Advertisement

ಅನ್ನದಾತನಿಗಿಂತ ಶ್ರೇಷ್ಠ ಇನ್ಯಾರಿಲ್ಲ

11:56 AM Mar 06, 2020 | Suhan S |

ದೇವರಹುಬ್ಬಳ್ಳಿ: ಜಗತ್ತಿಗೆ ಜಾತಿ, ಮತ ಭೇದ ಇಲ್ಲದೆ ಅನ್ನ ನೀಡುವ ಕಾಯಕದಲ್ಲಿ ತೊಡಗಿರುವ ಒಕ್ಕಲಿಗನೇ ಈ ಜಗತ್ತಿನಲ್ಲಿ ಶ್ರೇಷ್ಠ ಎಂದು ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

Advertisement

ಇಲ್ಲಿನ ಸಿದ್ಧಾಶ್ರಮದಲ್ಲಿ ಸಿದ್ಧಾರೂಢರ ಶಿವ ಪಂಚಾಕ್ಷರಿ ಭಜನಾ ಸಪ್ತಾಹ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ “ಅನ್ನದಾತ ಸುಖೀಭವ’ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ನಮ್ಮ ರೈತರಲ್ಲಿ ತಾವು ಕನಿಷ್ಠರೆಂಬ ಕೀಳರಿಮೆ ಭೂತ ಹೊಕ್ಕಿದ್ದು, ಅದನ್ನು ರೈತರುಮೊದಲು ಒಧ್ದೋಡಿಸಬೇಕಿದೆ. ಪೂರ್ವಜರ ಕೃಷಿ ಪದ್ಧತಿ ಸಂರಕ್ಷಣೆಗೆ ಕಂಕಣತೊಡಬೇಕಿದೆ ಎಂದರು.

ಶಹರದಲ್ಲಿರುವವರು, ನೌಕರಿ ಮಾಡುವವವರು, ಇಂಗ್ಲಿಷ್‌ ಮಾತನಾಡುವವರು ಹಾಗೂ ಉದ್ಯಮದಲ್ಲಿ ತೊಡಗಿದವರನ್ನು ನೋಡಿ “ಅವರು ಸುಖವಾಗಿದ್ದಾರೆ, ನಮ್ಮ ಬದುಕಿಗೆಲ್ಲಿದೆ ಅಂತಹ ಸುಖ’ ಎಂಬ ಕೀಳರಿಮೆಗೆ ರೈತರು ಹಾಗೂ ಗ್ರಾಮೀಣ ಜನರು ಸಿಲುಕಿದ್ದಾರೆ. ಮೊದಲು ಆ ಕೀಳರಿಮೆಯಿಂದ ಹೊರಬರಬೇಕು ಎಂದು ಹೇಳಿದರು. ಹಳ್ಳಿಗರು ಯಾರೇ ಮನೆಗೆ ಬಂದರೂ ಪ್ರೀತಿಯ ಆತಿಥ್ಯ ನೀಡುತ್ತಾರೆ. ಇಂತಹ ದೊಡ್ಡ ಮನಸ್ಸು ಶಹರದಲ್ಲಿದ್ದವರಿಗೆ ಇರಲ್ಲ. ವ್ಯಕ್ತಿತ್ವದಿಂದ ವ್ಯಕ್ತಿಗಳನ್ನು ಅಳೆಯಬೇಕೇ ವಿನಃ ಹಣ-ಸ್ಥಾನ ಹಾಗೂ ಅಧಿಕಾರದಿಂದಲ್ಲ ಎಂದರು.

ಈ ದೇಶದಲ್ಲಿ ಯಾವುದಾದರೂ ಸಮಸ್ಯೆಗಳು ಸೃಷ್ಟಿಯಾಗಿವೆ ಎಂದರೆ ಅದು ಓದಿದವರಿಂದ ವಿನಃ ಅನಕ್ಷರಸ್ಥರಿಂದಲ್ಲ. ನಾವು ಅತ್ಯಂತ ಕೆಳ ಸ್ತರದಲ್ಲಿದ್ದೇವೆ ಎಂದು ಅನೇಕ ಹಳ್ಳಿಗರು ಶಹರಗಳ ವಾಸದತ್ತ ನೋಡುತ್ತಿದ್ದಾರೆ. ಇನ್ನೂ ಕೆಲವರು ಅನಿರ್ವಾಯವಾಗಿ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಇಂತಹ ಮನೋಭಾವವನ್ನು ರೈತರು ಹಾಗೂ ಹಳ್ಳಿಗರು ಮೊದಲು ಬಿಡಬೇಕು ಎಂದರು.

ಆತ್ಮಾವಲೋಕನ ಅವಶ್ಯ: ರೈತ ಎಂದೂ ಉಚಿತ ಇಲ್ಲವೆ ಕಡಿಮೆ ದರದಲ್ಲಿ ಅಕ್ಕಿ ಕೊಡಿ ಎಂದು ಕೇಳಿಲ್ಲ. ಬದಲಾಗಿ ಸಮರ್ಪಕ ನೀರು, ಬೆಳೆದ ಬೆಲೆಗೆ ಉತ್ತಮ ಬೆಲೆ ನೀಡಿದರೆ ಸಾಕು. ರೈತ ಬಂಗಾರದ ಬದುಕು ಬದುಕಬಲ್ಲ. ಇದರೆ ಜತೆಗೆ ನಾವು ಎಲ್ಲಿ ತಪ್ಪಿದ್ದೇವೆ ಎಂಬುದರ ಬಗ್ಗೆ ರೈತರು ಸಹ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ಮಹಿಳೆಯರನ್ನು ಕೃಷಿಯಿಂದ ದೂರ ಇರಿಸಿದ್ದೇ ಇಂದಿನ ಕೃಷಿ ದಾರಿದ್ರ್ಯಕ್ಕೆ ಪ್ರಮುಖ ಕಾರಣ. ಈ ಹಿಂದೆ ಬೀಜಗಳ ಸಂರಕ್ಷಣೆ, ಹೊಲದ ಯಾವ ಭಾಗದಲ್ಲಿ ಯಾವ ಬೀಜ ಹಾಕಬೇಕೆಂಬುದನ್ನು ನಮ್ಮ ತಾಯಂದಿರು ಹೇಳುತ್ತಿದ್ದರು. ರೈತರೀಗ ಅಂಗಡಿಯವರು ನೀಡುವ ಬೀಜಕ್ಕೆ ಕೈ ಚಾಚಿ ನಿಲ್ಲುತ್ತಿದ್ದು, ಬೀಜ ಸ್ವಾವಲಂಬನೆ ಕಳೆದುಕೊಂಡಿದ್ದಾರೆ ಎಂದರು.

Advertisement

ರಸಗೊಬ್ಬರ, ಕ್ರಿಮಿನಾಶಕ ಗೊಬ್ಬರ ಆಧಾರಿತ ಕೃಷಿಯ ಬೆನ್ನು ಬಿದ್ದು ಭೂಮಿಯ ಆರೋಗ್ಯ ಹಾಳು ಮಾಡಿದ್ದೇವಷ್ಟೇ ಅಲ್ಲ. ವಿಷಯುಕ್ತ ಆಹಾರ, ತರಕಾರಿ ತಿಂದು ನಮ್ಮ ಆರೋಗ್ಯ ಹಾಳು ಮಾಡಿಕೊಂಡಿದ್ದೇವೆ. ವಿಶ್ವಕ್ಕೂ ವಿಷವನ್ನೇ ನೀಡುತ್ತಿದ್ದೇವೆ ಎಂಬ ಬಗ್ಗೆ ರೈತರು ಆತ್ಮಾವಲೋಕನಕ್ಕೆ ಇಳಿಯಬೇಕಿದೆ. ಕೃಷಿ ದಾರಿದ್ರ್ಯ ತೊಲಗಿಸಲು ಪೂರ್ವಜರ ಕೃಷಿ ಪರಂಪರೆಗೆ ನಾವು ಮರಳಬೇಕಿದೆ. ಮುಖ್ಯವಾಗಿ ದೇಸಿ ಹಸುಗಳ ಸಾಕಣೆಗೆ ಮುಂದಾಗಬೇಕಿದೆ ಎಂದು ಹೇಳಿದರು.

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ರೈತರು ಚಿಂತನೆ ನಡೆಸಬೇಕಾಗಿದೆ. ದೇಸಿ ಹಸುಗಳ ಹಾಲು, ಮೂತ್ರ, ಸಗಣಿ ಎಲ್ಲವೂ ಉಪಯುಕ್ತವಾಗಿದೆ. ಇವುಗಳ ಮೌಲ್ಯವರ್ಧನೆ ಮಾಡಿದರೆ ಆರೋಗ್ಯಕ್ಕೂ, ಆದಾಯಕ್ಕೂ ಉತ್ತಮ ಪ್ರಯೋಜನವಾಗಲಿದೆ. ದೇಶದ ಪ್ರಕೃತಿ ತಿದ್ದಬೇಕಾದರೆ, ಮೊದಲು ರೈತರಲ್ಲಿ ಪರಿವರ್ತನೆ ಆಗಬೇಕಿದೆ. ಉತ್ತಮ ಕೃಷಿಗೆ ಪೂರಕವಾಗಿ ಶ್ರೀಮಠ ಕಲ್ಚರ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ. ರೈತರು ಇದನ್ನು ಅಭಿವೃದ್ಧಿಪಡಿಸುವ ಮೂಲಕ ಪರಸ್ಪರ ಹಂಚಿಕೆ ಮಾಡಬೇಕು ಎಂದರು.

ಸಿದ್ಧಾಶ್ರಮದ ಶ್ರೀ ಸಿದ್ಧ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ವಿಷಮುಕ್ತ ಕೃಷಿ, ದೇಸಿ ಹಸುಗಳ ಸಾಕಣೆ ವಿಷಯಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು. ನಮ್ಮೆಲ್ಲ ರೈತರು ಅದನ್ನು ಮಾಡಲಿದ್ದಾರೆ ಎಂದು ಕನೇರಿ ಶ್ರೀಗಳಿಗೆ ಭರವಸೆ ನೀಡಿದರು. ಸಿಂದೋಗಿ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಜೋಡಳ್ಳಿ ಸ್ವಾಗತಿಸಿದರು. ಪತ್ರಕರ್ತ ಬಸವರಾಜ ಹೊಂಗಲ ನಿರೂಪಿಸಿದರು. ಕಲ್ಲನಗೌಡ ಪಾಟೀಲ ವಂದಿಸಿದರು. ನೂರಾರು ರೈತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next