Advertisement

ಮಾತಿಗೆ ಮಿತಿ ಹಾಕಲು ಮತ್ತೂಂದು ಎಚ್ಚರಿಕೆ

10:48 PM Apr 22, 2019 | Team Udayavani |

ನ್ಯಾಯಾಲಯಗಳು ನಿರ್ದಿಷ್ಟ ಪ್ರಕರಣ ಮತ್ತು ಸೂಕ್ಷ್ಮ ವಿಚಾರಗಳ ಬಗ್ಗೆ ಅಭಿಪ್ರಾಯ, ತೀರ್ಪು ನೀಡಿದಾಗ ಅವುಗಳ ಮೂಲಕ ವಿರೋಧಿಗಳನ್ನು ಹಣೆಯಲು ಹೊರಟಾಗ ಏನಾಗುತ್ತದೆ ಎನ್ನುವುದಕ್ಕೆ ಸೋಮವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ ಜ್ವಲಂತ ಉದಾಹರಣೆ.

Advertisement

ರಫೇಲ್‌ ವಿವಾದಕ್ಕೆ ಸಂಬಂಧಿಸಿ ಏ.10ರಂದು ಸುಪ್ರೀಂಕೋರ್ಟ್‌ ಸೋರಿಕೆಯಾದ ದಾಖಲೆಗಳನ್ನು ಪರಿಗಣಿಸಬಹುದು ಎಂದು ಹೇಳಿತ್ತು. ಆ ದಿನ ಅಮೇಠಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ್ದ ಕಾಂಗ್ರೆಸ್‌ ಅಧ್ಯಕ್ಷರು ಹಾಲಿ ಸರ್ಕಾರ, ಪ್ರಧಾನಿ ವಿರುದ್ಧ ಗುರುತರ ಆರೋಪ ಮಾಡಿದ್ದರು. ಅದರ ವಿರುದ್ಧ ಸುಪ್ರೀಂಕೋರ್ಟ್‌ ನ್ಯಾಯವಾದಿ, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ರಾಹುಲ್‌ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ ಮೊಕದ್ದಮೆ ಹೂಡಿದ್ದರು. ಅದನ್ನು ಪರಿಶೀಲಿಸಿದ್ದ ಸುಪ್ರೀಂಕೋರ್ಟ್‌ ವಿವರಣೆ ನೀಡುವಂತೆ ಆದೇಶ ನೀಡಿತ್ತು. ಚುನಾವಣೆಯ ಪ್ರಚಾರದ ರಭಸದಲ್ಲಿ ಅಂಥ ಹೇಳಿಕೆ ನೀಡಿದ್ದೆ. ನ್ಯಾಯಾಂಗದ ಮೇಲೆ ಗೌರವ ಇದೆ ಎಂದು ಅಫಿಡಟವಿಟ್‌ಲ್ಲಿ ಅರಿಕೆ ಮಾಡಿಕೊಂಡಿದ್ದಾರೆ.

ಸುಪ್ರೀಂಕೋರ್ಟ್‌ ತೀರ್ಪಿಗಿಂತ ಮೊದಲೇ ಪ್ರಧಾನಿ ನರೇಂದ್ರ ಮೋದಿಯವರನ್ನು “ಕಾವಲುಗಾರ ಕಳ್ಳ’ ಎಂದು ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷರು ಮತ್ತು ಇತರ ಪ್ರತಿಪಕ್ಷಗಳ ನಾಯಕರು ಪ್ರಬಲವಾಗಿ ಖಂಡಿಸುತ್ತಿದ್ದರು. ಏ.10ರಂದು ರಾಹುಲ್‌ ಗಾಂಧಿಯವರು ಸುಪ್ರೀಂಕೋರ್ಟ್‌ ನೀಡಿದ್ದ ಆದೇಶವನ್ನು ಪರಿಶೀಲಿಸಿ, ಪ್ರತಿಕ್ರಿಯೆ ನೀಡಿರುತ್ತಿದ್ದರೆ ಈ ಮುಜುಗರ ತಪ್ಪಿಸಿಕೊಳ್ಳಬಹುದಾಗಿತ್ತು.

ಚುನಾವಣೆಯ ಸಂದರ್ಭಗಳಲ್ಲಿ ಹೆಚ್ಚು ಮತಲಾಭ ಮಾಡಿಕೊಳ್ಳುವುದೇ ಎಲ್ಲಾ ಪಕ್ಷಗಳ ಆದ್ಯತೆಯಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ಮಾತುಗಳಿಗೆ ಕಡಿವಾಣ ಎನ್ನುವುದೇ ಇರುವುದಿಲ್ಲ. ಇಲ್ಲಿ ನೇರವಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಪ್ರಕರಣ ಎನ್ನುವುದು ನೇರ ದೃಷ್ಟಾಂತ. ಆದರೆ, ಅದು ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿಗೆ, ಸಾಮಾಜಿಕ ಕ್ಷೇತ್ರದಲ್ಲಿ ಪ್ರಮುಖರಿಗೆ ಅನ್ವಯವಾಗುತ್ತದೆ.

ಕೋರ್ಟ್‌ ತೀರ್ಪು, ಅಭಿಪ್ರಾಯಗಳನ್ನು ಸರಿಯಾಗಿ ಅಧ್ಯಯನ ನಡೆಸದೆ ಏಕಪಕ್ಷೀಯವಾಗಿ ಮಾತನಾಡುವುದರಿಂದ ಏನಾಗುತ್ತದೆ ಎಂಬ ವಿಚಾರಕ್ಕೆ ಇದು ಸರಿಯಾದ ಪಾಠ. ಏ.10ರಂದು ರಫೇಲ್‌ ಡೀಲ್‌ಗೆ ಸಂಬಂಧಿಸಿದ ಕೆಲ ದಾಖಲೆಗಳು ಸೋರಿಕೆಯಾಗಿದೆ ಎಂದು ಹೇಳಲಾಗಿರುವ ಅಂಶದ ಬಗ್ಗೆ ಸುಪ್ರೀಂಕೋರ್ಟ್‌ ಹೇಳಿದ್ದೇನೆಂದರೆ, ವಿಚಾರಣೆಯಲ್ಲಿ ಅವುಗಳನ್ನು ಪರಿಗಣಿಸಬಹುದು ಎಂದಿತ್ತು. ದಾಖಲೆಗಳನ್ನು ಅಂಗೀಕರಿಸಬಹುದು ಮತ್ತು ತಪ್ಪಿತಸ್ಥರು ಎಂದು ಕೋರ್ಟ್‌ ಹೇಳುವುದರಲ್ಲಿ ಪದಗಳ ಬಳಕೆ ಮತ್ತು ಅರ್ಥದಲ್ಲಿ ಬಹಳ ವ್ಯತ್ಯಾಸ ಉಂಟು. ಅವರ ಪಕ್ಷದಲ್ಲಿ ನ್ಯಾಯಾಂಗ ಕ್ಷೇತ್ರದಲ್ಲಿ ನುರಿತ ಮುಖಂಡರಾದ ಚಿದಂಬರಂ, ಕಪಿಲ್‌ ಸಿಬಲ್‌, ಅಭಿಷೇಕ್‌ ಮನು ಸಿಂಘ್ವಿ ಇದ್ದರು. ಅವರ ಜತೆಗೆ ಹೇಳಿಕೆ ನೀಡುವ ಮೊದಲು ಪರಾಮರ್ಶೆ ನಡೆಸಬಹುದಾಗಿದ್ದರೂ, ಅದಕ್ಕೆ ಮನಸ್ಸು ಮಾಡಲಿಲ್ಲ.

Advertisement

ಸಾರ್ವಜನಿಕ ಕ್ಷೇತ್ರದಲ್ಲಿರುವ ಮುಖಂಡರು ಮತ್ತು ನಾಯಕರು ವಿವಾದಿತ ಹೇಳಿಕೆ ನೀಡಿದ ಬಳಿಕ ಮಾಧ್ಯಮಗಳು ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿವೆ ಎಂದು ಪಾರಾಗುವ ಹೇಳಿಕೆ ನೀಡುತ್ತಾರೆ. ನೇರ ಪ್ರಸಾರದ ಈ ದಿನಗಳಲ್ಲಿ ತಪ್ಪಾಗಿ ತಿಳಿದುಕೊಳ್ಳುವುದಕ್ಕೆ ಅವಕಾಶವೇ ಇಲ್ಲ. ಗ್ರಾಮದಿಂದ ವಿಶ್ವಾದ್ಯಂತ ಒಂದು ಘಟನೆಯ ಬಗ್ಗೆ ಮಾಹಿತಿ ರವಾನೆಯಾಗುವ ದಿನಮಾನದಲ್ಲಿ ಇರುವಾಗ ರಾಜಕೀಯ ವಿರೋಧಿಗಳು ನನ್ನ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳುವುದೇ ಪ್ರಶ್ನಾರ್ಹ.

ಹಾಲಿ ಚುನಾವಣೆಯಲ್ಲಿ ಯೋಧರ ವಿಚಾರ, ಧರ್ಮ ಸೂಕ್ಷ್ಮ ವಿಚಾರಗಳನ್ನು ಪ್ರಚಾರದ ಅವಧಿಯಲ್ಲಿ ಉಲ್ಲೇಖೀಸಬಾರದು ಎಂದು ಆದೇಶ ನೀಡಿತ್ತು. ಆದರೆ ಅದು ಯಾವುದೂ ಪಾಲನೆಯಾಗುತ್ತಿಲ್ಲ. ಅದಕ್ಕೆ ಕಾರಣವೇನೆಂದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ವ್ಯವಸ್ಥೆಯಲ್ಲಿನ ಅಡ್ಡಿ ಎದುರಾಗುತ್ತಿದೆ. ಕರ್ತವ್ಯನಿಷ್ಠ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ನಿಯಮ ಪಾಲನೆ ಮಾಡುವುದಿದ್ದರೆ ಹಲವು ರೀತಿಯ ಅಡ್ಡಿಗಳನ್ನು ಅವರಿಗೆ ಒಡ್ಡಲಾಗುತ್ತದೆ. ನೈತಿಕ ಸ್ಥೈರ್ಯಕ್ಕೆ ಪ್ರಶ್ನೆ ಮಾಡುವ ವಿಚಾರ ಬಂದಾಗ ಯಾವುದೇ ಹಂತದ ಆದೇಶ ಇದ್ದರೂ, ಅದನ್ನು ಪಾಲಿಸಲು ಅಧಿಕಾರಿ ವರ್ಗ ಹಿಂದೇಟು ಹಾಕುತ್ತದೆ.

ಹೀಗಾಗಿ, ರಾಜಕೀಯ ಮುಖಂಡರು, ಸಾಮಾಜಿಕವಾಗಿ ಜನಪ್ರಿಯತೆ ಹೊಂದಿರುವವರು ಚುನಾವಣೆಯಂಥ ಸಂದರ್ಭಗಳಲ್ಲಿ ಎಲ್ಲೆ ಮೀರಿ ಮಾತನಾಡುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಇಂಥ ಸಂದರ್ಭದಲ್ಲಿ ನ್ಯಾಯಾಂಗ ಕೈಗೊಳ್ಳುವ ಕ್ರಮವನ್ನು ಮೆಚ್ಚಲೇಬೇಕಾಗುತ್ತದೆ. ದೇಶದಲ್ಲಿ ಇನ್ನೂ ನಾಲ್ಕು ಹಂತಗಳ ಚುನಾವಣೆ ಬಾಕಿ ಉಳಿದಿವೆ. ಹೀಗಾಗಿ, ಪಕ್ಷಭೇದವಿಲ್ಲದೆ ಸುಪ್ರೀಂಕೋರ್ಟ್‌ಗೆ ಕಾಂಗ್ರೆಸ್‌ ಅಧ್ಯಕ್ಷರು ಸಲ್ಲಿಸಿದ ಅಫಿಡವಿಟ್‌ ತಮಗೂ ಎಚ್ಚರಿಕೆ ಎಂದು ಪರಿಗಣಿಸಿದರೆ ಸುಲಲಿತ ಚುನಾವಣೆಗೆ ಮಾರ್ಗದರ್ಶಿಯಾದೀತು. ಈ ನಿಟ್ಟಿನಲ್ಲಿ ಸೋಮವಾರದ ಬೆಳವಣಿಗೆಯನ್ನು ಮಾದರಿಯಾಗಿ ಪರಿಗಣಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next