Advertisement

ಅಂಪಾರು: ಅಗ್ನಿಶಾಮಕ ದಳ ಠಾಣೆ ಅಗತ್ಯ

06:25 PM Apr 03, 2023 | Team Udayavani |

ಕುಂದಾಪುರ: ಈಗಾಗಲೇ ಕೋಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಂದಾಪುರ ಭಾಗದ ಅಗ್ನಿಶಾಮಕ ದಳ ದೂರದಲ್ಲಿದೆ ಎಂಬ ದೂರಿದೆ. ನಗರ ವ್ಯಾಪ್ತಿಯಲ್ಲಿರಬೇಕಾದ ಅಗ್ನಿ ಶಾಮಕ ಠಾಣೆ ಗ್ರಾಮಾಂತರದಲ್ಲಿ ರಚನೆಗೊಂಡು ಸಮರ್ಪಕ ಸೇವೆಗೆ ಆಗಮಿಸಲಾಗುತ್ತಿಲ್ಲ. ಠಾಣೆಯನ್ನು ನಗರ ವ್ಯಾಪ್ತಿಗೆ ಸ್ಥಳಾಂತರಿಸಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಲ್ಲಿ ಮೊಳಗಿದೆ.ಈ ಮಧ್ಯೆಯೇ, ಕುಂದಾಪುರ ಹೊಸಂಗಡಿ ಮಧ್ಯೆ ಅಂಪಾರು ಪ್ರದೇಶದಲ್ಲಿ ಇನ್ನೊಂದು ಅಗ್ನಿಶಾಮಕ ಠಾಣೆ ಬೇಕು ಎಂಬ ಬೇಡಿಕೆಯೂ ಇದೆ.

Advertisement

ನಗರದಿಂದ ದೂರ
ಈಗ ಇರುವ ಅಗ್ನಿಶಾಮಕ ದಳ ಕುಂದಾಪುರ ಉಡುಪಿ ಹೆದ್ದಾರಿಯಲ್ಲೂ ಇಲ್ಲ, ಹಾಲಾಡಿ ಕೋಟೇಶ್ವರ ಮುಖ್ಯರಸ್ತೆಯಲ್ಲೂ ಇಲ್ಲ, ಕುಂದಾಪುರ ಸಿದ್ದಾಪುರ ಮುಖ್ಯರಸ್ತೆಯಲ್ಲೂ ಇಲ್ಲ. ಕೋಟೇಶ್ವರದ ಹಾಲಾಡಿಗೆ ಹೋಗುವ ರಸ್ತೆ ಒಳಭಾಗದಲ್ಲಿ ಕುಂದಾಪುರ ನಗರದಿಂದ 5ಕಿ.ಮೀ. ದೂರದ ಕೋಣಿ ಗ್ರಾಮದಲ್ಲಿ ಇರುವುದರಿಂದ, ಕುಂದಾಪುರ ಭಾಗದ ಹಲವು ಗ್ರಾಮಗಳಲ್ಲಿ ಅಗ್ನಿ ಅವಘಡದಲ್ಲಿ ಸಮಯಕ್ಕೆ ಸರಿಯಾಗಿ ತಲುಪಲು ಕಷ್ಟ . ಫೋನ್‌ ಮಾಡಿ ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸುವ ಮೊದಲೇ, ಅರ್ಧ ಭಾಗದಷ್ಟು ನಷ್ಟವಾಗುತ್ತದೆ. ಇದರಿಂದ ತತ್‌ಕ್ಷಣ ದುರ್ಘ‌ಟನೆ ನಡೆದ ಸ್ಥಳಕ್ಕೆ ತಲುಪುವುದು ಕಷ್ಟ. ಠಾಣೆಯ ಅಧಿಕಾರಿ, ಸಿಬಂದಿಗೂ ಸಮಸ್ಯೆ. ಅವಘಡಕ್ಕೊಳಪಟ್ಟವರಿಗೂ ತೊಂದರೆ. ದಕ್ಷಿಣಕ್ಕೆ ತೆಕ್ಕಟ್ಟೆ, ಉತ್ತರಕ್ಕೆ ಶಿರೂರು, ಪೂರ್ವಕ್ಕೆ ಮಾಸ್ತಿಕಟ್ಟೆ, ಅಲ್ಲದೆ ಬ್ರಹ್ಮಾವರದ ತನಕವೂ ಠಾಣೆ ಕಾರ್ಯಾಚರಿಸುತ್ತಿದೆ.

ಸ್ಥಳಾಂತರ ಬೇಡಿಕೆ
ನಗರದ ಕೇಂದ್ರ ಸ್ಥಳದಲ್ಲಿರಬೇಕಾದ ಅಗ್ನಿಶಾಮಕ ಠಾಣೆಯನ್ನು ಗ್ರಾಮಾಂತರಕ್ಕೆ ಸ್ಥಳಾಂತರಿಸಿರುವುದೇ ಅವೈಜ್ಞಾನಿಕ. ಕುಂದಾಪುರದ ಕರ್ಣಾಟಕ ಬ್ಯಾಂಕ್‌ ಎದುರಿನ ಪುರಸಭೆ ನಿವೇಶನ ಅಗ್ನಿಶಾಮಕ ಠಾಣೆಗೆ ಮೀಸಲಿಟ್ಟರೂ ಕನಿಷ್ಠ ಪಕ್ಷ ಅಲ್ಲೊಂದು ಠಾಣೆಯ ಶಾಖೆ ಕೂಡ ರೂಪುಗೊಂಡಿಲ್ಲ. ಕುಂದಾಪುರದ ಹಳೆ ಬಸ್‌ ನಿಲ್ದಾಣದ ವಠಾರದಲ್ಲಿದ್ದ ಅಗ್ನಿಶಾಮಕ ಠಾಣೆಯು 2012ರಲ್ಲಿ ಕೋಣಿ ಗ್ರಾಮಕ್ಕೆ ಸ್ಥಳಾಂತರಗೊಂಡಿತು.

ವಾರ್ಷಿಕ 250 ಪ್ರಕರಣಗಳಿಗೆ ಸ್ಪಂದಿಸುವ ಗುರಿಗೆ ಠಾಣೆಯ ಸಿಬಂದಿ ಉತ್ತಮ ಸ್ಪಂದನೆ ತೋರುತ್ತಲೇ ಬಂದಿದ್ದಾರೆ. ನಗರ ಪ್ರದೇಶದಲ್ಲಿದ್ದ ಠಾಣೆ ಗ್ರಾಮಾಂತರಕ್ಕೆ ಸ್ಥಳಾಂತರಗೊಂಡರು ಸಿಬಂದಿಗಳ ಸೇವೆಯಲ್ಲಿ ವ್ಯತ್ಯಾಸ ಆಗಿಲ್ಲ. ಆದರೆ ತ್ವರಿತವಾಗಿ ಸ್ಪಂದಿಸಲು ಸುಲಲಿತ ಮಾರ್ಗವಿಲ್ಲ. ಕರೆ ಸ್ವೀಕರಿಸಿ ನಿಗದಿತ ಸ್ಥಳ ತಲುಪಲು ಒದ್ದಾಟಪಡಬೇಕು. ಸಾಕಷ್ಟು ಒತ್ತಡದ ನಡುವೆಯೂ ಕಾರ್ಯಾಚರಿಸುತ್ತಿರುವ ಸಿಬಂದಿಗೆ 2.75 ಕೋ.ರೂ. ವೆಚ್ಚದಲ್ಲಿ 2015ರಲ್ಲಿ
ಸುಸಜ್ಜಿತ ಠಾಣೆ ರಚನೆಗೊಂಡಿತ್ತು. ಕೋಣಿಯಿಂದ ಸಿಂಗಲ್‌ ರೋಡ್‌ನ‌ಲ್ಲಿ ಒತ್ತಡದ ಹಾದಿಯಲ್ಲಿ ಹಳೆಯ ವಾಹನಗಳು ಬರುವುದೇ ದುಸ್ತರ ಎಂಬಂತಾಗಿದೆ.

ಹೊಸ ವಾಹನಗಳು ಬೇಕು. ಹಳೆಯ ಕಾಲದ ವಾಹನ ಗಳು ಸಿಬಂದಿ ವೇಗಕ್ಕೆ ಸ್ಪಂದನೆ ತೋರುತ್ತಿಲ್ಲ. ಅಗ್ನಿ ಅವಘಡ ನಿಯಂತ್ರಿಸಲು ಎರಡು ಹಳೆ ವಾಹನ ಠಾಣೆಯಲ್ಲಿವೆ. ಪವರ್‌ ಸ್ಟೇರಿಂಗ್‌ ಸೌಕರ್ಯ ಹೊಂದಿರದ ಈ ಗಾಡಿಯನ್ನು ಅವಘಡ ಸ್ಥಳಕ್ಕೆ ಕೊಂಡೊಯ್ಯುವುದೇ ದೊಡ್ಡ ಕಸರತ್ತು ಆಗಿಬಿಟ್ಟಿದೆ. ಮಂಗಳೂರಿನಲ್ಲಿ ಇರುವ ರೀತಿ ಸಣ್ಣ ವಾಹನಗಳ ಸೌಕರ್ಯ ಇನ್ನೂ ಬಂದಿಲ್ಲ

Advertisement

ಇನ್ನೊಂದು ಠಾಣೆಗೆ ಬೇಡಿಕೆ
ಕುಂದಾಪುರ ಹೊಸಂಗಡಿ ಮಧ್ಯೆ ಅಂಪಾರು ಭಾಗದಲ್ಲಿ ಒಂದು ಅಗ್ನಿಶಾಮಕ ಉಪ ಕೇಂದ್ರ ನಿರ್ಮಾಣದ ಅಗತ್ಯ ಇದೆ. ಅಂಪಾರಿನಲ್ಲಿ ಅಗ್ನಿಶಾಮಕ ದಳದ ಠಾಣೆ ಸ್ಥಾಪನೆಯಾದರೆ ಹಾಲಾಡಿ, ಶಂಕರನಾರಾಯಣ ಅಂಪಾರು, ಚಿತ್ತೂರು, ವಂಡ್ಸೆ, ನೇರಳಕಟ್ಟೆ, ಅಂಪಾರು, ಹೊಸಂಗಡಿ, ಸಿದ್ದಾಪುರ, ಬಸ್ರೂರು, ಕಂಡ್ಲೂರು ಈ ಎಲ್ಲ ಭಾಗ ತಲುಪಲು ಅನುಕೂಲ. ಇಡೂರು, ಹಾರ್ಮಣ್ಣ, ನೆಂಪು, ಬಗ್ವಾಡಿ, ಕೆಂಚನೂರು, ಮಾವಿನಕಟ್ಟೆ, ಶೆಟ್ಟರುಕಟ್ಟೆ, ಗುಳ್ಳವಾಡಿ, ಮಾವಿನಗುಳಿ, ಹೆಮ್ಮಕಿ ಬೆಲ್ಲಾಳ, ಕೊಡ್ಲಾಡಿ, ವಾಲ್ತೂರು, ಮೂಡುಬಗೆ, ನೆಲ್ಲಿಕಟ್ಟೆ, ಮುಳ್ಳು ಗುಡ್ಡಿ, ಹಲಾ°ಡು, ಬಳ್ಕೂರ್‌, ಕಂದಾವರ, ಬೈಲೂರು ಈ ಎಲ್ಲ ಉಪ ಗ್ರಾಮಗಳಿಗೆ ಗ್ರಾಮೀಣ ಭಾಗದಲ್ಲಿ ಒಂದು ವ್ಯವಸ್ಥಿತ ಅಗ್ನಿಶಾಮಕ ಠಾಣೆ ದೊರೆತಂತಾಗುತ್ತದೆ. ಜನವರಿಯಿಂದ ಎಪ್ರಿಲ್‌ ಕೊನೆ ತನಕ, ಹಳ್ಳಿಗಳಲ್ಲಿ ವಿದ್ಯುತ್‌ ತಂತಿ ತೆಂಗಿನ, ಅಡಿಕೆ ತೋಟ ಹಾಗೂ ಅರಣ್ಯ ಭಾಗದಲ್ಲಿ ಹಾದು ಹೋಗಿರುವುದರಿಂದ, ಗಾಳಿಗೆ ವಿದ್ಯುತ್‌ ತಂತಿ ಒಂದಕ್ಕೊಂದು ತಾಗಿಕೊಂಡು ಬೆಂಕಿಯ ಕೆಂಡ ಉದುರಿ ಒಣಗಿದ ಗರಿಗಳಿಗೆ ತಾಗಿ ಬೆಂಕಿ ಬಿದ್ದಿರುವ ಘಟನೆಗಳಾಗಿವೆ. ಕೆಲವು ಬಾರಿ ಇದು ಪರಿಸರದ ಜನರಿಗೆ ಗೋಚರಿಸದೆ ದೊಡ್ಡ ಅನಾಹುತವೇ ನಡೆಯುತ್ತದೆ .

ಹೊಸ ಠಾಣೆ ಆಗಲಿ
ಅಗ್ನಿಶಾಮಕ ಠಾಣೆ ಈಗ ಇರುವ ಠಾಣೆ ದೂರ ಇರುವ ಕಾರಣ ಬೆಂಕಿಯನ್ನು ನಂದಿಸಲು ವಾಹನ ಬರುವಷ್ಟರಲ್ಲಿ ಸಂಪೂರ್ಣ ನಾಶವಾದ ಅದೆಷ್ಟೋ ಉದಾಹರಣೆಗಳಿವೆ. ಆದ್ದರಿಂದ ಜನಪ್ರತಿನಿಧಿಗಳು ಇದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅಂಪಾರಿನಲ್ಲಿ ಇನ್ನೊಂದು ಅಗ್ನಿಶಾಮಕ ಠಾಣೆ ಆದಷ್ಟು ಬೇಗ ಸ್ಥಾಪನೆ ಆಗಲಿ.
-ಮುಂಬಾರು ದಿನಕರ ಶೆಟ್ಟಿ,
ಸಾಮಾಜಿಕ ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next