Advertisement

ಶಿಥಿಲಾವಸ್ಥೆಯತ್ತ ಆಂಗ್ಲರ ಕಾಲದ ಪುರಾತನ ಕಟ್ಟಡ

03:56 PM Jun 05, 2023 | Team Udayavani |

ಎಚ್‌.ಡಿ.ಕೋಟೆ: ಒಂದಾನೊಂದು ಕಾಲದಲ್ಲಿ ಕಾನೂನು ಸುವ್ಯವಸ್ಥೆ ಕೇಂದ್ರ ಸ್ಥಾನವಾಗಿದ್ದ, ತಾಲೂಕಿನ ಸಾವಿರಾರು ಮಂದಿ ರೈತರ ಸಮಸ್ಯೆ ಆಲಿಸುತ್ತಿದ್ದ, ಉಪನೋಂದಣಿ ಇಲಾಖೆ ಒಳಗೊಂಡಿದ್ದ ಆಂಗ್ಲರ ಕಾಲದ ಶತಾಯುಷಿ ಹಳೆ ತಾಲೂಕು ಕಚೇರಿ ಕಟ್ಟಡ ಶಿಥಿಲಾವಸ್ಥೆ ತಲುಪುತ್ತಿದೆಯಾದರೂ ಸಂಬಂಧ ಪಟ್ಟ ಸರ್ಕಾರ ಅಥವಾ ಸ್ಥಳೀಯ ಶಾಸಕರು ಹಳೆ ತಾಲೂಕು ಕಚೇರಿ ಕಟ್ಟಡ ದುರಸ್ತಿಗೆ ಮುಂದಾಗಿಲ್ಲ. ಇದರಿಂದ ದಿನದಿಂದ ದಿನಕ್ಕೆ ಶತಾಯುಷಿ ಹಳೆ ತಾಲೂಕು ಕಚೇರಿ ಕಟ್ಟಡ ಅವಸಾನದ ಅಂಚು ತಲುಪುತ್ತಿದೆಯಾದರೂ ಹೇಳುವ ಕೇಳುವವರಿಲ್ಲದಂತಾಗಿದೆ.

Advertisement

ಆಂಗ್ಲರ ಕಾಲದಲ್ಲಿ ನಿರ್ಮಾಣಗೊಂಡ 100 ವರ್ಷಗಳು ಕ್ರಮಿಸಿರುವ ಕಟ್ಟಡ ಬಹುವರ್ಷಗಳ ತನಕ ಪೊಲೀಸ್‌ ಠಾಣೆ, ಕಾರಾಗೃಹ, ತಾಲೂಕು ಕಚೇರಿ (ಕಂದಾಯ ಇಲಾಖೆ), ಉಪನೋಂದಣಿ ಕಚೇರಿ ಸೇರಿದಂತೆ ಇನ್ನಿತರ ಸರ್ಕಾರಿ ಕೆಲಸಗಳ ಕಚೇರಿಗೆ ಸಾಕ್ಷಿಭೂತವಾಗಿತ್ತು. ಆದರೆ ವರ್ಷಗಳು ಉರುಳಿದಂತೆ ನಿರ್ವಹಣೆ ಇಲ್ಲದೆ ಈಗ ಅವಸಾನದ ಅಂಚು ತಲುಪುತ್ತಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಕಟ್ಟಡದ ದುರಸ್ತಿಗೆ ಮುಂದಾಗದೇ ಇದ್ದರೆ ಇನ್ನು ಕೆಲವೇ ತಿಂಗಳುಗಳಲ್ಲಿ ಆಂಗ್ಲರ ಕಾಲದ ಶತಾಯುಷಿ ಪಾರಂಪರಿಕ ಕಟ್ಟಡ ಇನ್ನು ಕೇವಲ ನೆನಪಾ ಗಷ್ಟೇ ಉಳಿಯುವ ದಿನಗಳು ದೂರ ಉಳಿಸಿಲ್ಲ.

ಸಾಗುವಾನಿ ಮರದಿಂದಲೇ ಕಟ್ಟಡದ ಛಾವಣಿ ನಿರ್ಮಾಣ: ಎಚ್‌.ಡಿ.ಕೋಟೆ ತಾಲೂಕು ವಿಶಾಲವಾದ ಅರಣ್ಯ ಪ್ರದೇಶ ಹೊಂದಿದ್ದು ಬಹುವರ್ಷಗಳ ಹಿಂದೆ ಸಾಗುವಾಣಿ ಮರಗಳಿಗೇನೂ ಬರ ಇಲ್ಲದೇ ಇದ್ದುದ್ದರಿಂದ ಆ ಕಾಲದಲ್ಲಿ ಭಾರಿ ಗಾತ್ರದ ಬೆಳೆಬಾಳುವ ಸಾಗುವಾನಿ ಮರದ ದಿಮ್ಮಿಗಳಿಂದ ಹಳೆಯ ತಾಲೂಕು ಕಚೇರಿ ಕಟ್ಟಡದ ಛಾವಣಿ ನಿರ್ಮಾಣಗೊಳಿಸಲಾಗಿದೆ. ತಂತ್ರಜ್ಞಾನ ಅಷ್ಟೊಂದು ಮುಂದುರಿಯದೇ ಇದ್ದ ಕಾಲದಲ್ಲಿ ನಿರ್ಮಾಣಗೊಂಡ ಛಾವಣಿ 100 ವರ್ಷಗಳು ಕಳೆದರೂ ಆಧುನಿಕ ತಂತ್ರಜ್ಞಾನ ನಾಚಿಸುವಷ್ಟು ಸುಭದ್ರವಾಗಿದೆ.

ಸ್ಥಳಾಂತರಗೊಂಡ ತಾಲೂಕು ಕಚೇರಿ: ಎಚ್‌.ಡಿ. ಕೋಟೆ ತಾಲೂಕು ಜನಸಂಖ್ಯೆಯಲ್ಲಿ ಏರಿಕೆಯಾಗು ತ್ತಿದ್ದಂತೆಯೇ ಜನಸಂಖ್ಯೆಗೆ ಅನುಗುಣವಾಗಿ ತಾಲೂಕು ಕಚೇರಿ ಕಾರ್ಯ ವೈಖರಿಯನ್ನು ನೂತನ ತಾಲೂಕು ಆಡಳಿತ ಸೌಧಕ್ಕೆ ಸ್ಥಳಾಂತರಿಸಲಾಯಿತು. ನೂರಾರು ವರ್ಷಗಳ ಕಾಲ ಸಾರ್ವಜನಿಕ ಸೇವೆಗೆ ಉಪಯೋಗ ವಾಗಿದ್ದ ಆಡಳಿತ ಸ್ಥಳಾಂತರಗೊಳ್ಳುತ್ತಿದ್ದಂತೆಯೇ ಪಾಳುಬಿದ್ದಿದ್ದ ಹಳೆ ತಾಲೂಕು ಕಚೇರಿ ಕಟ್ಟಡ ಶಿಥಿಲಾವಸ್ಥೆ ತಲುಪುವಂತಾಯಿತು. ಅದೇ ಕಟ್ಟಡದಲ್ಲಿ ರಾಜ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಹೋಂಗಾರ್ಡ್‌ ಕಚೇರಿ ಗಳಾಗಿ ಮಾರ್ಪಾಟಾಗಿ ಕಾರ್ಯನಿರ್ವಹಿಸುತ್ತಿವೆಯಾದರೂ ನಿರ್ವಹಣೆ ಕಾಣದೆ ಶಿಥಿಲಾವಸ್ಥೆ ತಲುಪುತ್ತಿದೆ.

ಸುಣ್ಣದಿಂದ ತಯಾರಿಸಿದ ಗೋಡೆಗಳು: ನೂರಾರು ವರ್ಷಗಳು ಕ್ರಮಿಸಿದರೂ ಕಟ್ಟಡದ ಛಾವಣಿ ಸುಭದ್ರವಾಗಿದೆಯಾದರೂ ಸುಣ್ಣದಿಂದ ತಯಾರಿಸಿದ ಗೋಡೆಗಳು ಮಾತ್ರ ಶಿಥಿಲಾವಸ್ಥೆ ತಲುಪಿವೆ. ಗೋಡೆಗಳು ಕಟ್ಟಡದ ಕಿಟಕಿ ಬಾಗಿಲುಗಳು ಸೇರಿ ಅಲ್ಪಸ್ವಲ್ಪ ಕಟ್ಟಡದ ಛಾವಣಿ ದುರಸ್ತಿಗೊಳಿಸಿ ಯಥಾಸ್ಥಿತಿ ಕಾಪಾಡಿದರೆ ಆಂಗ್ಲರ ಕಾಲದ ಶಥಾಯುಪಿ ಕಟ್ಟಡ ಸುಭ್ರವಾಗಿರುತ್ತದೆ. ತಪ್ಪಿದರೆ ಕೆಲವೇ ವರ್ಷಗಳಲ್ಲಿ ಕುಸಿದು ಬಿದ್ದು, ಮುಂದಿನ ಪೀಳಿಗೆಗೆ ಹೀಗೂ ಕಟ್ಟಡ ಇತ್ತು ಅನ್ನುವ ಪರಿಚಯವೇ ಇಲ್ಲದಂತಾಗುವುದರಲ್ಲಿ ಸಂಶಯ ಇಲ್ಲ. ಇನ್ನಾದರೂ ಅಧಿಕಾರಿಗಳು ಮುಖಂಡರು ಹಾಗೂ ತಾಲೂಕಿನ ಶಾಸಕರು ಇತ್ತ ಗಮನ ಹರಿಸಿ ಕಟ್ಟಡದ ದುರಸ್ತಿಗೆ ಮುಂದಾಗುವರೇ ಕಾದು ನೋಡಬೇಕಿದೆ.

Advertisement

ಕೊಂಚ ಮಳೆಯಾದರೂ ಆವರಣದಲ್ಲೆಲ್ಲಾ ನೀರು : ಕಟ್ಟಡದ ಕಡೆ ಗಮನ ಹರಿಸದೇ ಇರುವುದರಿಂದ ಮಳೆಗಾಲದಲ್ಲಿ ಕೊಂಚ ಮಳೆಯಾದರೂ ಇಡೀ ಕಟ್ಟಡದ ಪ್ರವೇಶ ದ್ವಾರದ ಮುಂಭಾಗದಲ್ಲೆಲ್ಲಾ ಕೆರೆಯಂತೆ ನೀರು ಶೇಖರಣೆಯಾಗುತ್ತದೆ. ಪ್ರತಿದಿನ ಕೆಲಸಕಾರ್ಯಗಳ ನಿಮಿತ್ತ ಹಳೆ ತಾಲೂಕು ಕಚೇರಿಗೆ ಆಗಮಿಸುವ ನೂರಾರು ಮಂದಿ ಪ್ರಯಾಸ ಪಟ್ಟು ಕಚೇರಿ ಪ್ರವೇಶಿಸಬೇಕಾದ ಅನಿವಾರ್ಯತೆ ಇದೆ. ಕಲುಷಿತ ನೀರಿನಲ್ಲಿ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಕೂಡ ಇದೆ ಅನ್ನುವುದನ್ನು ಮರೆಯುವಂತಿಲ್ಲ.

ಆಧುನಿಕ ಯುಗದಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ಕಟ್ಟಡಗಳೇ ಕೆಲವೇ ವರ್ಷಗಳಲ್ಲಿ ಕುಸಿದು ಬೀಳುವುದನ್ನು ನೋಡಿದ್ದೇವೆ. ಹೀಗಿರುವಾಗ ಸುಣ್ಣದ ತಿಳಿಯಿಂದ ಮರದ ದಿಮ್ಮಿಗಳಿಂದ ನಿರ್ಮಾಣಗೊಂಡ 100 ವರ್ಷಗಳ ಇತಿಹಾಸದ ಕಟ್ಟಡವೊಂದು ಶಿಥಿಲಾವಸ್ಥೆ ತಲುಪುತ್ತಿರುವುದನ್ನು ಗಮನಿಸಿ ಶಾಸಕರು, ಮುಖಂಡರು ಕಟ್ಟಡದ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಯಥಾ ಸ್ಥಿತಿ ಕಾಪಾಡಿ ಕಟ್ಟಡ ನವೀಕರಣಗೊಳಿಸಿ ಮುಂದಿನ ಪೀಳಿಗೆಗೆ ಹಳೆಯ ತಾಲೂಕು ಕಚೇರಿ ಕಟ್ಟಡದ ಪರಿಚಯ ಮಾಡಿಕೊಡಬೇಕಿದೆ. ●ಉಮೇಶ್‌ ಜೀವಿಕ, ಸ್ಥಳೀಯ ನಿವಾಸಿ

ಪಟ್ಟಣದ ಹಳೇ ತಾಲೂಕು ಕಚೇರಿ ನೂರು ವರ್ಷ ತುಂಬಿದ ಇತಿಹಾಸ ಇದೆ. ತಾಲೂಕಿ ನಲ್ಲಿ ಯಾವುದೇ ನೂರು ವರ್ಷಗಳ ಇತಿಹಾಸ ಇರುವ ಕಟ್ಟಡಗಳ ಯಥಾಸ್ಥಿತಿ ಕಾಪಾಡಿಕೊಂಡು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದು ಪಟ್ಟಣದ ಹಳೇ ತಾಲೂಕು ಕಚೇರಿ ಕಟ್ಟಡ. ನವೀಕರಣಗೊಳಿಸಿ ಸಂಭ್ರಮದ ಶತಮಾನೋತ್ಸವ ಆಚರಿಸಲಾಗುತ್ತದೆ. ● ಅನಿಲ್‌ ಚಿಕ್ಕಮಾದು, ಶಾಸಕ

– ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next