Advertisement

ಅನಂತ್‌ಕುಮಾರ್‌ ಹೆಗಡೆಗೆ ಪ್ರಧಾನಿ ಮೂಲಕ ಕಿವಿಮಾತು

07:25 AM Dec 27, 2017 | Team Udayavani |

ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಇತ್ತೀಚಿನ ದಿನಗಳಲ್ಲಿ ನೀಡುತ್ತಿರುವ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತರುತ್ತಿರುವ ಹಿನ್ನೆಲೆಯಲ್ಲಿ, ಅಂತಹ ಮಾತುಗಳಿಗೆ ಕಡಿವಾಣ ಹಾಕುವ ಕುರಿತಂತೆ ಬಿಜೆಪಿ ಕೋರ್‌ ಕಮಿಟಿ
ಸಭೆಯಲ್ಲಿ ಚರ್ಚೆ ನಡೆದಿದೆ. ಅನಂತಕುಮಾರ್‌ ಹೆಗಡೆ ಕೇಂದ್ರ ಸಚಿವರಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಮೂಲಕ ಅವರಿಗೆ ಕಿವಿಮಾತು ಹೇಳಿಸುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಇದಕ್ಕೆ ಪಕ್ಷದ ಹಿರಿಯ ನಾಯಕರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

Advertisement

ಅನಂತಕುಮಾರ್‌ ಹೆಗಡೆ ಅವರ ಕೆಲವು ಹೇಳಿಕೆಗಳು ಹಿಂದೂ ಮತಗಳನ್ನು ಬಿಜೆಪಿ ಪರ ಕ್ರೊಢೀಕರಿಸಲು ನೆರವಾಗುತ್ತಿದೆಯಾದರೂ ಸಂವಿಧಾನ ತಿದ್ದುಪಡಿ ಮಾಡಲು ಬಂದಿದ್ದೇವೆ ಎಂಬಂತಹ ಹೇಳಿಕೆಗಳಿಗೆ ವ್ಯಾಪಕ ಟೀಕೆ
ವ್ಯಕ್ತವಾಗುತ್ತಿದೆ. ಇದು ಪಕ್ಷಕ್ಕೆ ಮುಜುಗರವನ್ನೂ ಉಂಟುಮಾಡುತ್ತಿದೆ ಎಂದು ಕೋರ್‌ ಕಮಿಟಿಯ ಕೆಲವು ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು. ಅಲ್ಲದೆ, ಇನ್ನು ಮುಂದೆ ಇಂತಹ ಹೇಳಿಕೆಗಳನ್ನು ನೀಡದಂತೆ ಅವರಿಗೆ ಮನವರಿಕೆ ಮಾಡಬೇಕೆಂಬ ಮನವಿಯನ್ನೂ ಮುಂದಿಟ್ಟರು. ಆದರೆ, ಅನಂತ್‌ಕುಮಾರ್‌ ಹೆಗಡೆ ಕೇಂದ್ರ ಸಚಿವರಾಗಿರುವುದರಿಂದ ಈ ಬಗ್ಗೆ ಹೆಚ್ಚು ಚರ್ಚೆ ನಡೆಸಲು ನಿರಾಕರಿಸಿದ ಪ್ರಮುಖ ನಾಯಕರು, ಪ್ರಧಾನಿಯವರಿಂದ ಅವರಿಗೆ ಸಲಹೆ ಕೊಡಿಸುವುದಾಗಿ ಭರವಸೆ ನೀಡಿದರು ಎಂದು ತಿಳಿದುಬಂದಿದೆ.

ವೀರಯ್ಯ ದೂರು: ಇನ್ನೊಂದೆಡೆ ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌. ವೀರಯ್ಯ ಅವರು ಅನಂತ್‌ಕುಮಾರ್‌ ಹೆಗಡೆ ಅವರ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಮೌಖೀಕವಾಗಿ ಪಕ್ಷದ ವರಿಷ್ಠರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ದೂರು ನೀಡಿದ್ದಾರೆ. ಮುಂದೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ
ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next