Advertisement

ಕೋಟಿ-ಚೆನ್ನಯೆರ್ನ ಅಪ್ಪೆ ದೇಯಿ ಬೈದೆತಿ ಒಂದು ಅವಲೋಕನ

11:42 AM Sep 15, 2017 | |

ತುಳುನಾಡಿನ ಅಮರ ವೀರರಾದ ಕೋಟಿ ಚೆನ್ನಯರ ಪಾಡ್ದನವು ಬಂಟರ ಸಂಧಿ ಯೆಂದೇ ಪ್ರಸಿದ್ಧವಾಗಿದೆ. ಅದು ತುಳುವಿನ ಮೌಖೀಕ ಮಹಾಕಾವ್ಯವೆಂದೇ ಪರಿಗಣಿಸಲ್ಪಟ್ಟಿದೆ. ಈ ಕಾವ್ಯದಲ್ಲಿ ಐನೂರು ವರ್ಷಗಳ ಹಿಂದಿನ ಜನಪದ ಸಿರಿಯು ಅಡಕಗೊಂಡಿದೆ. ಕವಿಯು ತನ್ನ ಕಾಲದಲ್ಲಿ ನಡೆದ ಘಟನೆಗಳನ್ನು ಉಪಮೆ, ರೂಪಕಗಳ ಸಿಂಗಾರದೊಂದಿಗೆ ತನ್ನ ಆಶಯಗಳನ್ನು ಧ್ವನಿಪೂರ್ಣವಾಗಿ ಕಟ್ಟಿಕೊಟ್ಟಿದ್ದಾನೆ. ಶತಮಾನಗಳು ಉರುಳಿದಂತೆ ಈ ಕಾವ್ಯದ ಹಾಡುಗಾರಿಕೆಯಲ್ಲಿ ಪುನರಾವರ್ತನೆಗಳು, ವರ್ಣನೆಗಳು ಸೇರ್ಪಡೆಯಾಗಿಯೋ ಅಥವಾ ಕಳಚಿಕೊಂಡೋ ಉಳಿದಿರುವ ಸಾಧ್ಯತೆಗಳಿವೆ. ಹಾಗೆಂದು ಮೂಲಕತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವ್ಯಕ್ತಿಗಳ ಶಕ್ತಿಗಳನ್ನು ವರ್ಣಿಸುವಾಗ ವೈಭವೀಕರಣ ಮಾಡುವುದು ಕವಿಧರ್ಮವೂ ಹೌದು. ಕವಿ ಕರ್ಮವೂ ಹೌದು. ಅಪ್ರಿಯವಾದ ಸತ್ಯವನ್ನು ಹೇಳಬೇಕಾದ ಸಂದರ್ಭದಲ್ಲಿ ಕವಿ ಉಪಮೆ, ರೂಪಕಗಳನ್ನು ಬಳಸಿಕೊಂಡೇ ಪ್ರಿಯವಾಗಿ ಹೇಳುವುದು ತನ್ನ ಕರ್ತವ್ಯವೆಂದೇ ಭಾವಿಸುತ್ತಾನೆ. ಪ್ರಸ್ತುತ ಸಮಾಜದ ನೆಲೆಯಲ್ಲಿ ನಿಂತು ಈ ಕಾವ್ಯದ ಸೌಂದರ್ಯವನ್ನು ವಿಮರ್ಶಿಸುವಾಗ ಹೀಗೂ ಸಾಧ್ಯವೇ- ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡುವುದು ಸಹಜ. ಪ್ರಶ್ನೆಗಳೇ ಮೂಡದೆ ಇದ್ದುದನ್ನು ಇದ್ದಂತೆಯೇ ಸ್ವೀಕರಿಸಿ ನಂಬುವ ಆಸ್ತಿಕ ವರ್ಗದ ನಂಬಿಕೆಗಳನ್ನು ಕೆಣಕುವ, ಕೆದಕುವ ಕೆಲಸವೂ ಅಪ್ರಿಯವಾದ ಕೆಲಸವಾಗುತ್ತದೆ. ಜನಪದ ಸಾಹಿತ್ಯವನ್ನು, ಅದರಲ್ಲಿ ಸೇರಿಕೊಂಡ ಎಳೆಗಳನ್ನು ಸೋಸಿ ಸ್ವೀಕರಿಸಬೇಕು ಎಂದು ಕುವೆಂಪು ಹೇಳಿದ್ದು ಈ ಅರ್ಥದಲ್ಲಿ. 

Advertisement

ಈ ನಿಟ್ಟಿನಲ್ಲಿ ಪಾಡ್ದನಗಳಲ್ಲಿ ಹೇಳಿದ ಮಾತುಗಳ ಒಳ ತಿರುಳನ್ನು ಬಗೆದು ತೋರಿಸುವ ಸೂಕ್ಷ್ಮವಾದ ಕೆಲಸವಾಗಿ ದಾಮೋದರ ಕಲ್ಮಾಡಿ ಮತ್ತು ಚೆಲುವರಾಜ ಪೆರಂಪಳ್ಳಿಯವರು ಕೋಟಿ ಚೆನ್ನಯೆರ್ನ ಅಪ್ಪೆ ದೇಯಿ ಬೈದೆತಿ ಎಂಬ ಕೃತಿಯಲ್ಲಿ ಕೆಲವು ಒಳನೋಟಗಳನ್ನು ನೀಡಿದ್ದಾರೆ. ಉಡುಪಿಯ ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಸಂಸ್ಥೆಯು ಈಗಾಗಲೇ ತುಳುನಾಡ ಗರೋಡಿಗಳ ಅಧ್ಯಯನದ ಜತೆಗೆ ಕೋಟಿ ಚೆನ್ನಯರ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಮಾಡಿ ಹಲವಾರು ಕೃತಿಗಳನ್ನು ಪ್ರಕಟಿಸಿದೆ. ಈ ಸಂಸ್ಥೆಯ ಒಂಬತ್ತನೇ ಕೃತಿಯಾಗಿ ಈ ಕೃತಿಯು ಪ್ರಕಟವಾಗಿದೆ.

ಈ ಕೃತಿಯು ದೇಯಿ ಬೈದೆತಿಯನ್ನು ಕೇಂದ್ರವಾಗಿಟ್ಟು, ಪಾಡ್ದನಗಳಲ್ಲಿ ಹೇಳಿದ ಘಟನೆಗಳನ್ನೇ ಆಧರಿಸಿ ಕವಿಯ ಮನದಾಳದ ಚಿಂತನೆಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದೆ. ಕೋಟಿ ಚೆನ್ನಯರ ಹಾಗೆಯೇ ದೇಯಿಯೂ ಕೂಡ ಓರ್ವ ಕಾರಣಿಕ ಶಕ್ತಿಯುಳ್ಳ ಮಹಿಳೆಯಾಗಿದ್ದಾಳೆ. ಆದುದರಿಂದಲೇ ಅವಳ ಕತೆಯನ್ನು ಕವಿ ಕೆಲವು ಅತಿಶಯೋಕ್ತಿಗಳಿಂದ ವರ್ಣಿಸಿದ್ದಾನೆ. ಆ ಉಕ್ತಿಗಳಲ್ಲಿ ಅಡಗಿರುವ ವಾಸ್ತವ ಸಂಗತಿಗಳನ್ನು ಈ ಕೃತಿ ಬಯಲು ಮಾಡಿದೆ. 

ಪಡುಮಲೆಯ ಸಂಕಲಕರಿಯದ ಪ್ರಸಿದ್ಧ ಬೈದ್ಯ ಬಿರ್ಮಣನ ಬಳಿಗೆ ಮಕ್ಕಳಿಲ್ಲದ ಬ್ರಾಹ್ಮಣ ದಂಪತಿ ಪೆಜನಾರರು ಬರುತ್ತಾರೆ. ಪೆಜನಾರರ ಮಡದಿಯ ದುಃಖವನ್ನು ಕಂಡು ಬಿರ್ಮಣ ಬೈದ್ಯನ ಮನಸ್ಸು ಕರಗುತ್ತದೆ. ಆ ದಂಪತಿ ಬಂಜೆಯೆಂಬ ಲೋಕನಿಂದೆಗೆ ಹೆದರಿ ಪರಿಹಾರಕ್ಕಾಗಿ ಬೈದ್ಯನ ಮೊರೆ ಹೋಗುತ್ತಾರೆ. ಅವರಿಗೆ ಸಾಂತ್ವನ ನೀಡುತ್ತಾ ಬೈದ್ಯ ತಾನು ನಂಬಿದ ದೈವಗಳಿಗೆ, ನಾಗಬ್ರಹ್ಮರಿಗೆ ವಂದಿಸಿ ದಂಪತಿಗೆ ವ್ರತ ಆಚರಿಸಿದರೆ ಫ‌ಲ ಸಿಗುತ್ತದೆ ಎಂದು ಧೈರ್ಯ ತುಂಬುತ್ತಾನೆ. 

ಮುಂದೆ ಕೆಲವು ದಿನಗಳ ಬಳಿಕ ಪೆಜನಾರ್‌ ವ್ರತ ಮುಗಿಸಿ ಸ್ನಾನ ಮಾಡುವಾಗ ಅವರಿಗೆ ಹಕ್ಕಿಯ ಗೂಡಿನಲ್ಲಿ ಮೊಟ್ಟೆಯಾಕಾರದ ದೊಡ್ಡ ಕುಂಬಳಕಾಯಿ ಗಾತ್ರದ ವಸ್ತು ಕಾಲಿಗೆ ತಾಗು ತ್ತದೆ. ಅದನ್ನು ಕೈಗೆತ್ತಿ ಮನೆಗೆ ತಂದು ಕಲೆಂಬಿಯೊಳಗಿಡುತ್ತಾರೆ. ಸ್ವಲ್ಪ ಹೊತ್ತಿನಲ್ಲಿ ಮಗು ಅಳುವ ಸದ್ದು ಕೇಳಿ, ಕಲೆಂಬಿಯೊಳಗಿದ್ದ ವಸ್ತುವನ್ನು ಬಿಚ್ಚಿದಾಗ ಅದರೊಳಗಿದ್ದ ಪುಟ್ಟ ಶಿಶುವನ್ನು ಕಂಡು ಈ ಬ್ರಾಹ್ಮಣ ದಂಪತಿಯ ಸಂತೋಷಕ್ಕೆ ಪಾರವೇ ಇಲ್ಲ. ಪೆಜನಾರ್‌ ಅದು ದೇವರೇ ಅನುಗ್ರಹಿಸಿದ ಶಿಶುವೆಂದು ನಂಬುತ್ತಾರೆ. ಪಾಡªನದ ಹಕ್ಕಿ ಮೊಟ್ಟೆಗಳ ಕತೆಯು ಅದ್ಭುತ ರಮ್ಯ ಕಥಾನಕವಾಗಿ ದೇಯಿ ಬೈದೆತಿಯನ್ನು ಉಚ್ಚವರ್ಣದವಳೆಂದು ವೈಭವೀಕರಿಸಲು ಮಾಡಿದ ಕಲ್ಪನೆಯೆಂದು ಸಾಮಾನ್ಯರು ಭಾವಿಸುತ್ತಾರೆ. ಹಕ್ಕಿ ಮೊಟ್ಟೆಯ ಕತೆಯನ್ನು ಈ ಕೃತಿಯು ಸ್ವಲ್ಪ ವಾಸ್ತವ ರೀತಿಯಲ್ಲಿ ಅರ್ಥ ಮಾಡಿಸುತ್ತದೆ.

Advertisement

ದೇಯಿ ಬೈದೆತಿಯ ಕತೆಯಲ್ಲಿ ನಂಬಲು ಅಸಾಧ್ಯವಾದ ಘಟನೆಗಳಿರುವಲ್ಲೆಲ್ಲ ವೈಚಾರಿಕ ವಾದ ಚಿಂತನೆಗಳನ್ನು ಈ ಕೃತಿಯಲ್ಲಿ ನಡೆಸಲಾಗಿದೆ. ಮೂಲ ಪಾಡ್ದನಕಾರರು ತಮ್ಮ ಕಾಲದ ನಂಬಿಕೆಗಳಿಗೆ ಪುಷ್ಟಿ ನೀಡುವಂತೆ ಕತೆ ಹೇಳಿದರೂ ಅದರೊಳಗೆ ಇಂತಹ ನೈಜಕತೆಗಳೂ ಇರಬಹುದು ಎಂದು ಯೋಚಿಸುವುದಕ್ಕೆ ಈ ಕೃತಿ ಅನುವು ಮಾಡಿ ಕೊಡುತ್ತದೆ. ಶೂದ್ರರ ಮನೆಯಲ್ಲಿ ಹುಟ್ಟಿ , ಮೇಲ್ವರ್ಣದ ಪೆಜನಾರರ ಮಗುವಾಗಿ ಬೆಳೆದು, ಅನಾಥೆಯಂತೆ ಕಾಡಿಗಟ್ಟಲ್ಪಟ್ಟ ದೇಯಿಯು ಬದುಕಿನಲ್ಲಿ ಅನೇಕ ಅಗ್ನಿ ದಿವ್ಯಗಳನ್ನು ಎದುರಿಸುತ್ತಾಳೆ. ತನ್ನ ವೈದ್ಯ ವಿದ್ಯೆಯ ಬಗ್ಗೆ ಅಹಂಕಾರ ತೋರಿಸದೆ ಅರಮನೆಯ ಹಿರಿಯರ ಸಮ್ಮುಖದಲ್ಲಿ ವಿನಯದಿಂದ ವರ್ತಿಸುವ ಅವಳ ನಡೆನುಡಿಗಳು ಅದರ್ಶವಾಗಿವೆ. ಅವಮಾನ, ಅನ್ಯಾಯಗಳನ್ನು ಸಹಿಸದ ಗುಣಗಳೇ ಅವಳ ಮಕ್ಕಳಾದ ಕೋಟಿ ಚೆನ್ನಯರಲ್ಲಿ ವ್ಯಕ್ತವಾಗಿವೆ. ಈ ವೀರ ಪುರುಷರ ಮಾತೆಯಾಗಿಯೂ ಆಕೆ ನಮ್ಮ ನಾಡಿಗೆ ಆದರಣೀಯಳಾಗಿದ್ದಾಳೆ. ಅಕಾಲ ಮರಣಕ್ಕೆ ತುತ್ತಾದ ಅವಳು ತುಳುವರ ಪ್ರೀತಿ ಗೌರವಗಳ ಮತ್ತು ಭಕ್ತಿಯ ಆರಾಧನೆಗೆ ಪಾತ್ರಳಾಗಿದ್ದಾಳೆ. 

ಈ ಕತೆಯನ್ನು ತುಳುವಿನಲ್ಲಿ ಪ್ರಕಟಿಸಿದ ಪ್ರಕಾಶಕರಿಗೆ ಮತ್ತು ಲೇಖಕರಿಗೆ ಕೃತಜ್ಞತೆಗಳು ಸಲ್ಲಲೇ ಬೇಕು. ಉತ್ತಮ ಗುಣಮಟ್ಟದಲ್ಲಿ ಈ ಕೃತಿ ಪ್ರಕಟವಾಗಿರುವುದೂ ಕೃತಿಯ ಘನತೆಯನ್ನು ಹೆಚ್ಚಿಸಿದೆ. ಲೇಖಕರು ಉಡುಪಿ ಕಡೆಯವರಾದುದರಿಂದ ಕೆಲವು ಪದಗಳು ಮಂಗಳೂರಿನ ತುಳುವರಿಗೆ ಹೊಸ ಅರಿವನ್ನು ಮೂಡಿಸಿದೆ. ಹಲವು ಹೊಸ ಭಾಷಾ ಪ್ರಯೋಗಗಳಿವೆ. ಅವು ಉಡುಪಿ ತುಳುವಿನ ವಿಶೇಷತೆಗಳಿರಬಹುದೆಂದು ನನ್ನ ಭಾವನೆ. 

ಇಲ್ಲಿನ ಮದುವೆಯ ವರ್ಣನೆಯ ಬಗ್ಗೆ ಸಂದೇಹವಿದೆ. ಪಾಡ್ದನದಲ್ಲಿ ಹೇಗಿದೆಯೋ ತಿಳಿಯದು, ಹಿಂದೆ ನಮ್ಮಲ್ಲಿ ಹೆಣ್ಣಿನ ದಿಬ್ಬಣ ಗಂಡಿನ ಮನೆ ಹೋಗಿ ಗಂಡನ್ನು ಕರೆತರುವ ಸಂಪ್ರದಾಯವಿತ್ತು. ಈ ಕೃತಿಯಲ್ಲಿ ದೇಯಿಯ ಮನೆಗೆ ಕಾಂತುಬೈದನ ದಿಬ್ಬಣ ಬರುವ ವರ್ಣನೆ ಇದೆ. ಎಲ್ಲ ಪಾಡªನದ ಪಾಠಗಳಲ್ಲೂ ಹೀಗೆಯೇ ಇದೆಯೇ ಎಂದು ಪರಿಶೀಲಿಸಬೇಕಾದ ಅಗತ್ಯ ವಿದೆ. ಇಬ್ಬರು ಲೇಖಕರು ಸೇರಿ ರಚಿಸಿದ ಈ ಕೃತಿಯನ್ನು ತುಳುವರೆಲ್ಲರೂ ಅಭಿಮಾನದಿಂದ ಕೈಗೆತ್ತಿಕೊಳ್ಳಬೇಕಿದೆ. ಹಾಗೆಯೇ ಇತರ ಭಾಷಿಕರಿಗೂ ದೇಯಿಯ ಕಥೆಯನ್ನು ತಲುಪಿಸುವ ಕೆಲಸವನ್ನು ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಪ್ರತಿಷ್ಠಾನವು ಕೈಗೆತ್ತಿಕೊಂಡರೆ ಪ್ರಯೋಜನ ವಾದೀತು. ದೇಯಿ ಬೈದೆತಿಯ ಗೌರವದಲ್ಲಿ ಪ್ರತಿ ಪುಟದಲ್ಲೂ ಔಷಧೀಯ ಸಸ್ಯಗಳ ಪರಿಚಯ ವನ್ನು ಚಿತ್ರ ಸಹಿತ ನೀಡಿದ್ದು ಕೃತಿಯ ಧನಾತ್ಮಕ ಅಂಶವಾಗಿದೆ.

ಬಿ. ಎಂ. ರೋಹಿಣಿ

Advertisement

Udayavani is now on Telegram. Click here to join our channel and stay updated with the latest news.

Next