Advertisement

15 ವರ್ಷ ಆದರೂ ಪುನರ್‌ ನಿರ್ಮಾಣವಾಗದ ಅಂಗನವಾಡಿ ಕಟ್ಟಡ

08:37 PM Sep 04, 2020 | mahesh |

ಉಪ್ಪುಂದ: ಹೇರೂರು ಗ್ರಾ.ಪಂ. ವ್ಯಾಪ್ತಿಯ ಯರುಕೋಣೆ ಪೇಟೆಯಲ್ಲಿದ್ದ ಅಂಗನವಾಡಿ ಕೇಂದ್ರ ಕಟ್ಟಡವು ಬಿದ್ದು ಹೋಗಿದ್ದು ಪುನರ್‌ ನಿರ್ಮಾಣಕ್ಕೆ ಮುಂದಾಗದೆ ಇರುವುದರಿಂದ ರೋಸಿಹೋದ ಇಲ್ಲಿನ ನಾಗರಿಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸದೇ ಇರುವ ತೀರ್ಮಾನಕ್ಕೆ ಬಂದಿದ್ದಾರೆ. ಯರುಕೋಣೆಯಲ್ಲಿನ ಅಂಗವಾಡಿ ಕಟ್ಟಡವು ಬಿದ್ದು ಹೋಗಿ 15 ವರ್ಷಗಳು ಕಳೆದಿವೆ. ಪುನರ್‌ನಿರ್ಮಾಣಕ್ಕೆ ಅನುದಾನ ಒದಗಿಸಲು ಸಾಕಷ್ಟು ಮನವಿ ಸಲ್ಲಿಸಿದ್ದರೂ ಯಾವುದೇ ಫ‌ಲಕಂಡಿಲ್ಲ.

Advertisement

ಹಿನ್ನೆಲೆ
ನಾವುಂದ-ಯರುಕೋಣೆ., ಎಲ್ಲೂರು ಮಖ್ಯ ರಸ್ತೆಯ ಯರುಕೋಣೆ ಪೇಟೆಯ ಸರಕಾರಿ ಜಾಗದಲ್ಲಿ ಮುಂದುವರಿಕಾ ಕಲಿಕಾ ಕಟ್ಟಡ ಇತ್ತು, ನಂತರ ಈ ಕಟ್ಟಡದಲ್ಲಿ ಅಂಗನವಾಡಿ ಆರಂಭಿಸಲಾಗಿತ್ತು. ಸುಮಾರು 15 ವರ್ಷ ಅಂಗನವಾಡಿ ಕಾರ್ಯ ನಿರ್ವಹಿಸಿದೆ. ಬಳಿಕ ಕಟ್ಟಡ ಶಿಥಿಲಗೊಂಡಿದ್ದು ಕಟ್ಟಡ ದುರಸ್ತಿಗೊಳಿಸುವ ಕಾರ್ಯ ನಡೆಯಲಿಲ್ಲ. ಬಳಿಕ ಈ ಅಂಗನವಾಡಿ ಕೇಂದ್ರವನ್ನು ಪೇಟೆಯಿಂದ ಸುಮಾರು 4 ಕಿ.ಮೀ. ದೂರದ ಆಲಗದ್ದೆ ಕೇರಿಗೆ ಸ್ಥಳಾಂತರಿಸಲಾಗಿದೆ.

ಹೆತ್ತವರಿಗೆ ಸಮಸ್ಯೆ
ಯರುಕೋಣೆಯ ಪೇಟೆ ಪರಿಸರದಲ್ಲಿ 35ಕ್ಕೂ ಹೆಚ್ಚು ಮನೆಗಳಿವೆ. ಅಂಗನವಾಡಿಗೆ ಹೋಗುವ ವಯಸ್ಸಿನ 17 ಮಕ್ಕಳಿದ್ದಾರೆ. ಸಮೀಪದ ಅಂಗನವಾಡಿಯನ್ನು ದೂರದ ಊರಿಗೆ ಸ್ಥಳಾಂತರಿಸಿದ್ದರಿಂದ ಹೆತ್ತವರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಆಲಗದ್ದೆಕೇರಿ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಕಷ್ಟಕರವಾಗಿದ್ದರಿಂದ ಕೆಲವರು 2.5 ಕಿ.ಮೀ. ದೂರದ ಹೇರೂರು ಮಠದ ಶಾಲೆ ಅಂಗನವಾಡಿಗೆ ಬಿಟ್ಟುಬರುತ್ತಾರೆ. ಆದರೆ ಅಂಗನವಾಡಿ ಕೇಂದ್ರಕ್ಕೆ ಸರಕಾರದಿಂದ ಸಿಗುವ ಸೌಲಭ್ಯಗಳು ಪೂರ್ಣಪ್ರಮಾಣದಲ್ಲಿ ಲಭ್ಯವಾಗುವುದು ಆಲಗದ್ದೆಕೇರಿಗೆ. ಇದರಿಂದ ಮಕ್ಕಳು ವಿವಿಧ ಸೌಲಭ್ಯಗಳಿಂದ ವಂಚಿತರಾಗುವ ಭೀತಿಯು ಹೆತ್ತವರನ್ನು ಕಾಡುತ್ತಿದೆ. ಮಳೆಗಾಲದಲ್ಲಿ ದೂರದ ಅಂಗನವಾಡಿಗೆ ಕರೆದುಕೊಂಡು ಹೋಗಲು ಕಷ್ಟವಾಗುತ್ತಿದೆ. ಕೆಲಸಕ್ಕೂ ಅಡಚಣೆಯಾಗುತ್ತದೆ. ಇದರಿಂದ ಮಕ್ಕಳನ್ನು ಕಳಿಸದೇ ಇರುವ ತೀರ್ಮಾನ ಮಾಡಿದ್ದಾಗಿ ಚಂದ್ರ ಯರುಕೋಣೆ ಹೇಳುತ್ತಾರೆ.

ಜಾಗ ಒತ್ತುವರಿ ತೆರವಿಗೆ ಆಗ್ರಹ
ಇಲ್ಲಿನ ಅಂಗನವಾಡಿಯ ಹಳೆಯ ಕಟ್ಟಡದ ಹಂಚಿನ ಮಾಡನ್ನು ಕೆಡವಿ ಒತ್ತುವರಿ ಮಾಡಿದ ಬಗ್ಗೆ ಮತ್ತು ಸನಿಹದ ಸರಕಾರಿ ಸಮಾಜ ಮಂದಿರಕ್ಕೆ ಮೀಸಲಿಟ್ಟ ಸರಕಾರಿ ಜಾಗವನ್ನೂ ಒತ್ತುವರಿ ಮಾಡಿದ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಇದನ್ನು ತೆರವುಗೊಳಿಸಲೂ ಇಲಾಖೆಗಳು, ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ಮನವಿ ಮಾಡಿದ್ದೇವೆ
ಜನರ ಮನವಿಯಂತೆ ಎರಡು ವರ್ಷಗಳ ಹಿಂದೆ ಅದೇ ಅಂಗನವಾಡಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಶಿಶು ಅಭಿವೃದ್ಧಿ ಇಲಾಖೆಗೆ ಅನುದಾನಕ್ಕಾಗಿ ಮನವಿ ಮಾಡಲಾಗಿದೆ. ಇದುವರೆಗೆ ಸರಕಾರ ಯಾವುದೇ ಅನುದಾನ ಮಂಜೂರುಗೊಳಿಸಿಲ್ಲ.
– ಪ್ರಕಾಶ, ಪಿಡಿಒ ಹೇರೂರು ಗ್ರಾ.ಪಂ.

Advertisement

ಪರಿಶೀಲಿಸಿ ಕ್ರಮ
ಒತ್ತುವರಿಯ ಬಗ್ಗೆ ದೂರು ಬಂದಿದ್ದು ಈ ಕುರಿತು ನೋಟಿಸ್‌ ಜಾರಿಗೊಳಿಸಿದ್ದೇವೆ. ವಿಚಾರಣೆ ಹಂತದಲ್ಲಿ ಇದೆ. ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು.
– ಬಸಪ್ಪ ಪೂಜಾರ್‌, ಬೈಂದೂರು ತಾ| ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next