Advertisement

ತಲ್ಲಣಿಸದಿರು ಕಂಡ್ಯ ತಾಳು ಮನವೆ

05:54 PM Aug 06, 2019 | mahesh |

ತರಗತಿಯಲ್ಲಿ ಒಬ್ಬ ಹುಡುಗ ಮಮತಾಗೆ ಇಷ್ಟವಾಗಿದ್ದ. ವಿಷಯವನ್ನು ಅವನಲ್ಲಿ ಪ್ರಸ್ತಾಪಿಸಿದಾಗ, ಅವನು ಒಪ್ಪಿಗೆ ಕೊಡಬಹುದಿತ್ತು ಅಥವಾ ತಿರಸ್ಕರಿಸಬಹುದಿತ್ತು. ಆದರೆ, ಅವನು ಆ ವಿಷಯವನ್ನು ತರಗತಿಯಲ್ಲೆಲ್ಲಾ ಪ್ರಚಾರ ಮಾಡಿಬಿಟ್ಟ.

Advertisement

ಮಮತಾಗೆ ಹದಿನಾಲ್ಕು ವರ್ಷ. ಒಂಬತ್ತನೇ ತರಗತಿಯಲ್ಲಿದ್ದಾಳೆ. ಮನೆಯಲ್ಲಿ ತಾಯಿಯೊಡನೆ ಯಾವಾಗಲೂ ಜಗಳವಾಡುತ್ತಾಳೆ. ಶಾಲೆಯಲ್ಲಿ ಸಹಪಾಠಿಗಳು ಇವಳಿಗಿಂತ ಹೆಚ್ಚಿನ ಅಂಕ ಪಡೆದರೆ, ಇವಳಿಗೆ ಹೊಟ್ಟೆಕಿಚ್ಚು, ತಡೆಯಲಾರದಷ್ಟು ಕೋಪ. ಮನೋವೈದ್ಯರ ಬಳಿ ವೈದ್ಯಕೀಯ ಚಿಕಿತ್ಸೆಯಾಗಿದೆ. ಆದರೂ, ಮಮತಾಳ ಸಿಟ್ಟು ಇಳಿಯುತ್ತಿಲ್ಲ.

ಮನೆಯಲ್ಲಿನ ವಸ್ತುಗಳನ್ನು ಯಾವಾಗ ಮುರಿಯುತ್ತಾಳ್ಳೋ, ಎಸೆಯುತ್ತಾಳ್ಳೋ ಎಂದು ಹೆತ್ತವರಿಗೆ ಭಯ. ಜೊತೆಗೆ ಚಾಕು, ಬ್ಲೇಡ್‌, ಚೂಪಾದ ಪೆನ್ಸಿಲ್‌ ಅಥವಾ ತನ್ನ ಉಗುರಿನಿಂದಲೇ ರಕ್ತ ಬರುವವರೆಗೆ ಮೈ- ಕೈಯೆಲ್ಲ ಗೀರಿಕೊಳ್ಳುತ್ತಾಳೆ. ಈ ರೌದ್ರಾವತಾರ ಕಡಿಮೆಯಾಯಿತು ಎಂದರೆ, ಒಬ್ಬಳೇ ಕೂರುತ್ತಾಳೆ, ಮಾತೇ ಇರುವುದಿಲ್ಲ. ಒಂದು ದಿನ ಬಹಳ ಖುಷಿಯಲ್ಲಿದ್ದರೆ, ಮತ್ತೂಂದು ದಿನ ಸಿಕ್ಕಾಪಟ್ಟೆ ಬೇಸರ. ತೀರಾ ಇತ್ತೀಚಿಗಿನವರೆಗೂ ಚೆನ್ನಾಗಿಯೇ ಇದ್ದ ಮಮತಾ, ಕಳೆದ ಹತ್ತು ತಿಂಗಳಿನಿಂದ ಹೀಗಾಗಿದ್ದಾಳೆ.

ಮಮತಾ, ನೋಡಲು ಮುದ್ದಾಗಿದ್ದರೂ, ದಷ್ಟಪುಷ್ಟವಾಗಿ ಬೆಳೆದಿದ್ದಳು. ತೀರಾ ದಪ್ಪ ಎನ್ನಲು ಸಾಧ್ಯವಿಲ್ಲ. ಆದರೆ, ಶಾಲೆಯಲ್ಲಿ ಹುಡುಗರು ತೆಳ್ಳಗೆ ಇರುವ ಹುಡುಗಿಯರನ್ನು ಇಷ್ಟಪಡುತ್ತಾರೆಂದು, ಹುಡುಗಿಯರೆಲ್ಲರೂ ತೀರಾ ತೆಳ್ಳಗಾಗಲು ಬಯಸುತ್ತಾರಂತೆ. ಮಮತಾ ಕೂಡಾ ತೆಳ್ಳಗಾಗಲು ಪ್ರಯತ್ನಿಸುತ್ತಿದ್ದಳು. ಎಷ್ಟೇ ವ್ಯಾಯಾಮ ಮಾಡಿದರೂ ತೂಕ ಇಳಿಯುತ್ತಿಲ್ಲ. ನಾನು ನೋಡಲು ಅಸಹ್ಯವಾಗಿದ್ದೇನೆ ಎಂಬುದು ಆಕೆಯ ಬಲವಾದ ನಂಬಿಕೆಯಾಗಿತ್ತು.

ಜೊತೆಗೆ, ಅವಳ ಮನಸ್ಸಿಗೆ ಮತ್ತಷ್ಟು ನೋವುಂಟು ಮಾಡಿದ್ದು, ಅಸಫ‌ಲ ಪ್ರೇಮ ನಿವೇದನೆ. ತರಗತಿಯಲ್ಲಿ ಒಬ್ಬ ಹುಡುಗ ಮಮತಾಗೆ ಇಷ್ಟವಾಗಿದ್ದ. ವಿಷಯವನ್ನು ಅವನಲ್ಲಿ ಪ್ರಸ್ತಾಪಿಸಿದಾಗ, ಅವನು ಒಪ್ಪಿಗೆ ಕೊಡಬಹುದಿತ್ತು ಅಥವಾ ತಿರಸ್ಕರಿಸಬಹುದಿತ್ತು. ಆದರೆ, ಅವನು ಆ ವಿಷಯವನ್ನು ತರಗತಿಯಲ್ಲೆಲ್ಲಾ ಪ್ರಚಾರ ಮಾಡಿಬಿಟ್ಟ. ಅದರಿಂದ ಇವಳಿಗೆ ಅವಮಾನವಾಯ್ತು. ಆ ಘಟನೆಯಿಂದ ಮನಸ್ಸು ಸರಿಯಾಗುವ ಹೊತ್ತಿಗೆ, ಮತ್ತೂಬ್ಬ ಹುಡುಗ ಇಷ್ಟವಾದನಂತೆ. ಆದರೆ, ಒಂದು ದಿನ ಅವನು ಬೇರೆ ಹುಡುಗಿಗೆ ಐ ಲವ್‌ ಯೂ ಚೀಟಿ ಕೊಟ್ಟಿದ್ದು ಗೊತ್ತಾಗಿ ಮಮತಾಗೆ ಸಿಕ್ಕಾಪಟ್ಟೆ ನಿರಾಸೆ/ಸಂಕಟ. ಕನಸು ಕಾಣಲು ಒಬ್ಬ ಹೀರೋ ಇರಬೇಕು ಎಂಬ ಚಡಪಡಿಕೆ ನೆರವೇರಿಲ್ಲವೆಂದು, ಕೈಯೆಲ್ಲಾ ಕುಯ್ದುಕೊಂಡಿದ್ದಾಳೆ.
ಈ ವಿಷಯವನ್ನೆಲ್ಲ ಕಟ್ಟುನಿಟ್ಟಿನ ತಾಯಿಯ ಬಳಿ ಹೇಳಿಕೊಂಡರೆ, ಅವರು ಬೆಲ್ಟ… ತೆಗೆದು ಬಾರಿಸುತ್ತಾರೆ. ಆ ಭಯದಿಂದ, ಯಾರಲ್ಲೂ ಹೇಳಿಕೊಳ್ಳಲಾರದೇ ಪರದಾಡುತ್ತಿದ್ದಳು. ಜೊತೆಗೆ, ಅಂಕಗಳು ಕಡಿಮೆಯಾಗಿ, ತಾಯಿ ತರಾಟೆಗೆ ತೆಗೆದುಕೊಂಡಿದ್ದಾರೆ. ಡ್ರಾಮಾ ಕ್ವೀನ್‌ ಎಂದೂ ಬೈದುಬಿಟ್ಟಿದ್ದಾರೆ. ಇವಳ ಆತ್ಮೀಯ ಸ್ನೇಹಿತೆಯೊಬ್ಬಳು ಪಬ್‌ಗ ಹೋಗಿ ಮಜಾ ಮಾಡಿದ ಕಥೆಗಳನ್ನು ವರ್ಣಮಯವಾಗಿ ವಿವರಿಸಿದ್ದನು ಕೇಳಿ, ಈಕೆಯೂ ಪಬ್‌ ಸಂಸ್ಕೃತಿಯ ಕಡೆಗೆ ಆಕರ್ಷಿತಳಾಗಿದ್ದಳು. ಆದರೆ, ತಾಯಿಯ ಕಣ್ಗಾವಲಿನಲ್ಲಿ ಕದ್ದು ಪಬ್‌ಗ ಹೋಗಲು ದುಸ್ಸಾಧ್ಯವಾದ್ದರಿಂದ ಸಿಟ್ಟು-ಕೋಪ ವ್ಯಕ್ತಪಡಿಸಿದ್ದಾಳೆ.

Advertisement

ಇದು ಆಕೆಯೊಬ್ಬಳ ಸಮಸ್ಯೆಯಲ್ಲ. ಹದಿ ಹರೆಯದ ಹಾರ್ಮೋನುಗಳ ಬದಲಾವಣೆಯಿಂದ ಶರೀರ, ಪ್ರೇಮ- ಕಾಮಗಳ ನಡುವಿನ ಅರ್ಥವನ್ನು ತಿಳಿಯದೇ ಒದ್ದಾಡುತ್ತದೆ. ಪ್ರೇಮದ ಕಥೆಗಳನ್ನು ಅನುಭವಿಸಲು ಶರೀರ, ಮನಸ್ಸು ಹಾತೊರೆದರೂ, ಅದರ ಹತೋಟಿ ಮುಖ್ಯವೆಂದು ಮಮತಾಳಿಗೆ ಮನವರಿಕೆ ಮಾಡಿಕೊಟ್ಟೆ. ಆಸೆಗಳು ಈಡೇರದಿದ್ದಾಗ ಕೋಪ ಬರುವುದು ಸಹಜ. ಕಾಮನೆಗಳು ತಕ್ಷಣಕ್ಕೆ ಅನುಭವಕ್ಕೆ ಬರಬೇಕು ಎಂಬ ಹಪಾಹಪಿ ಕಡಿಮೆ ಮಾಡಿಸಿದ ಮೇಲೆ, ಈಗ ಓದಿನ ಕಡೆ ಗಮನ ಕೊಡುತ್ತಿದ್ದಾಳೆ.

– ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next