Advertisement

‘ಅಮೃತ್‌ ಅಪಾರ್ಟ್‌ಮೆಂಟ್ಸ್‌’ಚಿತ್ರ ವಿಮರ್ಶೆ: ಕಾಂಕ್ರೀಟ್‌ ಕಾಡಿನ ತಲ್ಲಣಗಳ ಚಿತ್ರಣ

12:34 PM Nov 27, 2021 | Team Udayavani |

ಬೆಂಗಳೂರಿನಂತಹ ಮಹಾನಗರಗಳಿಗೆ ಪ್ರತಿದಿನ ಸಾವಿರಾರು ಮಂದಿ ಕೆಲಸವನ್ನು ಅರಸಿಕೊಂಡು, ಬದುಕು ಕಟ್ಟಿಕೊಳ್ಳಲು ಬರುತ್ತಲೇ ಇರುತ್ತಾರೆ. ಹೀಗೆ ಬಂದ ಎಲ್ಲರನ್ನೂ ಯಾವುದೇ ಬೇಧ-ಭಾವವಿಲ್ಲದೆ ತನ್ನ ಒಡಲಿನಲ್ಲಿ ಇಟ್ಟುಕೊಂಡು ಸಲಹುವ ಬೆಂಗಳೂರು, ಬಹು ಸಂಸ್ಕೃತಿ, ಬಹುಭಾಷೆ, ಬಹು ವಿಚಾರಗಳ ಮಾಯಾನಗರಿ. ಇಂತಹ ಬೆಂಗಳೂರು ನೆಲೆ ಕಟ್ಟಿಕೊಂಡ ಕೋಟ್ಯಾಂತರ ಜನರ ಬದುಕಿನ ಧಾವಂತ, ಭಾವನೆಗಳ ತಲ್ಲಣ, ಆಸೆ-ದುರಾಸೆ, ನೋವು-ನಲಿವು, ಏಳು-ಬೀಳು, ಕಷ್ಟ-ಸುಖಗಳಿಗೆ ಮೂಕ ಸಾಕ್ಷಿಯಾಗಿರುತ್ತದೆ. ಇದೆಲ್ಲವನ್ನು ಸೂಕ್ಷ್ಮವಾಗಿ ತೆರೆಮೇಲೆ ತೆರೆದಿಡುವ ಚಿತ್ರ “ಅಮೃತ್‌ ಅಪಾರ್ಟ್‌ಮೆಂಟ್ಸ್‌’.

Advertisement

ಹೆತ್ತವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗುವ ಕಲ್ಕತ್ತಾ ಹುಡುಗಿ, ಮೈಸೂರು ಹುಡುಗ ತಮ್ಮ ಕನಸಿನ ಅಮೃತ್‌ ಅಪಾರ್ಟ್‌ಮೆಂಟ್ಸ್‌ ನಲ್ಲಿ ಬದುಕು ಕಟ್ಟಿ ಕೊಳ್ಳಲು ಮುಂದಾಗುತ್ತಾರೆ. ಆದರೆ ಅಪಾರ್ಟ್‌ ಮೆಂಟ್‌ ಸೇರಿದ ಒಂದೇ ವರ್ಷದೊಳಗೆ, ಈ ಜೋಡಿಯ ಬದುಕಿನಲ್ಲಿ ನಡೆಯುವ ಒಂದಷ್ಟು ಘಟನೆಗಳು ಇಬ್ಬರ ನಡುವಿನ ಸಂಬಂಧದಲ್ಲಿ ಅಪಾರ್ಟ್‌ಮೆಂಟಿಗೂ ದೊಡ್ಡದಾದ ಗೋಡೆಯಂತೆ ಬೆಳೆಯಲು ಕಾರಣವಾಗಿರುತ್ತದೆ. ಹೊರಗೆ ನೋಡಲು ಸುಂದರವಾಗಿರುವ, ಆಕರ್ಷಣೀಯವಾಗಿರುವ ಅಪಾರ್ಟ್‌ಮೆಂಟ್‌ ಒಳಗೆ ಹತ್ತಾರು ವೇದನೆ-ಸಂವೇದನೆ ಎಲ್ಲವನ್ನೂ ತಣ್ಣಗೆ ಅಡಗಿಸಿಕೊಂಡಿಟ್ಟಿರುತ್ತದೆ. ಸ್ವಲ್ಪ ಸಮಯ ಎಲ್ಲ ಜಂಜಾಟವನ್ನು ಬದಿಗಿಟ್ಟು ಅಪಾರ್ಟ್‌ಮೆಂಟಿನ ಗೋಡೆಗೆ ಕಿವಿ ಕೊಟ್ಟರೆ, ಹತ್ತಾರು ಕಥೆಗಳು ತೆರೆದುಕೊಳ್ಳುತ್ತದೆ. ಹೀಗೆ ಶುರುವಾಗುವ ಅಮೃತ್‌ ಅಪಾರ್ಟ್‌ಮೆಂಟ್ಸ್‌ ಕಥೆ ಗಂಭೀರವಾಗಿ ನೋಡುಗರನ್ನು ಆವರಿಸಿಕೊಳ್ಳುತ್ತ ಹೋಗುತ್ತದೆ.

ಇದನ್ನೂ ಓದಿ:ನಟಿ Vani bhojan ಬ್ಯೂಟಿಫುಲ್ ಫೋಟೋ ಗ್ಯಾಲರಿ

ಬೆಂಗಳೂರಿನ ಆಧುನಿಕ ಸಂಸ್ಕೃತಿಯ ಭಾಗದಂತಿರುವ, ಎಲ್ಲೆಲ್ಲೂ ಕಾಣುವ ಬೃಹತ್‌ ಅಪಾರ್ಟಮೆಂಟ್ಸ್‌, ಅದರಲ್ಲಿ ಗೂಡು ಕಟ್ಟಿಕೊಳ್ಳಲು ಬಯಸುವ ಯುವ ಜನತೆ, ಅಪರಿಮಿತ ಆಕಾಂಕ್ಷೆಗಳು, ಅದಕ್ಕೆ ಎದುರಾಗುವ ಸವಾಲುಗಳು, ವಿಭಿನ್ನ ಯೋಚನಾ ಲಹರಿ, ಸಂಬಂಧಗಳು, ಮಾನವೀಯ ಮೌಲ್ಯಗಳು, ಕಾಲ್ಪನಿಕತೆ ಮತ್ತು ವಾಸ್ತವತೆಯ ನಡುವಿನ ತೊಳಲಾಟಗಳ ಸುತ್ತ ಅಮೃತ್‌ ಅಪಾರ್ಟ್‌ಮೆಂಟ್ಸ್‌ ಚಿತ್ರ ಸಾಗುತ್ತದೆ.

ಕನ್ನಡದಲ್ಲಿ ಮೆಟ್ರೋ ಕಥೆಯನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾಗಳು ತುಂಬ ವಿರಳ. ಇಂಥ ಅಪರೂಪದ ಸಿನಿಮಾಗಳ ಸಾಲಿಗೆ ಸೇರುವ ಸಿನಿಮಾ ಅಮೃತ್‌ ಅಪಾರ್ಟ್‌ಮೆಂಟ್ಸ್‌. ಸಿಟಿ ಮಂದಿಯ ತಲ್ಲಣಗಳನ್ನು ನಿರ್ದೇಶಕ ಗುರುರಾಜ ಕುಲಕರ್ಣಿ ತುಂಬಾ ಪರಿಣಾಮಕಾರಿಯಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ. ಲವ್‌, ಎಮೋಶನ್‌, ಕ್ರೈಂ, ಥ್ರಿಲ್ಲರ್‌ ಅಂಶಗಳನ್ನು ಹದವಾಗಿ ಬೆರೆಸಿ ಚಿತ್ರವನ್ನು ತೆರೆಗೆ ತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

Advertisement

ಕಲಾವಿದರಾದ ಊರ್ವಶಿ, ತಾರಕ್‌, ಬಾಲಾಜಿ ಮನೋಹರ್‌ ಸೇರಿದಂತೆ ಬಹುತೇಕ ಕಲಾವಿದರು ಅಚ್ಚುಕಟ್ಟಾಗ ಅಭಿನಯದ ಮೂಲಕ ತೆರೆಮೇಲೆ ಚಿತ್ರಕ್ಕೆ ಹೆಗಲಾಗಿದ್ದಾರೆ. ಚಿತ್ರದ ಛಾಯಾಗ್ರಹಣ, ಸಂಕಲನ, ಹಾಡುಗಳು ಅಮೃತ್‌ ಅಪಾರ್ಟ್‌ಮೆಂಟ್ಸ್‌ ಸುಂದರವಾಗಿ ಕಾಣುವಂತೆ ಮಾಡಿದೆ. ಕೆಲಕಾಲ ಒಂದಷ್ಟು ಗಂಭೀರವಾಗಿ ಕಾಡುವ, ಚಿಂತನೆಗೆ ಹಚ್ಚಿಸುವ ಅಮೃತ್‌ ಅಪಾರ್ಟ್‌ಮೆಂಟ್ಸ್‌ನ ವಾರಾಂತ್ಯದಲ್ಲಿ ಒಮ್ಮೆ ನೋಡಿ ಬರಲು ಅಡ್ಡಿಯಿಲ್ಲ

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next