Advertisement

ಒಂದು ಔಟ್‌ ಆಫ್ ಬಾಕ್ಸ್‌ ಚಿತ್ರ

07:30 AM Aug 11, 2017 | Harsha Rao |

ಅದಕ್ಕೂ ಮುನ್ನ ನಾಯಕಿ ಸಂಯುಕ್ತಾ ಹೆಗ್ಡೆ ಕಣ್ಣಿರು ಹಾಕಿ ಹೋಗಾಗಿತ್ತು. ಆಕೆಯನ್ನು ಹೇಗೆ ಸಮಾಧಾನ ಮಾಡುವುದು ಎಂಬ ಯೋಚನೆ ಮತ್ತು ಭಯ ಇತ್ತೇನೋ ಚಿತ್ರತಂಡದವರಿಗೆ. ಅದೇ ಯೋಚನೆ ಮತ್ತು ಭಯದಲ್ಲಿ ಮಾಧ್ಯಮದವರ ಎದುರಾದರು “ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ’ ಚಿತ್ರತಂಡ. ವೇದಿಕೆ ಮೇಲೆ ಕುಳಿತಿದ್ದವರು ನರ್ವಸ್‌ ಆಗಿದ್ದರು. ಏನು ಕೇಳಬಹುದೋ, ಏನು ಹೇಳಬೇಕೋ ಎಂಬ ಗೊಂದಲದಲ್ಲೇ ಮಾತಿಗೆ ರೆಡಿಯಾದರು.

Advertisement

ಮೊದಲು ಮಾತನಾಡಿದ್ದು ನಿರ್ದೇಶಕ ಶ್ರೀನಾಗ್‌. ಅವರದ್ದು ಕನ್ನಡದಲ್ಲಿ ಇದು ಎರಡನೆಯ ಚಿತ್ರ. ಈ ಹಿಂದೆ “ನಿತ್ಯ ಜೊತೆ ಸತ್ಯ’ ಎಂಬ ಚಿತ್ರವನ್ನು ಅವರು ನಿರ್ದೇಶಿಸಿದ್ದರು. ಅವರ ಮಾತಲ್ಲೇ ಹೇಳುವುದಾದರೆ, ಚಿತ್ರ ಅಷ್ಟೇನೂ ಚೆನ್ನಾಗಿ ಹೋಗಲಿಲ್ಲ. ಒಳ್ಳೆಯ ವಿಮರ್ಶೆಗಳು ಬಂದರೂ, ಪ್ರಮೋಷನ್‌ ಆಗದಿದ್ದರಿಂದ ಚಿತ್ರ ಗೆಲ್ಲಲಿಲ್ಲವಂತೆ. ಈಗ ಎರಡನೆಯ ಚಿತ್ರಕ್ಕೆ ಒಂದು ಔಟ್‌ ಆಫ್ ದಿ ಬಾಕ್ಸ್‌ ಸಿನಿಮಾ ಮಾಡುತ್ತಿದ್ದಾರಂತೆ. ಏನದು ಔಟ್‌ ಆಫ್ ದಿ ಬಾಕ್ಸ್‌ ಎಂದರೆ, ಅವರು ಹೇಳಲೊಲ್ಲರು. ಹೋಗಲಿ ಚಿತ್ರದ ಹೆಸರಿಗೂ, ಚಿತ್ರಕ್ಕೂ ಏನು ಸಂಬಂಧ ಎಂದರೆ, ಅದನ್ನು ಹೇಳಿದರೆ ಕಥೆಯೇ ಗೊತ್ತಾಗಿಬಿಡುತ್ತದೆ ಎಂದರು. ಕಥೆ ಗೊತ್ತಾಗದಂತೆ ಏನೂ ಹೇಳುವುದಕ್ಕೆ ಸಾಧ್ಯವೇ ಇಲ್ಲವಾ ಎಂಬ ಪ್ರಶ್ನೆಯೂ ಬಂತು. ಯೋಚಿಸಿ, ಮಾತಾಡುವ ಮನಸ್ಸು ಮಾಡಿದರು ನಿರ್ದೇಶಕರು. “ಪ್ರತಿಯೊಬ್ಬ ಮನುಷ್ಯನಲ್ಲೂ ಎರಡು ರೂಪ ಇರುತ್ತದೆ. ಮನುಷ್ಯ ನಿಶ್ಯಬ್ಧವಾಗಿರುತ್ತಾನೆ. ಅವನನ್ನು ಒಮ್ಮೆ ಕೆಣಕಿದರೆ, ಯುದ್ಧಕ್ಕೂ ರೆಡಿಯಾಗುತ್ತಾನೆ. ಇದೇ ಅಂಶ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದೀವಿ’ ಎಂದರು ಶ್ರೀನಾಗ್‌.

ಈ ಚಿತ್ರದಲ್ಲಿ ಪ್ರಭು ನಾಯಕನಾಗಿ ನಟಿಸುತ್ತಿದ್ದಾರೆ. ಈ ಹಿಂದೆ “ಊರ್ವಿ’ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದರು ಪ್ರಭು. ಈಗ ಈ ಚಿತ್ರದಲ್ಲಿ ಹೀರೋ ಆಗುತ್ತಿದ್ದಾರೆ. ಅವರಿಗೆ ಇಬ್ಬರು ನಾಯಕಿಯರು. ಸಂಯುಕ್ತಾ ಹೆಗ್ಡೆ ಒಬ್ಟಾಕೆಯಾದರೆ, ಸುಶ್ಮಿತಾ ಗೌಡ ಇನ್ನೊಬ್ಬರು. ಈ ಚಿತ್ರದಲ್ಲಿ ಪ್ರಭು ಅವರು ಆದಿತ್ಯ ಎಂಬ ಯುವಕನ ಪಾತ್ರ ನಿರ್ವಹಿಸುತ್ತಿದ್ದಾರೆ. “ನಿಶ್ಯಬ್ಧವಾಗಿರುತ್ತೀನಿ. ಕೊನೆಗೆ ಏನೋ ಟೆನ್ಶನ್‌ ಆಗುತ್ತದೆ. ಅದರಿಂದ ಆಚೆಗೆ ಬಂದು, ಹೇಗೆ ಜಗತ್ತನ್ನು ಫೇಸ್‌ ಮಾಡುತ್ತೀನಿ ಎನ್ನುವುದು ಚಿತ್ರದ ಕಥೆ. ಚಿತ್ರದಲ್ಲೊಂದು ಅದ್ಭುತ ಟ್ವಿಸ್ಟ್‌ ಇದೆ. ಕಥೆ ಬಹಳ ಚೆನ್ನಾಗಿದೆ’ ಎಂದರು ಪ್ರಭು.

ಮೊದಲೇ ಹೇಳಿದಂತೆ ಸಂಯುಕ್ತಾ ಇರಲಿಲ್ಲ. ಸುಶ್ಮಿತಾ ಹೆಚ್ಚು ಮಾತನಾಡಲಿಲ್ಲ. ನಿರ್ಮಾಪಕರಾದ ವಿಜಯ್‌ಕುಮಾರ್‌ ಮಾತನಾಡಿದರು. ಅವರು ರೋಲಿಂಗ್‌ ಡ್ರೀಮ್ಸ್‌ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಡಿ ನಿರ್ಮಿಸುತ್ತಿದ್ದಾರೆ. ಈ ಸಂಸ್ಥೆಯಡಿ ಅವರು ಔಟ್‌ ಆಫ್ ದಿ ಬಾಕ್ಸ್‌ ಚಿತ್ರಗಳನ್ನು ನಿರ್ಮಿಸುತ್ತಾರಂತೆ. ಈ ಕಥೆ ಇಂಪ್ರಸ್‌ ಆಗಿದ್ದರಿಂದಲೇ ಈ ಚಿತ್ರ ಮಾಡಿದ್ದಾಗಿ ಹೇಳಿದರು. ಚಿತ್ರಕ್ಕೆ ಕಿರಣ್‌ ವಾರಣಾಸಿ ಅವರ ಸಂಗೀತ, ಪ್ರವೀಣ್‌ ರಾಜ್‌ ಅವರ ಛಾಯಾಗ್ರಹಣ ಮತ್ತು ಸುರೇಶ್‌ ಅವರ ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next