Advertisement

ದಾಖಲೆ ನಿರ್ಮಿಸಿದ ಸನ್ನಿಧಿಯ ಅಮರಾವತಿ 

06:00 AM Nov 09, 2018 | |

ಯಕ್ಷಗಾನ ಗಂಡುಮೆಟ್ಟಿನ ಕಲೆ ಎಂದರೂ ಹಲವಾರು ಮಹಿಳೆಯರು ದೊಡ್ಡ ಮಟ್ಟದಲ್ಲಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಈಗ ಹೊಸತೊಂದು ಸೇರ್ಪಡೆ ಯಕ್ಷಗಾನ ಪ್ರಸಂಗ ಸಾಹಿತ್ಯ. ಕ್ಲಿಷ್ಟ ಮತ್ತು ಕಷ್ಟ ಎಂದೇ ಹೇಳಲಾಗುವ ಈ ಬಗ್ಗೆ ಸಾಧಾರಣವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿ ನಲ್ವತ್ತರ ಅಂಚಿಗೆ ತಲುಪಿದ ಕಲಾವಿದರು ಪ್ರಯತ್ನಿಸುವುದು ಸಹಜ. 

Advertisement

 ತೀರಾ ಅಪರೂಪ ಮತ್ತು ಆಶ್ಚರ್ಯಕರ ಎಂಬ ಹಾಗೆ 14ರ ವಯಸ್ಸಿನ ಬಾಲೆಯೊಬ್ಬಳು ಪೌರಾಣಿಕ ಕಥೆಯೊಂದನ್ನು ಆಯ್ದು ಅದಕ್ಕೆ ಪದ್ಯ ರಚನೆಯನ್ನು ಮಾಡಿ ರಂಗಕ್ಕೆ ಸರಿ ಹೊಂದುವಂತೆ ಸಿದ್ಧಪಡಿಸಿದ್ದಲ್ಲದೆ ಅದು ಪ್ರಥಮ ಪ್ರದರ್ಶನದಲ್ಲಿಯೇ ಜನಮನ ಗೆದ್ದು ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಮಹಿಳಾ ಪ್ರಥಮ ಪ್ರಸಂಗಕರ್ತೆ ಎಂಬ ದಾಖಲೆಯನ್ನು ಬಾಲೆಯ ಹೆಸರಿಗೆ ಬರೆಯಿತು. 

ಚಿನ್ಮಯ ವಿದ್ಯಾಲಯ ವಿದ್ಯಾನಗರ ಕಾಸರಗೋಡಿನ 9ನೇ ತರಗತಿಯ ಕುಮಾರಿ ಸನ್ನಿಧಿ ಟಿ.ರೈ ಪೆರ್ಲ ಈಗಾಗಲೇ ಕನ್ನಡ ,ತುಳು,ಇಂಗ್ಲೀಷ್‌,ಹಿಂದಿ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಡುತ್ತಿರುವ ಚಿಗುರು ಪ್ರತಿಭೆ. ಈ ಎಲ್ಲಾ ಭಾಷೆಯ ಹಿಡಿತವಿರುವ ಈಕೆ ಕಿರಿಯ ಭಾಗವತೆ ಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಬ್ಬಣಕೋಡಿ ರಾಮ ಭಟ್ಟರಲ್ಲಿ ನಾಟ್ಯಾಭ್ಯಾಸ ಮಾಡಿ ಹಲವಾರು ಕಡೆ ವಿವಿಧ ಪಾತ್ರಗಳಲ್ಲಿ ಜನಮನ ರಂಜಿಸಿದ್ದಾರೆ.

ನಂತರದ ದಿನಗಳಲ್ಲಿ ಭಾಗವತಿಕೆಯತ್ತ ಹೊರಳಿ ಹಿರಿಯ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಬಳಿ ಹಾಡುಗಾರಿಕೆಯನ್ನು ಅಭ್ಯಾಸ ಮಾಡಲಾರಂಭಿಸಿದರು. ಶಾಸ್ತ್ರೀಯ ಸಂಗೀತವನ್ನೂ ಅಧ್ಯಯನ ಮಾಡಿರುವ ಈಕೆಗೆ ಇದು ಕಷ್ಟ ಎನ್ನಿಸಲಿಲ್ಲ. ಈಕೆಯ ಜ್ಞಾನ ಮತ್ತು ಆಸಕ್ತಿಯನ್ನು ಗಮನಿಸಿದ ಶಾಸ್ತ್ರಿಗಳು ಪ್ರಸಂಗ ಸಾಹಿತ್ಯ ರಚನೆಯ ಬಗ್ಗೆ ಪ್ರೇರೇಪಿಸಿದರು. ಅವರ ನಿರೀಕ್ಷೆಯನ್ನು ಹುಸಿಯಾಗಿಸದೆ ಆಕೆ ಸಿದ್ಧಪಡಿಸಿದ ಪ್ರಸಂಗವೆ “ಅಮರಾವತಿ’. ಈವರೆಗೆ ಯಾರೂ ಆಯ್ಕೆ ಮಾಡದ ವಿಚಾರ ಒಂದೆಡೆಯಾದರೆ ಕಂದ ಮತ್ತು ದ್ವಿಪದಿಗಳ ಪದ್ಯಗಳನ್ನೂ ಇದು ಹೊಂದಿರುವುದಲ್ಲದೇ ಅನೇಕ ವಿಶೇಷತೆಗಳನ್ನೂ ಹೊಂದಿದೆ. ಪ್ರಸಿದ್ಧ ಇಂಗ್ಲೀಷ್‌ ಸಾಹಿತಿಯ ಪೌರಾಣಿಕ ಕಥಾ ಪುಸ್ತಕವೊಂದರಿಂದ ಆಯ್ದ ಕಥಾ ಭಾಗವನ್ನು ತಾನೇ ಅನುವಾದಿಸಿ ಸಣ್ಣ ಪುಟ್ಟ ಬದಲಾವಣೆಯೊಂದಿಗೆ ಕಥೆಗೆ ಸರಿಯಾಗಿ ಪದ್ಯ ರಚನೆ ಮಾಡಿದ್ದಾರೆ. 

ವಿಜಯ ದಶಮಿಯ ದಿನ ಪ್ರಸಿದ್ಧ ಪ್ರಸಂಗಕರ್ತ ಕೀರಿಕ್ಕಾಡು ದಿ.ವಿಷ್ಣು ಭಟ್ಟ ಸ್ಮಾರಕ ಯಕ್ಷಗಾನ ಕೇಂದ್ರ ಬನಾರಿ ದೇಲಂಪಾಡಿಯಲ್ಲಿ ರಂಗಕ್ಕೇರುವುದಕ್ಕೆ ವಿಶ್ವವಿನೋದ ಬನಾರಿಯವರು ಕಾರಣ ರಾದರು.ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರು ಮತ್ತು ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಬನಾರಿ ದೇಲಂಪಾಡಿಯ ಸದಸ್ಯರ ಕೂಡುವಿಕೆಯೊಂದಿಗೆ “ಅಮರಾವತಿ’ಯ ಪ್ರಥಮ ಪ್ರದರ್ಶನ ನಡೆಯಿತು. 

Advertisement

ಎಲ್ಲೂ ಆಸಕ್ತಿ ಕುಂದದ ಹಾಗೆ ಸಾಗುವ ಕಥಾನಕ ಮೊದಲ ಪ್ರಯೋಗದಲ್ಲಿ ನಾಲ್ಕು ಗಂಟೆಗೂ ಅಧಿಕ ಸಮಯ ತೆಗೆದುಕೊಂಡರೂ ಕೊನೆಯವರೆಗೆ ತುಂಬಿ ತುಳುಕಿದ ಸಭಾಭವನವೇ ಪ್ರದರ್ಶನದ ಯಶಸ್ಸಿಗೆ ಸಾಕ್ಷಿಯಾಗಿದೆ. ಈಕೆ ತೆಂಕುತಿಟ್ಟಿನ ಮೊದಲ ಮಹಿಳಾ ಪ್ರಸಂಗಕರ್ತೆ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದಾರೆ. 
 
 ಹರ್ಷಿತಾ ಕುಲಾಲ್‌ 

Advertisement

Udayavani is now on Telegram. Click here to join our channel and stay updated with the latest news.

Next