Advertisement

ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲದ ಎಂಜಿನಿಯರ್‌ ಸೆರೆ

12:48 AM May 09, 2019 | Team Udayavani |

ಬೆಂಗಳೂರು: ಸಿನಿಮಾ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರದ ವೇಳೆ ಎದ್ದು ನಿಂತು ಗೌರವ ಸೂಚಿಸಿದ ಎಂಜಿನಿಯರ್‌ನನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ ಘಟನೆ ಗರುಡಾ ಮಾಲ್‌ನಲ್ಲಿ ಮಂಗಳವಾರ ನಡೆದಿದೆ.

Advertisement

ಸಂಜಯ್‌ನಗರ ನಿವಾಸಿ ನಿತಿನ್‌ (29) ಬಂಧಿತ ಆರೋಪಿ. ನಿತಿನ್‌ ವಿರುದ್ಧ ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿ ಜಾಮೀನಿನ ಆಧಾರದಲ್ಲಿ ಬಿಡುಗಡೆಗೊಂಡಿದ್ದಾರೆ ಎಂದು ಅಶೋಕನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಆರೋಪಿ ನಿತಿನ್‌, ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಉನ್ನತ ವ್ಯಾಸಂಗ ಮಾಡಿದ್ದು, ಮೂರು ವರ್ಷಗಳಿಂದ ನಗರದಲ್ಲಿ ವಾಸವಿದ್ದಾರೆ. ಎಂಜಿನಿಯರಿಂಗ್‌ ಪದವೀಧರ ನಿತಿನ್‌, ಸಿನಿಮಾ ಕ್ಷೇತ್ರದ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಗರುಡಾಮಾಲ್‌ನ ಐನಾಕ್ಸ್‌ನಲ್ಲಿ ಮಂಗಳವಾರ ಸಂಜೆ 5.30ಕ್ಕೆ “ಅವೆಂಜರ್; ಎಂಡ್‌ ಗೇಮ್‌’ ಪ್ರದರ್ಶನಕ್ಕೂ ಮುನ್ನ ನಿಯಮಾವಳಿಯಂತೆ ರಾಷ್ಟ್ರಗೀತೆ ಪ್ರಸಾರ ಮಾಡಲಾಗಿತ್ತು. ಈ ವೇಳೆ ಪ್ರೇಕ್ಷಕರೆಲ್ಲರೂ ಎದ್ದು ನಿಂತಿದ್ದು, ನಿತಿನ್‌ ಕುಳಿತೇ ಇದ್ದರು.

ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು, ರಾಷ್ಟ್ರಗೀತೆಗೆ ಗೌರವ ಕೊಡಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನಿತಿನ್‌ ಕೂಡ ನನ್ನಿಷ್ಟ ಎಂದು ಉದ್ಧಟತನದ ಉತ್ತರ ನೀಡಿದ್ದು. ಮಾತಿಗೆ ಮಾತು ಬೆಳೆದು ಜಗಳವಾಗಿ, ಕೈ ಕೈ ಮಿಲಾಯಿಸುವ ಹಂತ ತಲುಪಿದೆ.

Advertisement

ಪ್ರೇಕ್ಷಕರೊಬ್ಬರು ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು, ಆರೋಪಿ ನಿತಿನ್‌ನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next