Advertisement

ಏಳು ಕ್ಷೇತ್ರಗಳಲ್ಲಿ ‘ಅಣ್ಣಾ’ನೇ ಬಾಂಡ್‌!

12:10 PM May 25, 2019 | pallavi |

ಚಿಕ್ಕೋಡಿ: ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದಲ್ಲಿ ವಿಜಯ ಪತಾಕಿ ಹಾರಿಸಿದ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿಜಯೋತ್ಸವ ಆಚರಿಸಿ ಸಂತಸದಲ್ಲಿ ಇದ್ದರೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಸೋಲನ್ನು ಕಾಂಗ್ರೆಸ್‌ ಕಾರ್ಯಕರ್ತರು ಪರಾಮರ್ಶಿಸುವ ಲೆಕ್ಕಾಚಾರ ಆರಂಭವಾಗಿದೆ.

Advertisement

35 ವರ್ಷದ ರಾಜಕೀಯ ಜೀವನದಲ್ಲಿ 2009ರಲ್ಲಿ ಒಮ್ಮೆ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಸೋಲು ಕಂಡಿದ್ದ ಪ್ರಕಾಶ ಹುಕ್ಕೇರಿ ಇದೀಗ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಸೋಲು ಕಂಡಿರುವುದು ಗಡಿ ಭಾಗದ ಕಾಂಗ್ರೆಸ್‌ ವಲಯದಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಸದಾ ಅಭಿವೃದ್ಧಿ ಕಾರ್ಯದಲ್ಲಿ ಒಂದು ಹೆಜ್ಜೆ ಮುಂಚೂಣಿಯಲ್ಲಿದ್ದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಸೋಲು ಕಾಂಗ್ರೆಸ್‌ ವಲಯ ಹಾಗೂ ಅವರ ಅಭಿಮಾನಿಗಳಲ್ಲಿ ದೊಡ್ಡ ಆಘಾತ ನೀಡಿದೆ.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಪ್ರತಿಷ್ಠಿತ ಎರಡು ಕುಟುಂಬಗಳ ಮಧ್ಯೆ ನಡೆದ ಲೋಕಸಭೆ ಚುನಾವಣೆಯು ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿತ್ತು. ಯಾರೇ ಸೋತವರು ಮತ್ತು ಗೆದ್ದರೂ ಅದು 10 ಸಾವಿರ ಮತಗಳ ಅಂತರದ ಒಳಗೆ ಎಂಬುದು ಫಲಿತಾಂಶ ಪೂರ್ವದಲ್ಲಿ ಚರ್ಚೆ ಸಾಮಾನ್ಯವಾಗಿತ್ತು. ಆದರೆ ಇಡೀ ದೇಶದಲ್ಲಿ ಬಿಸಿದ ಮೋದಿ ಅಲೆ ಅದು ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೂ ತಟ್ಟಿರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ವಿರುದ್ಧ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಸುಮಾರು 1.18.877 ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಹೊಸ ಇತಿಹಾಸ ಸೃಷ್ಠಿ ಮಾಡಿದ್ದಾರೆ.

ಕಾಂಗ್ರೆಸ್‌ಗೆ ಕೈಕೊಟ್ಟ ಕಾಗವಾಡ ಮತಕ್ಷೇತ್ರ: ಕೃಷ್ಣಾ ನದಿ ತಟದಲ್ಲಿ ಇರುವ ಕಾಗವಾಡ ವಿಧಾನಸಭೆ ಮತಕ್ಷೇತ್ರ ಮೊದಲಿನಿಂದಲೂ ಬಿಜೆಪಿ ಭದ್ರಕೋಟೆಯಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ಕಾಂಗ್ರೆಸ್‌ ತನ್ನ ಅಪತ್ಯ ಸಾಧಿಸಿ ಯಶಸ್ವಿಯಾಗಿತ್ತು. ಇದೀಗ ಕಾಗವಾಡ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರು ಇರುವುದರಿಂದ ಪ್ರಕಾಶ ಹುಕ್ಕೇರಿಗೆ ಹೆಚ್ಚಿನ ಮತಗಳು ಲಭಿಸುತ್ತವೆಂದು ಭಾರಿ ಪ್ರಮಾಣದಲ್ಲಿ ನಿರೀಕ್ಷೆ ಮಾಡಿದ ಕಾಂಗ್ರೆಸ್‌ ಕಾರ್ಯಕರ್ತರಿಗೆ ದೊಡ್ಡ ಶಾಖ್‌ ನೀಡಿದೆ. ಕಾಗವಾಡ ಕ್ಷೇತ್ರದಲ್ಲಿ ಪ್ರಕಾಶ ಹುಕ್ಕೇರಿ 180 ಕೋಟಿ ರೂ ಅಭಿವೃದ್ಧಿ ಕೆಲಸ ಮಾಡಿದ್ದರು. ಮತ್ತು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ ರೂಪಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗಿತ್ತು. ಹೀಗಾಗಿ ಕ್ಷೇತ್ರದಲ್ಲಿ 15 ರಿಂದ 20 ಸಾವಿರ ಹೆಚ್ಚುವರಿ ಮತಗಳು ಕಾಂಗ್ರೆಸ್‌ಗೆ ಬಂದೇ ಬರುತ್ತವೆಂದು ಅಂದಾಜಿಸಿದ್ದರು. ಆದರೆ 17792 ಮತಗಳು ಬಿಜೆಪಿಗೆ ಮುನ್ನಡೆ ಸಿಕ್ಕಿರುವುದು ಕಾಂಗ್ರೆಸ್‌ ವಲಯದಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಏಳು ಕ್ಷೇತ್ರದಲ್ಲಿ ಹಿನ್ನೆಡೆ ಅನುಭವಿಸಿದ ಕಾಂಗ್ರೆಸ್‌: ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದ ನಿಪ್ಪಾಣಿ, ಅಥಣಿ, ರಾಯಬಾಗ, ಹುಕ್ಕೇರಿ, ಕುಡಚಿ, ಕಾಗವಾಡ, ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಳಫೆ ಮಟ್ಟದ ಸಾಧನೆ ಮಾಡಿದೆ. ಚುನಾವಣೆ ಪ್ರಚಾರದ ವೇಳೆಯಲ್ಲಿ ಅಥಣಿ, ಕಾಗವಾಡ, ಕುಡಚಿ ಮತ್ತು ರಾಯಬಾಗ ಕ್ಷೇತ್ರದಲ್ಲಿ ಮುನ್ನಡೆ ಪಡೆಯಲು ಕಾಂಗ್ರೆಸ್‌ ಸಾಕಷ್ಟು ಪ್ರಯತ್ನ ಮಾಡಿತ್ತು. ಆದರೆ ಮೋದಿ ಅಲೆಯಲ್ಲಿ ಈ ಏಳು ಕ್ಷೇತ್ರದಲ್ಲಿ ಬಿಜೆಪಿ ಭಾರಿ ಪ್ರಮಾಣದಲ್ಲಿ ಮತಗಳನ್ನು ಪಡೆದು ಒಂದು ಲಕ್ಷ ಮತಗಳ ಅಂತರ ಪಡೆದುಕೊಳ್ಳಲು ಯಶಸ್ವಿಯಾಗಿದೆ.

Advertisement

ಕಮಲ ಅರಳಿಸಿದ ಅಥಣಿ-ಹುಕ್ಕೇರಿ ಕ್ಷೇತ್ರ: ಅಥಣಿ ಹಾಗೂ ಹುಕ್ಕೇರಿ ಮತಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚಿನ ಮತ ಪಡೆದು ಸಾಧನೆ ಮಾಡಿದೆ. ಮಾಜಿ ಸಂಸದ ರಮೇಶ ಕತ್ತಿ ಬಿಜೆಪಿ ಟಿಕೆಟ್ ಸಿಗದೇ ಇರುವುದರಿಂದ ಮುನಿಸಿಕೊಂಡಿದ್ದರು. ಹೀಗಾಗಿ ಹುಕ್ಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಮಬಲ ಹೋರಾಟ ಮಾಡುತ್ತಿದೆ. ಅಥಣಿಯಲ್ಲಿ ಸುಮಾರು 10 ರಿಂದ 12 ಸಾವಿರ ಮತಗಳು ಬಿಜೆಪಿಗೆ ಹೋಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಇತ್ತು. ಆದರೆ ಫಲಿತಾಂಶ ನೋಡಿದರೇ ಎಲ್ಲ ಉಲಾrಪಲಾr ಆಗಿದೆ. ಅಥಣಿಯಲ್ಲಿ 33523, ಹುಕ್ಕೇರಿಯಲ್ಲಿ 31056 ಮತಗಳು ಬಿಜೆಪಿಗೆ ಲೀಡ್‌ ಕೊಟ್ಟಿರುವುದರಿಂದ ಕಾಂಗ್ರೆಸ್‌ ಸೋಲಿಗೆ ಕಾರಣವಾಗಿದೆ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರು.

ಸಚಿವರ ಕ್ಷೇತ್ರದಲ್ಲಿಯೇ ಮುಗ್ಗರಿಸಿದ ಕಾಂಗ್ರೆಸ್‌: ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪ್ರತಿನಿಸುವ ಯಮಕನಮರಡಿ ವಿಧಾನಸಭೆ ಮತಕ್ಷೇತ್ರದಲ್ಲಿಯೇ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಗೆ 2809 ಮತಗಳು ಹೆಚ್ಚಿಗೆ ಲಭಿಸಿರುವುದು ಕಾಂಗ್ರೆಸ್‌ ಪಾಳೆಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾ ಉಸ್ತುವಾರಿ ಕ್ಷೇತ್ರದಲ್ಲಿಯೇ ಕಾಂಗ್ರೆಸ್‌ಗೆ ಹಿನ್ನಡೆಯಾದರೇ ಉಳಿದ ಣಕ್ಷೇತ್ರದಲ್ಲಿ ಹೇಗೆ ಮುನ್ನಡೆ ಸಿಗಬೇಕೆಂದು ನಿಷ್ಠಾವಂತ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ, ನಮ್ಮ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರು. ಆದರೆ ಜನ ಯಾಕೆ ಅವರ ಕೈ ಹಿಡಿಯಲಿಲ್ಲ ಎಂಬುದು ಗೊತ್ತಾಗುತ್ತಿಲ್ಲ, ಸೋಲನ್ನು ಸವಾಲಾಗಿ ತೆಗೆದುಕೊಂಡು ಮತ್ತೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಲಿಷ್ಠಗೊಳಿಸುವ ಕೆಲಸ ಮಾಡಲಾಗುತ್ತದೆ.

•ಲಕ್ಷ್ಮಣರಾವ ಚಿಂಗಳೆ , ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಿಕ್ಕೋಡಿ

ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next