯೆ ರಾಮನ ಅನುಗ್ರಹ ಮಂತ್ರಾಕ್ಷತೆ

12:35 AM Jan 22, 2024 | Team Udayavani |

ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿ­ಷ್ಠಾಪನೆ ನಿಮಿತ್ತ ರಾಜ್ಯದಲ್ಲಿ ರಾಮ ನಾಮ ಸ್ಮರಣೆಯ ಅನುಗ್ರಹ ಮಂತ್ರಾಕ್ಷತೆ 1.20 ಕೋಟಿ ಮನೆ ಬಾಗಿಲಿಗೆ ತಲುಪಿದೆ.

Advertisement

ರಾಜ್ಯದಲ್ಲಿ 2023ರ ಡಿಸೆಂಬರ್‌ ಕೊನೆಯ ವಾರದಲ್ಲಿ ಮನೆ ಬಾಗಿಲಿಗೆ ಶ್ರೀ ರಾಮ ಅಯೋಧ್ಯೆಯ ಅನುಗ್ರಹ ಮಂತ್ರಾ­ಕ್ಷತೆ ತಲುಪಿಸುವ ಕಾರ್ಯ ಪ್ರಾರಂಭವಾಗಿದ್ದು, ಸೋಮವಾರದ (21ರ) ಸಂಜೆಯವರೆಗೂ ನಿರಂತರವಾಗಿ ಸಾಧ್ಯವಾದಷ್ಟು ಮನೆಗಳಿಗೆ ಮಂತ್ರಾಕ್ಷತೆ ತಲುಪಿಸುವ ಕೆಲಸಗಳನ್ನು ರಾಮಭಕ್ತರು ಮಾಡಿದ್ದಾರೆಂದು ವಿಶ್ವ ಹಿಂದೂ ಪರಿಷತ್‌ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಸೇವಾ ಸಂಸ್ಥೆ, ಬಜರಂಗದಳ, ವಿಶ್ವ ಹಿಂದು ಪರಿಷತ್‌ ಸೇರಿದಂತೆ ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ರಾಮಭಕ್ತರು ಕಳೆದ ಮೂರು ವಾರಗಳಿಂದ ರಾಜ್ಯದ 24,000 ಗ್ರಾಮಗಳಲ್ಲಿನ ಸುಮಾರು 1.20 ಕೋಟಿ ಮನೆಗಳಿಗೆ ತಲುಪಿದೆ. ಆ ಮೂಲಕ ಶೇ.85ರಷ್ಟು ಮನೆಗಳಿಗೆ ಅನುಗ್ರಹ ಮಂತ್ರಾಕ್ಷತೆ ನೀಡಲಾಗಿದೆ. ಮನೆಗಳ ಹೊರತಾಗಿ ಆಶ್ರಮ, ಅನಾಥಾಲಯ, ಕಂಪನಿಗಳ ಮೂಲಕ ಉದ್ಯೋಗಿಗಳಿಗೆ ತಲುಪಿಸುವ ಕಾರ್ಯವಾಗಿದೆ. ಇನ್ನೂ ಮಂತ್ರಾಕ್ಷತೆ ಸಿಗದವರಿಗೆ ಸಂಘ ಪರಿವಾರದ ಮೂಲಕ ಸಮೀಪದ ದೇವಾಲಯಗಳಲ್ಲಿ ವಿತರಿಸಲಾಗುತ್ತದೆ.

ವಿಶೇಷ ಕೋರಿಕೆ!: ಭಕ್ತರ ಮನೆ ಬಾಗಿಲಿಗೆ ಶ್ರೀರಾಮನ ಮಂತ್ರಾಕ್ಷತೆ ತಲುಪಿಸಿದ ರಾಮಭಕ್ತರು ಸಾರ್ವಜನಿಕರಲ್ಲಿ ಜ.22ರಂದು ದೇವರ ಮಂಟಪದಲ್ಲಿ ಅನುಗ್ರಹ ಮಂತ್ರಾಕ್ಷತೆ­ಯನ್ನಿಟ್ಟು ಪೂಜಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಯ ಸಮಯ ಮನೆಗಳಲ್ಲಿ ಎರಡು ದೀಪಗಳನ್ನು ಬೆಳಗುವುದರ ಜತೆಗೆ ಸಿಹಿ ಹಂಚಿ ಸಂಭ್ರಮಿಸಿ ಎನ್ನುವುದಾಗಿ ಮನವಿಯನ್ನು ಸಹ ಮಾಡಿದ್ದಾರೆ.

ವಿದೇಶಕ್ಕೂ ತಲುಪಿದೆ: ಮೂಲತಃ ಕರ್ನಾಟಕದವರಾಗಿದ್ದು, ವಿದೇಶದಲ್ಲಿ ನೆಲೆಸಿದ ಹಿಂದೂಗಳಿಗೆ ಮಂತ್ರಾಕ್ಷತೆ ತಲುಪಿಸುವ ಕೆಲಸವಾಗಿದೆ. ಈಗಾಗಲೇ ಕರ್ನಾಟಕ್ಕೆ ಬಂದು ವಿದೇಶಕ್ಕೆ ಮರಳು­ತ್ತಿರುವವರ ಮೂಲಕ ಸಂಬಂಧಿಕರು ತಮ್ಮವರಿಗೆ ಅನುಗ್ರಹ ಮಂತ್ರಾಕ್ಷತೆಯನ್ನು ತಲುಪಿಸಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿಕೊಂಡು ಕೆಲವೊಬ್ಬರು ಸಂಭ್ರಮಿಸಿರುವುದು ಕಂಡು ಬಂದಿದೆ.

Advertisement

 ಉತ್ತರ ಕರ್ನಾಟಕದಲ್ಲಿ  35 ಲಕ್ಷ ಮನೆಗೆ ಅಕ್ಷತೆ

ಹುಬ್ಬಳ್ಳಿ:  ಉತ್ತರ ಕರ್ನಾಟಕದಲ್ಲಿ ಸುಮಾರು 35 ಲಕ್ಷ ಮನೆಗಳಿಗೆ ಅಯೋಧ್ಯೆ ಮಂತ್ರಾಕ್ಷತೆ, ಶ್ರೀರಾಮನ ಫೋಟೋ, ಆಹ್ವಾನ ಪತ್ರ ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷದ್‌ ಧಾರವಾಡ ವಿಭಾಗ ಸಂಚಾಲಕ, ಮನೆ-ಮನೆಗೆ ಮಂತ್ರಾಕ್ಷತೆ ಅಭಿಯಾನದ ಧಾರವಾಡ ವಿಭಾಗ ಸಂಯೋಜಕ ವಿನಾಯಕ ತಲಗೇರಿ ತಿಳಿಸಿದ್ದಾರೆ. ಅನೇಕ ಕಡೆ ಮುಸ್ಲಿಂ-ಕ್ರೈಸ್ತರೂ ಸಹ ಮಂತ್ರಾಕ್ಷತೆಯನ್ನು ಭಕ್ತಿಯಿಂದ ಸ್ವೀಕರಿಸಿದ್ದಾರೆ. ಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೆ ಉತ್ತರ ಕರ್ನಾಟಕದ 100 ಮಠಾಧೀಶರಿಗೆ ಅಯೋಧ್ಯೆ­ಯಿಂದಲೇ ಆಹ್ವಾನ ಬಂದಿದೆ ಎಂದು ಅವರು ತಿಳಿಸಿದ್ದಾರೆ.

 ಮಂದಿರ ತೀರ್ಪು ನೀಡಿದ್ದ ನ್ಯಾಯಮೂರ್ತಿ ಭೂಷಣ್‌ ಮಾತ್ರವೇ ಉದ್ಘಾಟನೆಗೆ ಹಾಜರಿ

ರಾಮಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಪಂಚಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿಗಳ ಪೈಕಿ ನಿವೃತ್ತ ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಮಾತ್ರವೇ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ. ಪೀಠದಲ್ಲಿದ್ದ ಆಗಿನ ಸಿಜೆಐ ರಂಜನ್‌ ಗೊಗೋಯ್‌, ನಿವೃತ್ತ ಸಿಜೆಐ ಎಸ್‌.ಎ.ಬೋಬ್ಡೆ ,ಹಾಲಿ ಸಿಜೆಐ ಡಿ.ವೈ.ಚಂದ್ರಚೂಡ್‌ ಮತ್ತು ನಿವೃತ್ತ ನ್ಯಾಯಮೂರ್ತಿಗಳಾದ ಎಸ್‌.ಅಬ್ದುಲ್‌ ನಜೀರ್‌ಗೆ ಆಹ್ವಾನವಿದ್ದರೂ ವಿವಿಧ ಕಾರಣಗಳಿಂದಾಗಿ ಹಾಜರಾಗುತ್ತಿಲ್ಲ.

 ಪ್ರತಿ 2 ಗಂಟೆಗೆ ದುಪ್ಪಟ್ಟಾಗುತ್ತಿದೆ  ಮಂದಿರ ಅನುದಾನ

ಪ್ರಾಣ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ದೇಶದ ಮೂಲೆ-ಮೂಲೆಗಳಿಂದ ರಾಮಭಕ್ತರು ದೇಗುಲಕ್ಕೆ ದೇಣಿಗೆ ನೀಡುತ್ತಿದ್ದಾರೆ. ಭಾನುವಾರದ ವೇಳೆಗೆ ಭಕ್ತರು ನೀಡುತ್ತಿರುವ ದೇಣಿಗೆ ಪ್ರತಿ 2 ಗಂಟೆ­ ಗೊಮ್ಮೆ ದುಪ್ಪಟ್ಟಾಗುತ್ತಿದೆ ಎನ್ನಲಾಗಿದೆ.

ಮಲ್ಟಿಪ್ಲೆಕ್ಸ್‌, ಮಳಿಗೆಗಳಲ್ಲಿ ನೇರಪ್ರಸಾರಕ್ಕೆ  ಕಾರ್ಪೋರೆಟ್‌ ಸಂಸ್ಥೆಗಳ ಸಹಕಾರ

ಅಯೋಧ್ಯೆಯ ಸಂಭ್ರಮವನ್ನು ದುಪ್ಪಟ್ಟಾಗಿಸಲು ನಡೆಸುತ್ತಿರುವ ಎಲ್ಲ ಪ್ರಯತ್ನಗಳಿಗೂ ಅಲ್ಲಿನ ಸ್ಥಳೀಯ ಕಾರ್ಪೋರೆಟ್‌ ಸಂಸ್ಥೆಗಳು ಕೈ ಜೋಡಿಸಿ,ದೊಡ್ಡ ದೊಡ್ಡ ಮಳಿಗೆಗಳಲ್ಲಿ, ರಸ್ತೆಗಳಲ್ಲಿ ಎಲ್‌ಇಡಿಗಳನ್ನು ಅಳವಡಿಸುವಂಥ ವಿವಿಧ ರೀತಿಯ ಕೆಲಸಗಳಲ್ಲಿ ಕೊಡುಗೆ ನೀಡುತ್ತಿವೆ. ಕೆಲವು ಸಂಸ್ಥೆಗಳು, ಮಳಿಗೆಗೆಳು ಸ್ವಯಂಪ್ರೇರಣೆಯಿಂದ ಕಟ್ಟಡಗಳನ್ನು ದೀಪಗಳಿಂದ ಅಲಂಕರಿಸಿ ಎಲ್‌ಇಡಿ ಪರದೆ ಗಳನ್ನೂ ಅಳವಡಿಸುವ ಮೂಲಕ ಅಯೋಧ್ಯೆ ಸಂಭ್ರಮ ಕಣ್ತುಂಬಿಕೊಳ್ಳಲು ಜನರಿಗೆ ಅವಕಾಶ ಮಾಡಿಕೊಟ್ಟಿವೆ. ಪಿವಿಆರ್‌ ಐನಾಕ್ಸ್‌ ಪ್ರಾಣ ಪ್ರತಿಷ್ಠೆ ಸಮಾರಂಭವನ್ನು ನೇರ ಪ್ರಸಾರ ಮಾಡಲಿದೆ.

 ಅಯೋಧ್ಯೆಯಲ್ಲಿ ಹನುಮ ಮಂದಿರ ಶುಚಿಗೊಳಿಸಿದ ಕಂಗನಾ

ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅಯೋಧ್ಯೆ ತಲುಪಿದ್ದು, ಶ್ರೀರಾಮ­ಮಂದಿರ ಉದ್ಘಾಟನಾ ಕಾರ್ಯಕ್ರಮ ಮುಗಿಯೋವರೆಗೂ ಅಯೋಧ್ಯೆ­ಯಲ್ಲಿರೋದಾಗಿ ತಿಳಿಸಿದ್ದಾರೆ. “ರಾಮ­ಮಂದಿರ ಕೇವಲ ಪ್ರತಿಮೆಯಲ್ಲ. ಈ ಘಳಿಗೆ ಭಾರತದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ’ ಎಂದಿರುವ ಕಂಗನಾ, “ಈ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲು ಸಾಧ್ಯವಾಗುವುದು ತಮ್ಮ ಹಿಂದಿನ ಜೀವನದ ಕರ್ಮದ ಫ‌ಲವಾಗಿ. ಈ ಮಹತ್ವದ ದಿನವನ್ನು ತರ ಲು ದೇಶವು ಒಗ್ಗೂಡಿದ್ದು, ಇಡೀ ರಾಷ್ಟ್ರಕ್ಕಿ ದು ಅದೃಷ್ಟ. ಅಯೋಧ್ಯೆಯ ದರ್ಶನ ಪಡೆಯಲು ಹಲವು ಜನ್ಮಗಳ ಪುಣ್ಯ ಮಾಡಿರಬೇಕು’ ಎಂದು ಹೇಳಿ­ದ್ದಾರೆ. ರಾಮ ಮಂದಿರ ಉದ್ಘಾಟನಾ ಸಮಾ­ರಂಭಕ್ಕೂ ಮುನ್ನ ಗುರು ರಾಮಭದ್ರಾ­ಚಾರ್ಯರನ್ನು ಭೇಟಿಯಾಗಿ ಆಶೀ­ರ್ವಾದ ಪಡೆದ ಕಂಗನಾ, ಹನುಮಾನ್‌ ಮಂದಿರವನ್ನು ಶುಚಿಗೊಳಿ­ಸುವ ಕಾರ್ಯದಲ್ಲೂ ಭಾಗಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next