Advertisement

ನಿಫಾ: ಸಾವಿನ ಸಂಖ್ಯೆ 12ಕ್ಕೆ ಏರಿಕೆ

06:00 AM May 27, 2018 | |

ತಿರುವನಂತಪುರ: ಕೇರಳದಲ್ಲಿ ನಿಫಾ ವೈರಸ್‌ನಿಂದ ಮತ್ತೋರ್ವರು ಸಾವಿಗೀಡಾಗಿದ್ದು, ಮೃತರ ಸಂಖ್ಯೆ ಶನಿವಾರ 12ಕ್ಕೇರಿದೆ. ಇದೇ ತಿಂಗಳ 16ರಿಂದ ಇಲ್ಲಿನ ಮೆಡಿಕಲ್‌ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 75 ವರ್ಷದ ಕಲ್ಯಾಣಿ ಅವರು ಶನಿವಾರ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ. 15 ಮಂದಿಗೆ ಸೋಂಕು ತಗಲಿದ್ದು, ಈ ಪೈಕಿ 12 ಮಂದಿ ಅಸುನೀಗಿದ್ದಾರೆ. ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದೆ.

Advertisement

ಇನ್ನೊಂದೆಡೆ, ನಿಫಾ ವೈರಸ್‌ ಬಾವಲಿ  ಹಾಗೂ ಹಂದಿಗಳಿಂದ ಹರಡುತ್ತಿದೆ ಎಂದೇ ಈ ವರೆಗೆ ಹೇಳಲಾಗಿತ್ತು. ಆದರೆ ಈ ಸೋಂಕಿನ ಮೂಲ ಬಾವಲಿಯಾಗಲೀ, ಹಂದಿಯಾಗಲೀ ಅಲ್ಲ ಎಂದು ಭೋಪಾಲ್‌ನ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಹೈ ಸೆಕ್ಯೂರಿಟಿ ಆ್ಯನಿಮಲ್‌ ಡಿಸೀಸ್‌ (ಎನ್‌ಐಎಚ್‌ಎಸ್‌ಎಡಿ) ಪ್ರಯೋಗಾಲಯ ತಿಳಿಸಿದೆ. ಈ ಅಂಶವನ್ನು ಕೇಂದ್ರದ ತಜ್ಞರ ತಂಡವು ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲೂ ಉಲ್ಲೇಖೀಸಿದೆ.

ಕಲ್ಲಿಕೋಟೆ ಮತ್ತು ಮಲಪ್ಪುರಂನಿಂದ ಕಳುಹಿಸ ಲಾಗಿದ್ದ ಬಾವಲಿ, ಹಂದಿ, ಮೇಕೆ ಹಾಗೂ ಜಾನು ವಾರುಗಳ 21 ಸ್ಯಾಂಪಲ್‌ಗ‌ಳನ್ನು ಪರೀಕ್ಷಿಸಿರುವ  ಭೋಪಾಲ್‌ನ ಪ್ರಯೋಗಾಲಯ ಅವುಗಳಲ್ಲಿ ನಿಫಾ ಸೋಂಕು ಇಲ್ಲ ಎಂದು ಹೇಳಿದೆ. ಹೀಗಾಗಿ ಸಾಕು ಪ್ರಾಣಿಗಳಿಂದ ಸೋಂಕು ಹರಡಬಹುದು ಎಂಬ ಭೀತಿ ದೂರವಾಗಿದೆ. ಆದರೆ ನಿಫಾ ವೈರಸ್‌ನ ಮೂಲ ಯಾವುದು ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿದೆ.

ಜಾಗೃತಿ ಮೂಡಿಸಿ: ಎಚ್‌ಡಿಕೆ
ಕೇರಳದಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಸ್‌ ಹಾಗೂ ಆ ರೋಗದ ಗುಣಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿಯವರು, ಜಿಲ್ಲಾ ಆರೋಗ್ಯಾಧಿಕಾರಿಗಳು ಇದರ ಬಗ್ಗೆ ನಿಗಾ ವಹಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಿ ಆತಂಕ ನಿವಾರಿಸಬೇಕು ಎಂದು ತಿಳಿಸಿದ್ದಾರೆ. ಜತೆಗೆ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ನಿಫಾ ಕುರಿತು ಎಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳ ಸಭೆ ನಡೆಸಿ ಸಲಹೆ-ಸೂಚನೆ ನೀಡಬೇಕು ಎಂದು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next