Advertisement

ಚಿಣ್ಣರಿಗೆ ತೆರೆದುಕೊಳ್ಳುತ್ತಿದೆ ಅಂಗನವಾಡಿ

01:47 AM Nov 02, 2021 | Team Udayavani |

ಮಂಗಳೂರು: ಕೋವಿಡ್‌ ಆತಂಕ ಮರೆಯಾಗುತ್ತಿರುವಂತೆ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿದ್ದು, ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಚಿಣ್ಣರ ಆಗಮನಕ್ಕೆ ಅಂಗನವಾಡಿಗಳೂ ಸಜ್ಜಾಗಿವೆ.

Advertisement

ರಾಜ್ಯಾದ್ಯಂತ ನ. 8ರಿಂದ ಮುನ್ನೆಚ್ಚರಿಕ್ಕೆ ಕ್ರಮಗಳೊಂದಿಗೆ ಅಂಗನವಾಡಿಗಳನ್ನು ತೆರೆಯುವಂತೆ ಸರಕಾರ ಸೂಚಿಸಿದೆ. ವಿಶೇಷವೆಂದರೆ ಕೇಂದ್ರಕ್ಕೆ ಬರುವ ಎಲ್ಲರಿಗೂ ಕೈ ತೊಳೆಯಲು ಸೋಪು ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಎಲ್ಲ ಮಕ್ಕಳು ಪ್ರತೀ 30 ನಿಮಿಷಕ್ಕೊಮ್ಮೆ ಕೈ ತೊಳೆಯಬೇಕು.

ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯ. ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಹಾಗೂ ಹಾಜರಾಗುವ ಮಕ್ಕಳ ಪೋಷಕರು ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆ ಪಡೆದಿರಬೇಕು. ಸಂದರ್ಶಕರಿಗೆ ನಿರ್ಬಂಧವಿರಲಿದೆ.

ಅಂಗನವಾಡಿ ಕೇಂದ್ರಗಳನ್ನು ಮೊದಲ ಹಂತದಲ್ಲಿ ಬೆಳಗ್ಗೆ 10ರಿಂದ 12ರ ವರೆಗೆ ತೆರೆಯಬಹುದಾಗಿದೆ. ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು, ಮೈಕೈ ನೋವು, ಉಸಿರಾಟದ ಸಮಸ್ಯೆ, ರುಚಿ ಹಾಗೂ ವಾಸನೆಯನ್ನು ಕಳೆದುಕೊಳ್ಳುವ ಲಕ್ಷಣಗಳಿದ್ದರೆ ಅಂತಹ ಮಗುವನ್ನು ಕರೆತರದಂತೆ ಸೂಚಿಸಬೇಕಿದೆ.

ಇದನ್ನೂ ಓದಿ:ಬೈಕ್‌ ಬೋಟ್‌ ಹಗರಣ ತನಿಖೆ ಕೈಗೆತ್ತಿಕೊಂಡ ಸಿಬಿಐ

Advertisement

ಮಕ್ಕಳನ್ನು 1 ಮೀಟರ್‌ ಅಂತರದಲ್ಲಿ ಕೂರಿಸಬೇಕು. ಮಕ್ಕಳ ಸಂಖ್ಯೆ ಹೆಚ್ಚು ಇದ್ದಲ್ಲಿ 2 ಅಥವಾ 3 ದಿನಕ್ಕೊಮ್ಮೆ ಬರುವಂತೆ ಸೂಚಿಸಬೇಕು. ಒಂದು ವೇಳೆ ಮಕ್ಕಳ ಸಂಖ್ಯೆ ಕಡಿಮೆ ಇದ್ದಲ್ಲಿ ಎಲ್ಲ ಮಕ್ಕಳನ್ನು ಪ್ರತೀ ದಿನ ಬರುವಂತೆ ತಿಳಿಸಬೇಕು. ವಲಸೆ ಬಂದವರ ಮಕ್ಕಳು ಊರಲ್ಲಿದ್ದರೆ ಅಂತಹ ಮಕ್ಕಳನ್ನು ಅಂಗನವಾಡಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು ಪೌಷ್ಟಿಕ ಆಹಾರದೊಂದಿಗೆ ಎಲ್ಲ ಸೇವೆಗಳನ್ನು ಒದಗಿಸಬೇಕು. ಯಾವುದೇ ದಾಖಲಾತಿ ಇಲ್ಲದಿದ್ದರೂ ನೋಂದಣಿ ನಿರಾಕರಿಸಬಾರದು.

ಸ್ಯಾನಿಟೈಸರ್‌ ಎಚ್ಚರಿಕೆ ಇರಲಿ!
ಸ್ಯಾನಿಟೈಸರ್‌/ಸೋಂಕು ನಿವಾರಕ ಪುಟಾಣಿಗಳ ಕೈಗೆ ಸಿಗದಂತೆ ಸುರಕ್ಷಿತ ಸ್ಥಳದಲ್ಲಿ ಇಡಬೇಕು ಎಂದು ಸೂಚಿಸಲಾಗಿದೆ.

ಪೌಷ್ಟಿಕ ಆಹಾರ ಮನೆಗೆ
ಪ್ರಸ್ತುತ ಅಂಗನವಾಡಿ ಕೇಂದ್ರವನ್ನು ಪೂರ್ಣಪ್ರಮಾಣದಲ್ಲಿ ತೆರೆಯದೇ ಇರುವುದರಿಂದ ಮುಂದಿನ ಸೂಚನೆಯವರೆಗೆ ಪೂರಕ ಪೌಷ್ಟಿಕಾಂಶ ಯುಕ್ತ ಆಹಾರ/ಆಹಾರ ಪದಾರ್ಥಗಳನ್ನು ಮನೆಗೆ ನೀಡಲಾಗುತ್ತದೆ. ಅಂಗನವಾಡಿ ಆರಂಭವಾಗಿ 15 ದಿನಗಳ ವರೆಗೂ ಇದೇ ಕ್ರಮ ಜಾರಿಯಲ್ಲಿರಲಿದೆ. ಅನಂತರ ಪರಿಸ್ಥಿತಿಯನ್ನು ಅವಲೋಕಿಸಿ ಅಂಗನವಾಡಿಯಲ್ಲಿಯೇ ನೀಡುವ ಬಗ್ಗೆ ತೀರ್ಮಾನಿಸಲಾಗುತ್ತದೆ. ಕೇಂದ್ರ ಕಚೇರಿಯ ಸೂಚನೆಯ ಬಳಿಕ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ಪೂರಕ ಪೌಷ್ಟಿಕ ಆಹಾರ, ಬಿಸಿಯೂಟ, ಬಿಸಿಹಾಲು, ಬೇಯಿಸಿದ ಮೊಟ್ಟೆ ನೀಡಲಾಗುವುದು.

ಅಂಗನವಾಡಿ ಕೇಂದ್ರ ಗಳನ್ನು ನ. 8ರಿಂದ ಪುನರಾರಂಭಿಸುವಂತೆ ಸರಕಾರ ಸೂಚನೆ ನೀಡಿದೆ. ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
– ಪಾಪಾ ಬೋವಿ ಹಾಗೂ ಶೇಷಪ್ಪ ಆರ್‌.
ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ. ಹಾಗೂ ಉಡುಪಿ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next