Advertisement

ಅನ್ನಭಾಗ್ಯ ಯೋಜನೆ ಅರ್ಹರಿಗಷ್ಟೇ ಸಿಗಲಿ

12:48 AM Jan 24, 2020 | mahesh |

ಅನ್ನಭಾಗ್ಯ ಯೋಜನೆ ಜಾರಿಗೆ ಯಾರದೂ ತಕರಾರು ಇಲ್ಲ. ಆದರೆ, ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಗೆ ಹೋಗುತ್ತಿರುವುದು, ಎಪಿಎಲ್‌ ಮಿತಿಯವರೂ ಬಿಪಿಎಲ್‌ ಕಾರ್ಡ್‌ ಪಡೆದಿರುವುದು. ಕುಟುಂಬದಲ್ಲಿ ಸದಸ್ಯರು ಮೃತಪಟ್ಟಿದ್ದರೂ, ಮದುವೆ ನಂತರ ಹೆಣ್ಣು ಮಕ್ಕಳು ತವರು ಬಿಟ್ಟಿದ್ದರೂ ಅವರ ಹೆಸರು ಕಾರ್ಡ್‌ನಲ್ಲಿ ಉಳಿಸಿಕೊಂಡು ಪಡಿತರ ಪಡೆಯುತ್ತಿರುವ ಪ್ರಕರಣಗಳಿಂದ ಒಳ್ಳೆಯ ಉದ್ದೇಶ ಯೋಜನೆ ಅಕ್ರಮಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.

Advertisement

ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ಅನ್ನಭಾಗ್ಯ ಯೋಜನೆ ಬಡ ಕುಟುಂಬಗಳ ಪಾಲಿಗೆ ವರದಾನವಾದರೂ ಅಕ್ರಮ, ದುರುಪಯೋಗದಿಂದಾಗಿ ತಲೆನೋವಾಗಿ ಪರಿಣಮಿಸಿದೆ.

ಒಂದೆಡೆ ಬಡವರಿಗೆ ಸೇರಬೇಕಾದ ಅಕ್ಕಿ ಕಾಳಸಂತೆಕೋರರಿಗೆ ತಲುಪುತ್ತಿರುವುದು ಮತ್ತೂಂದೆಡೆ ಮೃತಪಟ್ಟವರು, ಮದುವೆ ನಂತರ ತವರು ಮನೆ ಸೇರಿದವರ ಹೆಸರು ಕಾರ್ಡ್‌ಗಳಲ್ಲಿರುವುದು ಅವರ ಹೆಸರಿನಲ್ಲಿಯೂ ಅಕ್ಕಿ ಪಡೆಯುತ್ತಿರುವುದು ಅಕ್ರಮಗಳಿಗೆ ಕಾರಣವಾಗುತ್ತಿದೆ. ಅಕ್ರಮ ತಡೆಗಟ್ಟಲು ಹಾಗೂ ಅರ್ಹರ ಪತ್ತೆಗಾಗಿ ಸರ್ಕಾರ ಮತ್ತು ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ದುರುಪಯೋಗ ನಿಲ್ಲುತ್ತಿಲ್ಲ. ಹಿಂದೊಮ್ಮೆ ಪಡಿತರ ಚೀಟಿ ಜತೆ ಚುನಾವಣಾ ಗುರುತಿನ ಚೀಟಿ ಹಾಗೂ ಅಡುಗೆ ಅನಿಲ ಸಂಪರ್ಕದ ಸಂಖ್ಯೆ ಜೋಡಣೆ ಮಾಡಿ ಅಕ್ರಮ ತಡೆಗಟ್ಟುವ ಕ್ರಮ ಕೈಗೊಳ್ಳಲಾಗಿತ್ತು. ಆಗ ಸಾಕಷ್ಟು ಬೋಗಸ್‌ ಕಾರ್ಡ್‌ಗಳು ಪತ್ತೆಯಾಗಿದ್ದವು. ಇದೀಗ ಇ-ಕೆವೈಸಿ (ಆಧಾರ್‌ ಸಂಖ್ಯೆ ) ಜೋಡಣೆ ಕಡ್ಡಾಯ ಮಾಡಿದ ನಂತರ ಶೇ.50 ರಷ್ಟು ಪಡಿತರದಾರರು ಇ-ಕೆವೈಸಿ ಮಾಡಿಸಿದ್ದಾರೆ. ಸುಮಾರು 10 ಲಕ್ಷ ಜನರ ಹೆಸರು ಡಿಲೀಟ್‌ ಮಾಡಲಾಗಿದೆ. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಮುನ್ನ ಹೊಸದಾಗಿ ಬಿಪಿಎಲ್‌ ಕಾರ್ಡ್‌ಗಳನ್ನು ನೀಡಲಾಗಿದೆ. ರಾಜಕೀಯ ನಾಯಕರ ಒತ್ತಡ, ಪ್ರಭಾವದಿಂದ ಎಪಿಎಲ್‌ ಮಿತಿಯಲ್ಲಿರುವವರಿಗೂ ಬಿಪಿಎಲ್‌ ಕಾರ್ಡ್‌ ನೀಡಲಾಗಿದೆ. ಇದರಿಂದ ಅಕ್ರಮ ಹಾಗೂ ದುರುಪಯೋಗ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಅನ್ನಭಾಗ್ಯ ಯೋಜನೆಯಡಿ ಕುಟುಂಬದ ಪ್ರತಿ ಸದಸ್ಯನಿಗೆ ತಲಾ ಏಳು ಕೆಜಿ ಅಕ್ಕಿ ಕೊಡಲಾಗುತ್ತಿದೆ. ಕುಟುಂಬ ವೊಂದರಲ್ಲಿ ಹತ್ತು ಸದಸ್ಯರಿದ್ದರೆ 70 ಕೆಜಿ ಅಕ್ಕಿ ದೊರೆಯುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಕಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದಿಲ್ಲ.

ಹೀಗಾಗಿ, ಆ ಅಕ್ಕಿಯನ್ನು ಮಧ್ಯವರ್ತಿಗಳು ಕೆಜಿಗೆ 10 ರೂ.ನಂತೆ ಪಡೆದು ಪಾಲಿಶ್‌ ಮಾಡಿಸಿ ಬ್ರ್ಯಾಂಡ್‌ ಚೀಲದಲ್ಲಿ ಹಾಕಿ 40 ರೂ. ನಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರಕರಣಗಳು ನಡೆಯುತ್ತಿವೆ.

Advertisement

ಅಕ್ಕಿ ಪ್ರಮಾಣ ಕಡಿಮೆ ಮಾಡಬೇಕು ಎಂಬ ಪ್ರಸ್ತಾವನೆ ಇದೆಯಾದರೂ ಅದಕ್ಕೆ ತೀವ್ರ ವಿರೋಧವೂ ಇದೆ. ಏಳು ಕೆಜಿ ಪ್ರಮಾಣ ಐದು ಕೆಜಿಗೆ ಇಳಿಸಿ ಉಳಿದದ್ದು ಗೋದಿ ಹಾಗೂ ಬೇಳೆ-ಕಾಳು ನೀಡುವ ಬಗ್ಗೆ ಹಲವಾರು ಬಾರಿ ಚರ್ಚೆಯಾಗಿದೆ. ಆದರೆ, ವಿರೋಧದ ಕಾರಣ ಜಾರಿಗೆ ಬಂದಿಲ್ಲ. ಅನ್ನಭಾಗ್ಯ ಯೋಜನೆ ಜಾರಿಗೆ ಯಾರದೂ ತಕರಾರು ಇಲ್ಲ. ಆದರೆ, ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಗೆ ಹೋಗುತ್ತಿರುವುದು, ಎಪಿಎಲ್‌ ಮಿತಿಯವರೂ ಬಿಪಿಎಲ್‌ ಕಾರ್ಡ್‌ ಪಡೆದಿರುವುದು. ಕುಟುಂಬದಲ್ಲಿ ಸದಸ್ಯರು ಮೃತಪಟ್ಟಿದ್ದರೂ, ಮದುವೆ ನಂತರ ಹೆಣ್ಣು ಮಕ್ಕಳು ತವರು ಬಿಟ್ಟಿದ್ದರೂ ಅವರ ಹೆಸರು ಕಾರ್ಡ್‌ನಲ್ಲಿ ಉಳಿಸಿಕೊಂಡು ಪಡಿತರ ಪಡೆಯುತ್ತಿರುವ ಪ್ರಕರಣಗಳಿಂದ ಒಳ್ಳೆಯ ಉದ್ದೇಶ ಯೋಜನೆ ಅಕ್ರಮಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಹೀಗಾಗಿ, ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅರ್ಹರಿಗೆ ಅಗತ್ಯ ಇರುವವರಿಗೆ ಯೋಜನೆ ತಲುಪುವಂತೆ ತಳಮಟ್ಟದಿಂದ ಮೇಲ್ಮಟ್ಟದವರಿಗೂ ಪರಿಣಾಮಕಾರಿ ನಿಯಂತ್ರಣ ಕ್ರಮ ಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next