Advertisement

ಪದ್ಮಾವತ್‌ ವಿವಾದ ಘಟಿಸಲೇ ಬಾರದಿತ್ತು ಏಕೆ? ಅಮಿತಾಭ್‌ ಹೀಗಂತಾರೆ

04:08 PM Jan 19, 2018 | Team Udayavani |

ಹೊಸದಿಲ್ಲಿ : ಸಂಜಯ್‌ ಲೀಲಾ ಭನ್ಸಾಲಿ ನಿರ್ದೇಶನದ ಐತಿಹಾಸಿಕ ಕಥಾ ಚಿತ್ರ ಪದ್ಮಾವತ್‌ ವಿವಾದ ಉಂಟಾಗಲೇ ಬಾರದಿತ್ತು ಏಕೆ ಎಂಬುದನ್ನು ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಅವರ ಈ ಬರಹ “ಪದ್ಮಾವತ್‌’ ವಿವಾದ ಸೃಷ್ಟಿಸಿರುವ ಎಲ್ಲರ ಕಣ್ತೆರೆಸುವಂತಿದೆ.

Advertisement

ಅಮಿತಾಭ್‌ ಬರೆಯುತ್ತಾರೆ : ಕತ್ತಲೆಯ ಚಿತ್ರ ಮಂದಿರದಲ್ಲಿ ನಾವು ಸಿನೆಮಾ ನೋಡುವಾಗ ನಮ್ಮ ಅಕ್ಕ ಪಕ್ಕ ಕುಳಿತವರ ಜಾತಿ, ಮತ, ಧರ್ಮ, ವರ್ಣ ಇತ್ಯಾದಿ ಯಾವುದನ್ನೂ ಕೇಳುವುದಿಲ್ಲ; ನಾವೆಲ್ಲರೂ ಚಿತ್ರವನ್ನು ಆನಂದಿಸುತ್ತೇವೆ, ನಗುತ್ತೇವೆ, ಅಳುತ್ತೇವೆ, ಹಾಡುಗಳನ್ನು ಗುನುಗುತ್ತೇವೆ; ಈ ವಿಘಟಿತ ಜಗತ್ತಿನಲ್ಲಿ ಸಿನೆಮಾ ಎಲ್ಲರನ್ನೂ ಒಗ್ಗೂಡಿಸುತ್ತದೆ !

ಅಮಿತಾಭ್‌ ಅವರು ತಮ್ಮ ಟ್ಟಿಟರ್‌ ಬರಹದಲ್ಲಿ ಪದ್ಮಾವತ್‌ ಚಿತ್ರದ ಹೆಸರನ್ನು ಎತ್ತಿಲ್ಲ; ಆದರೆ ಅದನ್ನು ಸುತ್ತಿಕೊಂಡಿರುವ ವಿವಾದವನ್ನೇ ದೃಷ್ಟಿಯಲ್ಲಿರಿಸಿಕೊಂಡು ಈ ಮಾತುಗಳನ್ನು ಬರೆದಿದ್ದಾರೆ ಎನ್ನುವುದು ಸ್ಪಷ್ಟವಿದೆ. 

ಅಮಿತಾಭ್‌ ಅವರು ಚಿತ್ರರಂಗದ ಸೆಲೆಬ್ರಿಟಿಗಳ ಪೈಕಿ ಅತ್ಯಧಿಕ ಸಂಖ್ಯೆಯ ಹಿಂಬಾಲಕರನ್ನು ಟ್ವಿಟರ್‌ನಲ್ಲಿ ಹೊಂದಿದ್ದಾರೆ. ಅವರ ಮಾತುಗಳು ಅತ್ಯಂತ ತೂಕದ್ದಾಗಿವೆ. ಅಂತೆಯೇ ಅವರ ಅಭಿಮಾನಿಗಳು ಮತ್ತು ಹಿಂಬಾಲಕರ ಮೇಲೆ ಅದು ಬಲವಾದ ಪರಿಣಾಮವನ್ನೂ ಬೀರುತ್ತದೆ. 

ಈ ನಡುವೆ “ಪದ್ಮಾವತ್‌’ಗೆ ಕೇಂದ್ರ ಸೆನ್ಸಾರ್‌ ಮಂಡಳಿ ನೀಡಿರುವ ಸರ್ಟಿಫಿಕೇಟನ್ನು ರದ್ದು ಮಾಡುವಂತೆ ತುರ್ತು ವಿಚಾರಣೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ತಿರಸ್ಕರಿಸಿದೆ. 

Advertisement

ನಿನ್ನೆಯಷ್ಟೇ ಸುಪ್ರೀಂ ಕೋರ್ಟ್‌ ಪದ್ಮಾವತ್‌ ಚಿತ್ರದ ದೇಶವ್ಯಾಪಿ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿತ್ತಲ್ಲದೆ ಸೆನ್ಸಾರ್‌ ಸರ್ಟಿಫಿಕೇಟ್‌ ಪಡೆದ ಚಿತ್ರವನ್ನು ಯಾವುದೇ ರಾಜ್ಯ ಸರಕಾರ ಬಹಿಷ್ಕರಿಸುವಂತಿಲ್ಲ ಎಂದು ಹೇಳಿತ್ತು. 

ಪದ್ಮಾವತ್‌ ವಿರುದ್ಧ ಮತ್ತೆ ಪ್ರಬಲ ಪ್ರತಿಭಟನೆಗೆ ಮುಂದಾಗಿರುವ ರಾಜಪೂತ ಕರ್ಣಿ ಸೇನೆ, ಸೆನ್ಸಾರ್‌ ಮಂಡಳಿ ಮುಖ್ಯಸ್ಥ ಪ್ರಸೂನ್‌ ಜೋಷಿ ಅವರಿಗೆ ನಾವು ರಾಜಸ್ಥಾನಕ್ಕೆ ಕಾಲಿಡಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದೆ. 

ಕರ್ಣಿ ಸೇನೆಯ ಸದಸ್ಯರಾಗಿರುವ ಸುಖದೇವ್‌ ಸಿಂಗ್‌ ಅವರು ಇಂದು ಶುಕ್ರವಾರ ಈ ಬೆದರಿಕೆಯನ್ನು ಹಾಕಿದರು. “ಪದ್ಮಾವತ್‌’ ಐತಿಹಾಸಿಕ ಕಥಾ ಚಿತ್ರಕ್ಕೆ ಸುಪ್ರೀಂ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿರುವ ಹೊರತಾಗಿಯೂ ರಾಜಪೂತ್‌ ಕರ್ಣಿ ಸೇನಾ ಕಾರ್ಯಕರ್ತರು ಇಂದು ಬಿಹಾರದ ಮುಜಫ‌ರನಗರದಲ್ಲಿನ ಚಿತ್ರಮಂದಿವೊಂದರ ಮೇಲೆ ದಾಳಿ ನಡೆಸಿ ಹಾನಿ ಉಂಟುಮಾಡಿದ್ದರು. 

ಪದ್ಮಾವತ್‌ ಚಿತ್ರಕ್ಕೆ ಕ್ಲೀನ್‌ ಚಿಟ್‌ ನೀಡಿರುವ ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ನಾವು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ ಕರ್ಣಿ ಸೇನಾ ಹೇಳಿತ್ತು. ಇದೇ ಜನವರಿ 25ರಂದು ಪದ್ಮಾವತ್‌ ಚಿತ್ರ ತೆರೆ ಕಾಣಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next