ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವಿನ ಜಟಾಪಟಿ ತಾರಕ್ಕೇರಿದ್ದು, ರಾಜ್ಯಪಾಲರು ಎಲ್ಲಾ ಸಾಂವಿಧಾನಿಕ ಮಿತಿಯನ್ನು ದಾಟಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ಪಶ್ಚಿಮ ಬಂಗಾಳದ ರಾಜ ಭವನ “ಬಿಜೆಪಿ ಕಚೇರಿ’ ಅಲ್ಲ ಎಂದು ಅದು ಹರಿಹಾಯ್ದಿದೆ. ರಾಜ್ಯಪಾಲ ತ್ರಿಪಾಠಿ ಅವರು ಬಿಜೆಪಿ ಬ್ಲಾಕ್ ಅಧ್ಯಕ್ಷರ ರೀತಿ ನನಗೆ ಧಮಕಿ ಹಾಕಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅವರು ಮಂಗಳವಾರ ಆರೋಪಿಸಿದ್ದು, ಆ ಬಳಿಕ ಅವರ ಪಕ್ಷ ರಾಜ್ಯಪಾಲರ ವಿರುದ್ಧ ಟೀಕಿಸಿದೆ.
ಉತ್ತರ 24 ಪರಗಣ ಜಿಲ್ಲೆಯಲ್ಲಿ ಫೇಸ್ಬುಕ್ ಪೋಸ್ಟ್ ಒಂದಕ್ಕೆ ಸಂಬಂಧಿಸಿದಂತೆ ನಡೆದ ಕೋಮು ಹಿಂಸಾಚಾರದ ಸಂಬಂಧ ರಾಜ್ಯ ಪಾಲರೇ ಕೇಂದ್ರೀಯ ಪಡೆಗಳನ್ನು ಹಿಂಸಾಚಾರ ನಿಯಂತ್ರಣಕ್ಕೆ ಕಳಿಸಿದ್ದು, ಮತ್ತು ಈ ವಿಚಾರದಲ್ಲಿ ಸಿಎಂ ಮಮತಾ ತಮ್ಮೊಂದಿಗೆ ಅನಪೇಕ್ಷಿತವಾಗಿ ಫೋನ್ನಲ್ಲಿ ಮಾತನಾಡಿದ್ದಾರೆ, ಬಹಿರಂಗವಾಗಿ ಆರೋಪಿಸಿರುವುದು ಈ ಜಟಾಪಟಿಗೆ ಕಾರಣವಾಗಿದೆ.
ಈ ವಿಚಾರದಲ್ಲಿ ಮಾಧ್ಯಮ ಮಂದಿ ಜೊತೆ ಮಾತನಾಡಿದ ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ, “ರಾಜ್ಯಪಾಲರು ಸಾಂವಿಧಾನಿಕ ಮಿತಿಗಳನ್ನು ದಾಟಿದ್ದಾರೆ. ಸಿಎಂ ಮಮತಾ ಅವರೊಂದಿಗೆ ಬೇಕಾಬಿಟ್ಟಿಯಾಗಿ ಮಾತನಾಡಲು ಇದೇನು ಉತ್ತರ ಪ್ರದೇಶವಲ್ಲ (ತ್ರಿಪಾಠಿ ಉತ್ತರ ಪ್ರದೇಶದವರು) ಎಂದು ಟೀಕಿಸಿದ್ದಾರೆ. ಅಲ್ಲದೇ ರಾಜಭವನ, ಬಿಜೆಪಿ ಪಕ್ಷದ ಕಚೇರಿಯಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆಯಲಾಗಿದ್ದು, “ತ್ರಿಪಾಠಿ ಅವರು ರಾಜ್ಯಪಾಲರಾಗಿ ಮುಂದುವರಿಯಲು ಅನರ್ಹರು’ ಎಂದು ಬರೆದಿದ್ದಾಗಿ ಹೇಳಿದ್ದಾರೆ.
“ಬಿಜೆಪಿ ಪದಾಧಿಕಾರಿಗಳೊಂದಿಗೆ ಮಾತುಕತೆ ಬಳಿಕ ರಾಜ್ಯಪಾಲರು ಅನಪೇಕ್ಷಿತ ರೀತಿಯಲ್ಲಿ ಸಿಎಂ ಮಮತಾ ಅವರೊಂದಿಗೆ ಮಾತನಾಡಿದ್ದು, ನಿಮ್ಮ ಪಕ್ಷದವರನ್ನು ನಿಯಂತ್ರಿಸಿ ಎಂಬಂತೆ ಹೇಳಿದ್ದಾರೆ. ಇದು ಸರ್ವಥಾ ಸ್ವೀಕಾರಾರ್ಹವಲ್ಲ. ಪಕ್ಷದ ಸದಸ್ಯರನ್ನು ನಿಯಂತ್ರಿಸುವಂತೆ ರಾಜ್ಯಪಾ ಲರು ಹೇಗೆ ಹೇಳಬೇಕು? ಅವರೇನು ಬಿಜೆಪಿಯ ವಕ್ತಾರರೇ? ಅವರು ಸಾಂವಿಧಾನಿಕ ಮುಖ್ಯಸ್ಥರ ಲ್ಲವೇ?’ ಎಂದು ಚಟರ್ಜಿ ಟೀಕಿಸಿದ್ದಾರೆ.
ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಿ: ಇದೇ ವೇಳೆ ಜಗಳ ಬಿಟ್ಟು ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳು ವಂತೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ರಾಜ್ಯಪಾಲರು ಮತ್ತು ಸಿಎಂ ಮಮತಾ ಅವರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಅವರು ಪತ್ರ ಬರೆದಿದ್ದಾರೆ. ಅಲ್ಲದೇ ಪ್ರತ್ಯೇಕವಾಗಿ ಇಬ್ಬರೊಂದಿಗೂ ಮಾತುಕತೆ ನಡೆಸಿದ್ದು, ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ಜೊತೆಗೆ ಕೋಮು ಗಲಭೆ ಸಂಬಂಧ ಪ.ಬಂಗಾಳ ಸರ್ಕಾರದಿಂದ ವರದಿ ಬಯಸಿದ್ದಾರೆ.