Advertisement
ಇನ್ನೊಂದೆಡೆ, ನಿಫಾ ವೈರಸ್ ಬಾವಲಿ ಹಾಗೂ ಹಂದಿಗಳಿಂದ ಹರಡುತ್ತಿದೆ ಎಂದೇ ಈ ವರೆಗೆ ಹೇಳಲಾಗಿತ್ತು. ಆದರೆ ಈ ಸೋಂಕಿನ ಮೂಲ ಬಾವಲಿಯಾಗಲೀ, ಹಂದಿಯಾಗಲೀ ಅಲ್ಲ ಎಂದು ಭೋಪಾಲ್ನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಆ್ಯನಿಮಲ್ ಡಿಸೀಸ್ (ಎನ್ಐಎಚ್ಎಸ್ಎಡಿ) ಪ್ರಯೋಗಾಲಯ ತಿಳಿಸಿದೆ. ಈ ಅಂಶವನ್ನು ಕೇಂದ್ರದ ತಜ್ಞರ ತಂಡವು ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲೂ ಉಲ್ಲೇಖೀಸಿದೆ.
ಕೇರಳದಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಸ್ ಹಾಗೂ ಆ ರೋಗದ ಗುಣಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿಯವರು, ಜಿಲ್ಲಾ ಆರೋಗ್ಯಾಧಿಕಾರಿಗಳು ಇದರ ಬಗ್ಗೆ ನಿಗಾ ವಹಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಿ ಆತಂಕ ನಿವಾರಿಸಬೇಕು ಎಂದು ತಿಳಿಸಿದ್ದಾರೆ. ಜತೆಗೆ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ನಿಫಾ ಕುರಿತು ಎಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳ ಸಭೆ ನಡೆಸಿ ಸಲಹೆ-ಸೂಚನೆ ನೀಡಬೇಕು ಎಂದು ಸೂಚಿಸಿದ್ದಾರೆ.