Advertisement

BJP ವಿರೋಧಿ ಹೇಳಿಕೆ; ರೇಣುಕಾಚಾರ್ಯ ಅವರಿಗೆ ಎಚ್ಚರಿಕೆ ನೀಡಲಾಗಿದೆ:ಬಿ.ಪಿ. ಹರೀಶ್

05:51 PM Jan 20, 2024 | Team Udayavani |

ದಾವಣಗೆರೆ: ರಾಜ್ಯ ಬಿಜೆಪಿಯಲ್ಲಿ ಇರುವ ತೀವ್ರ ಭಿನ್ನಮತ ಲೋಕಸಭಾ ಚುನಾವಣೆ ವೇಳೆ ತೀವ್ರವಾಗುತ್ತಿದ್ದು,ಇದಕ್ಕೆ ಸಾಕ್ಷಿಯಾಗಿ ದಾವಣಗೆರೆಯ 40 ಬಿಜೆಪಿ ಮುಖಂಡರ ನಿಯೋಗ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಪಕ್ಷದ ರಾಜ್ಯದ ಉನ್ನತ ನಾಯಕರಿಗೆ ದೂರು ನೀಡಿದೆ.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್ ಹೇಳಿಕೆ ನೀಡಿ, ”ಪಕ್ಷ ವಿರೋಧಿ ಹೇಳಿಕೆ ನೀಡದಂತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವ ಬಗ್ಗೆ ತಾವೂ ಸೇರಿದಂತೆ ಜಿಲ್ಲೆಯ 40 ಜನರ ನಿಯೋಗ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಘಟನಾ ಕಾರ್ಯದರ್ಶಿ ರಾಜೇಶ್ ಹಾಗೂ ಜಿಲ್ಲೆಯ ಉಸ್ತುವಾರಿ ಪ್ರೀತಮ್ ಗೌಡ ಅವರನ್ನು ಶುಕ್ರವಾರ ಭೇಟಿಯಾಗಿ ದೂರು ನೀಡಿದ್ದೇವೆ” ಎಂದು ತಿಳಿಸಿದ್ದಾರೆ.

”ತತ್ ಕ್ಷಣ ಸ್ಪಂದಿಸಿದ ಯಡಿಯೂರಪ್ಪ ಅವರು, ರೇಣುಕಾಚಾರ್ಯ ಅವರಿಗೆ ದೂರವಾಣಿ ಕರೆ ಮಾಡಿ, ಇನ್ನು ಮುಂದೆ ಪಕ್ಷ ವಿರೋಧಿ ಹೇಳಿಕೆ ನೀಡಿದರೆ, ಶಿಸ್ತು ಕ್ರಮ ಕೈಗೊಂಡು ಪಕ್ಷದಿಂದ ಉಚ್ಛಾಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ರೇಣುಕಾಚಾರ್ಯ ಅವರು ಕೆಲ ದಿನಗಳಿಂದ ಸಂಸದ ಜಿ.ಎಂ. ಸಿದ್ದೇಶ್ವರ ಹೊರ ಜಿಲ್ಲೆಯವರು, ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಒಳಗಿನವರಿಗೆ ಟಿಕೆಟ್ ನೀಡಬೇಕು ಎಂದು ಹೇಳಿಕೆ ನೀಡಿದ್ದರು.
ಅವರಿಗೆ ಅನ್ಯಾಯವಾಗಿದ್ದರೆ, ಪಕ್ಷದ ರಾಜ್ಯ ಮುಖಂಡರನ್ನು ಭೇಟಿಯಾಗಿ ಸರಿಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಪದೇ, ಪದೇ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡಿ, ಪಕ್ಷದ ಬೆಳವಣಿಗೆಗೆ ಕಂಟಕ ತರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪಕ್ಷದ ಕಾರ್ಯಕರ್ತರು ಸಹ ಸಹಕಾರ ನೀಡಬಾರದು” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next