Advertisement

ಕಿರುತೆರೆಗೆ ಅನಿರುದ್ಧ ಎಂಟ್ರಿ

11:37 AM Sep 10, 2019 | Lakshmi GovindaRaju |

ಈಗಾಗಲೇ ಹಲವು ಕಾರ್ಯಕ್ರಮಗಳ ಮೂಲಕ ಕಿರುತೆರೆ ಪ್ರವೇಶಿಸಿದ್ದ ನಟ ಅನಿರುದ್ಧ, ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ “ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ. ಹೌದು, ಸೆ.9 (ಇಂದು)ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಧಾರಾವಾಹಿ ಪ್ರಸಾರವಾಗಲಿದೆ.

Advertisement

ಎಲ್ಲಾ ಸರಿ, “ಜೊತೆ ಜೊತೆಯಲಿ’ ಶೀರ್ಷಿಕೆ ಕೇಳಿದಾಕ್ಷಣ, ಇದೊಂದು ಪಕ್ಕಾ ಪ್ರೀತಿ-ಪ್ರೇಮ ಪುರಾಣದ ಕಥೆ ಎಂಬುದು ಗೊತ್ತಾಗುತ್ತೆ. ಹೌದು, ಒಂದು ಗಂಡಿಗೆ ಒಂದು ಹೆಣ್ಣನ್ನು ಜೋಡಿ ಮಾಡಿ ಆ ದೇವರು ನಮ್ಮ ಹಣೇಬರಹದಲ್ಲಿ ಮೊದಲೇ ಬರೆದಿರುತ್ತಾನೆ ಎನ್ನುವುದು ಎಲ್ಲರೂ ಹೇಳುವ ಮಾತು. ಸಾಮಾನ್ಯವಾಗಿ ಗಂಡಿಗಿಂತ ಹೆಣ್ಣು ಮೂರ್‍ನಾಲ್ಕು ವರ್ಷ, ಐದಾರು ವರ್ಷ ಚಿಕ್ಕವಳಾಗಬೇಕು. ಆಗಲೇ ಆ ಜೋಡಿಯ ಜೀವನ ಪಯಣ ಸುಖಕರವಾಗುತ್ತದೆ.

ಆದರೆ ಈ ಅಂತರ ಹತ್ತು-ಹದಿನೈದು ವರ್ಷಗಳಷ್ಟು ದೊಡ್ಡದಾದರೆ ಏನಾಗಬಹುದು, ಏನೆಲ್ಲಾ ಸಂದರ್ಭಗಳು ಎದುರಾಗಬಹುದು? ಎಂಬ ಕಥೆ ಈ ಧಾರಾವಾಹಿಯ ಹೈಲೈಟ್‌. ಧಾರಾವಾಯಲ್ಲಿ 45 ವರ್ಷದ ಉದ್ಯಮಿ ಹಾಗು 20 ವರ್ಷದ ಮಧ್ಯಮ ವರ್ಗದ ಯುವತಿ ನಡುವೆ ನಡೆಯುವ ಪ್ರೇಮಕಥೆ ಆಕರ್ಷಣೆಯಾಗಿದೆ. ಅನಿರುದ್ಧ ಅವರು ನಾಯಕರಾಗಿ ಕಿರುತೆರೆ ಪ್ರವೇಶಿಸಿದ್ದಾರೆ.

ಅವರಿಲ್ಲಿ ಆರ್ಯವರ್ಧನ್‌ ಎಂಬ ಶ್ರೀಮಂತ ಉದ್ಯಮಿ ಪಾತ್ರ ನಿರ್ವಹಿಸುತ್ತಿದ್ದಾರೆ. ಹೊಸ ಪ್ರತಿಭೆ ಮೇಘನಾ ಶೆಟ್ಟಿ ಅವರಿಗೆ ಜೋಡಿಯಾಗಿದ್ದಾರೆ. ಆರೂರು ಜಗದೀಶ್‌ ಧಾರಾವಾಹಿ ನಿರ್ದೇಶಕರು. ಜೀ ತಂಡದ ಕಥೆ ಇದಾಗಿದ್ದು, ಸುಧೀಂದ್ರ ಭಾರದ್ವಾಜ್‌, ಪವನ್‌ ಶ್ರೀವತ್ಸ ಚಿತ್ರಕಥೆ ಬರೆದಿದ್ದಾರೆ. ಸತ್ಯ ಸಂಭಾಷಣೆ ರಚಿಸಿದ್ದಾರೆ. ಸದ್ಯಕ್ಕೆ ಕಿರುತೆರೆಯಲ್ಲಿ “ಜೊತೆ ಜೊತೆಯಲಿ’ ಹೊಸ ಟ್ರೆಂಡ್‌ ಹುಟ್ಟು ಹಾಕಲಿದೆ ಎಂಬುದು ವಾಹಿನಿಯ ಬಿಜಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು ಅವರ ಮಾತು.

ಧಾರಾವಾಹಿಯಲ್ಲಿ ಅಪೂರ್ವ, ಶಿವಾಜಿರಾವ್‌, ಜಾದವ್‌ ಸುಂದರಶ್ರೀ, ಮಾನಸ ಮನೋಹರ್‌, ಮುರಳಿ, ಶ್ರೀದೇವಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಹೊಸಮನೆ ಮೂರ್ತಿ ಹಾಗೂ ಸುರೇಶ್‌ ಬಾಗಣ್ಣನವರ ಕಲಾನಿರ್ದೇಶನ ಮಾಡಿದ್ದಾರೆ. ಸುನಾದ ಗೌತಮ್‌ ಸಂಗೀತವಿದೆ. ಸಂತೋಷ್‌ ಖಾರ್ವಿ ಛಾಯಾಗ್ರಹಣ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next